ಯುದ್ಧಗಳನ್ನು ನಿಲ್ಲಿಸಲು ವಿಶ್ವಕ್ಕೆ ಮೋದಿಯಂಥವರು ಬೇಕು -ಜಗ್ಗೇಶ್

By Kannadaprabha NewsFirst Published Aug 14, 2022, 10:31 AM IST
Highlights

ವಿಶ್ವದಲ್ಲಿ ಯುದ್ಧಗಳಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಭವಿಷ್ಯದಲ್ಲಿ ಇಂಥ ಭಯಾನಕ ಯುದ್ಧಗಳು ನಿಲ್ಲಬೇಕೆಂದರೆ ವಿಶ್ವಕ್ಕೆ ಮೋದಿಯವರಂಥ ನಾಯಕರು ಬೇಕು ಜಗ್ಗೇಶ್ ಅಭಿಪ್ರಾಯಪಟ್ಟರು. ಮಂತ್ರಾಲಯದ ಗುರು ರಾಯರ ಮಧ್ಯಾರಾಧನೆಯಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಯಚೂರು (ಆ.14): ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ಶ್ರೀಗುರುರಾಯರ 351 ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆಯಲ್ಲಿ ಚಿತ್ರನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ ಶನಿವಾರ ಭಾಗಿಯಾಗಿದ್ದರು. ಸುಕ್ಷೇತ್ರದ ಮಠಕ್ಕೆ ಆಗಮಿಸಿದ ಜಗ್ಗೇಶ ಶ್ರೀರಾಘವೇಂದ್ರಸ್ವಾಮಿಗಳ ಮೂಲ ಬೃಂದಾವನದ ದರ್ಶನ, ನಂತರ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ಆಶೀರ್ವಾದವನ್ನು ಪಡೆ​ದ​ರು. ಈ ವೇಳೆ ಮಾತನಾಡಿದ ಅವರು ವಿಶ್ವದಲ್ಲಿ ಯುದ್ಧಗಳು ನಿಲ್ಲಬೇಕು ಎಂದರೆ ಪ್ರಧಾನಿ ನರೇಂದ್ರ ಮೋದಿ ಅವರಂತಹ ಸಮರ್ಥರು ಬೇಕು. ಪ್ರಪಂಚದ ದೊಡ್ಡ ರಾಷ್ಟ್ರಗಳಾದ ಅಮೆರಿಕ, ರಷ್ಯಾ ಮತ್ತು ಚೀನಾದೊಂದಿಗೆ ಮಾತನಾಡಿ, ಅವರನ್ನು ಸಾತ್ವಿಕರನ್ನಾಗಿಸುವ ಶಕ್ತಿ ಮೋದಿ ಅವರಲ್ಲಿದೆ ಎಂದರು.

ರಾಯರ ಹೆಸರಲ್ಲಿ ಕನ್ನಡಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ ಜಗ್ಗೇಶ್

ದೇಶದಾದ್ಯಂತ 75 ನೇ ಸ್ವಾತಂತ್ರ್ಯದ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ದೇಶದ ಪ್ರಜೆಗಳಲ್ಲಿ ದೇಶಭಕ್ತಿಯನ್ನು ಹೆಚ್ಚಿಸುವುದಕ್ಕಾಗಿ ಹರ್‌ ಘರ್‌ ತಿರಂಗಾ ಅಭಿಯಾನವನ್ನು ಕೈಗೊಳ್ಳಲಾಗಿದೆ. ಚಿಕ್ಕಮಕ್ಕಳು ಸಹ ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿಯುವುದರಿಂದ ದೇಶದ ಸ್ವಾತಂತ್ರ್ಯದ ಕುರಿತು ತಿಳಿದುಕೊಳ್ಳಲು ಆಸಕ್ತಿ ಮೂಡುತ್ತದೆ. ಮೇಧಾವಿಯಾದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರಲ್ಲಿಯೂ ರಾಷ್ಟ್ರಭಕ್ತಿಯನ್ನು ಹೆಚ್ಚಿಸಲು ಈ ಯೋಜನೆ ರೂಪಿಸಿದ್ದಾರೆ ಎಂದ ಹೇಳಿದರು.

ಸರ್ಕಾರ ರೂಪಿಸುವ ಅಷ್ಟೋ ಯೋಜನೆಗಳು ಜನಸಾಮಾನ್ಯರಿಗೆ ಗೊತ್ತಿರುವುದಿಲ್ಲ, ಅವುಗಳಲ್ಲಿ ಸರಿಯಾಗಿ ಓದಿ ತಿಳಿದುಕೊಳ್ಳದಕ್ಕೆ ಸಾಕಷ್ಟುಅನುದಾನಗಳು ವಾಪಸ್ಸು ಹೋಗುತ್ತಿವೆ. ಹೀಗಾಗಿ ನಿಜವಾದ ಫಲಾನುಭವಿಗಳಿಗೆ ಯೋಜನೆಗಳ ಲಾಭವೇ ಸಿಗುವುದಿಲ್ಲ ಎಲ್ಲರು ಯೋಜನೆಗಳನ್ನು ಅರಿತು ಅವುಗಳ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು. ರಾಜ್ಯಸಭಾ ಸದಸ್ಯನಾಗಿರುವ ನಮಗೆ ಪ್ರಹ್ಲಾದ್‌ ಜೋಶಿ ಹಾಗೂ ಸಂತೋಷ ಜೀ ಅವರು ಮಾರ್ಗದರ್ಶನ ಮಾಡುತ್ತಾರೆ ಎಂದು ಹೇಳಿದರು.

ರಾಯಚೂರು: ಮಂತ್ರಾಲಯದಲ್ಲಿ ಸಂಭ್ರಮದ ರಾಯರ ಪೂರ್ವಾರಾಧನೆ ಮಹೋತ್ಸವ

ಮಂತ್ರಾಲಯದಲ್ಲಿ ಏರೋಡ್ರಮ್‌: ಪ್ರತಿ ವರ್ಷ ರಾಯರ ಆರಾಧನೆಗೆ ಬಂದು ಹೋಗುವುದು ವಾಡಿಕೆಯಾಗಿದೆ. ಪ್ರಸ್ತುತ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಶ್ರೀಮಠದ ಘನತೆ ಗೌರವವು ಹೆಚ್ಚುತ್ತಿದೆ. ಇಂತಹ ಮಠಕ್ಕೆ ಒಂದು ಏರೋಡ್ರಮ್‌ ಬರಬೇಕು ಎನ್ನುವುದು ನನಗೆ ವೈಯಕ್ತಿಕವಾಗಿರುವ ದೊಡ್ಡ ಆಸೆಯಾಗಿದೆ. ನಾವೇನು ಮಾಡುವುದಿಲ್ಲ ರಾಯರೇ ಅದನ್ನು ಮಾಡಿಸುತ್ತಾರೆ, ಅವರ ಮೇಲಿ ಭಾರಹಾಕಿ ನಾನು ಈ ವಿಚಾರವಕ್ಕು ಮುಂದಕ್ಕೆ ತೆಗೆದುಕೊಂಡು ಹೋಗುವುದಾಗಿ ತಿಳಿಸಿದರು.

click me!