ಜಗನ್ನಾಥ ಯಾತ್ರೆಗೆ ಪುರಿ ಸಜ್ಜು, ಯಾವಾಗ, ಇತಿಹಾಸವೇನು?

By Suvarna NewsFirst Published Jun 27, 2022, 5:52 PM IST
Highlights

ಭಾರತದ ಒಡಿಶಾ ರಾಜ್ಯವು ಆಷಾಢ ಮಾಸದ ಶುಕ್ಲ ಪಕ್ಷದ ಎರಡನೇ ದಿನದಂದು ಪುರಿಯಲ್ಲಿ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಯನ್ನು ಕೈಗೊಳ್ಳಲು ಸಿದ್ಧವಾಗಿದೆ. ಈ ಜಗನ್ನಾಥ ಯಾತ್ರೆ ವಿಶ್ವಪ್ರಸಿದ್ಧವಾಗಿದ್ದು, ಈ ಬಾರಿಯ ದಿನಾಂಕವೇನು, ಇದರ ಇತಿಹಾಸವೇನು ನೋಡೋಣ. 

ಜಗನ್ನಾಥ(Jagannath)ನು ಹಿಂದೂ ದೇವತೆಯಾದ ವಿಷ್ಣುವಿನ ಅವತಾರವಾಗಿದ್ದಾನೆ. ಜಗನ್ನಾಥ ಎಂಬ ಪದವು ಬ್ರಹ್ಮಾಂಡದ ಅಧಿಪತಿಯನ್ನು ಸೂಚಿಸುತ್ತದೆ. 

ಪುರಿಯಲ್ಲಿ ಪ್ರತಿ ವರ್ಷ ಭಗವಾನ್ ಜಗನ್ನಾಥ, ಅವನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರರನ್ನು ಹೊತ್ತ ಮೂರು ರಥಗಳ 3 ಕಿಮೀ ಉದ್ದದ ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ರಥಯಾತ್ರೆಯ ದಿನದಂದು ಸಾವಿರಾರು ಭಕ್ತರು ಒಟ್ಟಾಗಿ ಈ ರಥ(Chariot)ಗಳನ್ನು ಎಳೆಯಲು ಹೆಜ್ಜೆ ಹಾಕುತ್ತಾರೆ. ಈ ಪ್ರಸಿದ್ಧ ರಥಯಾತ್ರೆಯನ್ನು 1960ರ ದಶಕದ ಉತ್ತರಾರ್ಧದಿಂದ ಭಾರತದ ವಿವಿಧ ನಗರಗಳಲ್ಲಿ ಆಚರಿಸಲಾಗುತ್ತದೆ. ಹಿಂದೂಗಳು ಮಾತ್ರವಲ್ಲದೆ ಬೌದ್ಧರು ಕೂಡ ರಥಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಈ ಹಬ್ಬವನ್ನು ಸ್ಮರಿಸುತ್ತಾರೆ.

Latest Videos

ಈ ಬಾರಿ ರಥಯಾತ್ರೆಯು ಜುಲೈ 1ರಂದು ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಮಂಕಾಗಿದ್ದ ರಥಯಾತ್ರೆ ಈ ಬಾರಿ ತನ್ನ ವೈಭವ ಮರಳಿ ಗಳಿಸುವ ಇಚ್ಛೆ ಹೊಂದಿದೆ. ಹಾಗಿದ್ದೂ, ಸಾಕಷ್ಟು ಮುನ್ನೆಚ್ಚರಿಕಾ ನಿಯಮಗಳನ್ನು ರೂಪಿಸಲಾಗಿದೆ. ಎಲ್ಲ ಭಕ್ತರಿಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಜೊತೆಗೆ, ಎಲ್ಲ ಕಡೆ ಆರೋಗ್ಯ ತಪಾಸಣಾ ಕ್ಯಾಂಪ್‌ಗಳನ್ನು ಹಾಕಲಾಗುತ್ತಿದೆ. 

ಗುರುವಾಯೂರು ದೇವಾಲಯದ ಕುರಿತ ಆಸಕ್ತಿಕರ ಸಂಗತಿಗಳಿವು..

ಜಗನ್ನಾಥ ರಥ ಯಾತ್ರೆ 2022 ಇತಿಹಾಸ(History)
ರಥಯಾತ್ರೆಯ ಮೂಲಕ್ಕೆ ಸಂಬಂಧಿಸಿದ ಕೆಲವು ಪೌರಾಣಿಕ ಕಥೆಗಳು ಜನರ ಸಾಮಾಜಿಕ-ಧಾರ್ಮಿಕ ನಂಬಿಕೆಗಳನ್ನು ಪ್ರತಿಬಿಂಬಿಸುತ್ತವೆ.

ಒಂದು ಕಥೆಯಂತೆ, ಕೃಷ್ಣನ ತಾಯಿಯ ಚಿಕ್ಕಪ್ಪ ಕಂಸನು ಕೃಷ್ಣ ಮತ್ತು ಅವನ ಸಹೋದರ ಬಲರಾಮನನ್ನು ಕೊಲ್ಲಲು ಬಯಸಿದನು. ಈ ಉದ್ದೇಶದಿಂದ ಕಂಸನು ಕೃಷ್ಣ ಮತ್ತು ಬಲರಾಮನನ್ನು ಮಥುರಾಗೆ ಆಹ್ವಾನಿಸಿದನು. ಈ ಆಹ್ವಾನ ಕೊಡಲು ಅಕ್ರೂರನನ್ನು ತನ್ನ ರಥದೊಂದಿಗೆ ಗೋಕುಲಕ್ಕೆ ಕಳುಹಿಸಿದನು. ಈ ವಿಷಯ ಕೇಳಿದ ಶ್ರೀಕೃಷ್ಣನು ಬಲರಾಮನೊಂದಿಗೆ ರಥದ ಮೇಲೆ ಕುಳಿತು ಮಥುರಾಗೆ ಹೊರಟನು. ಕೃಷ್ಣ ಮತ್ತು ಬಲರಾಮರು ಮಥುರಾಗೆ ತೆರಳುವ ಈ ದಿನವನ್ನು ಭಕ್ತರು ರಥಯಾತ್ರೆ ಎಂದು ಆಚರಿಸುತ್ತಾರೆ. ದ್ವಾರಕೆಯಲ್ಲಿ ಶ್ರೀಕೃಷ್ಣನು ಬಲರಾಮನೊಂದಿಗೆ ತನ್ನ ಸಹೋದರಿ ಸುಭದ್ರೆಯನ್ನು ರಥದಲ್ಲಿ ಕರೆದುಕೊಂಡು ನಗರದ ವೈಭವವನ್ನು ತೋರಿಸುವ ದಿನವನ್ನು ಭಕ್ತರು ಆಚರಿಸುತ್ತಾರೆ.

ವೃಷಭ ರಾಶಿ ಮಾಸಿಕ ಭವಿಷ್ಯ: ಹೊಸ ಉದ್ಯೋಗ, ಭಾರಿ ಧನಲಾಭ!

ಜಗನ್ನಾಥ ರಥ ಯಾತ್ರೆ 2022 ಮಹತ್ವ(Significance)
ಜಗನ್ನಾಥ ಎಂಬ ಪದವು ಜಗ ಮತ್ತು ನಾಥ ಎಂಬ ಎರಡು ಪದಗಳಿಂದ ಮಾಡಲ್ಪಟ್ಟಿದೆ. ಅಂದರೆ ಬ್ರಹ್ಮಾಂಡ ಮತ್ತು ನಾಥ ಎಂದರೆ 'ಬ್ರಹ್ಮಾಂಡದ ಅಧಿಪತಿ'. ಪ್ರತಿ ವರ್ಷ ರಥಯಾತ್ರೆಯನ್ನು ಭಕ್ತರು ಸಂಭ್ರಮದಿಂದ ಆಚರಿಸುತ್ತಾರೆ. ವಿಗ್ರಹಗಳನ್ನು ರಥದ ಮೇಲೆ ಹೊರತರಲಾಗುತ್ತದೆ ಮತ್ತು ಮೂರು ರಥಗಳನ್ನು ಭಕ್ತರು ಪುರಿಯ ಬೀದಿಗಳಲ್ಲಿ ಗುಂಡಿಚಾ ದೇವಸ್ಥಾನಕ್ಕೆ ಎಳೆಯುತ್ತಾರೆ. ಮೆರವಣಿಗೆಯ ಸಮಯದಲ್ಲಿ ದೇವರ ರಥಗಳನ್ನು ಎಳೆಯುವುದು ಭಗವಂತನ ಶುದ್ಧ ಭಕ್ತಿಯಲ್ಲಿ ತೊಡಗುವ ಮಾರ್ಗವಾಗಿದೆ ಮತ್ತು ಇದು ತಿಳಿದೋ ಅಥವಾ ತಿಳಿಯದೆಯೋ ಮಾಡಬಹುದಾದ ಪಾಪಗಳನ್ನು ನಾಶಪಡಿಸುತ್ತದೆ ಎಂಬ ನಂಬಿಕೆ ಇದೆ.

ಜಗನ್ನಾಥ ರಥಯಾತ್ರೆಯನ್ನು ಪ್ರಪಂಚದಾದ್ಯಂತ ಲಕ್ಷಾಂತರ ಭಕ್ತರು ದೇವರ ಆಶೀರ್ವಾದವನ್ನು ಪಡೆಯಲು ಮತ್ತು ಅವರ ಇಷ್ಟಾರ್ಥಗಳನ್ನು ಪೂರೈಸಲು ಆಚರಿಸುತ್ತಾರೆ. ರಥಗಳೊಂದಿಗೆ ಭಕ್ತರು ಡೋಲುಗಳ ನಾದದೊಂದಿಗೆ ಹಾಡುಗಳು ಮತ್ತು ಮಂತ್ರಗಳನ್ನು ಪಠಿಸುತ್ತಾರೆ. ಜಗನ್ನಾಥ ರಥಯಾತ್ರೆಯು ಗುಂಡಿಚಾ ಯಾತ್ರೆ, ರಥೋತ್ಸವ, ದಶಾವತಾರ ಮತ್ತು ನವದಿನ ಯಾತ್ರೆ ಎಂದೂ ಪ್ರಸಿದ್ಧವಾಗಿದೆ.


ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!