ಅಬುಧಾಬಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಮಕ್ಕಳ ಪೋಷಕರು ಮತ್ತು ಓರ್ವ ಸಹೋದರಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಬುಧಾಬಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದು, ಅವರ ಪೋಷಕರು ಹಾಗೂ ಸೋದರಿ ಗಂಭೀರ ಗಾಯಗೊಂಡಂತಹ ಆಘಾತಕಾರಿ ಘಟನೆ ನಡೆದಿದೆ. ಅಬುಧಾಬಿಯಲ್ಲಿ ಲಿವಾ ಫೆಸ್ಟಿವಲ್ನಲ್ಲಿ ಕೆಲ ಕಾಲ ಕಳೆದ ಕುಟುಂಬ ವಾಪಸ್ ದುಬೈಗೆ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ದುರಂತದಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಕೇರಳದ ಮಲ್ಲಪುರಂ ಮೂಲದವರು. ಎಲ್ಲರೂ 14 ವರ್ಷದೊಳಗಿನ ಮಕ್ಕಳಾಗಿದ್ದಾರೆ. ಯುಎಇನಲ್ಲಿ ಭಾನುವಾರ ಮುಂಜಾನೆ ಈ ದುರಂತ ಸಂಭವಿಸಿದೆ.
25
ದುಬೈನಲ್ಲಿ ಮಕ್ಕಳ ಅಂತ್ಯಕ್ರಿಯೆ
ಈ ನಾಲ್ವರು ಮಕ್ಕಳ ಏಕೈಕ ಸೋದರಿ ಹಾಗೂ ಪೋಷಕರು ಘಟನೆಯಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಮಂಗಳವಾರ ಮಧ್ಯಾಹ್ನ ಇವರ ಮಕ್ಕಳ ಅಂತ್ಯಕ್ರಿಯೆಯನ್ನು ದುಬೈನಲ್ಲೇ ದಪನ ಕೇಂದ್ರದಲ್ಲಿ ಮಾಡಿ ಮುಗಿಸಲಾಗಿದೆ. ಮೃತರಾದ ಮಕ್ಕಳನ್ನು 14 ವರ್ಷದ ಅಶಾಝ್, 12 ವರ್ಷದ ಅಮರ್, 7 ವರ್ಷದ ಅಜಾಮ್ ಹಾಗೂ 5 ವರ್ಷದ ಅಯ್ಯಾಶ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮಕ್ಕಳಾದ ಅಶಾಜ್, ಅಮರ್, ಅಯ್ಯಾಶ್ ಹಾಗೂ ಅವರ ಮನೆ ಕೆಲಸದಾಕೆ 49 ವರ್ಷದ ಬುಷ್ರಾ ಫಯಾಜ್ ಯಾಹು ಅವರು ಸ್ಥಳದಲ್ಲೇ ಮೃತಪಟ್ಟರೆ ಗಂಭೀರ ಗಾಯಗೊಂಡಿದ್ದ ಅಝಾಮ್ ಅವರು ಸೋಮವಾರ ಸಾವನ್ನಪ್ಪಿದ್ದಾರೆ.
35
ಮನೆ ಕೆಲಸದಾಕೆಯೂ ಸಾವು
ಮೃತ ಮಕ್ಕಳ ಪೋಷಕರನ್ನು ಅಬ್ದುಲ್ ಲತೀಫ್ ಹಾಗೂ ರುಕ್ಸಾನಾ ಎಂದು ಗುರುತಿಸಲಾಗಿದ್ದು, ಇವರ ಪುತ್ರಿ 10 ವರ್ಷದ ಇಜ್ಜಾ ಕೂಡ ದುರಂತದಲ್ಲಿ ಗಂಭೀರ ಗಾಯಗೊಂಡಿದ್ದು, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮನೆಕೆಲಸದಾಕೆ ಬುಶ್ರಾ ಫಯಾಜ್ ಯಾಹು ಅವರ ಮೃತದೇಹವನ್ನು ಸೋಮವಾರ ಸಂಜೆಯೇ ಕೇರಳಕ್ಕೆ ಕಳುಹಿಸಿಕೊಡಲಾಗಿದ್ದು, ಮಂಗಳವಾರ ಕೇರಳದಲ್ಲೇ ಅಂತ್ಯಕ್ರಿಯೆ ನಡೆದಿದೆ.
ಆಸ್ಪತ್ರೆಯಲ್ಲಿ ಪೋಷಕರಿಗೆ ತೋರಿಸಿ ದುಬೈನಲ್ಲೇ ಮಕ್ಕಳ ಅಂತ್ಯಕ್ರಿಯೆ
ಮಕ್ಕಳ ಸಾವಿನ ಬಗ್ಗೆ ಅವರ ತಂದೆ ಅಬ್ದುಲ್ ಲತೀಫ್ ಅವರಿಗೆ ಭಾನುವಾರ ತಿಳಿಸಲಾಗಿದ್ದು, ತಾಯಿ ರುಕ್ಸನಾಗೆ ಮಂಗಳವಾರ ಹೇಳಲಾಗಿದೆ. ಮಂಗಳವಾರ ಮಧ್ಯಾಹ್ನ ದುಬೈಗೆ ಸಾಗಿಸುವ ಮೊದಲು ಆಸ್ಪತ್ರೆಯಲ್ಲಿ ಮಕ್ಕಳ ಮೃತದೇಹಗಳನ್ನು ಪೋಷಕರು ಮತ್ತು ಕಿರಿಯ ಸಹೋದರಿಗೆ ತೋರಿಸಿ ನಂತರ ಅಂತ್ಯಸಂಸ್ಕಾರಕ್ಕಾಗಿ ಕೊಂಡೊಯ್ಯಲಾಯ್ತು. ಇದರ ನಂತರ, ಸಂಜೆ 4.30 ರ ಸುಮಾರಿಗೆ ದುಬೈನ ಮುಹೈಸ್ನಾದಲ್ಲಿರುವ ಅಲ್ ಕುಸೈಸ್ ಸ್ಮಶಾನದಲ್ಲಿ ನಾಲ್ವರು ಸಹೋದರರನ್ನು ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸಮಾಧಿ ಮಾಡಲಾಯಿತು.
55
ಉದ್ಯಮಿಯಾಗಿದ್ದ ಅಬ್ದುಲ್ ಲತೀಫ್
ಅಬ್ದುಲ್ ಲತೀಫ್ ಅವರು ಉದ್ಯಮಿಯಾಗಿದ್ದು, ರಾಸ್ ಅಲ್ ಖೈಮಾದಲ್ಲಿ ವ್ಯವಹಾರ ನಡೆಸುತ್ತಿದ್ದರೆ, ರುಖ್ಸಾನಾ ರಿಯಲ್ ಎಸ್ಟೇಟ್ ಸಲಹೆಗಾರರಾಗಿದ್ದರು. ಚಳಿಗಾಲದ ರಜೆಯ ಸಮಯದಲ್ಲಿ ಕುಟುಂಬವು ಅಬುಧಾಬಿಯಲ್ಲಿ ನಡೆದ ಲಿವಾ ಉತ್ಸವದಲ್ಲಿ ಸಮಯ ಕಳೆಯುವುದಕ್ಕೆ ಹೋಗಿತ್ತು. ಮಕ್ಕಳ ಶಾಲೆ ಪುನರಾರಂಭಕ್ಕೂ ಮುನ್ನ ಇವರು ದುಬೈಗೆ ಹಿಂತಿರುಗುವಾಗ ಈ ಅಪಘಾತ ಸಂಭವಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ