ದಿನಾಲೂ ಗಾಯತ್ರಿ ಮಂತ್ರ ಜಪಿಸಿದರೆ ಕೋಟಿ ಫಲ!

By Suvarna NewsFirst Published Nov 27, 2020, 2:19 PM IST
Highlights

ಗಾಯತ್ರಿ ಮಂತ್ರವನ್ನು ನೀವರಿಯದೆ ಪಠಿಸುವುದರಿಂದಲೂ ಕೋಟಿ ಫಲಗಳಿವೆ. ಗಾಯಂತ್ರಿ ಮಂತ್ರದ ಇಪ್ಪತ್ತನಾಲ್ಕು ಅಕ್ಷರಗಳಲ್ಲಿ ಇಪ್ಪತ್ತನಾಲ್ಕು ದೇವತೆಗಳಿದ್ದಾರೆ.

ಗಾಯತ್ರಿ ಮಂತ್ರವನ್ನು ನೀವು ಕೇಳಿಯೇ ಇರುತ್ತೀರಿ. ಅದನ್ನು ರಾಗವಾಗಿ ಹಾಡಿದ ಕ್ಯಾಸೆಟ್‌ಗಳನ್ನೂ ಕೇಳಿರುತ್ತೀರಿ. ಆದರೆ ಇದನ್ನು ಕ್ರಮಬದ್ಧವಾಗಿ ಪಠಿಸಲು ಒಬ್ಬ ಗುರುವಿನ ಉಪದೇಶ ಬೇಕು. ಗಾಯತ್ರಿ ಮಂತ್ರವನ್ನು ಮುಂಜಾನೆ ಅಥವಾ ಸಂದ್ಯಾಕಾಲದಲ್ಲಿ ಶುಚಿಯಾಗಿ ದೇವರ ಎದುರು ಕುಳಿತು ಹನ್ನೆರಡು ಬಾರಿ ಜಪಿಸುವುದರಿಂದ ನಿಮಗೂ ಕುಟುಂಬಕ್ಕೂ ಅತ್ಯುತ್ತಮವಾದ ಫಲಗಳು ಉಂಟಾಗುತ್ತವೆ. ಗಾಯತ್ರಿ ಮಂತ್ರದ ಉಪಾಸಕರೂ ಇದ್ದಾರೆ. ಇವರು ದಿನಕ್ಕೆ ನೂರೆಂಟು ಬಾರಿ, ಸಾವಿರದೆಂಟು ಬಾರಿ- ಹೀಗೆ ಉಪಾಸನೆ ಮಾಡುತ್ತಾರೆ. ಆದರೆ ಇದು ತಾಂತ್ರಿಕ ಸಾಧನೆ. ಇದಕ್ಕೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು. ಇದರಿಂದ ಆಗುವ ಫಲಗಳೂ ಅಧಿಕ. ತಪ್ಪು ಉಚ್ಚಾರಣೆಯಿಂದ ಆಗುವ ಅನರ್ಥಗಳೂ ಅನೇಕ.

ಗಾಯತ್ರಿ ಮಂತ್ರ ಹೀಗಿದೆ:

ಓಂ ಭೂರ್ಭುವಃ ಸ್ವಃ

ತತ್ಸವಿತುರ್ವರೇಣ್ಯಂ

ಭರ್ಗೋ ದೇವಸ್ಯ ಧೀಮಹಿಃ

ಧಿಯೋಯೋನಃ ಪ್ರಚೋದಯಾತ್

ಯಾರ ಉಪಾಸನೆ?

ಗಾಯಂತ್ರಿ ಮಂತ್ರವು ನಮ್ಮ ಬುದ್ಧಿಶಕ್ತಿಯನ್ನು, ಧೀಶಕ್ತಿಯನ್ನು ಪ್ರಚೋದಿಸುವಂತಹ ಗಾಯತ್ರಿ ದೇವಿಯ ಜಪವಾಗಿದೆ. ಹಾಗೇ ನಮಗೆ ನಿತ್ಯ ಬೆಳಕು, ಶಾಖ ಹಾಗೂ ಪಾಕಾದಿಗಳನ್ನು ನೀಡುತ್ತಿರುವ ಭಗವಾನ್ ಸೂರ್ಯನಾರಾಯಣನ ಜಪವೂ ಆಗಿದೆ. ಭೂ, ಭುವ ಮತ್ತು ಸುವ ಲೋಕಗಳಲ್ಲಿ ಬೆಳಕನ್ನು ಪಸರಿಸಿ ಜೀವಿಗಳಿಗೆ ಚೈತನ್ಯವನ್ನು ನೀಡುತ್ತಿರುವ ಸವಿತೃವೇ (ಸೂರ್ಯನೇ) ನಮಗೆ ಧೀಶಕ್ತಿಯನ್ನು ಪ್ರಚೋದಿಸು ಎಂಬುದು ಈ ಮಂತ್ರದ ತಾತ್ಪರ್ಯ. ಹಾಗೇ ಈ ಮಂತ್ರದ ಛಂದಸ್ಸು ಗಾಯತ್ರೀ. ಅಧಿಷ್ಟಾತ್ರ ದೇವತೆಯು ಸವಿತೃ ಸೂರ್ಯನಾರಾಯಣ.

ಭಯ, ಆತಂಕ, ಆಪತ್ತಿನ ಸೂಚನೆ ಕಂಡು ಬಂದಲ್ಲಿ ಭಾಗವತದ ಈ ಶ್ಲೋಕಗಳನ್ನು ಪಠಿಸಬೇಕು ...

ಈ ಮಂತ್ರದಲ್ಲಿ ಇಪ್ಪತ್ತನಾಲ್ಕು ಬೀಜಾಕ್ಷರಗಳಿವೆ. ಇವು ಇಪ್ಪತ್ತನಾಲ್ಕು ದೇವತೆಗಳನ್ನು ಪ್ರತಿನಿಧಿಸುತ್ತದೆ. ಗಾಯತ್ರಿ, ಸೂರ್ಯನಾರಾಯಣ, ಸಾವಿತ್ರಿ, ಸರಸ್ವತಿ ಮುಂತಾದ ಇಪ್ಪತ್ತನಾಲ್ಕು ದೈವೀ ಶಕ್ತಿಗಳ ಉಪಾಸನೆಯಿದು. ಅಂದರೆ ಈ ಮಂತ್ರದ ಉಚ್ಚಾರಣೆಯಿಂದ ಇಪ್ಪತ್ತನಾಲ್ಕು ದೇವತೆಗಳನ್ನು ಉಪಾಸಿಸಿದ ಫಲ ಉಂಟಾಗುತ್ತದೆ. ಗಾಯಂತ್ರಿ ಮಂತ್ರವನ್ನು ಮನಸ್ಸಿಟ್ಟು ಜಪಿಸಿದರೆ, ದೇವತೆಗಳು ಪ್ರಸನ್ನರಾಗಿ ನೀವು ಅಂದುಕೊಂಡ ಆರೋಗ್ಯ ಐಶ್ವರ್ಯಾದಿಗಳನ್ನು ಪ್ರದಾನ ಮಾಡುತ್ತಾರೆ.

ಪ್ರತಿದಿನ ಗಾಯತ್ರಿ ಮಂತ್ರದ ಪಠಣವನ್ನು ಮಾಡುವುದರಿಂದ ನಮ್ಮ ಬುದ್ಧಿಶಕ್ತಿಯು ವಿವರ್ಧಿಸುತ್ತದೆ. ಮಕ್ಕಳಿಗೆ ಇದನ್ನು ಹೇಳಿಕೊಡುವುದರಿಂದ ಅವರ ಕಲಿಕಾಶಕ್ತಿ, ಸ್ಮರಣೆಯ ಶಕ್ತಿಗಳೆಲ್ಲ ಹೆಚ್ಚುತ್ತವೆ. ವಿಶ್ವಾಮಿತ್ರ ಋಷಿಯು ಈ ಮಂತ್ರದ ದ್ರಷ್ಟಾರನು. ದ್ರಷ್ಟಾರ ಎಂದರೆ ಆ ಮಂತ್ರವನ್ನು ಮೊದಲು ಕಂಡುಕೊಂಡವನು. ಈತನೇ ಹೇಳುವಂತೆ, ಗಾಯಂತ್ರಿ ಮಂತ್ರಕ್ಕಿಂತ ಮಿಗಿಲಾದ ಮಂತ್ರವಿಲ್ಲ. ಬ್ರಹ್ಮನೇ ಈ ಮಂತ್ರದ ಮುಂದೆ ಬೇರೆ ಜಪತಪವಿಲ್ಲ ಎಂದು ಹೇಳಿದನೆಂದು ಪ್ರತೀತಿ.

ಮೇಷ, ವೃಷಭ. ಮಿಥುನ, ಕಟಕ ರಾಶಿಯವರಿಗೆ ಮನೋಕೂಟ ಯಾರ ಜೊತೆಗೆ? ...

ಗಾಯತ್ರಿ ಮಂದಿರ

ಗಾಯತ್ರಿ ಮಂತ್ರವನ್ನು ಎಲ್ಲರೂ ಪಠಿಸುತ್ತಾರೆಯೇ ಹೊರತು ಗಾಯತ್ರಿ ದೇವಿಗೆ ದೇವಾಲಯ ಒಂದಿದೆ ಎಂಬುದನ್ನು ನೀವು ಕೇಳಿರಲಾರಿರಿ. ಇದೆ. ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸ ಗ್ರಾಮದಲ್ಲಿ ಈ ದೇವಾಲಯವಿದೆ. ಇದು ಹಾವೇರಿಯಿಂದ ೫೦ ಕಿಮೀ ದೂರದಲ್ಲಿದೆ. ಬಿಳಿಯ ಬಣ್ಣದಲ್ಲಿರುವ ಈ ದೇವಾಲಯ ಮನಸ್ಸಿಗೆ ಶಾಂತಿ ಆನಂದಗಳನ್ನು ಕೊಡುತ್ತದೆ. ದಕ್ಷಿಣ ಭಾರತದ ಏಕೈಕ ಗಾಯತ್ರಿ ಮಂದಿರವಿದು.

ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಮನೋಕೂಟ ಯಾರ ಜೊತೆಗೆ? ...

ಅರುಣಾಸುರನ ಕತೆ

ಹಿಂದೆ ಅರುಣಾಸರ ಎಂಬ ರಾಕ್ಷಸನು, ಬ್ರಹ್ಮನನ್ನು ತಪಿಸಿ ಒಲಿಸಿ, ತನಗೆ ದೇವತೆಗಳಿಂದ, ಮನುಷ್ಯರಿಂದ, ಸ್ತ್ರೀಯರಿಂದ, ಪ್ರಾಣಿಗಳಿಂದ ಸಾವು ಬರದಂತಹ ವರವನ್ನು ಪಡೆಯುತ್ತಾನೆ. ಈ ವರಬಲದಿಂದ ಕೊಬ್ಬಿ, ದೇವತೆಗಳಿಗೂ ಮನುಷ್ಯರಿಗೂ ಉಪಟಳ ನೀಡುತ್ತಿರುತ್ತಾನೆ. ಸರಸ್ವತಿ ದೇವಿಯನ್ನು ಒಲಿಸಿ ಗಾಯತ್ರಿ ಮಂತ್ರದ ಉಪದೇಶ ಪಡೆದಿರುತ್ತಾನೆ. ಈ ಗಾಯತ್ರಿ ಮಂತ್ರವನ್ನು ಜಪಿಸುತ್ತಿರುವವರೆಗೂ ಆತ ಅಜೇಯನಾಗಿರುತ್ತಾನೆ. ದೇವತೆಗಳು ದೇವಿಯ ಮೊರೆ ಹೋಗುತ್ತಾರೆ. ಆಗ ದೇವಿಯು ಅವನನ್ನು ಕೊಲ್ಲುವುದಾಗಿ ದೇವತೆಗಳಿಗೆ ಅಭಯ ನೀಡುತ್ತಾಳೆ. ಸುಂದರಿಯಾಗಿ ಅರುಣಾಸುರನ ಮುಂದೆ ಕಾಣಿಸಿಕೊಳ್ಳುತ್ತಾಳೆ. ಆಕೆಯನ್ನು ಕಂಡು ಅರುಣಾಸುರನು ಗಾಯತ್ರಿ ಮಂತ್ರಜಪ ಮರೆಯುತ್ತಾನೆ. ಆಗ ದೇವಿಯು ವಜ್ರದುಂಬಿಯಾಗಿ ಆತನನ್ನು ವಧಿಸುತ್ತಾಳೆ. ಹೀಗೆ ಗಾಯಂತ್ರಿ ಮಂತ್ರಬಲದಿಂದ ಅಜೇಯನಾಗಿದ್ದ ಅವನು ಮಂತ್ರವನ್ನು ಮರೆತಕೂಡಲೆ ಸಾಯುತ್ತಾನೆ.

 

click me!