'ಕನ್ಯೆ ಸಿಗೋ ಹಾಗೆ ಮಾಡಪ್ಪೋ ಮೈಲಾರ ಲಿಂಗ': ಮದುವೆಗಾಗಿ ಮಂಟಪ ಕಟ್ಟಿ, ಮನೆಗಾಗಿ ಕಲ್ಲು ಜೋಡಿಸಿ ಯುವಕರ ಮೊರೆ!

Published : Feb 05, 2026, 06:44 PM IST

ಹೂವಿನ ಹಡಗಲಿಯ ಪ್ರಸಿದ್ಧ ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ, ಕನ್ಯೆ ಸಿಗದೆ ಕಂಗಾಲಾದ ನೂರಾರು ಅವಿವಾಹಿತ ಯುವಕರು ವಿಶಿಷ್ಟ ಹರಕೆ ಸಲ್ಲಿಸಿದರು. ಕಾರ್ಣೀಕ ನಡೆಯುವ ಸ್ಥಳದಲ್ಲಿ ಸಾಂಕೇತಿಕವಾಗಿ 'ಮದುವೆ ಮಂಟಪ'ಗಳನ್ನು ನಿರ್ಮಿಸಿ, ತಮಗೆ ಶೀಘ್ರ ಕಂಕಣ ಭಾಗ್ಯ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸಿಕೊಂಡರು.

PREV
15
ಕಾರ್ಣೀಕದ ಕಣದಲ್ಲಿ ಕಂಕಣ ಭಾಗ್ಯದ ಪ್ರಾರ್ಥನೆ

ವಿಜಯನಗರ/ಹೂವಿನ ಹಡಗಲಿ (ಫೆ.05): ಉತ್ತರ ಕರ್ನಾಟಕದ ಸುಪ್ರಸಿದ್ಧ ಐತಿಹಾಸಿಕ ಜಾತ್ರೆಗಳಲ್ಲಿ ಒಂದಾದ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಲಿಂಗೇಶ್ವರನ ಜಾತ್ರೆಗೆ ಎಲ್ಲಿಲ್ಲದ ಮಹತ್ವವಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿ ಸೇರುತ್ತಾರೆ. ಬುಧವಾರ ನಡೆದ ವಿಶಿಷ್ಟ 'ಕಾರ್ಣೀಕೋತ್ಸವ' (ಭವಿಷ್ಯವಾಣಿ) ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿತ್ತು. ಆದರೆ, ಈ ಸಂಭ್ರಮದ ನಡುವೆ ಗಮನ ಸೆಳೆದಿದ್ದು ಮಾತ್ರ ನೂರಾರು ಅವಿವಾಹಿತ ಯುವಕರು ತಮ್ಮ ಕಲ್ಯಾಣಕ್ಕಾಗಿ ದೇವರ ಮೊರೆ ಹೋದ ಪ್ರಸಂಗ.

25
ಕನ್ಯೆ ಸಿಗದೆ ಕಂಗಾಲಾಗಿರುವ ನೂರಾರು ಯುವಕರು

ಮೈಲಾರದ ಡೆಂಕನಮರಡಿಯಲ್ಲಿ ನಡೆಯುವ ಕಾರ್ಣೀಕೋತ್ಸವದ ವೇಳೆ ಗೊರವಪ್ಪ ನುಡಿಯುವ ದೈವವಾಣಿಗೆ ಎಷ್ಟು ಶಕ್ತಿ ಇದೆಯೋ, ಅದೇ ಸ್ಥಳದಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ. ಇದನ್ನೇ ನಂಬಿ, ಮದುವೆ ವಯಸ್ಸು ಮೀರಿದರೂ ಕನ್ಯೆ ಸಿಗದೆ ಕಂಗಾಲಾಗಿದ್ದ ನೂರಾರು ಯುವಕರು ಮೈಲಾರ ಲಿಂಗೇಶ್ವರನ ಸನ್ನಿಧಿಯಲ್ಲಿ ವಿಶಿಷ್ಟ ಹರಕೆ ಸಲ್ಲಿಸಿದರು.

35
ಮದುವೆ ಮಂಟಪ ನಿರ್ಮಾಣ

ಸಾಮಾನ್ಯವಾಗಿ ಇಲ್ಲಿ ಭಕ್ತರು ತಮ್ಮ ಸ್ವಂತ ಮನೆ ನಿರ್ಮಾಣದ ಕನಸು ಹೊತ್ತು ಬರುತ್ತಾರೆ. ಕಾರ್ಣೀಕ ನಡೆಯುವ ಸ್ಥಳದಲ್ಲಿ ಸಿಗುವ ಸಣ್ಣ ಸಣ್ಣ ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸಿ, ಚಿಕ್ಕದಾದ ಮನೆಯ ಆಕೃತಿ ನಿರ್ಮಿಸುತ್ತಾರೆ. ಹೀಗೆ ಮಾಡಿದರೆ ಶೀಘ್ರದಲ್ಲೇ ಸ್ವಂತ ಮನೆ ಕಟ್ಟುವ ಯೋಗ ಕೂಡಿಬರುತ್ತದೆ ಎಂಬುದು ಪ್ರತೀತಿ. ಆದರೆ, ಈ ಬಾರಿ ಮನೆಗಿಂತಲೂ ಮದುವೆಗಾಗಿ ಬೇಡಿಕೊಂಡವರ ಸಂಖ್ಯೆಯೇ ಹೆಚ್ಚಾಗಿತ್ತು. 

ಯುವಕರು ಅಲ್ಲೇ ಸಿಗುವ ಸಣ್ಣ ಗಿಡಗಳ ದಂಟು, ಕಡ್ಡಿಗಳು ಮತ್ತು ಕಲ್ಲುಗಳನ್ನು ಬಳಸಿಕೊಂಡು ಸಾಂಕೇತಿಕವಾಗಿ 'ಮದುವೆ ಮಂಟಪ'ವನ್ನು (Wedding Canopy) ನಿರ್ಮಿಸಿದರು. 'ನಮಗೆ ಆದಷ್ಟು ಬೇಗ ಕಂಕಣ ಭಾಗ್ಯ ಕೂಡಿ ಬರಲಿ, ಕನ್ಯೆ ಸಿಗುವಂತೆ ಮಾಡು ತಂದೆ' ಎಂದು ಮೈಲಾರ ಲಿಂಗನಿಗೆ ಭಕ್ತಿಯಿಂದ ನಮಸ್ಕರಿಸಿದರು.

45
ರೈತ ಯುವಕರಿಗೆ ಕನ್ಯೆ ಸಿಗದಿರುವ ಆತಂಕ:

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿಯನ್ನೇ ನಂಬಿಕೊಂಡಿರುವ ಯುವಕರಿಗೆ ಹೆಣ್ಣು ಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಎಷ್ಟೇ ಜಮೀನು, ಆಸ್ತಿ ಇದ್ದರೂ ಸರ್ಕಾರಿ ಕೆಲಸ ಅಥವಾ ಪಟ್ಟಣದಲ್ಲಿ ಉದ್ಯೋಗವಿಲ್ಲದಿದ್ದರೆ ರೈತ ಯುವಕರಿಗೆ ಮದುವೆ ಫಿಕ್ಸ್ ಆಗುತ್ತಿಲ್ಲ. ಇದರಿಂದಾಗಿ ಹೂವಿನ ಹಡಗಲಿ ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಸಾವಿರಾರು ಯುವಕರು ಮದುವೆಯಾಗದೆ ಉಳಿದಿದ್ದಾರೆ. ಸಮಾಜದ ಈ ವಾಸ್ತವ ಸ್ಥಿತಿಯಿಂದ ನೊಂದಿರುವ ಬ್ಯಾಚುಲರ್ಸ್‌ಗಳು, ಮನುಷ್ಯರ ಪ್ರಯತ್ನ ಮೀರಿ ಈಗ ದೈವದ ಮೊರೆ ಹೋಗಿದ್ದಾರೆ.

55
ಸಾಲು ಸಾಲು ಚಿಕ್ಕ ಮಂಟಪಗಳು

ಡೆಂಕನಮರಡಿಯಲ್ಲಿ ಯುವಕರು ನಿರ್ಮಿಸಿದ ಸಾಲು ಸಾಲು ಚಿಕ್ಕ ಮಂಟಪಗಳು ಅವರ ಮನದಾಳದ ನೋವು ಮತ್ತು ಭಕ್ತಿಯನ್ನು ಪ್ರತಿಬಿಂಬಿಸುವಂತಿತ್ತು. ಮೈಲಾರ ಲಿಂಗೇಶ್ವರನು ಇವರ ಪ್ರಾರ್ಥನೆಯನ್ನು ಮನ್ನಿಸಿ, ಮುಂದಿನ ವರ್ಷದ ಜಾತ್ರೆಯೊತ್ತಿಗೆ ಇವರೆಲ್ಲರಿಗೂ ಕಂಕಣ ಭಾಗ್ಯ ಕರುಣಿಸಲಿ ಎಂಬುದೇ ನೆರೆದಿದ್ದವರ ಹಾರೈಕೆಯಾಗಿತ್ತು.

Read more Photos on
click me!

Recommended Stories