ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ವಿಶ್ವಾದ್ಯಂತ 88 ಲಕ್ಷ ಹಾಗೂ ಭಾರತದಲ್ಲಿ 25 ಲಕ್ಷ ಜನರು ಬಡತನಕ್ಕೆ ತಳ್ಳಲ್ಪಡಲಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ತೈಲ ಬೆಲೆ ಏರಿಕೆ ಮತ್ತು ಹೆಚ್ಚಿದ ವೆಚ್ಚಗಳು ಇದಕ್ಕೆ ಕಾರಣವಾಗಿದೆ.
ಮಧ್ಯಪ್ರಾಚ್ಯ ಸಂಘರ್ಷವು 25 ಲಕ್ಷ ಭಾರತೀಯರನ್ನು ಹಾಗೂ ವಿಶ್ವಾದ್ಯಂತ 88 ಲಕ್ಷ ಮಂದಿಯನ್ನು ಬಡತನಕ್ಕೆ ತಳ್ಳಲಿದೆ ಎಂಬ ಕಳವಳಕಾರಿ ಮಾಹಿತಿಯನ್ನು ವಿಶ್ವಸಂಸ್ಥೆ ನೀಡಿದೆ. ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಮಾನವ ಅಭಿವೃದ್ಧಿಯ ಮೇಲೆ ಯುದ್ಧ ಬೀರಬಹುದಾದ ಪರಿಣಾಮಗಳ ಬಗೆಗಿನ ವರದಿಯಲ್ಲಿ ಈ ಅಂದಾಜು ಮಾಡಲಾಗಿದೆ.
25
ಬಡವರ ಪ್ರಮಾಣ ಏರಿಕೆ
ವರದಿ ಅನ್ವಯ ಭಾರತದಲ್ಲಿ ಪ್ರಸಕ್ತ 35.15 ಕೋಟಿ ಕಡುಬಡವರಿದ್ದು, ಯುದ್ಧ ಮುಗಿಯುವ ಹೊತ್ತಿಗೆ ಈ ಪ್ರಮಾಣ 35.40 ಕೋಟಿಗೆ ಏರಲಿದೆ. ಅಂದರೆ ಬಡವರ ಪ್ರಮಾಣದಲ್ಲಿ ಕನಿಷ್ಠ 4 ಲಕ್ಷದಿಂದ ಗರಿಷ್ಠ 25 ಲಕ್ಷದವರೆಗೆ ಏರಿಕೆ ಸಂಭವವಿದೆ. ಈ ಮೂಲಕ ಭಾರತದಲ್ಲಿ ಬಡವರ ಪ್ರಮಾಣ ಹಾಲಿ ಇರುವ ಶೇ.23.9ರಿಂದ ಶೇ.24.2ಕ್ಕೆ ಏರಲಿದೆ ಎಂದು ವರದಿ ಹೇಳಿದೆ.
35
ಕಾರಣವೇನು?
ಪ್ರಮುಖ ತೈಲ ಮತ್ತು ಅನಿಲ ರಫ್ತುದಾರ ದೇಶಗಳೇ ಯುದ್ಧದ ಭಾಗವಾಗಿರುವ ಕಾರಣ ಹಾಗೂ ಅವುಗಳು ಬರೆಬೇಕಿದ್ದ ಹೋರ್ಮುಜ್ ಜಲಸಂಧಿ ಕೂಡ ಮುಚ್ಚಿರುವುದರಿಂದ ಅವಲಂಬಿತ ದೇಶಗಳಲ್ಲಿ ತೈಲಾನಿಲ ಅಭಾವ ಸೃಷ್ಟಿಯಾಗಿದೆ. ಸರಕುಸಾಗಣೆ ವೆಚ್ಚವೂ ಏರಿದೆ. ಪರಿಣಾಮವಾಗಿ ಬೆಲೆ ಗಗನಮುಖಿಯಾಗಿದೆ. ಹೀಗೆ ದಿನನಿತ್ಯದ ಖರ್ಚುಗಳು ಹೆಚ್ಚಾಗುವ ಕಾರಣ ಜನರ ಉಳಿತಾಯ ಕ್ಷೀಣಿಸಿ, ಜೀವನಮಟ್ಟ ಕುಸಿಯುತ್ತದೆ. ಭಾರತದಲ್ಲಿ ವೈದ್ಯಕೀಯ ಉಪಕರಣಗಳ ಬೆಲೆಯಲ್ಲೂ ಶೇ.50ರಷ್ಟು ಹೆಚ್ಚಳವಾಗಲಿದೆ.
ಭಾರತದ ಸುಮಾರು 93 ಲಕ್ಷ ಜನ ಗಲ್ಫ್ನಲ್ಲಿ ವಾಸವಿದ್ದು, ಅವರ ಆದಾಯಕ್ಕೂ ಅಲ್ಲಿ ಕತ್ತರಿ ಬಿದ್ದಿದೆ. ಇತ್ತ ಕಚ್ಚಾವಸ್ತುಗಳಿಗಾಗಿ ಹಾಗೂ ಮಾರುಕಟ್ಟೆಗಾಗಿ ಗಲ್ಫ್ ರಾಷ್ಟ್ರಗಳನ್ನು ನೆಚ್ಚಿಕೊಂಡಿರುವ ಆಹಾರ ಸಂಸ್ಕರಣೆ, ನಿರ್ಮಾಣ ಸಾಮಗ್ರಿ, ಉಕ್ಕು ಆಧರಿತ ಉತ್ಪಾದನೆ, ರತ್ನ, ವಜ್ರ ವ್ಯಾಪಾರಿಗಳ ಆದಾಯ ಕುಸಿಯಲಿದೆ.
ಕೊಲ್ಲಿ ಯುದ್ಧದ ಮಧ್ಯೆಯೂ ಭಾರತದ ಜಿಡಿಪಿ ದರ ಶೇ.6.5 ದಾಖಲು
ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಣಾಮದ GDP ನಡುವೆಯೂ ಭಾರತದ ಸಮಗ್ರ ಆರ್ಥಿಕ ಬೆಳವಣಿಗೆ (ಜಿಡಿಪಿ) ಬೆಳವಣಿಗೆ ದರ 2027ರ ವಿತ್ತೀಯ ವರ್ಷಕ್ಕೆ ಶೇ.6.5ರಷ್ಟು ದಾಖಲಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭವಿಷ್ಯ ನುಡಿದಿದೆ. ಈ ಬಗ್ಗೆ ಐಎಂಎಫ್ ಮಾಹಿತಿ ಹಂಚಿಕೊಂಡಿದ್ದು, '2027ರಲ್ಲಿ ಆರ್ಥಿಕತೆ ಬೆಳವಣಿಗೆಯು ಶೇ.6.5ರಷ್ಟಿರಲಿದೆ. ಭಾರತೀಯ ಸರಕುಗಳ ಮೇಲೆ ಟ್ರಂಪ್ ವಿಧಿಸಿದ್ದ ಹೆಚ್ಚುವರಿ ತೆರಿಗೆಯನ್ನು ಶೇ.10ಕ್ಕೆ ಇಳಿಸಿದ ಪರಿಣಾಮ ಮಧ್ಯಪ್ರಾಚ್ಯ ಸಂಘರ್ಷದ ಪ್ರತಿಕೂಲ ನಡುವೆಯೂ ಆರ್ಥಿಕತೆ ವೇಗ ಪಡೆಯುವ ಸಾಧ್ಯತೆಯಿದೆ'ಎಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.