Udupi: ಕೊಡೆ ಸೇವೆಗೆ ಮೆಚ್ಚಿದಳಾ ಮಹಿಷಮರ್ದಿನಿ? ನಡೆದದ್ದು ಪವಾಡವೆಂದ ಭಕ್ತರು!

By Suvarna NewsFirst Published Jun 14, 2022, 8:06 PM IST
Highlights

ಮೇ ತಿಂಗಳಲ್ಲಿ ನಿಗದಿಯಾಗಿದ್ದ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ವನ್ನು  ಜೂನ್ ತಿಂಗಳಿಗೆ ಮುಂದೂಡಬೇಕಾಗಿ ಬಂದಿತ್ತು. ಹೀಗಾಗಿ ಜೂನ್ 1ರಿಂದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಆರಂಭವಾಯಿತು. ಈ ವೇಳೆ ಪವಾಡ ನಡೆದಿದೆ.

ಉಡುಪಿ (ಜೂ.14): ದೇವಾಲಯಗಳ ನಗರ ಎಂದೇ ಕರೆಯಲ್ಪಡುವ ಉಡುಪಿಯಲ್ಲಿ ಇತ್ತೀಚೆಗೆ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅತ್ಯಂತ ವೈಭವದಿಂದ ನಡೆದಿತ್ತು. ಕೇವಲ ವೈಭವ ಮಾತ್ರವಲ್ಲ ಅರ್ಥಪೂರ್ಣವಾಗಿ ದೇವರ ಸೇವೆ ನಡೆಸುವ ದೃಷ್ಟಿಯಿಂದ ಅಪೂರ್ವ ಯೋಜನೆಯೊಂದನ್ನು ದೇವಾಲಯ ಕೈಗೊಂಡಿತ್ತು. ದೇವ ಸೇವೆ- ಸಮಾಜ ಸೇವೆ  ಎಂಬ ಕಲ್ಪನೆಯಡಿಯಲ್ಲಿ , ಬ್ರಹ್ಮಕಲಶೋತ್ಸವದ ಪ್ರಚಾರಕ್ಕೆ ಬಳಸಿದ 1080 ಕೊಡೆಗಳನ್ನು ಮಳೆಗಾಲದಲ್ಲಿ  ಬಳಸಲು ಭಕ್ತರಿಗೆ ನೀಡಿ ಸಾಮಾಜಿಕ ಕಳಕಳಿ ಮೆರೆಯಲಾಗಿದೆ.

ಕೊಡೆ ಸೇವೆಗೆ ಒಲಿದಳಾ ಮಹಿಷಮರ್ದಿನಿ!
ಹೀಗೊಂದು ಪವಾಡ ನಡೆದಿರುವ ಬಗ್ಗೆ ಸದ್ಯ ಉಡುಪಿ ನಗರದಾದ್ಯಂತ ಮಹಿಷಮರ್ದಿನಿಯೇ ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಮೇ ತಿಂಗಳಲ್ಲಿ ನಿಗದಿಯಾಗಿದ್ದ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ವನ್ನು  ಜೂನ್ ತಿಂಗಳಿಗೆ ಮುಂದೂಡ ಬೇಕಾಗಿ ಬಂದಿತ್ತು. ಜೂನ್ ತಿಂಗಳ ಆರಂಭದಲ್ಲಿ ಹವಾಮಾನ ಇಲಾಖೆ ಮುಂಗಾರು ಮಳೆಯ ಮುನ್ಸೂಚನೆ ಯನ್ನು ಕೂಡ ನೀಡಿತ್ತು. ಸಾವಿರಾರು ಜನರು ಸೇರುವ ಬೃಹತ್ ಧಾರ್ಮಿಕ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗಬಹುದು ಎಂಬ ನಿರೀಕ್ಷೆಯಿತ್ತು. ಈ‌ ನಡುವೆ ಮೇ ತಿಂಗಳ ಅಂತ್ಯದಲ್ಲಿ ಅಸಾನಿ ಚಂಡಮಾರುತದಿಂದ ನಿರಂತರ ಮಳೆ ಉಂಟಾಗಿತ್ತು.

ಕೊನೆಗೂ ಜೂನ್ 1ರಿಂದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಆರಂಭವಾಯಿತು. ಬ್ರಹ್ಮಕಲಶೋತ್ಸವದ ಪ್ರಚಾರಕ್ಕೆಂದು ಕೊಡೆಗಳನ್ನು ಬಳಸಲಾಗಿತ್ತು. ಉಡುಪಿಯ ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ದೊಡ್ಡಗಾತ್ರದ ಕೊಡೆಗಳನ್ನು ಅಳವಡಿಸಿ, ಬ್ರಹ್ಮಕಲಶೋತ್ಸವಕ್ಕೆ ಭಕ್ತರನ್ನು ಸ್ವಾಗತಿಸುವ ರೀತಿಯಲ್ಲಿ ಅಲಂಕರಿಸಲಾಗಿತ್ತು. ಪ್ರಚಾರದ ದೃಷ್ಟಿಯಿಂದ ಇದೊಂದು ವಿಭಿನ್ನ ಪ್ರಯತ್ನವಾಗಿ ಗಮನಸೆಳೆದಿತ್ತು. ಕೊಡೆಗಳು ನಮ್ಮನ್ನು ಮಳೆಯಿಂದ ಕಾಪಾಡುವಂತೆ , ಧಾರ್ಮಿಕ ಕಾರ್ಯಕ್ರಮಗಳಿಗೆ ಮಳೆಯಿಂದ ಯಾವುದೇ ಅಡ್ಡಿಯಾಗದಂತೆ ಪ್ರಕೃತಿ ಸಹಕರಿಸಲಿ ಅನ್ನೋದರ ಸಂಕೇತ ಇದಾಗಿತ್ತು!

KALABURAGI; ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಜೂ.15ರಿಂದ ಅಹೋರಾತ್ರಿ ಸತ್ಯಾಗ್ರಹ

ಮಳೆಯ ಅಡ್ಡಿ ಇಲ್ಲದೆ ಮುಗಿದ ಬ್ರಹ್ಮಕಲಶೋತ್ಸವ: ಕಾಕತಾಳೀಯವೋ ಎಂಬಂತೆ ಬ್ರಹ್ಮಕಲಶೋತ್ಸವ ನಡೆದ ಅಷ್ಟೂ ದಿನಗಳ ಕಾಲ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಾಲಯದ ಪರಿಸರದಲ್ಲಿ ಯಾವುದೇ ಮಳೆಯಾಗದೆ ಮಹೋತ್ಸವ ಅತ್ಯಂತ ವೈಭವದಿಂದ ಜರಗುವಂತಾಗಿದೆ.

ಕೊಡೆಗಳನ್ನು ಅಲಂಕಾರಕ್ಕೆ ಬಳಸುವ ವೇಳೆಯಲ್ಲೇ ದೇವಾಲಯ ಒಂದು ವಿಚಾರ ಘೋಷಣೆ ಮಾಡಿತ್ತು. ಬ್ರಹ್ಮಕಲಶೋತ್ಸವದ ನಂತರ ಪ್ರಚಾರಕ್ಕೆ ಬಳಸಿದ ಎಲ್ಲಾ ಕೊಡೆಗಳನ್ನು ಆಯಾ ಪರಿಸರದ ಅಗತ್ಯವುಳ್ಳ ಜನರು ತೆಗೆದು ಬಳಸುವಂತೆ ಸೂಚನೆ ನೀಡಲಾಗಿತ್ತು. ಅದೇ ಪ್ರಕಾರ ಬ್ರಹ್ಮಕಲಶ ಮುಗಿಯುತ್ತಿದ್ದಂತೆ ತಮ್ಮ ಊರುಗಳಲ್ಲಿ ಹಾಕಿದ್ದ ಕೊಡೆಗಳನ್ನು ಜನರು ಪಡೆದು ಬಳಸಲು ಆರಂಭಿಸಿದ್ದಾರೆ. 

ಮಳೆಯಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿಯಾಗದಂತೆ ತಾಯಿ ಮಹಿಷಮರ್ಧಿನಿ ಹರಸಲು, ಬಡವರಿಗೆ ನೀಡಿದ ಉಚಿತ ಕೊಡೆ ಸೇವೆಯೇ ಕಾರಣ ಎಂದು ಭಕ್ತರು ನಂಬಿದ್ದಾರೆ. ಬ್ರಹ್ಮಕಲಶದ ದಿನ ಸುಮಾರು 35 ಸಾವಿರ ಜನ ಅನ್ನ ಪ್ರಸಾದ ಸ್ವೀಕರಿಸಿ ತೆರಳಿದ್ದಾರೆ, ಪ್ರತಿದಿನ ಸಾವಿರಾರು ಜನ ದೇವಿಯ ದರ್ಶನ ಕೈಗೊಂಡಿದ್ದಾರೆ. ಪ್ರಾಕೃತಿಕ ವಿಕೋಪ ವಿಲ್ಲದೆ ಎಲ್ಲಾ ಉತ್ಸವಗಳು ಸುಸೂತ್ರವಾಗಿ ನಡೆದಿದೆ.

ಈ ಊರು ತುಂಬಾ ಹುಳುವಿನ ಕಾಟ, ನಿವಾಸಿಗಳ ಬದುಕು ಹೈರಾಣ!

ಬಡವರಿಗೆ ಕೊಡೆ ವಿತರಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ: ಶ್ರೀ ಮಹಿಷಮರ್ಧಿನಿ ದೇವಾಲಯಕ್ಕೆ ಇಂದು ಕೇಂದ್ರ ರೈತರ ಕಲ್ಯಾಣ ಮತ್ತು ಕೃಷಿ  ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ದೇಗುಲದ ಕಾಮಗಾರಿ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದ ಸಚಿವೆ, ಕಡಿಯಾಳಿ ಮಹಿಷಮರ್ದಿನಿ ದೇಗುಲದ ಶಿಲ್ಪಕಲೆ  , ತಿರುಗುವ ಮುಚ್ಚಿಗೆ, ಕಾಷ್ಟಶಿಲ್ಪ ವನ್ನು ಮನಸಾರೆ ಹೊಗಳಿದರು.

ಕರಸೇವಕರ ಮೂಲಕ ದೇಗುಲದ ತಳಪಾಯ ನಿರ್ಮಾಣ ಮಾಡಿರುವುದನ್ನು ಮೆಚ್ಚಿ ಶುಭಹಾರೈಸಿದರು. ಇಲ್ಲಿನ ನಿರಂತರ ಶಿಸ್ತುಬದ್ಧ ಸ್ವಯಂಸೇವಕರ ಪಡೆ  ಕೇವಲ ರಾಜ್ಯ ಮಾತ್ರವಲ್ಲದೆ ರಾಷ್ಟ್ರಕ್ಕೆ ಮಾದರಿಯಾಗಿದೆ. ಈ ರೀತಿಯ ಭವ್ಯ ದೇಗುಲ ಗ್ರಾಮಸ್ಥರು ಮತ್ತು ದೇವರ ಭಕ್ತರು ಸೇರಿ ಕಟ್ಟಿ ಭಗವಂತನಿಗೆ ಸಮರ್ಪಣೆ ಮಾಡಿದ್ದಾರೆ. ಸರ್ವರಿಗೂ ಜಗನ್ಮಾತೆ ಮಹಿಷಮರ್ದಿನಿ ಸನ್ಮಂಗಲ ಉಂಟು ಮಾಡಲಿ ಎಂದು ಹೇಳಿದರು. ತಾನು  ಕೂಡ ಈ ಕರಸೇವೆಯಲ್ಲಿ ಸ್ವಯಂಸೇವಕಿಯಾಗಿ ಭಾಗವಹಿಸಿದ್ದು  ತನ್ನ ಭಾಗ್ಯ ಎಂದು ನೆನಪಿಸಿಕೊಂಡರು.

ದೇವ ಸೇವೆ ಸಮಾಜ ಸೇವೆ ಎಂಬ ವಿಶಿಷ್ಟ ಪರಿಕಲ್ಪನೆಯಲ್ಲಿ ಪ್ರಚಾರಕ್ಕೆ ಬಳಸಿದ ಕೊಡೆಯನ್ನು ಈ ವೇಳೆ ಭಕ್ತರಿಗೆ ಕೇಂದ್ರ ಸಚಿವೆ ವಿತರಿಸಿದರು.  ಬ್ರಹ್ಮಕಲಶೋತ್ಸವ ಯಶಸ್ವಿಯಾದ ಹಿನ್ನೆಲೆಯಲ್ಲಿ ಮತ್ತಷ್ಟು ಕೊಡೆಗಳನ್ನು ಭಕ್ತರಿಗೆ ವಿತರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

click me!