Udupi: ಕಪಿಲಾ ಸೀಮೋಲ್ಲಂಘನೆ: ಪೇಜಾವರ ಶ್ರೀ ಚಾತುರ್ಮಾಸ ಸಂಪನ್ನ!

By Kannadaprabha NewsFirst Published Sep 29, 2023, 8:43 PM IST
Highlights

ಮೈಸೂರಿನಲ್ಲಿ ತಮ್ಮ 36ನೇ ಚಾತುರ್ಮಾಸ್ಯ ವ್ರತವನ್ನು ನಡೆಸಿದ ಪೇಜಾವರ ಶ್ರೀಗಳು ಶುಕ್ರವಾರ ಸಂಪ್ರದಾಯದಂತೆ, ಕಪಿಲಾ ನದಿಯನ್ನು ದಾಟಿ, ಸೀಮೋಲ್ಲಂಘನೆ ನಡೆಸಿ ವೃತ ಸಮಾಪನಗೊಳಿಸಿದರು. ಅಪೂರ್ವವಾಗಿ ವೃತವನ್ನು ನಡೆಸಿದ ಶ್ರೀಪಾದರನ್ನು ಮೈಸೂರಿನಲ್ಲಿ ಭಕ್ತ ಜನರು ಭಾವುಕರಾಗಿ ಬೀಳ್ಕೊಟ್ಟರು. 
 

ಉಡುಪಿ (ಸೆ.29): ಮೈಸೂರಿನಲ್ಲಿ ತಮ್ಮ 36ನೇ ಚಾತುರ್ಮಾಸ್ಯ ವ್ರತವನ್ನು ನಡೆಸಿದ ಪೇಜಾವರ ಶ್ರೀಗಳು ಶುಕ್ರವಾರ ಸಂಪ್ರದಾಯದಂತೆ, ಕಪಿಲಾ ನದಿಯನ್ನು ದಾಟಿ, ಸೀಮೋಲ್ಲಂಘನೆ ನಡೆಸಿ ವೃತ ಸಮಾಪನಗೊಳಿಸಿದರು. ಅಪೂರ್ವವಾಗಿ ವೃತವನ್ನು ನಡೆಸಿದ ಶ್ರೀಪಾದರನ್ನು ಮೈಸೂರಿನಲ್ಲಿ ಭಕ್ತ ಜನರು ಭಾವುಕರಾಗಿ ಬೀಳ್ಕೊಟ್ಟರು. 

ಅಲ್ಲಿಂದ ನಂಜನಗೂಡು ಶ್ರೀರಾಘವೇಂದ್ರ ಮಠಕ್ಕೆ ತೆರಳಿ ಗುರುರಾಯರ ಮೃತ್ತಿಕಾ ವೃಂದಾವನ ದರ್ಶನಗೈದರು. ಸಂಜೆ ನಂಜನಗೂಡಿನಲ್ಲಿ ಕಪಿಲಾ ನದಿಗೆ ಹಾಲು, ಅರಸಿನ, ಕುಂಕುಮ, ಪುಷ್ಪ ಸಹಿತ ಬಾಗಿನ ಅರ್ಪಿಸಿ ಮಂಗಳಾರತಿ ಬೆಳಗಿದರು. ಅನಂತರ ಅಲಂಕೃತ ತೆಪ್ಪದಲ್ಲಿ ಕುಳಿತು ನದಿಯನ್ನು ದಾಟಿ ಸೀಮೋಲ್ಲಂಘನ ವಿಧಿ ಪೊರೈಸಿದರು. ಇದರೊಂದಿಗೆ ಶ್ರೀಗಳ ಈ ಬಾರಿಯ ಚಾತುರ್ಮಾಸ್ಯ ವ್ರತ ಅಧಿಕೃತವಾಗಿ ಸಮಾಪನಗೊಂಡಿತು.

ಕಾವೇರಿ ಹೆಸರಿನಲ್ಲಿ ಬಿಜೆಪಿ-ಜೆಡಿಎಸ್‌ ರಾಜಕೀಯ ಫಲಿಸಲ್ಲ: ಸಚಿವ ಗುಂಡೂರಾವ್‌

ಮೈಸೂರು ಕೇಂದ್ರ ಕಾರಾಗೃಹಕ್ಕೆ ಪೇಜಾವರ ಶ್ರೀ ಭೇಟಿ: ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮೈಸೂರಿನಲ್ಲಿ ನಡೆದ ತಮ್ಮ 36ನೇ ಚಾತುರ್ಮಾಸ್ಯ ವ್ರತದ ಕೊನೆಯ ದಿನ ಶುಕ್ರವಾರ, ಮೈಸೂರಿನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಸಂದೇಶ ನೀಡಿದರು. ಕೆಲವೊಮ್ಮೆ ತಿಳಿದೋ ತಿಳಿಯದೆಯೋ ಅಪರಾಧಗಳು ನಮ್ಮಿಂದಾಗುತ್ತವೆ. ಅದಕ್ಕೆ ನಾಗರಿಕ ಸಮಾಜದ ನಿಯಮಾನುಸಾರ ಶಿಕ್ಷೆ ಅನುಭವಿಸಬೇಕಾಗುತ್ತದೆ. 

ಆದರೆ ಶಿಕ್ಷೆ ಅನುಭವಿಸಿ ಹೊರಗೆ ಬರುವಾಗ ಅಂತಃಸಾಕ್ಷಿಯಾಗಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟರೇ ಮಾತ್ರ ಪರಿಶುದ್ಧರಾಗಲು ಸಾಧ್ಯ. ಆದ್ದರಿಂದ ಮುಂದೆ ಇಂಥಹ ಅಪರಾಧಗಳನ್ನು ನಡೆಸದೇ, ಅಪರಾಧ ಮುಕ್ತ ಸಮಾಜ ನಿರ್ಮಿಸಲು ಶ್ರಮಿಸಬೇಕು ಎಂದು ಕೈದಿಗಳಿಗೆ ಕಿವಿಮಾತು ಹೇಳಿದರು. ಇದೇ ಸಂದರ್ಭ ಪೇಜಾವರ ಶ್ರೀಗಳು ಕಾರಾಗೃಹದ ಕೈದಿಗಳಿಗೆ ರಾಮ ಮಂತ್ರ ಬೋಧಿಸಿ, ಆಶೀರ್ವದಿಸಿದರು. ಜಿಲ್ಲಾ ಕೇಂದ್ರ ಕಾರಾಗೃಹ ಅಧೀಕ್ಷಕ ಪಿ.ಎಸ್. ರಮೇಶ್, ಸ್ಥಳೀಯ ಲಯನ್ಸ್, ರೋಟರಿ, ಇನ್ನರ್‌ವೀಲ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದೇವೇಗೌಡರೇಕೆ ಕಾವೇರಿ ಸಮಸ್ಯೆ ಬಗೆಹರಿಸಲಿಲ್ಲ: ಶಾಸಕ ಬಾಲಕೃಷ್ಣ ಪ್ರಶ್ನೆ?

ಪೇಜಾವರ ಶ್ರೀಗಳ ಆಶೀರ್ವಾದ ಪಡೆದ ಶೋಭಾ ಕರಂದ್ಲಾಜೆ: ನಗರದ ಸರಸ್ವತಿ ಪುರಂನ ಶ್ರೀ ಕೃಷ್ಣಧಾಮಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಂಗಳವಾರ ಭೇಟಿ ನೀಡಿ, ಚಾತುರ್ಮಾಸ್ಯ ವ್ರತದಲ್ಲಿನ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳದವರಿಂದ ಆಶೀರ್ವಾದ ಪಡೆದರು. ಈ ವೇಳೆ ಶ್ರೀಗಳಿಗೆ ತುಳಸಿ ಹಾರ, ಹಣ್ಣು ನೀಡಿ ಶೋಭಾ ಕರಂದ್ಲಾಜೆ ಅವರು ನಮಸ್ಕರಿಸಿದರು. ಬಳಿಕ ಶ್ರೀಗಳು ಶಾಲು ಹೊದಿಸಿ, ಪ್ರಸಾದ ಮತ್ತು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಈ ವೇಳೆ ಶಾಸಕ ಟಿ.ಎಸ್. ಶ್ರೀವತ್ಸ ಅವರೂ ಕೂಡ ಶ್ರೀಗಳಿಂದ ಆಶೀರ್ವಾದ ಪಡೆದರು. ಬಿಜೆಪಿ ಮುಖಂಡರಾದ ಕೇಬಲ್ ಮಹೇಶ್, ಜೋಗಿ ಮಂಜು, ಕೆ.ಜೆ. ರಮೇಶ್, ಪ್ರದೀಪ್ ಕುಮಾರ್, ಜಯರಾಮ್, ಶಿವರಾಜ್, ಕೃಷ್ಣ, ಕಿಶೋರ್ ಮೊದಲಾದವರು ಇದ್ದರು.

click me!