ಹಲ್ಲಿನ ಮಧ್ಯೆ ಅಕ್ಕಿಕಾಳಿನಷ್ಟು ಜಾಗ ಬಿಟ್ಟಿದ್ದರೆ ಏನು ಅರ್ಥ ಅಂತ ಗೊತ್ತಾ..!?

By Suvarna NewsFirst Published Aug 20, 2020, 6:39 PM IST
Highlights

ಸಾಮುದ್ರಿಕಾ ಶಾಸ್ತ್ರದಲ್ಲಿ ಶರೀರದ ಮೇಲಿರುವ ಚಿಹ್ನೆ, ಮಚ್ಚೆ ಮತ್ತು ರೇಖೆಗಳನ್ನು ನೋಡಿ ಭವಿಷ್ಯವನ್ನು ಹೇಳುತ್ತಾರೆ. ವ್ಯಕ್ತಿಯ ಸ್ವಭಾವ, ಅದೃಷ್ಟವನ್ನೂ ಹೇಳುತ್ತಾರೆ. ಹಾಗೆಯೇ ಹಲ್ಲುಗಳ ಮಧ್ಯೆ ಜಾಗ ಬಿಟ್ಟಿದ್ದರೆ ಅದು ಅದೃಷ್ಟದ ಸಂಕೇತವೆಂದು ಈ ಶಾಸ್ತ್ರ ಹೇಳುತ್ತದೆ. ಅಂಥವರಿಗೆ ಲಕ್ಷ್ಮೀ ಕೃಪೆ ಇರುವುದಲ್ಲದೇ ಜೀವನದಲ್ಲಿ ಯಶಸ್ಸನ್ನು ಹೊಂದುತ್ತಾರೆ. ಹಲ್ಲುಗಳ ಮಧ್ಯೆ ಜಾಗ ಬಿಟ್ಟಿದ್ದರೆ ಏನೆನೆಲ್ಲಾ ಲಾಭಗಳನ್ನು ಹೊಂದುತ್ತಾರೆ ಎಂಬುದನ್ನು ನೋಡೋಣ..

ಜಾತಕದಿಂದ ಭವಿಷ್ಯದ ಹಲವಾರು ವಿಷಯಗಳನ್ನು ಮೊದಲೇ ತಿಳಿದುಕೊಳ್ಳಬಹುದು. ಹುಟ್ಟಿದ ದಿನ, ಸಮಯ, ಸ್ಥಳವನ್ನು ಗಮನಿಸಿ ಜಾತಕವನ್ನು ಮಾಡಲಾಗುತ್ತದೆ. ಜಾತಕದಲ್ಲಿ ಗ್ರಹಗಳ ಸ್ಥಾನ, ಮತ್ತಿತರ ವಿಚಾರಗಳನ್ನು ಪರಿಶೀಲಿಸಿ ಭವಿಷ್ಯದಲ್ಲಿ ಜೀವನ ಹೇಗಿರುತ್ತದೆ? ಅದೃಷ್ಟ ಕೈ ಹಿಡಿಯುತ್ತದೆಯೇ? ವಿದ್ಯಾಭ್ಯಾಸ, ವಿವಾಹ ಹೀಗೆ ಎಲ್ಲ ವಿಚಾರಗಳನ್ನು ಅರಿಯಬಹುದು. 

ಜ್ಯೋತಿಷ್ಯ ಶಾಸ್ತ್ರದಲ್ಲಿ ಭವಿಷ್ಯದ ವಿಚಾರಗಳನ್ನು, ವ್ಯಕ್ತಿಯ ಸ್ವಭಾವಗಳನ್ನು ಜಾತಕದಿಂದ ಮಾತ್ರವಲ್ಲದೇ ಕೆಲವು ವಿಚಾರಗಳನ್ನು  ಹಸ್ತಸಾಮುದ್ರಿಕಾ ಶಾಸ್ತ್ರದಿಂದ ಸಹ ತಿಳಿಯಬಹುದು. ಶರೀರದ ಮೇಲಿರುವ ಚಿಹ್ನೆ, ಮಚ್ಚೆ, ಹಸ್ತ ರೇಖೆ ಮುಂತಾದವುಗಳಿಂದ ವ್ಯಕ್ತಿ ಬಗೆಗಿನ ಹಲವು ವಿಚಾರಗಳನ್ನು ತಿಳಿದುಕೊಳ್ಳಬಹುದು.

ಇದನ್ನು ಓದಿ: ಮುದ್ದು ಮಗುವಿನ ಮೇಲೆ ಕೆಟ್ಟ ಕಣ್‌ದೃಷ್ಟಿ ತಾಕಿದರೆ ಹೀಗೆ ಮಾಡಿ ..

ಹಸ್ತಸಾಮುದ್ರಿಕಾ ಶಾಸ್ತ್ರದ ಹುಟ್ಟಿನ ಬಗ್ಗೆ ಒಂದು ಧಾರ್ಮಿಕ ಕಥೆಯಿದೆ. ಶಿವಪಾರ್ವತಿಯರ ಪುತ್ರನಾದ ಕಾರ್ತೀಕೇಯನು ಹಸ್ತಸಾಮುದ್ರಿಕಾ ಶಾಸ್ತ್ರವನ್ನು ರಚಿಸುತ್ತಾನೆ. ರಚಿಸಿದ ಬಳಿಕ ಅದನ್ನು ಸಮುದ್ರದಲ್ಲಿ ಎಸೆದು ಬಿಡುತ್ತಾನೆ. ನಂತರ ಸಮುದ್ರದಲ್ಲಿ ಈ ಶಾಸ್ತ್ರವು ಸಿಕ್ಕಿದ ಕಾರಣ ಇದಕ್ಕೆ ಹಸ್ತಸಾಮುದ್ರಿಕಾ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ. ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ವ್ಯಕ್ತಿಯ ಶರೀರದ ಮೇಲಿರುವ ಚಿಹ್ನೆ, ಮಚ್ಚೆ, ರೇಖೆಗಳಿಂದ ಭವಿಷ್ಯವನ್ನು ಹೇಳಲಾಗುತ್ತದೆ. ಹಲ್ಲುಗಳ ಮಧ್ಯೆ ಒಂಚೂರು ಜಾಗ ಬಿಟ್ಟಿದ್ದರೆ, ಅದಕ್ಕೂ ಒಂದು ಅರ್ಥವಿದೆ,  ಹಲ್ಲಿನ ಮಧ್ಯೆ ಜಾಗ ಬಿಟ್ಟಿದ್ದರೆ ಅದೃಷ್ಟವೆಂದು ಹೇಳಲಾಗುತ್ತದೆ. ಈಗ ಅಂತಹವರ ಗುಣ, ಸ್ವಭಾವದ ಬಗ್ಗೆ ತಿಳಿಯೋಣ.

ಕೌಶಲ್ಯವಂತರು 
ಹಲ್ಲಿನ ಮಧ್ಯೆ ಗ್ಯಾಪ್ ಇದ್ದರೆ ಅಂಥವರು ಕೌಶಲ್ಯವಂತರಾಗಿರುತ್ತಾರೆ. ಕಲೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಉತ್ತಮ ಕಲಾ ಪ್ರದರ್ಶಕರೂ ಆಗಿರುತ್ತಾರೆ. ಇವರ ಈ ಕಲೆ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ತಂದುಕೊಡುತ್ತದೆ.



ಪರಿಶ್ರಮದಿಂದ ಯಶಸ್ಸು 
ಈ ವ್ಯಕ್ತಿಗಳು ಅದೃಷ್ಟವಂತರೇ ಆಗಿರುತ್ತಾರೆ, ಯಾರೇ ಆದರೂ ಪರಿಶ್ರಮದಿಂದಲೇ ಫಲಪ್ರಾಪ್ತಿ, ಹಾಗಾಗಿ ಇವರು ಸಹ ಸ್ವಂತ ಶಕ್ತಿಯಿಂದ ಕೆಲಸ ಮಾಡಿದಲ್ಲಿ ಗುರಿಯನ್ನು ಮುಟ್ಟುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇವರ ಪರಿಶ್ರಮಕ್ಕೆ ಅದೃಷ್ಟ  ಜೊತೆಗಿರುತ್ತದೆ.

ಇದನ್ನು ಓದಿ: ಯಾವ ದಿಕ್ಕಿನ ಗೋಡೆಗೆ ಯಾವ ಬಣ್ಣ ಬಳಿದರೆ ಅದೃಷ್ಟ ಬರುತ್ತೆ…!

ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ
ಎರಡು ಹಲ್ಲುಗಳ ಮಧ್ಯೆ ಒಂದು ಅಕ್ಕಿಕಾಳಿನಷ್ಟು ಜಾಗ ಬಿಟ್ಟಿದ್ದರೆ ಅದೃಷ್ಟ ಎಂದು ಹೇಳುವುದನ್ನು ಕೇಳಿರುತ್ತೇವೆ. ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಹಲ್ಲುಗಳ ಮಧ್ಯೆ ಜಾಗ ಬಿಟ್ಟಿದ್ದರೆ ಅಂಥವರು ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸುತ್ತಾರಂತೆ. ಅಷ್ಟೇ ಅಲ್ಲದೆ ಸುಂದರವಾದ ದಂತ ಪಂಕ್ತಿಗಳ ನಡುವೆ ಚೂರು ಜಾಗ ಬಿಟ್ಟಿದ್ದರೆ ಅಂಥವರ ಭವಿಷ್ಯ ಉಜ್ವವಾಗಲಿದೆ ಎಂಬ ಸೂಚನೆಯನ್ನೂ ಸಹ ಇದು ನೀಡುತ್ತದೆ.  

ಯೋಗ್ಯತೆಯಿಂದ ಗುರುತಿಸಿಕೊಳ್ಳುತ್ತಾರೆ
ಇಂಥವರು ನೋಡಲು ಸಾಮಾನ್ಯರಂತೆ ಕಂಡರೂ ಅತ್ಯಂತ ಪ್ರತಿಭಾಶಾಲಿಗಳು, ಇವರ ಕೆಲಸ ಮತ್ತು ಪ್ರತಿಭೆಯು ಎಲ್ಲರೂ ಇವರನ್ನು ಗುರುತಿಸುವಂತೆ ಮಾಡುತ್ತದೆ. ಕೆಲಸವನ್ನು  ಶ್ರದ್ಧೆ ಮತ್ತು ಪರಿಶ್ರಮದಿಂದ ಮಾಡುತ್ತಾರೆ. ಇದರಿಂದ ಇವರ ಖ್ಯಾತಿ ಎಲ್ಲೆಡೆ ಪಸರಿಸುವಂತಾಗುತ್ತದೆ.

ಅದೃಷ್ಟ ಜೊತೆಗಿರುತ್ತದೆ
ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಹಲ್ಲುಗಳ ಮಧ್ಯೆ ಗ್ಯಾಪ್ ಇದ್ದವರು ಉತ್ತಮ ವಾಗ್ಮೀಗಳಾಗಿರುತ್ತಾರೆ. ಹಾಗಾಗಿ ಎಲ್ಲಿ, ಹೇಗೆ ಯಾವ ರೀತಿ ಮಾತನಾಡಿದರೆ ಒಳ್ಳೆಯದು ಎಂಬುದನ್ನು ಚೆನ್ನಾಗಿ ಅರಿತಿರುತ್ತಾರೆ. ಇವರ ಈ ಗುಣ ವೃತ್ತಿ ಕ್ಷೇತ್ರದಲ್ಲಿ ಮತ್ತಷ್ಟು ಎತ್ತಕ್ಕೇರಲು ಸಹಕಾರಿಯಾಗುತ್ತದೆ. ಹಾಗಾಗಿ ಇವರ ತೀಕ್ಷ್ಣ ಬುದ್ಧಿಗೆ ಅದೃಷ್ಟ ಸಾಥ್ ನೀಡುತ್ತದೆ.

ವಿಚಾರವಾದಿ ಮತ್ತು ವಿಶಾಲ ಹೃದಯಿ ಇವರಾಗಿರುತ್ತಾರೆ
ಉತ್ತಮ ವಿಚಾರಗಳನ್ನು ಮಾಡುವುದಲ್ಲದೇ, ಯಾವುದೇ ಚೌಕಟ್ಟಿಗೆ ಒಳಪಡದೇ ಅದರ ಹೊರತಾಗಿ ಹೊಸದನ್ನು ಯೋಚಿಸುವ, ಮಾಡುವ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ತಮ್ಮ ವಿಚಾರವನ್ನು ಇನ್ನೊಬ್ಬರು ಒಪ್ಪುವಂತೆ ಅವರಿಗೆ ವಿಷಯವನ್ನು ಮನದಟ್ಟು ಮಾಡಿಸುವ ಚಾಕಚಕ್ಯತೆ ಇವರಿಗಿರುತ್ತದೆ.

ಖಾದ್ಯ ಪ್ರಿಯರು
ವಿವಿಧ ರೀತಿಯ ಪದಾರ್ಥಗಳನ್ನು ಸವಿಯುವುದು ಇವರಿಗೆ ಅತ್ಯಂತ ಪ್ರಿಯವಾದ ವಿಷಯ. ಅಷ್ಟೇ ಅಲ್ಲದೇ ತಿನ್ನವುದು ಎಷ್ಟು ಇಷ್ಟವೋ, ಅಡಿಗೆಯನ್ನು ತಯಾರಿಸುವುದು ಸಹ ಇವರಿಗೆ ಅಷ್ಟೇ ಇಷ್ಟ. ಹಾಗೆಯೇ ಫಿಟ್‌ನೆಸ್ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಾರೆ.

ಇದನ್ನು ಓದಿ: ವಾರಕ್ಕನುಸಾರ ಹೀಗೆ ಮಾಡಿ, ಸಂಕಷ್ಟಗಳಿಂದ ಮುಕ್ತಿ ಪಡೆಯಿರಿ...

ಲಕ್ಷ್ಮೀ ಕೃಪೆ ಸದಾ ಇವರ ಮೇಲಿರುತ್ತದೆ
ಹಲ್ಲುಗಳ ಮಧ್ಯೆ ಜಾಗ ಬಿಟ್ಟಿದ್ದಕೆ ಅದೃಷ್ಟವೆಂದು ಹೇಳಲು ಕಾರಣವಿದೆ, ಇವರ ಮೇಲೆ ಲಕ್ಷ್ಮೀ ದೇವಿಯು ಕೃಪೆ ತೋರಿರುತ್ತಾಳೆ. ಧನ-ಧಾನ್ಯ ಸಂಪತ್ತು ಮತ್ತು ಸಮೃದ್ಧಿಯನ್ನು ಇವರು ಹೊಂದಿರುತ್ತಾರೆ. ಇಂಥ ಹುಡುಗಿಯರು ಗಂಡನ ಮನೆಗೂ ಹೆಚ್ಚಿನ ಲಾಭವನ್ನು ತರುವಂಥವರಾಗುತ್ತಾರೆ.

click me!