ಉದ್ಯಮಿ ಸಿಜೆ ರಾಯ್ ಸಾವಿನ ನಿಗೂಢ ಕಾರಣಕ್ಕೆ ಶೀಘ್ರ ತೆರೆ, ಅಂತಿಮ ಹಂತದತ್ತ ಎಸ್ಐಟಿ ತನಿಖೆ, ವರದಿ ಸಲ್ಲಿಕೆಗೆ ಸಿದ್ಧತೆ

Published : Feb 17, 2026, 04:00 PM IST

ಉದ್ಯಮಿ ಸಿ.ಜೆ.ರಾಯ್‌ ಆತ್ಮ*ಹತ್ಯೆ ಪ್ರಕರಣದ ಎಸ್ಐಟಿ ತನಿಖೆ ಅಂತಿಮ ಹಂತದಲ್ಲಿದೆ. ಐಟಿ ದಾಳಿ, ವ್ಯವಹಾರ, ಮತ್ತು ವೈಯಕ್ತಿಕ ಒತ್ತಡ ಸೇರಿದಂತೆ ನಾಲ್ಕು ಆಯಾಮಗಳಲ್ಲಿ ತನಿಖೆ ನಡೆಸಲಾಗಿದ್ದು, ಶೀಘ್ರದಲ್ಲೇ ಸಮಗ್ರ ವರದಿ ಸಲ್ಲಿಕೆಯಾಗಲಿದೆ. ಈ ವರದಿ ಸಲ್ಲಿಕೆಯಾದ ನಂತರವೇ ಸಾವಿನ ನಿಜವಾದ ಕಾರಣ ತಿಳಿಯಲಿದೆ.

PREV
17
ನಿಗೂಢ ಸಾವಿನ ತನಿಖೆ ಅಂತಿಮ ಹಂತಕ್ಕೆ

ಬೆಂಗಳೂರು: ಕಾನ್ಫಿಡೆಂಟ್‌ ಪ್ರಾಜೆಕ್ಟ್ಸ್‌ (ಇಂಡಿಯಾ) ಪ್ರೈವೇಟ್‌ ಲಿಮಿಟೆಡ್‌ ಮುಖ್ಯಸ್ಥ, ಉದ್ಯಮಿ ಸಿ.ಜೆ.ರಾಯ್‌ ಆತ್ಮ*ಹತ್ಯೆ ಪ್ರಕರಣದ ತನಿಖೆ ಇದೀಗ ಅಂತಿಮ ಹಂತಕ್ಕೆ ತಲುಪಿದ್ದು, ವಿಶೇಷ ತನಿಖಾ ತಂಡ (ಎಸ್ಐಟಿ) ಶೀಘ್ರದಲ್ಲೇ ತನ್ನ ಸಮಗ್ರ ವರದಿಯನ್ನು ಸಲ್ಲಿಸಲು ಸಿದ್ಧವಾಗಿದೆ. ಹಲವು ದಿನಗಳ ಗಂಭೀರ ತನಿಖೆಯ ಬಳಿಕ, ಎಸ್ಐಟಿ ತಂಡ ತನಿಖೆಯನ್ನು ಪೂರ್ಣಗೊಳಿಸಿ ನಗರ ಪೊಲೀಸ್ ಕಮಿಷನರ್‌ಗೆ ವರದಿ ಸಲ್ಲಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಸಿ ಜೆ ರಾಯ್ ಆತ್ಮ*ಹತ್ಯೆ ಪ್ರಕರಣವನ್ನು ಅತ್ಯಂತ ಸಂವೇದನಾಶೀಲವಾಗಿ ಪರಿಗಣಿಸಿದ ಎಸ್ಐಟಿ, ಪ್ರಕರಣದ ಎಲ್ಲಾ ಆಯಾಮಗಳನ್ನು ಆಳವಾಗಿ ಪರಿಶೀಲಿಸಿದೆ. ಕೆಲವೇ ದಿನಗಳಲ್ಲಿ ತನಿಖಾ ವರದಿ ಸಿದ್ಧವಾಗಿ ಮೇಲಧಿಕಾರಿಗಳಿಗೆ ಸಲ್ಲಿಕೆಯಾಗಲಿದೆ. ಈ ವರದಿ ಹೊರಬಂದ ಬಳಿಕವೇ ಆತ್ಮ*ಹತ್ಯೆಯ ಹಿಂದಿನ ನಿಜವಾದ ಕಾರಣಗಳು ಬಹಿರಂಗವಾಗುವ ನಿರೀಕ್ಷೆಯಿದೆ.

27
ನಾಲ್ಕು ಪ್ರಮುಖ ಆಯಾಮಗಳಲ್ಲಿ ತನಿಖೆ

ಎಸ್ಐಟಿ ತಂಡ ಸಿ ಜೆ ರಾಯ್ ಆತ್ಮ*ಹತ್ಯೆ ಸಂಬಂಧ ನಾಲ್ಕು ಪ್ರಮುಖ ಆಯಾಮಗಳಲ್ಲಿ ತನಿಖೆ ಕೈಗೊಂಡಿತ್ತು. ಐಟಿ ದಾಳಿ ಮತ್ತು ಅದರ ಪರಿಣಾಮಗಳು, ಉದ್ಯಮ ವ್ಯವಹಾರಗಳು ಮತ್ತು ಆರ್ಥಿಕ ಸ್ಥಿತಿ, ಉದ್ಯಮದಲ್ಲಿ ಮಾಡಿದ ಹೂಡಿಕೆಗಳು ಮತ್ತು ನಷ್ಟ–ಲಾಭಗಳು, ಕುಟುಂಬ ಸಂಬಂಧಿತ ವಿಚಾರಗಳು ಹಾಗೂ ವೈಯಕ್ತಿಕ ಒತ್ತಡಗಳು ಈ ಎಲ್ಲಾ ಅಂಶಗಳನ್ನು ಪರಸ್ಪರ ಸಂಪರ್ಕಿಸಿ ಪರಿಶೀಲನೆ ನಡೆಸಲಾಗಿದೆ.

37
ದಾಖಲೆಗಳು, ಹೇಳಿಕೆಗಳ ಸೂಕ್ಷ್ಮ ಪರಿಶೀಲನೆ

ತನಿಖೆಯ ಭಾಗವಾಗಿ ಎಸ್ಐಟಿ ಹಲವು ಪ್ರಮುಖ ದಾಖಲೆಗಳು, ಕಡತಗಳು ಹಾಗೂ ಹಣಕಾಸು ದಾಖಲೆಗಳನ್ನು ಪರಿಶೀಲಿಸಿದೆ. ರಾಯ್ ಅವರ ಕಚೇರಿ ಸಿಬ್ಬಂದಿ, ಉದ್ಯಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಜೊತೆಗೆ, ಐಟಿ ಇಲಾಖೆಯ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಅವರ ಹೇಳಿಕೆಗಳನ್ನೂ ದಾಖಲಿಸಲಾಗಿದೆ. ಕೊಚ್ಚಿಯಿಂದ ಬಂದಿದ್ದ ಐಟಿ ಅಧಿಕಾರಿಗಳ ತಂಡ ರಾಯ್‌ ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು. ಐಟಿ ಅಧಿಕಾರಿಗಳಿಗೆ ನಗರ ಬಿಟ್ಟು ತೆರಳದಂತೆ ಸೂಚಿಸಿದ್ದ ಎಸ್‌ಐಟಿ, ಅಗತ್ಯವಿದ್ದರೆ ನಿಮ್ಮ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿತ್ತು.

47
ಸಾವಿನ ನೈಜ ಕಾರಣ ಇನ್ನೂ ಗುಟ್ಟೇ

ಎಸ್ಐಟಿ ತಂಡ ರಾಯ್ ಕುಟುಂಬದ ಸದಸ್ಯರು, ಆಪ್ತರು ಹಾಗೂ ಸಹವರ್ತಿಗಳ ವಿಚಾರಣೆ ನಡೆಸಿದೆ. ಸಿ ಜೆ ರಾಯ್ ಆತ್ಮ*ಹತ್ಯೆ ಮಾಡಿಕೊಳ್ಳುತ್ತಾರೆ ಎಂಬುದೇ ಕುಟುಂಬದವರಿಗೆ ಅಚ್ಚರಿಯ ವಿಷಯವಾಗಿತ್ತು. ಉದ್ಯಮ ವ್ಯವಹಾರಗಳಲ್ಲಿ ಅವರು ಸದಾ ಧೈರ್ಯದಿಂದ ಮತ್ತು ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದ ವ್ಯಕ್ತಿಯಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ರಾಯ್ ಅವರ ಆತ್ಮ*ಹತ್ಯೆಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕುಟುಂಬದವರಿಗೂ ಸಹ ಅವರು ಈ ತೀವ್ರ ನಿರ್ಧಾರ ತೆಗೆದುಕೊಂಡ ಕಾರಣ ತಿಳಿಯದಿರುವುದು ಪ್ರಕರಣಕ್ಕೆ ಇನ್ನಷ್ಟು ನಿಗೂಢತೆಯನ್ನು ತಂದಿದೆ. ಹೀಗಾಗಿ, ಈ ಸಾವಿನ ಸತ್ಯ ಇನ್ನೂ ಗುಟ್ಟು ಗುಟ್ಟಾಗಿಯೇ ಉಳಿದಿದೆ.

57
ಶೀಘ್ರದಲ್ಲೇ ಸತ್ಯ ಬಹಿರಂಗದ ನಿರೀಕ್ಷೆ

ಎಸ್ಐಟಿ ತಂಡ ಇದೀಗ ಅಂತಿಮ ಹಂತದ ತನಿಖೆಯನ್ನು ಪೂರ್ಣಗೊಳಿಸಿದ್ದು, ವರದಿಗೆ ಷರಾ ಬರೆಯುವ ಕಾರ್ಯದಲ್ಲಿದೆ. ಈ ವರದಿ ಸಲ್ಲಿಕೆಯಾದ ಬಳಿಕವೇ ಸಿ ಜೆ ರಾಯ್ ಸಾವಿನ ಹಿಂದಿನ ನಿಜವಾದ ಕಾರಣಗಳು ಬಹಿರಂಗವಾಗುವ ಸಾಧ್ಯತೆ ಇದೆ. ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಈ ಪ್ರಕರಣದ ಮೇಲೆ ಎಲ್ಲರ ಕಣ್ಣೂ ಎಸ್ಐಟಿ ವರದಿಯತ್ತ ನೆಟ್ಟಿದೆ.

ರಿಚ್ಮಂಡ್‌ ಟೌನ್‌ ಸಮೀಪದ, ಹೊಸೂರು ರಸ್ತೆಯಲ್ಲಿರುವ ತಮ್ಮ ಒಡೆತನದ ಕಾನ್ಫಿಡೆಂಟ್ ಗ್ರೂಪ್ ಕಂಪನಿಯ ಪ್ರಧಾನ ಕಚೇರಿಯಲ್ಲಿ ರಾಯ್ ಸಾವಿಗೆ ಶರಣಾಗಿದ್ದರು. ಈ ಕಚೇರಿಯಲ್ಲೇ ರಾಯ್ ಅವರು ಸ್ವಅಕ್ಷರದಲ್ಲಿ ಬರೆದಿದ್ದಾರೆ ಎನ್ನಲಾದ ಕೆಲ ಪತ್ರಗಳು ಸಿಕ್ಕಿವೆ. ಇವುಗಳು ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ್ದಾಗಿದ್ದು, ಆ ಪತ್ರಗಳಲ್ಲಿ ಉಲ್ಲೇಖಿತ ವಿವರಗಳನ್ನಾಧರಿಸಿ ಸಾವಿಗೆ ಕಾರಣಗಳ ಶೋಧನೆಗೆ ಎಸ್ಐಟಿ ಪ್ರಯತ್ನಿಸಿದೆ ಎಂದು ಮೂಲಗಳು ಹೇಳಿವೆ.

67
ಕೇರಳ, ಬೆಂಗಳೂರು ಸೈಟ್ ವ್ಯವಹಾರ:

ಇತ್ತೀಚೆಗೆ ಕೇರಳ ರಾಜ್ಯದಲ್ಲಿ 150ಕ್ಕೂ ಹೆಚ್ಚಿನ ನಿವೇಶನಗಳನ್ನು ರಾಯ್ ಮಾರಾಟ ಮಾಡಿದ್ದರು ಎನ್ನಲಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ಕೂಡ ಕೆಲವು ಆಸ್ತಿ ಖರೀದಿಗೆ ಯತ್ನಿಸಿದ್ದರು. ಕೋರಮಂಗಲದಲ್ಲಿ ತಾವು ವಾಸವಾಗಲು ಬಂಗಲೆ ನಿರ್ಮಾಣಕ್ಕೂ ಅವರು ಯೋಜಿಸಿದ್ದರು. ಈ ಬಗ್ಗೆ ಕೆಲವರ ಜತೆ ಆರ್ಥಿಕ ವ್ಯವಹಾರಗಳನ್ನು ಹೊಂದಿದ್ದರು ಎನ್ನಲಾಗಿದೆ. ತಮ್ಮ ಕಂಪನಿಗಳ ಶೋಧನೆ ಹಾಗೂ ಜಪ್ತಿಗೆ ಕೊಚ್ಚಿಯ ಆದಾಯ ತೆರಿಗೆ ಇಲಾಖೆ ಕಳೆದ ವರ್ಷ ಹೊರಡಿಸಿದ್ದ ಆದೇಶ ರದ್ದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಎರಡನೇ ದಿನದಲ್ಲಿ ಹಿಂಪಡೆದಿದ್ದ ವಿಚಾರ ಬೆಳಕಿಗೆ ಬಂದಿತ್ತು.

77
ಎಂಟು ಕಂಪನಿಗಳ ಶೋಧನೆ ಮತ್ತು ಜಪ್ತಿ

ಕಾನ್ಫಿಡೆಂಟ್ ಪ್ರಾಜೆಕ್ಸ್ಟ್, ಕಾನ್ಫಿಡೆಂಟ್ ಏರ್‌ಲೈನ್ಸ್, ಕಾನ್ಫಿಡೆಂಟ್ ರೆಸಾರ್ಟ್ಸ್, ಕಾನ್ಫಿಡೆಂಟ್ ಎಂಟರ್‌ಟೈನ್‌ಮೆಂಟ್ ಸೇರಿದಂತೆ ಎಂಟು ಕಂಪನಿಗಳ ಶೋಧನೆ ಮತ್ತು ಜಪ್ತಿಗೆ ಕೇರಳದ ಕೊಚ್ಚಿಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯ ಪ್ರಧಾನ ನಿರ್ದೇಶಕರು 2025ರ ನ.27 ರಂದು ಆದೇಶ ಹೊರಡಿಸಿದ್ದರು. ಡಿ.3ರಂದು ಪಂಚನಾಮೆ ನಡೆಸಿದ್ದರು. ಹಾಗೆಯೇ, ಈ ಆದೇಶ ಮತ್ತು ಪಂಚನಾಮೆಯನ್ನು ಅಕ್ರಮವೆಂದು ಘೋಷಿಸಿ ರದ್ದುಪಡಿಸಬೇಕು ಎಂದು ಕೋರಿ ಎಂಟು ಕಂಪನಿಗಳು ಮತ್ತು ಸಿ.ಜೆ.ರಾಯ್‌ ಅವರು 2025ರ ಡಿ.16ರಂದು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯು ಡಿ.18ರಂದು ಹೈಕೊರ್ಟ್‌ ಏಕ ಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ರಾಯ್‌ ಪರ ವಕೀಲರು ಹಾಜರಾಗಿ, ಅರ್ಜಿ ಹಿಂಪಡೆಯಲು ಮತ್ತು ನಂತರ ಪ್ರಶ್ನಿಸಲು ಅನುಮತಿ ನೀಡುವಂತೆ ಕೋರಿ ಹೈಕೋರ್ಟ್‌ಗೆ ಮೆಮೊ ಸಲ್ಲಿಸಿದರು. ಅದರಂತೆ ಅರ್ಜಿ ಹಿಂಪಡೆಯಲು ಹೈಕೋರ್ಟ್‌ ಅನುಮತಿ ನೀಡಿತ್ತು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories