ಮಂತ್ರಾಲಯದಲ್ಲಿ ಉತ್ತರಾಧನೆಯ ರಥೋತ್ಸವ ಸಂಭ್ರಮ

By Gowthami KFirst Published Aug 14, 2022, 7:32 PM IST
Highlights

ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 351 ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟವಾದ ಉತ್ತರರಾಧನೆ ಇಂದು ಮಂತ್ರಾಲಯದಲ್ಲಿ ಅದ್ದೂರಿಯಾಗಿ ನಡೆಯಿತು.

ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಆ.14): ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 351 ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟವಾದ ಉತ್ತರರಾಧನೆ ಇಂದು ಮಂತ್ರಾಲಯದಲ್ಲಿ ಅದ್ದೂರಿಯಾಗಿ ನಡೆಯಿತು. ಮಠದ ರಾಜಬೀದಿಯಲ್ಲಿ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ರಾಯರ ಆರಾಧನಾ ಮಹೋತ್ಸವದ ವೈಭವಕ್ಕೆ ಸಾಕ್ಷಿಯಾದರು. ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸಾರ್ವಭೌಮರು ವೃಂದಾವನಸ್ಥರಾದ ಮರು ದಿನವನ್ನ ಮಂತ್ರಾಲಯದಲ್ಲಿ ಉತ್ತರರಾಧನೆಯಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉತ್ತರಾಧನೆ ಹಿನ್ನೆಲೆ ನಡೆದ ಮಹಾ ರಥೋತ್ಸವ ರಾಯರ ಆರಾಧನೆಗೆ ಮೆರಗು ತಂದಿದೆ. ಈ ದಿನ ರಾಯರು ಪ್ರಹ್ಲಾದ ರಾಜರ ಉತ್ಸವ ಮೂರ್ತಿ ರೂಪದಿಂದ ಹೊರ ಪ್ರಾಕಾರದಲ್ಲಿ ಬಂದು ಭಕ್ತರಿಗೆ ರಾಜ ಬೀದಿಯಲ್ಲಿ ದರ್ಶನ ಕೊಡುತ್ತಾರೆ ಅನ್ನೋ ಪ್ರತೀತಿಯಿದೆ. ರಥೋತ್ಸವಕ್ಕೂ ಮುನ್ನ ರಾಮದೇವರು ಮತ್ತು ಎಲ್ಲಾ ಬೃಂದಾವನಗಳಿಗೂ ಗೂಲಾಲ್ ಸಮರ್ಪಣೆ ಮಾಡುವ ಮೂಲಕ ಶ್ರೀಗಳು ವಸಂತೋತ್ಸವ ಆಚರಿಸಿದರು. ಬಳಿಕ ಗುರುರಾಯರನ್ನ ಪ್ರಹ್ಲಾದ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ನಂತರ ಮಠದ ಮದ್ವದ್ವಾರ ಮೂಲಕ ರಾಜಬೀದಿಯಲ್ಲಿ ಮಹಾರಥೋತ್ಸವ ಜರುಗಿತು. ಮಹಾ ರಥೋತ್ಸವದ ಹಿನ್ನೆಲೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಥದಲ್ಲಿ ಕುಳಿತು ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು. ಧರ್ಮಪಾಲನೆ ಮಾಡಿ ಉನ್ನತಿ ಪಡೆಯಿರಿ. ದೇಶ ಸಕಲ ಸಂಪದ್ಭರಿತವಾಗಲಿ, ದೇಶ ವಿಶ್ವಗುರುವಾಗಲಿ ಅಂತ ಹರಸಿದರು.

ಮಂತ್ರಾಲಯದ ರಥೋತ್ಸವ ವೇಳೆ ಅಪ್ಪು ಫೋಟೋ ಪ್ರದರ್ಶನ: ರಾಯರ ಅಪ್ಪಟ ಭಕ್ತನಾದ ನಟ ಪುನೀತ್ ರಾಜ್‍ಕುಮಾರ್ ಅವರ ಫೋಟೋವನ್ನ ಅಭಿಮಾನಿಗಳು ಪ್ರದರ್ಶನ ಮಾಡಿದ್ರು. ಹತ್ತಾರು ಕಲಾತಂಡಗಳು ತಮ್ಮ ಕಲೆ ಪ್ರದರ್ಶನ ವೇಳೆ ಪುನೀತ್ ಅಭಿಮಾನಿಗಳು ಅಪ್ಪು ಫೋಟೋ ಹಿಡಿದು ಶ್ರೀಮಠದ ಹೊರಗಡೆಯ ಅಪ್ಪು ಗೆ ಜೈಕಾರ ಹಾಕುತ್ತಾ ಹೆಜ್ಜೆ ಹಾಕಿ ರಥೋತ್ಸವವನ್ನ ಸಂಭ್ರಮಿಸಿದರು.

ರಾಯರ ಉತ್ತರಾಧನೆಗೆ ಮಂತ್ರಾಲಯಕ್ಕೆ ಬಂದ ಸಾಲು‌ಮರದ ತಿಮ್ಮಕ್ಕ: ರಾಯರು ಪ್ರತಿನಿತ್ಯದಲ್ಲಿ ಅಂತರ್ಮುಖವಾಗಿ ಜಪತಪ ಮಾಡುತ್ತಿದ್ದರೆ. ಉತ್ತರರಾಧನೆ ದಿನ ಬಹಿರ್ಮುಖವಾಗಿ ತಮ್ಮ ದೃಷ್ಟಿಯನ್ನ ಭಕ್ತರ ಕಡೆಗೆ ಹರಿಸುತ್ತಾರೆ. ಭಕ್ತರ ಬೇಡಿಕೆ ಈಡೇರಿಸುತ್ತಾರೆ ಅನ್ನೋ ಪ್ರತೀತಿಯಿದೆ. ಹೀಗಾಗಿ ಉತ್ತರರಾಧನೆ ದಿನ ರಾಯರ ಅನುಗ್ರಹಕ್ಕೆ ಪಾತ್ರರಾಗಲು ದೇಶದ ಮೂಲೆ - ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯ ಮಠಕ್ಕೆ ಮಠಕ್ಕೆ ಆಗಮಿಸಿ ಮಹಾ ರಥೋತ್ಸವದಲ್ಲಿ ಭಾಗಿಯಾಗಿದ್ದರು. ಇನ್ನೊಂದು ವಿಶೇಷವೆಂದರೆ ಈ ಸಲ ಸಾಲು ಮರದ ತಿಮ್ಮಕ್ಕ ತಮ್ಮ ‌ಹಿರಿಯ ವಯಸ್ಸಿನಲ್ಲಿಯೂ ಸಹ ರಾಯರ ಉತ್ತರಾಧನೆಯಲ್ಲಿ ಭಾಗವಹಿಸಿ ರಾಯರ ದರ್ಶನ ಪಡೆದರು.

ರಾಯಚೂರು: ಆರ್ಟಿಪಿಎಸ್‌ ಬಂಕರ್‌ ಕುಸಿತ, ತಪ್ಪಿದ ಅನಾಹುತ

ಒಟ್ಟಿ‌ನಲ್ಲಿ ಕೊರೊನಾದಿಂದ ‌ಎರಡು ವರ್ಷ ಸಂಭ್ರಮದಿಂದ ಆಚರಿಸಲು ಆಗದೇ ಇರುವ ರಥೋತ್ಸವವನ್ನ ಈ ವರ್ಷ ಸಡಗರ ಸಂಭ್ರಮದಿಂದ 
ಮಹಾ ರಥೋತ್ಸವ ‌ನಡೆಯಿತು. ಈ ವೇಳೆ ವಿವಿಧೆಡೆಯಿಂದ ಆಗಮಿಸಿದ್ದ ಭಜನಾ ಮಂಡಳಿಗಳು, ಕಲಾ ತಂಡಗಳು ರಾಜ ಬೀದಿಯಲ್ಲಿ ರಥೋತ್ಸವಕ್ಕೆ ಮೆರಗು ನೀಡಿದವು.

ರಾಯಚೂರು: ಮಂತ್ರಾಲಯದಲ್ಲಿ ಸಂಭ್ರಮದ ರಾಯರ ಪೂರ್ವಾರಾಧನೆ ಮಹೋತ್ಸವ

ಹೊಸದಾಗಿ ನಿರ್ಮಾಣಗೊಂಡ ಮಧ್ವಾದ್ವಾರ ತುಂಬಾ ಭಕ್ತರು ತುಂಬಿದ್ರು. ಇಂತಹ ವೇಳೆ ಹೆಲಿಕ್ಯಾಪ್ಟರ್ ಮೂಲಕ ಪ್ರತೀ ವರ್ಷದಂತೆ ರಥಕ್ಕೆ  ಪುಷ್ಪವೃಷ್ಠಿಯನ್ನ ಮಾಡಲಾಯಿತು. ಈ ಮೂಲಕ ರಾಯರ ಆರಾಧನೆಯ ಮುಖ್ಯ ಮೂರು ದಿನಗಳು ಇಂದಿಗೆ ಮುಕ್ತಾಯವಾದವು. ಸಪ್ತರಾತ್ರೋತ್ಸವ ಹಿನ್ನೆಲೆ ಆಗಸ್ಟ್‌ 16 ರವರೆಗೆ ಶ್ರೀಮಠದಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮುಂದುವರೆಯುತ್ತವೆ.

click me!