
ಒಂದೆಡೆ ಬರ್ಬರವಾಗಿ ಹತ್ಯೆಯಾಗಿ ಬಿದ್ದಿರುವ ಪತಿ. ಮತ್ತೊಂದೆಡೆ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಮಗುವನ್ನು ನೋಡದೇ ಕುಳಿತಿರುವ ತಾಯಿ. ಮತ್ತೊಂದು ಕಡೆ ಸಹೋದರರನ್ನು ಕಳೆದುಕೊಂಡು ರೋದಿಸುತ್ತಿರುವ ಸಹೋದರಿಯರು. ಈ ಭೀಕರ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಧಾರವಾಡದ ಪ್ರತಿಷ್ಠಿತ ರಂಕಾ ಸ್ಟೆಲ್ಲೋ ಅಪಾರ್ಟ್ಮೆಂಟ್. ಡಾ. ಕಿರಣ ಹೊನ್ನಣ್ಣನವರ ಹಾಗೂ ಡಾ. ಪ್ರಿಯಾ ಇಬ್ಬರು ಶ್ರೀಮಂತರೇ. ಆದರೆ, ಇವರ ಮಧ್ಯೆ ಆಗಾಗ ಕಲಹ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಆದರೆ, ಇದು ಕೊಲೆಯ ಹಂತಕ್ಕೆ ಬರುತ್ತದೆ ಎಂದು ತಿಳಿದಿರಲಿಲ್ಲವಂತೆ. ಪತಿಯ ಕುತ್ತಿಗೆ ಎರಡು ಬದಿಗೆ ಚಾಕುವಿನಿಂದ ಇರಿದಿದ್ದು ರಕ್ತದ ಮಡುವಿನಲ್ಲಿ ಮೃತದೇಹ ಬಿದ್ದರೂ, ಅತ್ತ ಮಗು ರಕ್ತಸ್ರಾವದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಡಾ. ಪ್ರಿಯಾ ಮಂಚದ ಮೇಲೆ ಮೊಬೈಲ್ ನೋಡುತ್ತಾ ಕುಳಿತಿರುವುದು ಎಲ್ಲರಲ್ಲಿ ದಿಗ್ಭ್ರಮೆ ಮೂಡಿಸಿದೆ.
ಖಾಸಗಿ ಆಸ್ಪತ್ರೆಯೊಂದರಲ್ಲಿ ಅರವಳಿಕೆ ತಜ್ಞರಾಗಿ (ಅನಸ್ತೇಷಿಯಾ ಎಕ್ಸ್ಪರ್ಟ್) ಸೇವೆ ಸಲ್ಲಿಸುತ್ತಿದ್ದ ಡಾ. ಕಿರಣ್ ಹೊನ್ನಣ್ಣವರ್ (45) ಅವರನ್ನು ಅವರ ಪತ್ನಿ, ನೇತ್ರತಜ್ಞೆ ಡಾ. ಪ್ರಿಯಾಂಕಾ (40) ಚಾಕುವಿನಿಂದ ಕುತ್ತಿಗೆಗೆ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ರಸ್ತೆಯ ಬಾರಾಕೊಟ್ರಿ ಬಳಿಯ 'ರಂಕಾ ಸ್ಟೆಲ್ಲೋ' ಅಪಾರ್ಟ್ಮೆಂಟ್ನಲ್ಲಿ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೆ, ಈ ರಾಕ್ಷಸಿ ಕೃತ್ಯವನ್ನು ಮುಚ್ಚಿಹಾಕಲು ತನ್ನ 8 ವರ್ಷದ ಪುತ್ರ ನೇಹಿತ್ (ನಿಯತ್) ಮೇಲೂ ಚಾಕುವಿನಿಂದ ದಾಳಿ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಸದ್ಯ ಮಗು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆಯಾದ ಡಾ. ಕಿರಣ್ ಹೊನ್ನಣ್ಣವರ್ ಅವರಿಗೆ ಇದು ಎರಡನೇ ಮದುವೆಯಾಗಿತ್ತು ಎಂದು ತಿಳಿದುಬಂದಿದೆ. ಮೊದಲ ಪತ್ನಿಯೊಂದಿಗೆ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ (ಡಿವೋರ್ಸ್) ಪಡೆದಿದ್ದ ಕಿರಣ್, ನಂತರ ಪ್ರಿಯಾಂಕಾಳನ್ನು ಪ್ರೀತಿಸಿ ಎರಡನೇ ಮದುವೆಯಾಗಿದ್ದರು. ಇಬ್ಬರೂ ಉನ್ನತ ವೃತ್ತಿಯಲ್ಲಿದ್ದರೂ ಕಳೆದ ಒಂದೂವರೆ ವರ್ಷದಿಂದ ಇವರ ನಡುವೆ ತೀವ್ರ ಕೌಟುಂಬಿಕ ಕಲಹ ನಡೆಯುತ್ತಿತ್ತು. ಈ ಹಿಂದೆ ಇಬ್ಬರ ಜಗಳ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಆಗ ಉಪನಗರ ಠಾಣೆಯ ಪೊಲೀಸರು ಹಾಗೂ ಕುಟುಂಬಸ್ಥರು ಸೇರಿ ಇಬ್ಬರಿಗೂ ರಾಜಿ ಸಂಧಾನ ಮಾಡಿಸಿ ಮತ್ತೆ ಒಂದಾಗಿ ಬಾಳುವಂತೆ ಕಳುಹಿಸಿಕೊಟ್ಟಿದ್ದರು.
ಡಾ. ಕಿರಣ್ ಅವರು ಮೊನ್ನೆ ರಾತ್ರಿ ನೈಟ್ ಡ್ಯೂಟಿಗೆ ತೆರಳಿದ್ದರು. ಮರುದಿನ ಬೆಳಗ್ಗೆ ಸುಮಾರು 11 ಗಂಟೆಗೆ ಕರ್ತವ್ಯ ಮುಗಿಸಿ ಮನೆಗೆ ಮರಳಿದ್ದ ಅವರು ತೀವ್ರ ಆಯಾಸದಿಂದ ಬೆಡ್ರೂಮ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಪತಿಯನ್ನು ಕೊಲ್ಲಲು ಮೊದಲೇ ಸಂಚು ರೂಪಿಸಿದ್ದ ಪ್ರಿಯಾಂಕಾ, ಕಿರಣ್ ಮಲಗಿದ್ದಾಗಲೇ ಅವರಿಗೆ ಅರವಳಿಕೆ (ಅನಸ್ತೇಷಿಯಾ) ಇಂಜೆಕ್ಷನ್ ನೀಡಿದ್ದಾಳೆ ಎನ್ನಲಾಗಿದೆ. ಕಿರಣ್ ಪ್ರಜ್ಞೆ ತಪ್ಪುತ್ತಿದ್ದಂತೆ ಚಾಕುವಿನಿಂದ ಅವರ ಕುತ್ತಿಗೆಯ ಭಾಗಕ್ಕೆ ಬರ್ಬರವಾಗಿ ಇರಿದು ಕೊಂದಿದ್ದಾಳೆ. ಕಿರಣ್ ಅವರ ಮೃತದೇಹ ಬೆಡ್ರೂಮ್ ಗಾದಿಯ ಮೇಲೆ ಅರೆಬೆತ್ತಲೆ ಸ್ಥಿತಿಯಲ್ಲಿ, ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಮಂಗಳವಾರ ಸಂಜೆಯಿಂದಲೇ ಡಾ. ಕಿರಣ್ ಅವರಿಗೆ ಬರುತ್ತಿದ್ದ ದೂರವಾಣಿ ಕರೆಗಳನ್ನು ಪತ್ನಿ ಪ್ರಿಯಾಂಕಾಳೇ ಸ್ವೀಕರಿಸುತ್ತಿದ್ದುದರಿಂದ, ಕೊಲೆ ಮಂಗಳವಾರ ರಾತ್ರಿಯೇ ನಡೆದಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಬುಧವಾರ ಸಂಜೆ 4 ಗಂಟೆಗೆ ಮಗ ನೇಹಿತ್ ಶಾಲೆಯಿಂದ ಮನೆಗೆ ಮರಳಿದ್ದಾನೆ. ಮನೆಗೆ ಬಂದ ಮಗನಿಗೆ ತಂದೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿ, ಆತ ಎಲ್ಲಿ ಹೊರಗೆ ಹೋಗಿ ವಿಷಯ ತಿಳಿಸುತ್ತಾನೋ ಎಂಬ ಭಯದಿಂದ ಪಾಪಿ ತಾಯಿ ಪ್ರಿಯಾಂಕಾ ಮಗನ ಮೇಲೂ ಚಾಕುವಿನಿಂದ ಭೀಕರವಾಗಿ ದಾಳಿ ನಡೆಸಿದ್ದಾಳೆ. ಮತ್ತೊಂದು ರೂಮ್ನಲ್ಲಿ ಮಗನಿಗೆ ಚಾಕು ಇರಿದು ಆತನೂ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಕರಗದ ಆಕೆ, ಮಗುವಿನ ಪಕ್ಕದಲ್ಲೇ ಕುಳಿತು ಮೊಬೈಲ್ನಲ್ಲಿ ರೀಲ್ಸ್ ನೋಡುತ್ತಾ ಕ್ರೂರತ್ವ ಮೆರೆದಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ (ಕಮಿಷನರ್) ಎನ್. ಶಶಿಕುಮಾರ್ ಹಾಗೂ ಉಪನಗರ ಠಾಣೆಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಅಪಾರ್ಟ್ಮೆಂಟ್ಗೆ ಪ್ರವೇಶಿಸಿದಾಗ ಇಡೀ ಘಟನೆ ಬೆಳಕಿಗೆ ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕ ನೇಹಿತ್ ಇನ್ನು ಉಸಿರಾಡುತ್ತಿರುವುದನ್ನು ಖುದ್ದಾಗಿ ಗಮನಿಸಿದ ಕಮಿಷನರ್ ಶಶಿಕುಮಾರ್ ಅವರೇ ಸ್ವತಃ ಮಗುವನ್ನು ಎತ್ತಿಕೊಂಡು ಓಡಿ ಬಂದು ಆಸ್ಪತ್ರೆಗೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಡಾ. ಪ್ರಿಯಾ ಅವರನ್ನು ಪೊಲೀಸರು ವಿಚಾರಿಸಿದಾಗ ವಿಚಿತ್ರವಾಗಿ ವರ್ತಿಸಿದ್ದಾಳೆ. ಈ ಘಟನೆ ಬಳಿಕ ತಾನೂ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳಲು ಯತ್ನಿಸಿರುವ ಬಗ್ಗೆಯೂ ಕುರುಹುಗಳು ಪತ್ತೆಯಾಗಿವೆ. ಇನ್ನು ಮನೆಯ ಬಹುತೇಕ ಕಡೆಗಳಲ್ಲಿ ಬಳೆಗಳು ಒಡೆದು ಬಿದ್ದಿರುವುದು ಪತ್ತೆಯಾಗಿದೆ. ಪತಿ-ಪತ್ನಿ ನಡುವೆ ಸಂಘರ್ಷ ನಡೆದಿತ್ತಾ ಎನ್ನುವ ಅನುಮಾನ. ಪೊಲೀಸರು ಸ್ಥಳಕ್ಕೆ ಹೋದಾಗ ಆಕೆಯೂ ಸ್ವತಃ ಇಂಜೆಕ್ಟ್ ಮಾಡಿಕೊಂಡು ಬೆಡ್ ಮೇಲೆ ಮೊಬೈಲ್ನಲ್ಲಿ ಬ್ಯುಸಿಯಾಗಿದ್ದಳು ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿ ಪ್ರಿಯಾಂಕಾಳನ್ನು ವಶಕ್ಕೆ ಪಡೆದು ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆಯ ಸಂಕೇಶ್ವರ ತಾಲೂಕಿನ ಹೆಬ್ಬಾಳದ ಡಾ. ಕಿರಣ ಹಾಗೂ ವಿಜಯಪುರ ಜಿಲ್ಲೆಯ ಡಾ. ಪ್ರಿಯಾಗೆ 10 ವರ್ಷದ ನಿಹಿತ್ ಎಂಬ ಮಗನಿದ್ದಾನೆ. ಡಾ. ಕಿರಣಗೆ ನಿರಂತರವಾಗಿ ಕರೆ ಮಾಡಿದರೂ ಸ್ವೀಕರಿಸದೆ ಇರುವುದರಿಂದ ಅನುಮಾನಗೊಂಡ ಕುಟುಂಬಸ್ಥರು ಮಗನ ಮನೆಗೆ ಬಂದಿದ್ದಾರೆ. ಮನೆಗೆ ಬಂದ ಬಳಿಕ ಮಗನನ್ನು ಕರೆದರು ಬಾಗಿಲು ತೆರದಿಲ್ಲ. ಹಲವು ಕದ ತಟ್ಟಿದ್ದಾರೆ. ಆದರೂ ಸಹ ಬಾಗಿಲನ್ನು ತೆರದಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಗಿಲು ತಟ್ಟಿದಾಗ ಡಾ. ಪ್ರಿಯಾ ತೆರದಿದ್ದಾಳೆ. ಒಳ ಹೋಗಿ ನೋಡಿದರೆ ರಕ್ತಸಿಕ್ತ ಕಲೆಗಳನ್ನು ನೋಡಿ ಪೊಲೀಸರು ಬೆಡ್ರೂಮ್ ನೋಡಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕೊಲೆ ಡಾ. ಪ್ರಿಯಾ ಮಾಡಿದ್ದಾಳೆಂದು ಕಿರಣ ಕುಟುಂಬಸ್ಥರು ಆರೋಪಿಸಿದ್ದಾರೆ.
"ಕೌಟುಂಬಿಕ ಸಮಸ್ಯೆಯಿಂದಲೇ ಈ ಭೀಕರ ಘಟನೆ ನಡೆದಿರುವ ಶಂಕೆ ಇದೆ. ಸದ್ಯ ತೀವ್ರ ಆಘಾತದಲ್ಲಿರುವ ಹಾಗೂ ಆಸ್ಪತ್ರೆಗೆ ದಾಖಲಾಗಿರುವ ಆರೋಪಿ ಪ್ರಿಯಾಂಕಾ ಗುಣಮುಖಳಾದ ನಂತರ ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಮಗುವಿನ ಹೇಳಿಕೆಯನ್ನೂ ಪಡೆಯಬೇಕಿದೆ, ತನಿಖೆಯ ನಂತರವಷ್ಟೇ ಸಂಪೂರ್ಣ ಸತ್ಯ ಹೊರಬರಲಿದೆ," ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.