ಮೊಬೈಲ್‌ನಿಂದ ದೂರ, 24 ಗಂಟೆಗಳ ಡಿಜಿಟಲ್ ಉಪವಾಸ ನಡೆಸಿದ ಜೈನ ಸಮುದಾಯ

By Anusha KbFirst Published Sep 8, 2022, 12:48 PM IST
Highlights

ಮಧ್ಯಪ್ರದೇಶದ ಜೈನ ಸಮುದಾಯವೊಂದು ಮೊಬೈಲ್ ಗೀಳಿನಿಂದ ಸಮುದಾಯವನ್ನು ಹೊರ ತರುವ ನಿಟ್ಟಿನಲ್ಲಿ ಹೊಸದೊಂದು ಪ್ರಯೋಗ ಮಾಡಿದೆ.

ಮಧ್ಯಪ್ರದೇಶ: ಇಂದು ಮೊಬೈಲ್‌ ಗೀಳು ಎಷ್ಟು ವ್ಯಾಪಕವಾಗಿದೆ ಎಂದರೆ, ತೊದಲು ಮಾತನಾಡುವ ಹಾಲುಗಲ್ಲದ ಮಕ್ಕಳಿಂದ ಹಿಡಿದು, ವಯಸ್ಸಾದ ವೃದ್ಧರವರೆಗೂ ಎಲ್ಲರಿಗೂ ಮೊಬೈಲ್‌ ಗೀಳು ವ್ಯಾಪಿಸಿಕೊಂಡಿದ್ದು, ಒಂದು ಕ್ಷಣ ಮೊಬೈಲ್ ಕೈ ತಪ್ಪಿದರೆ ಅನಾಹುತವೇ ಸಂಭವಿಸಿದಂತೆ ಉಸಿರೇ ನಿಂತತೆ ಚಡಪಡಿಸುತ್ತಾರೆ. ಯುವ ಸಮೂಹವಂತೂ ಮೊಬೈಲ್ ಚಟಕ್ಕೆ ಸಂಪೂರ್ಣ ಶರಣಾಗಿದ್ದು, ಅದಿಲ್ಲದೇ ಬದುಕೇ ಇಲ್ಲ ಎಂಬುವಷ್ಟರ ಮಟ್ಟಿಗೆ ಮೊಬೈಲ್‌ಗೆ ದಾಸರಾಗಿದ್ದಾರೆ. ಮೊದಲೆಲ್ಲಾ ತಾಯಂದಿರು ಚಂದ್ರನನ್ನು ತೋರಿಸುತ್ತಾ ಊಟ ತಿನ್ನಿಸುತ್ತಿದ್ದರೆ, ಇಂದು ಮೊಬೈಲ್‌ ತೋರಿಸುತ್ತಾ ತಾಯಂದಿರು ಮಕ್ಕಳಿಗೆ ತುತ್ತು ನೀಡುತ್ತಾರೆ. ಅಷ್ಟರ ಮಟ್ಟಿಗೆ ಮೊಬೈಲ್ ಜನ ಜೀವನದೊಂದಿಗೆ ಹಾಸು ಹೊಕ್ಕಿದ್ದು, ಇದರಿಂದ ಹೊರಬರುವುದೇ ಬಹುತೇಕರಿಗೆ ಕಷ್ಟ ಎನಿಸಿದೆ. 

ಇದೇ ಕಾರಣಕ್ಕೆ ಈಗ ಮಧ್ಯಪ್ರದೇಶದ ಜೈನ ಸಮುದಾಯವೊಂದು ಮೊಬೈಲ್ ಗೀಳಿನಿಂದ ಸಮುದಾಯವನ್ನು ಹೊರ ತರುವ ನಿಟ್ಟಿನಲ್ಲಿ ಹೊಸದೊಂದು ಪ್ರಯೋಗ ಮಾಡಿತ್ತು. ಅದೇ ಡಿಜಿಟಲ್ ಉಪವಾಸ. ಅನ್ನಾಹಾರ ಸೇವಿಸದೇ ಹೇಗೆ ಉಪವಾಸ ಮಾಡುತ್ತಾರೆಯೋ ಅದೇ ರೀತಿ ಡಿಜಿಟಲ್ ಉಪವಾಸದಲ್ಲಿ ಮೊಬೈಲ್‌ ಫೋನ್‌ಗಳು, ಗ್ಯಾಡ್ಜೆಟ್‌ಗಳು, ಇಂಟರ್‌ನೆಟ್ ಸವಲತ್ತುಗಳು ಸೇರಿದಂತೆ ಯಾವುದೇ ಇಲೆಕ್ಟ್ರಾನಿಕ್‌ ಗ್ಯಾಡ್ಜೆಟ್ಗಳನ್ನು ಈ ಉಪವಾಸದಲ್ಲಿ ಭಾಗಿಯಾಗುವವರು ಬಳಸುವಂತಿಲ್ಲ. 

ದೇವಸ್ಥಾನಗಳೂ ಈಗ ಡಿಜಿಟಲ್, ಆನ್‌ಲೈನ್ ಮೂಲಕವೇ ಚಾಮುಂಡೇಶ್ವರಿಗೆ ಕಾಣಿಕೆ ಮುಟ್ಟಿಸ್ಬಹುದು

ಜೈನ ಸಮುದಾಯದ ಪ್ರಯುಶಾನ್ ಪರ್ವದ ಅಂಗವಾಗಿ ಮಧ್ಯಪ್ರದೇಶದ ರೈಸೆನ್‌ ಜಿಲ್ಲೆಯಲ್ಲಿ (Raisen district) ನಡೆದ ಈ ವಿಭಿನ್ನ ಪ್ರಯೋಗದಲ್ಲಿ ಸಮುದಾಯದ ಸಾವಿರ ಮಂದಿ ತಮ್ಮ ಮೊಬೈಲ್‌ ಫೋನ್‌ಗಳನ್ನು 24 ಗಂಟೆಗಳ ಕಾಲ ಡಿಪಾಸಿಟ್(ಠೇವಣಿ) ಇಡಲು ಕೊಟ್ಟಿದ್ದರು. ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ 120 ಕಿಲೋ ಮೀಟರ್ ದೂರದಲ್ಲಿ ಈ ಪ್ರಯೋಗ ನಡೆದಿದ್ದು, ಬೇಗಂಗಂಜ್‌ನ ದೇಗುಲದಲ್ಲಿ ಮೊಬೈಲ್ ಫೋನ್‌ ಅನ್ನು ತೆಗೆದಿಡಲಾಗಿತ್ತು ಎಂದು ಜೈನ ಸಮುದಾಯದ ನಾಯಕರೊಬ್ಬರು ಈ ಬಗ್ಗೆ ಮಾಹಿತಿ ನೀಡಿದರು. 

ಪ್ರಯುಶಾನ್ ಪರ್ವವೂ ಜೈನ ಸಮುದಾಯದ ಒಂದು ಪ್ರಮುಖ ಹಬ್ಬವಾಗಿದ್ದು, ಇದನ್ನು ಪ್ರತಿವರ್ಷವೂ ಜೈನ ಸಮುದಾಯ ಆತ್ಮ(ಸ್ವಯಂ) ಶುದ್ಧತೆಗಾಗಿ (self-purification) ಆಚರಿಸಿಕೊಂಡು ಬರುತ್ತಿದೆ. ಇದು ಆತ್ಮಾವಲೋಕನ (self-purification) ಹಾಗೂ ಆಧ್ಯಾತ್ಮಿಕವಾಗಿ ಬೆಳವಣಿಗೆಗೆ (spiritual development) ಇರುವ ಒಂದು ದಿಟ್ಟ ಹೆಜ್ಜೆ ಆಗಿದೆ. ಈ ಆತ್ಮ ಶುದ್ಧೀಕರಣದ ಹಬ್ಬದಲ್ಲಿ ಜೈನ ಸಮುದಾಯದ ಸದಸ್ಯರು ಉಪವಾಸ ಮಾಡುವ ಜೊತೆಗೆ ಕೆಲವು ಪೂಜೆ ಹಾಗೂ ಧಾರ್ಮಿಕ ಆಚರಣೆಗಳನ್ನು ನಡೆಸುವ ಮೂಲಕ ಆಚರಿಸುತ್ತಾರೆ.

ಪ್ರಸ್ತುತ ದಿನಗಳಲ್ಲಿ ಜನ ಇಂಟರ್‌ನೆಟ್, ಸ್ಮಾರ್ಟ್‌ಫೋನ್ ಹಾಗೂ ಇತರ ಗ್ಯಾಡ್ಜೆಟ್‌ಗಳ ಚಟಕ್ಕೆ ಬಿದ್ದಿದ್ದಾರೆ. ಜನರನ್ನು ಈ ಚಟದಿಂದ ದೂರವಿಡಲು 'ಡಿಜಿಟಲ್ ಉಪವಾಸ' ಅಥವಾ ಇಂಟರ್ನೆಟ್ ಇಲ್ಲದೆ ಉಪವಾಸದ  ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಈ ಉಪವಾಸಕ್ಕಾಗಿ ಜನರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ 24 ಗಂಟೆಗಳ ಕಾಲ ದೇವಸ್ಥಾನದಲ್ಲಿ ಇಟ್ಟಿದ್ದರು ಎಂದು ಜೈನ ಸಮುದಾಯದ ಮುಖಂಡರಾದ ಅಕ್ಷಯ್ ಜೈನ್ ಎಂಬುವವರು ಹೇಳಿದರು.

ದೆಹಲಿ, ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ 'ಡಿಜಿಯಾತ್ರಾ' ಸೇವೆ,ಬಳಸುವುದು ಹೇಗೆ?

ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಕೌನ್ಸಿಲರ್ ಮತ್ತು ಸಮುದಾಯದ ಪ್ರಮುಖ ನಾಯಕ ಅಜಯ್ ಜೈನ್ ( Ajay Jain), ಈ ಉಪವಾಸ ಬುಧವಾರ ಬೆಳಗ್ಗೆ ಪ್ರಾರಂಭವಾಗಿದ್ದು, ಸುಮಾರು 1,000 ಜನರು ಈ ಹೊಸ ಪ್ರಯೋಗದಲ್ಲಿ ಭಾಗವಹಿಸಿದರು ಎಂದು ಹೇಳಿದರು. ನಾವು ಫೋನ್, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು ಸೇರಿದಂತೆ ಎಲ್ಲಾ ಇಂಟರ್ನೆಟ್ ಮೋಡ್‌ಗಳಿಂದ ದೂರವಿದ್ದೇವೆ. ಪ್ರಯುಶಾನ್ ಪರ್ವದ (Paryushan Parva) ಉಪವಾಸದ ಸಮಯದಲ್ಲಿ ನಾವು ಕೆಲವು ನೆಚ್ಚಿನ ವಸ್ತುಗಳನ್ನು ತ್ಯಾಗ ಮಾಡಬೇಕು. ಆದ್ದರಿಂದ ನಾವು 24 ಗಂಟೆಗಳ ಕಾಲ ಇಂಟರ್ನೆಟ್, ಸ್ಮಾರ್ಟ್‌ಫೋನ್ ಅನ್ನು ತ್ಯಜಿಸಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.
 

click me!