ಸಾಲ ಪಡೆಯುವಾಗ ಈ ವಿಷಯಗಳನ್ನು ಅಲಕ್ಷಿಸಿದರೆ - ಋಣ ಮುಕ್ತರಾಗುವುದು ಕಷ್ಟ..!

By Suvarna NewsFirst Published Nov 26, 2020, 4:57 PM IST
Highlights

ಪುರಾಣ, ಶಾಸ್ತ್ರಗಳಲ್ಲಿ ಅನೇಕ ಕೆಲಸ-ಕಾರ್ಯಗಳಿಗೆ ಅದಕ್ಕೆ ಸರಿಹೊಂದುವ ಸಮಯ ಮತ್ತು ವಾರಗಳನ್ನು ನಿಗದಿ ಮಾಡಿದೆ, ಅದಕ್ಕೆ ಅದರದ್ದೆ ಆದ ಕಾರಣವೂ ಇರುತ್ತದೆ. ಶಾಸ್ತ್ರಗಳಲ್ಲಿ ಶುಭ ಕಾರ್ಯವನ್ನು ನಡೆಸುವ ಮುನ್ನ ಶುಭ ಮುಹೂರ್ತವನ್ನು ನೋಡಬೇಕೆಂದು ಹೇಳಿದಂತೆ, ದಿನ ನಿತ್ಯದ ಹತ್ತು-ಹಲವಾರು ಕಾರ್ಯಗಳಿಗೆ ಮುಹೂರ್ತ ಅವಶ್ಯಕವಾಗಿರುತ್ತದೆ. ಪ್ರತ್ಯೇಕ ಕಾರ್ಯಗಳಿಗೆ ಅದಕ್ಕೆ ಸರಿಹೊಂದುವ ಘಳಿಗೆಯಲ್ಲಿ ಮಾಡಿದರೆ ಮಾತ್ರ ಸರಿಯಾದ ಫಲ ದೊರೆಯುತ್ತದೆ. ಹಾಗೆಯೇ ಕಷ್ಟ ಕಾಲದಲ್ಲಿ  ಸಾಲವನ್ನು ತೆಗೆದುಕೊಳ್ಳುವಾಗ ಸಹ ಕೆಲವು ನಿಯಮ ಮತ್ತು ಕಾಲವನ್ನು ಅನುಸರಿಸಬೇಕಾಗುತ್ತದೆ. ಅವು ಯಾವುವೆಂದು ತಿಳಿಯೋಣ...

ಜ್ಯೋತಿಷ್ಯ ಶಾಸ್ತ್ರದಲ್ಲಿ ನಿತ್ಯ ಜೀವನದಲ್ಲಿ ಅನುಸರಿಸಬೇಕಾದ ಹಲವಾರು ವಿಷಯಗಳನ್ನು ತಿಳಿಸಿದ್ದಾರೆ. ಪುರಾಣಗಳಲ್ಲಿ ಉಲ್ಲೇಖಿಸಿದಂತೆ ನಮ್ಮ ದಿನಚರಿ ಇದ್ದಿದ್ದೇ ಆದರೆ ಹಲವಾರ ಕಷ್ಟಗಳು ಬಾಧಿಸದಂತೆ ಇರುವುದು ಸಾಧ್ಯವಿದೆ. ಹಾಗಾಗಿಯೇ ಜ್ಯೋತಿಷ್ಯದಲ್ಲಿ ಇಂಥ ವಾರ, ಇಂಥದ್ದೇ ಕೆಲಸ ಮಾಡುವುದು ಸೂಕ್ತ, ಯಾವ ದಿನ ಯಾವ ಕೆಲಸ ಮಾಡಲೇ ಬಾರದು? ಅಂದರೆ ಹುಟ್ಟಿದ ವಾರ ಕೂದಲು ಕತ್ತರಿಸುವುದು, ಉಗುರು ಕತ್ತರಿಸುವುದು ನಿಷಿದ್ಧವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಮಧ್ಯಾಹ್ನದ ನಂತರ ಚೌರ (ಕಟ್ಟಿಂಗ್) ಮಾಡಿಸುವುದನ್ನು ಸಹ ನಿಷಿದ್ಧವೆಂದು ಹೇಳುತ್ತದೆ ಶಾಸ್ತ್ರ.

ಶಾಸ್ತ್ರಗಳಲ್ಲಿ ಹೇಳಿರುವ ನಿಯಮಗಳನ್ನು, ಅನುಸರಿಸಬೇಕಾದ ಕ್ರಮಗಳನ್ನು ಸರಿಯಾಗಿ ತಿಳಿದುಕೊಂಡು ಅದೇ ಮಾರ್ಗದಲ್ಲಿ ನಡೆದರೆ ಜೀವನ ಸುಖಮಯವಾಗಿರುತ್ತದೆ ಎನ್ನುತ್ತದೆ ಶಾಸ್ತ್ರ. ಹಾಗೆಯೇ ಕಷ್ಟಗಳು ಬರುವುದು ಸಹಜ ಅದನ್ನು ಸರಿಯಾದ ರೀತಿಯಲ್ಲಿ ಪರಿಹರಿಸಿಕೊಳ್ಳುವುದರಿಂದ ಮುಂಬರುವ ದಿನಗಳಲ್ಲಿ ಒಳಿತನ್ನು ಕಾಣಬಹುದು ಮತ್ತು ಸಮಸ್ಯೆಗಳು ಎದುರಾದಾಗ ನೀತಿ-ಧರ್ಮದ ಮಾರ್ಗವನ್ನು ಬಿಟ್ಟು ಹೋಗುವುದು ಸರಿಯಲ್ಲ.

ಇದನ್ನು ಓದಿ: ಕನಸಲ್ಲಿ ನೀರು ನೋಡಿದರೆ ಶುಭವೇ..? ಏನು ಹೇಳುತ್ತೆ ಸ್ವಪ್ನಶಾಸ್ತ್ರ ? 
 

ಸಂಪ್ರದಾಯ, ಶಾಸ್ತ್ರ ಮತ್ತು ಪರಂಪರೆಗಳನ್ನು ಮೀರಿ ನಡೆದವರಿಗೆ ಸಮಸ್ಯೆಗಳು ಎದುರಾಗುವುದು ಖಂಡಿತ. ಹಾಗಾಗಿ ನಮ್ಮ ಶಾಸ್ತ್ರಗಳಲ್ಲಿ ಕಷ್ಟ ಕಾಲದಲ್ಲಿ ಪಡೆಯುವ ಮತ್ತು ಕೊಡುವ ಸಾಲಕ್ಕೂ ಒಂದು ಸಮಯ ಮತ್ತು ಸಂದರ್ಭವಿದೆ. ಯಾವಾಗ ಸಾಲವನ್ನು ಪಡೆಯಬಾರದು, ಸಾಲ ಕೊಡುವಾಗ ಯಾವ ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕು. ಪಡೆದ ಸಾಲವನ್ನು ನಿಯತ್ತಿನಿಂದ ಹಿಂತಿರುಗಿಸಿ ಋಣ ಮುಕ್ತರಾಗಬೇಕೆಂದರೆ ಸಾಲವನ್ನು ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕೆಂಬುದನ್ನು ನೋಡೋಣ...

ಈ ದಿನಗಳಲ್ಲಿ ಸಾಲ ಪಡೆಯಬಾರದು
ಸಾಲ ಪಡೆಯುವ ಮುನ್ನ ವಾರದ ಬಗ್ಗೆ ಗಮನಹರಿಸುವುದು ಉತ್ತಮ. ಶಾಸ್ತ್ರಗಳಲ್ಲಿ ಹೇಳಿರುವಂತೆ ಕೆಲವು ವಾರಗಳಲ್ಲಿ ಸಾಲ ಪಡೆದರೆ ಅದರಿಂದ ಒಳ್ಳೆಯದಾಗುವುದಕ್ಕಿಂತ ಕೆಡುಕೇ ಹೆಚ್ಚೆಂದು ಹೇಳಲಾಗುತ್ತದೆ. ಹಾಗಾಗಿ ಮಂಗಳವಾರ, ಶನಿವಾರ ಮತ್ತು ಭಾನುವಾರ ಸಾಲವನ್ನು ತೆಗೆದುಕೊಳ್ಳಬಾರದು. ಈ ದಿನಗಳಲ್ಲಿ ತೆಗೆದುಕೊಂಡ ಸಾಲವನ್ನು ಸುಲಭವಾಗಿ ತೀರಿಸಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲದೇ ಈ ದಿನಗಳಲ್ಲಿ ತೆಗೆದುಕೊಂಡ ಸಾಲದ ಹಣಕ್ಕಿಂತ ಹೆಚ್ಚು ಹಣವನ್ನು ಕಟ್ಟಿ ಸಾಲದಿಂದ ಮುಕ್ತಿ ಹೊಂದಬೇಕಾದ ಪರಿಸ್ಥಿತಿ ಒದಗಿಬರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ: ಕಾಮಧೇನು ಶಂಖ ಮನೆಯಲ್ಲಿಟ್ಟರೆ ಇಷ್ಟಾರ್ಥ ಸಿದ್ಧಿ...

ಈ ಯೋಗಗಳಲ್ಲಿ ಸಾಲ ಪಡೆಯುವಾಗ ಎಚ್ಚರ
ಶಾಸ್ತ್ರಗಳಲ್ಲಿ ವಾರ, ತಿಥಿ, ಘಳಿಗೆ ಎಲ್ಲವಕ್ಕೂ ಅದರದ್ದೇ ಆದ ಮಹತ್ವವಿದೆ. ಪಂಚಾಂಗದಲ್ಲಿ ಹೇಳಲಾಗುವ 27 ಯೋಗಗಳಲ್ಲಿ ವೃದ್ಧಿ ಯೋಗ, ದ್ವಿಪುಷ್ಕರ ಯೋಗ ಮತ್ತು ತ್ರಿಪುಷ್ಕರ ಯೋಗಗಳಲ್ಲಿ ಸಾಲವನ್ನು ಪಡೆಯಲೇ ಬಾರದೆಂದು ಶಾಸ್ತ್ರ ಹೇಳುತ್ತದೆ. ಈ ಯೋಗಗಳಲ್ಲಿ ತೆಗೆದುಕೊಂಡ ಸಾಲ ವೃದ್ಧಿಯಾಗುತ್ತದೆ, ದ್ವಿಪುಷ್ಕರ ಯೋಗದಲ್ಲಿ ಎರಡು ಪಟ್ಟು ಹೆಚ್ಚಾದರೆ, ತ್ರಿಪುಷ್ಕರ ಯೋಗದಲ್ಲಿ ಮೂರು ಪಟ್ಟು ಹೆಚ್ಚಾಗುತ್ತದೆ. ಹಾಗಾಗಿ ಈ ಯೋಗಗಳನ್ನು ಗಮನದಲ್ಲಿಟ್ಟುಕೊಂಡು ಸಾಲ ಪಡೆದರೆ ಉತ್ತಮ.



ಈ ನಕ್ಷತ್ರವಿದ್ದಾಗ ಸಾಲ ಪಡೆಯಬಾರದು
ಸಾಲ ತೆಗೆದುಕೊಳ್ಳುವಾಗ ನಕ್ಷತ್ರದ ಬಗ್ಗೆಯೂ ಗಮನವಿಡಬೇಕೆಂದು ಶಾಸ್ತ್ರ ಉಲ್ಲೇಖಿಸುತ್ತದೆ. ಜ್ಯೋತಿಷ್ಯದಲ್ಲಿ ಹೇಳುವಂತೆ ಹಸ್ತ ನಕ್ಷತ್ರವಿದ್ದಾಗ ಪಡೆದ ಸಾಲವನ್ನು ತೀರಿಸಲು ಹೆಚ್ಚು ಕಷ್ಟ ಪಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಮೂಲಾ, ಆರ್ದ್ರಾ, ಜ್ಯೇಷ್ಠಾ, ವಿಶಾಖಾ, ಕೃತಿಕಾ, ಉತ್ತರ ಫಲ್ಗುಣಿ, ಉತ್ತರಾಷಾಢ ಮತ್ತು ರೋಹಿಣಿ ನಕ್ಷತ್ರಗಳಲ್ಲಿ ತೆಗೆದುಕೊಂಡ ಸಾಲ ಸಮಸ್ಯೆಯನ್ನು ತಂದೊಡ್ಡುತ್ತದೆ.

ಇದನ್ನು ಓದಿ: .

ಸಂಕ್ರಾಂತಿಯ ಬಗ್ಗೆ ಇರಲಿ ಗಮನ
ಸಾಲ ಕೊಡುವಾಗ ಮತ್ತು ತೆಗೆದುಕೊಳ್ಳುವಾಗ ವಾರ, ನಕ್ಷತ್ರಗಳನ್ನು ಗಮನದಲ್ಲಿಟ್ಟುಕೊಂಡಂತೆ ಸಂಕ್ರಾಂತಿಯ ಬಗ್ಗೆಯು ಎಚ್ಚರವಹಿಸುವುದು ಉತ್ತಮ. ಅಧಿಕಮಾಸವನ್ನು ಹೊರತು ಪಡಿಸಿ ಉಳಿದ ಮಾಸಗಳಲ್ಲಿ ಬರುವ ಸಂಕ್ರಾಂತಿಯಂದು ಸಾಲ ತೆಗೆದುಕೊಳ್ಳುವುದು ಮತ್ತು ಕೊಡುವುದು ಒಳ್ಳೆಯದಲ್ಲ. ಈ ಸಮಯದಲ್ಲಿ ಸಾಲ ಪಡೆದವರು ಮತ್ತು ಕೊಟ್ಟವರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತದೆ ಶಾಸ್ತ್ರ.

click me!