Asianet Suvarna News Asianet Suvarna News

Temple special: ಮಣ್ಣಿನ ಗೊಂಬೆಯ ಹರಕೆ ಕೇಳುವ ಸದಾಶಿವ ರುದ್ರ

ಭಕ್ತರು ತಮ್ಮ ಬೇಡಿಕೆ ಈಡೇರಿದರೆ ಅಭಿಷೇಕ ಮಾಡಿಸುತ್ತೇನೆ, ಅಮ್ಮನವರಿಗೆ ಸೀರೆ ಕೊಡುತ್ತೇನೆ, ಅರ್ಚನೆ ಮಾಡಿಸುತ್ತೇನೆ ಮುಂತಾಗಿ ಹೇಳಿಕೊಳ್ಳುವುದು ಸಾಮಾನ್ಯ. ಆದರೆ, ಧರ್ಮಸ್ಥಳ ಸಮೀಪದಲ್ಲಿರುವ ಈ ಸೂರ್ಯ ದೇವಸ್ಥಾನದಲ್ಲಿ ಹರಕೆ ಈಡೇರಿದರೆ ಮಣ್ಣಿನ ಗೊಂಬೆ ಒಪ್ಪಿಸಬೇಕು.

This Temple is famous for clay sculpture offerings skr
Author
Bangalore, First Published Nov 30, 2021, 3:50 PM IST

ಇದೊಂದು ವಿಶಿಷ್ಠ ದೇವಾಲಯ. ಇಲ್ಲಿನ ಹರಕೆ ಬನಕ್ಕೆ ಹೋಗಿ ನೋಡಿದರೆ ಸಾವಿರಾರು ಮಣ್ಣಿನ ಮನೆಗಳು, ಮಗು, ವಧುವರರ ಬೊಂಬೆ, ಹೃದಯ, ಕಣ್ಣು, ಕಿವಿ, ಕೈಕಾಲು, ಕಾರುಗಳು, ನಾಯಿ, ಬೆಕ್ಕು, ಹಸು, ಕಂಪ್ಯೂಟರ್, ಬಸ್ಸು, ಲಾರಿ- ಇನ್ನೂ ಹಲವಾರು ರೂಪದ ಮಣ್ಣಿನ ಗೊಂಬೆಗಳು ಗುಡ್ಡೆ ಗುಡ್ಡೆಯಾಗಿ ಬಿದ್ದಿರುತ್ತವೆ. ಕಾಡಿನ ಮಧ್ಯೆ ರಾಶಿಯಾಗಿ ಬಿದ್ದಿರುವ ಈ ಮಣ್ಣಿನ ಗೊಂಬೆಗಳದೇ ದೊಡ್ಡ ಗುಡ್ಡವಾಗಿ ಹೋಗಿದೆ. ಮತ್ತೊಂದಿಷ್ಟು ಗೊಂಬೆಗಳು ಅದಾಗಲೇ ಮಣ್ಣಿನಲ್ಲಿ ಮಣ್ಣಾಗಿ ಹೋಗಿವೆ. ಅಂದರೆ, ಅಷ್ಟೊಂದು ಭಕ್ತರ ಹರಕೆಗಳು ಈಡೇರಿವೆ ಎಂದರ್ಥ. 
ಹೌದು, ಉಜಿರೆಯಿಂದ ನಾಲ್ಕು ಕಿಲೋಮೀಟರ್ ದೂರ ಇರುವ ಸದಾಶಿವ ರುದ್ರ ದೇವಸ್ಥಾನದಲ್ಲಿ ಭಕ್ತರು ಕೋರಿದ ಹರಕೆಗಳು ಈಡೇರಿದರೆ, ಇಲ್ಲಿಗೆ ಬಂದು ಆ ಸಂಬಂಧಿ ಮಣ್ಣಿನ ಗೊಂಬೆಗಳನ್ನು ಅರ್ಪಿಸಬೇಕು. ಅದೇ ಇಲ್ಲಿನ ವಿಶೇಷ. 

ಸದಾಶಿವ ರುದ್ರ ದೇವಾಲಯ(Sadashivarudra Temple)ವು ಧರ್ಮಸ್ಥಳ(Dharmastala)ಕ್ಕೆ ಸಮೀಪವಿರುವುದರಿಂದ ಅಲ್ಲಿಗೆ ಬಂದ ಭಕ್ತರು ಇಲ್ಲಿಗೂ ಭೇಟಿ ನೀಡುತ್ತಾರೆ. ಹಾಗೆ ಭೇಟಿ ನೀಡಿದಾಗ ದೇವಾಲಯಕ್ಕೆ ಸುತ್ತು ಹಾಕಿ, ಮೇಲಿನ ಬನದಲ್ಲಿರುವ ಹರಕೆ ಕಟ್ಟೆಯ ಬಳಿ ಹೋಗಿ ಮನೋಭಿಲಾಶೆ ಹೇಳಿಕೊಳ್ಳುತ್ತಾರೆ. ಆ ಅಭಿಲಾಶೆ ಈಡೇರಿದಾಗ ಬಂದು ತಮ್ಮ ಬೇಡಿಕೆಗೆ ಸಂಬಂಧಿಸಿದ ಮಣ್ಣಿನ ಗೊಂಬೆಯನ್ನು ಅರ್ಪಿಸಬೇಕು. 

ಏನೆಲ್ಲ ಕೇಳಿಕೊಳ್ಳಬಹುದು?
ನೀವು ಸ್ವಂತದ ಮನೆ(home), ಉದ್ಯೋಗ(job), ಮಗು, ಮದುವೆ(marriage), ಆರೋಗ್ಯ ಮುಂತಾದ ಯಾವುದೇ ಬೇಡಿಕೆಗಳನ್ನಿಲ್ಲಿ ಕೋರಬಹುದು. ಅದರಲ್ಲೂ ಆರೋಗ್ಯ(health)ವೆಂದರೆ ಹೃದಯದ ಆರೋಗ್ಯ ಸುಧಾರಿಸಿದರೆ ಮಣ್ಣಿನ ಹೃದಯ, ಕೈಯ್ಯ ಸಮಸ್ಯೆ ಇದ್ದರೆ ಕೈ ಸುಧಾರಿಸಿದರೆ ಮಣ್ಣಿನ ಕೈ ಕೊಡುವುದಾಗಿ, ಮದುವೆಯಾದರೆ ವಧುವರರ ಗೊಂಬೆ ಕೊಡುವುದಾಗಿ, ಕೆಲಸ ಸಿಕ್ಕರೆ ಟೇಬಲ್ ಹಾಗೂ ಛೇರ್ ಗೊಂಬೆ ಕೊಡುವುದಾಗಿ, ಅಂತೆಯೇ ಕಾರು, ಬಸ್ಸು, ಕಿವಿ, ಮೂಗು, ಮಗು, ನಾಯಿ. ಬೆಕ್ಕು,. ಬುಕ್, ಪೆನ್, ಕಂಪ್ಯೂಟರ್, ಕಣ್ಣು ಹೀಗೆ ನಮ್ಮ ಹರಕೆಗೆ ಸಂಬಂಧಿಸಿದ ಗೊಂಬೆಗಳನ್ನಿಲ್ಲಿ ಕೊಡುವುದಾಗಿ ಕೇಳಬಹುದು. ಹರಕೆ ಈಡೇರಿದಾಗ ಬಂದು ಒಂದು ಸೇರು ಅಕ್ಕಿ, ಕಾಯಿ ಹಾಗೂ 5 ರುಪಾಯಿ ಕಾಣಿಕೆಯೊಂದಿಗೆ ಮಣ್ಣಿನ ಗೊಂಬೆಯನ್ನು ಸಮರ್ಪಿಸಬೇಕು. 

Zodiac Animal: ನಿಮ್ಮಲ್ಲಿ ಈ ಮೃಗದ ಅಂಶಗಳಿವೆಯಾ? ಚೆಕ್ ಮಾಡ್ಕೊಳ್ಳಿ

ಗೊಂಬೆಗಳೆಲ್ಲಿ ಸಿಗುತ್ತವೆ?
ದೇವಾಲಯದ ಆವರಣದಲ್ಲೇ ವಿವಿಧ ರೀತಿಯ ಮಣ್ಣಿನ ಗೊಂಬೆಗಳು(clay Sculptures) ಸಿಗುತ್ತವೆ. ಒಂದೊಂದು ಗೊಂಬೆಯ ಬೆಲೆಯೂ 50 ರುಪಾಯಿಯಿಂದ 200 ರುಪಾಯಿವರೆಗಿರುತ್ತದೆ. 

ಇತಿಹಾಸ(History)
ದೇವಸ್ಥಾನದ ಹೆಸರು ಸದಾಶಿವ ರುದ್ರ ದೇವಾಲಯ ಎಂದಾದರೂ ಇದು 'ಸೂರ್ಯ ದೇವಸ್ಥಾನ' ಎಂದೇ ಹೆಸರಾಗಿದೆ. ದೇವಾಲಯದ ಇತಿಹಾಸ 13ನೇ ಶತಮಾನಕ್ಕೆ ಕೊಂಡೊಯ್ಯುತ್ತದೆ. ಭೃಗು ಮಹರ್ಷಿಯ ಶಿಷ್ಯರೊಬ್ಬರ ಭಕ್ತಿಗೆ ಮೆಚ್ಚಿ ಶಿವಪಾರ್ವತಿ ಪ್ರತ್ಯಕ್ಷವಾದ ಸ್ಥಳಪುರಾಣ ಇಲ್ಲಿಗಿದೆ. 

Luck is on the way: ಸಧ್ಯದಲ್ಲೇ ಶ್ರೀಮಂತರಾಗೋ ಅದೃಷ್ಟ ಈ ರಾಶಿಗಳವರದು

ಅಲ್ಲದೆ, ಇದಕ್ಕೆ ಸೂರ್ಯ ಎಂಬ ಹೆಸರು ಬರಲು ಇರುವ ಕಾರಣ ವಿಶಿಷ್ಠವಾಗಿದೆ. ಬಹಳ ಹಿಂದೆ ಮಹಿಳೆಯೊಬ್ಬಳು ಈ ಸ್ಥಳದಲ್ಲಿ ತನ್ನ ಮಗನೊಂದಿಗೆ ಹುಲ್ಲು ಕತ್ತರಿಸುತ್ತಿದ್ದಳಂತೆ. ಆಗ ಕತ್ತಿ ಅಲ್ಲಿದ್ದ ಕಲ್ಲಿಗೆ ಬಡಿದು, ಕಲ್ಲಿನಿಂದ ರಕ್ತ  ಬರಲು ಶುರುವಾಯಿತಂತೆ. ಆ ರಕ್ತವನ್ನು ನೋಡಿದ ಮಹಿಳೆ ತನ್ನ ಮಗನ ಹೆಸರನ್ನು 'ಸೂರಯ್ಯಾ' ಎಂದು ಕೂಗಿದಳಂತೆ. ಈ ಘಟನೆಯಿಂದ ಈ ಸ್ಥಳಕ್ಕೆ ಸೂರ್ಯ ಎಂಬ ಹೆಸರು ಬಂತಂತೆ. ಊರಿನ ಹೆಸರಿನಿಂದಾಗಿ ದೇವಸ್ಥಾನಕ್ಕೂ ಸೂರ್ಯ ದೇವಾಲಯ ಎಂಬ ಹೆಸರು ಬಂದಿದೆ. 

ಹೋಗುವುದು ಹೇಗೆ?
ಬಸ್ಸಿನಲ್ಲಿ ಹೋಗುವವರು ಉಜಿರೆಯಲ್ಲಿಳಿದು ಆಟೋ ಮಾಡಿಕೊಂಡು ಹೋಗಬೇಕಾಗುತ್ತದೆ. ಸ್ವಂತ ವಾಹನದಲ್ಲಿ ಹೋದಿರಾದರೆ, ದೇವಾಲಯದ ಆವರಣದವರೆಗೂ ವಾಹನ ಹೋಗುತ್ತದೆ. 

Follow Us:
Download App:
  • android
  • ios