Temple Ritual: ನಾವೇಕೆ ದೇವರಿಗೆ ಪ್ರದಕ್ಷಿಣೆ ಹಾಕುತ್ತೇವೆ?

By Suvarna NewsFirst Published Nov 30, 2021, 5:07 PM IST
Highlights

ದೇವಾಲಯಕ್ಕೆ ಹೋದಾಗ ಎಲ್ಲರೂ ಪ್ರದಕ್ಷಿಣೆ ಹಾಕುತ್ತೇವೆ. ಗರ್ಭಗುಡಿಯ ಸುತ್ತಲೂ ಸುತ್ತುವುದದಲ್ಲದೆ, ನಿಂತಲ್ಲಿಯೇ ಸುತ್ತಿ ಅಡ್ಡ ಬಿದ್ದು ನಮಸ್ಕರಿಸುತ್ತೇವೆ. ಆದರೆ, ಈ ಪ್ರದಕ್ಷಿಣೆಯ ಹಿಂದಿನ ಅರ್ಥವೇನು ಎಂದು ಎಂದಾದರೂ ಯೋಚಿಸಿದ್ದೀರಾ?

ನೀವು ಈ ಕತೆ ಕೇಳಿಯೇ ಇರುತ್ತೀರಿ. ಒಮ್ಮೆ ಶಿವಪಾರ್ವತಿ ತಮ್ಮ ಮಕ್ಕಳ ನಡುವೆ ವಿಶಿಷ್ಠ ಸ್ಪರ್ಧೆಯೊಂದನ್ನು ಏರ್ಪಡಿಸಿದರು. ಇಬ್ಬರಲ್ಲಿ ಯಾರು ಮೊದಲು ಜಗತ್ತನ್ನು ಮೂರು ಬಾರಿ ಸುತ್ತಿ ಬರುವರೋ ಅವರು ಆ ಸ್ಪರ್ಧೆ(competition)ಯಲ್ಲಿ ಗೆಲ್ಲುವುದಾಗಿ ಹೇಳಿದರು. ಕಾರ್ತಿಕೇಯನಿಗೆ ಖುಷಿಯಾಯಿತು. ತನ್ನದೋ ನವಿಲಿನ ವಾಹನ. ಸುಯ್ ಎಂದು ಹಾರಿ ಹೋಗಿ ಬರಬಹುದು. ಆದರೆ ದೊಡ್ಡ ಹೊಟ್ಟೆಯ ಗಣಪತಿ ಇಲಿ ಮೇಲೆ ಕುಳಿತು ಸುತ್ತುವ ಹೊತ್ತಿಗೆ ವರ್ಷಗಳೇ ಉರುಳುತ್ತವೆ ಎಂದುಕೊಂಡ. ಕೂಡಲೇ ಕಾರ್ತಿಕೇಯ(Kartikeya) ತನ್ನ ನವಿಲನ್ನೇರಿ ಪ್ರಪಂಚ ಪರ್ಯಟನೆಗೆ ಹೊರಟ. ಗಣಪತಿ ಮಾತ್ರ ಹೊರಡುವ ಆತುರವೇನೂ ತೋರದೆ, ನಿಧಾನವಾಗಿ ತನ್ನ ತಂದೆ ತಾಯಿಯ ಸುತ್ತ ಸುತ್ತತೊಡಗಿದೆ. ಹೀಗೆ ಮೂರು ಸುತ್ತು ಬಂದು ಕೈ ಮುಗಿದು ಕುಳಿತ. 
ಗಣಪತಿಯ ನಡೆ ನೋಡಿದ ಶಿವ(Shiva) ಕೇಳಿದ, 'ನೀನೇಕೆ ನಮ್ಮನ್ನು ಸುತ್ತುತ್ತಿರುವೆ, ಜಗತ್ತನ್ನು ಸುತ್ತಲು ಹೇಳಿದ್ದಲ್ಲವೇ?'
ಅದಕ್ಕೆ ಗಣಪತಿ ಬಹಳ ವಿನಮ್ರನಾಗಿ ಉತ್ತರಿಸಿದ, 'ನೀವಿಬ್ಬರು ನನ್ನ ಹೆತ್ತು ಸಲಹಿದವರು. ತಂದೆತಾಯಿಗಳೇ ಮಕ್ಕಳಿಗೆ ಜಗತ್ತಲ್ಲವೇ? ನನ್ನ ಪ್ರದಕ್ಷಿಣೆ ಮುಗಿಯಿತು.'
ಗಜಮುಖನ ಮಾತು ಕೇಳಿ ಶಿವ-ಪಾರ್ವತಿ ಸಂತುಷ್ಟರಾದರು. ಅಂತೂ ಗಣಪತಿಯೇ ಸ್ಪರ್ಧೆಯಲ್ಲಿ ಗೆದ್ದಿದ್ದ. 

ಪ್ರದಕ್ಷಿಣೆ(circumumbulation)
ಈಗ ವಿಷಯಕ್ಕೆ ಬರೋಣ. ದೇವಾಲಯ(temple)ದಲ್ಲಿ ನಾವು ಪ್ರದಕ್ಷಿಣೆ ಹಾಕುವುದಕ್ಕೂ, ಗಣಪತಿ(Ganapati)ಯ ಈ ತರ್ಕಕ್ಕೂ ಸಂಬಂಧವಿದೆ. ದೇವಾಲಯದ ಗರ್ಭಗುಡಿ(sanctum sactorum), ಅಥವಾ ಅಗ್ನಿಕುಂಡಕ್ಕೆ ಸುತ್ತು ಬರುವುದು ಕೂಡಾ ಇದೇ ಉದ್ದೇಶದಲ್ಲಿ. ದೇವರೆಂದರೆ ನಮ್ಮ ನಂಬಿಕೆಯಲ್ಲಿ ಇಡೀ ಜಗದ ಪೋಷಕ. ಅವನ ಸಂಪೂರ್ಣ ಸ್ವರೂಪ ನೋಡುವಷ್ಟು ಶಕ್ತರು ನಾವಲ್ಲದ್ದರಿಂದ ಗರ್ಭಗುಡಿಯ ಮೂರ್ತಿಯಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸುವುದು ನಮ್ಮ ನಂಬಿಕೆ, ಆಚರಣೆ(practice). ಇನ್ನು ಹೋಮಕುಂಡಕ್ಕೆ ಹೋಮ ಕೈಗೊಳ್ಳುವಾಗ ದೇವರನ್ನು ಆಹ್ವಾನಿಸಲಾಗುತ್ತದೆ. ಹೀಗಾಗಿ, ನಮ್ಮೆಲ್ಲರ ಪೋಷಕ, ಸರ್ವಶಕ್ತನಿಗೆ ಸುತ್ತು ಬರುವುದು ನಾವು ಅವನಿಗೆ ತೋರುವ ಗೌರವ. 

Temple special: ಮಣ್ಣಿನ ಗೊಂಬೆಯ ಹರಕೆ ಕೇಳುವ ಸದಾಶಿವ ರುದ್ರ

ಸಾಮಾನ್ಯವಾಗಿ ದೇವಾಲಯಕ್ಕೆ ಹೋಗುವ ಭಕ್ತರು ಮೊದಲು ದೇವರ ಮೂರ್ತಿಗೆ ಕೈಮುಗಿದು ನಮಸ್ಕರಿಸಿ, ಗರ್ಭಗುಡಿಗೆ ಮೂರು ಸುತ್ತು ಬರುತ್ತಾರೆ. ಹೀಗೆ ಸುತ್ತುವಾಗೆಲ್ಲ ಭಕ್ತರ ಬಲಭಾಗದಲ್ಲಿಯೇ ದೇವರ ಮೂರ್ತಿ ಇರುತ್ತದೆ. ಇದು ನಾವು ಯಾವಾಗಲೂ ಸರಿಯಾದ ಹಾದಿಯಲ್ಲೇ ನಡೆಯಬೇಕೆಂದು ನಮ್ಮನ್ನು ನಾವೇ ಎಚ್ಚರಿಸಿಕೊಳ್ಳುವ ಮಾರ್ಗ. ಈ ರೀತಿ ಪ್ರದಕ್ಷಿಣೆ ಹಾಕುವಾಗ ದೇವರ ನಾಮಸ್ಮರಣೆ ಮಾಡುತ್ತಿರಬೇಕು.

ಆತ್ಮ ಪ್ರದಕ್ಷಿಣೆ
ಗರ್ಭಗುಡಿಗೆ ಪ್ರದಕ್ಷಿಣೆ ಹಾಕಿ ಬಂದ ಬಳಿಕ ದೇವರ ಮೂರ್ತಿ ಎದುರು ನಿಂತು, ನಿಂತಲ್ಲೇ ಮೂರು ಸುತ್ತು ಬಂದು ನಮಸ್ಕರಿಸುವುದು ಕ್ರಮ. ಹೀಗೆ ನಿಂತಲ್ಲೇ ಸುತ್ತುವರಿಯುವುದಕ್ಕೆ ಆತ್ಮ ಪ್ರದಕ್ಷಿಣೆ ಎನ್ನುತ್ತೇವೆ. ಪ್ರತಿಯೊಬ್ಬರಲ್ಲೂ ಆತ್ಮವಿರುತ್ತದೆ. ಈ ಎಲ್ಲ ಆತ್ಮಗಳಲ್ಲೂ ದೇವರ ಸ್ವರೂಪ ಇರುತ್ತದೆ ಎಂಬ ನಂಬಿಕೆಯಿಂದ ನಾವು ಆತ್ಮ ಪ್ರದಕ್ಷಿಣೆ ಮಾಡುತ್ತೇವೆ. ಬಳಿಕ ಕೈ ಮುಗಿದು ನಮಸ್ಕರಿಸಿ, ಪ್ರಾರ್ಥನೆ(prayer) ಮಾಡಿಕೊಂಡು ದೇವರಿಗೆ ಬೆನ್ನು ಹಾಕದೆ ಹಿಂದೆ ಹೋಗಿ ಧ್ವಜಸ್ಥಂಭಕ್ಕೆ ನಮಸ್ಕರಿಸಿದರೆ ಆಚರಣೆ ಮುಗಿಯುತ್ತದೆ. 

Vastu for Health: ಆರೋಗ್ಯಕ್ಕಾಗಿ ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿ

ಎಷ್ಟು ಸುತ್ತು(rounds) ಬರಬೇಕು?
ಒಬ್ಬೊಬ್ಬ ದೇವರಿಗೂ ಇಷ್ಟೇ ಸಂಖ್ಯೆಯ ಪ್ರದಕ್ಷಿಣೆ ಹಾಕಬೇಕು. ಗಣಪತಿಗೆ ಒಂದು ಪ್ರದಕ್ಷಿಣೆ ಹಾಕಿದರೂ ಸಾಕು. ಶಿವನಿಗೆ ಎರಡು ಪ್ರದಕ್ಷಿಣೆ ಕನಿಷ್ಠ ಹಾಕಬೇಕು. ವಿಷ್ಣುವಿಗೆ ಮೂರು ಬಾರಿ, ದುರ್ಗೆಯಾದರೆ ಕನಿಷ್ಠ 6 ಸುತ್ತು ಪ್ರದಕ್ಷಿಣೆ ಹಾಕಬೇಕು. ಅಯ್ಯಪ್ಪನಿಗೆ ನಾಲ್ಕು ಸುತ್ತು, ಅಶ್ವತ್ಥ ಮರಕ್ಕೆ 7 ಸುತ್ತು ಹಾಕಬೇಕು ಎನ್ನಲಾಗುತ್ತದೆ. ಹೀಗೆ ಇಂತಿಷ್ಟು ಬಾರಿ ಸುತ್ತಿದರೆ ಇಂತಿಂಥ  ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. 

click me!