ಮಾನಸಿಕ ಒತ್ತಡ, ಕೋರ್ಟ್ ಕಲಹ ಮುಕ್ತಿಗೆ ಈ ಮಂತ್ರ ಜಪಿಸಿ!

By Suvarna NewsFirst Published Mar 17, 2021, 5:42 PM IST
Highlights

ಮಾನವನ ಧರ್ಮ-ಕರ್ಮಗಳಿಗನುಸಾರವಾಗಿ ಫಲ ದೊರಕುತ್ತದೆ. ಹಾಗೆಯೇ ದೇವರ ಅನುಷ್ಠಾನ ಜಪ-ತಪ, ಪೂಜೆ ಆರಾಧನೆಗಳು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಸಕಾರಾತ್ಮಕ ಪರಿಣಾಮವನ್ನು ಕೊಡುತ್ತವೆ. ಇದರಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ದೇವರ ಮಂತ್ರಗಳನ್ನು ಪಠಿಸುವುದರಿಂದ ವಾತಾವರಣದಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಸಕಾರಾತ್ಮಕ ಶಕ್ತಿಯು ಎಲ್ಲೆಡೆ ಪಸರಿಸುತ್ತದೆ. ಸಮಸ್ಯೆಗಳ ನಿವಾರಣೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಕೆಲವು ಮಂತ್ರಗಳ ಬಗ್ಗೆ ತಿಳಿಯೋಣ..

ಜೀವನವು ಸುಖ ಮತ್ತು ಕಷ್ಟಗಳ ಸಮ್ಮಿಶ್ರಣ. ಹಾಗಾಗಿ ಎಲ್ಲ ಮಾನವರು ಕಷ್ಟ-ಸುಖಗಳ ಅನುಭವವನ್ನು ಪಡೆದಿರುತ್ತಾರೆ. ದೇವರ ಧ್ಯಾನ, ಆರಾಧನೆಗಳಿಂದ ಒತ್ತಡ ನಿವಾರಣೆಯಾಗುವುದಲ್ಲದೆ, ಹಲವಾರು ಸಮಸ್ಯೆಗಳಿಗೆ ಪರಿಹಾರವು ಸಿಗುತ್ತದೆ. ಪ್ರತಿನಿತ್ಯ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿರುವವರು ಕೊನೆಗೆ ದೇವರ ಮೊರೆ ಹೋಗುತ್ತಾರೆ. ಪರಿಶ್ರಮ ಮತ್ತು ಶ್ರದ್ಧೆಯಿಂದ ಅಂದುಕೊಂಡದ್ದನ್ನು ಸಾಧಿಸಬಹುದಾಗಿದ್ದರೂ ಸಹ ಅದಕ್ಕೆ ಭಗವಂತನ ಕೃಪೆ ಬೇಕಾಗಿರುತ್ತದೆ, ದೇವರ ನಾಮಗಳನ್ನು, ಮಂತ್ರಗಳನ್ನು ಪಠಿಸುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ. ದೇವರ ಇಚ್ಛೆ ಇಲ್ಲದೆ ಒಂದು ಹುಲ್ಲು ಕಡ್ಡಿಯು ಅಲ್ಲಾಡುವುದಿಲ್ಲವೆಂಬ ಮಾತಿದೆ. ಹಾಗಾಗಿ ದೈವ ಕೃಪೆ ಇದ್ದರೆ ಎಲ್ಲವು ಸಾಧ್ಯ.

ಮನಸ್ಸಿನಲ್ಲಿರುವ ದುಗುಡ-ದುಮ್ಮಾನಗಳು ದೂರವಾಗಿ ನೆಮ್ಮದಿ ಲಭಿಸುತ್ತದೆ. ಪ್ರತ್ಯೇಕ ಸಮಸ್ಯೆಗಳ ನಿವಾರಣೆಗೆ ತಿಳಿಸಲಾಗಿರುವ ಮಂತ್ರಗಳನ್ನು ಪಠಿಸುವುದರಿಂದ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿರುವ ವಿಶೇಷ ಮಂತ್ರಗಳ ಬಗ್ಗೆ ತಿಳಿಯೋಣ..

ಇದನ್ನು ಓದಿ: ಈ ಮೂರು ವಸ್ತುಗಳು ಮನೆಯಲ್ಲಿದ್ದರೆ ಹಣಕ್ಕೆ ಕೊರತೆನೇ ಆಗಲ್ವಂತೆ....! 

ಗಂಭೀರ ಸಮಸ್ಯೆಗಳ ನಿವಾರಣೆಗೆ
ನಿತ್ಯದ ಜೀವನದಲ್ಲಿ ಹಲವಾರು ತೊಂದರೆ ತಾಪತ್ರಯಗಳು ಎದುರಾಗುತ್ತವೆ. ಕೆಲವು ಸಣ್ಣ-ಪುಟ್ಟ ಸಮಸ್ಯೆಗಳಾದರೆ ಇನ್ನು ಕೆಲವು ಗಂಭೀರ ಸಮಸ್ಯೆಗಳಾಗಿರುತ್ತವೆ. ಅದರಿಂದ ಮುಕ್ತಿ ಪಡೆಯಲು ಯಾವುದೇ ಮಾರ್ಗವು ಕಾಣಿಸುವುದಿಲ್ಲ. ಅಂತಹ ಸಮಸ್ಯೆಗಳ ನಡುವೆ ಜೀವನವನ್ನು ನಡೆಸುವುದೇ ಕಷ್ಟವಾಗುತ್ತದೆ. ಭಗವಂತನ ಆರಾಧನೆಯಿಂದ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುತ್ತವೆ. ಅದಕ್ಕಾಗಿ ನಾವು ಮಾಡುವ ಪ್ರಾರ್ಥನೆ ಭಗವಂತನಿಗೆ ಬೇಗ ತಲುಪಲು ತೋರಿಸಿರುವ ಮಾರ್ಗವೇ ಮಂತ್ರ.  ಸಮಸ್ಯೆಯ ನಿವಾರಣೆಗೆ ಸರಿಯಾದ ಮಂತ್ರವನ್ನು ಜಪಿಸುವುದರಿಂದ ಕಷ್ಟದಿಂದ ಪಾರಾಗಬಹುದಾಗಿದೆ. ಅತ್ಯಂತ ಕಷ್ಟದಿಂದ ಬಳಲುತ್ತಿರುವವರು ಈ ಮಂತ್ರಗಳನ್ನು ಜಪಿಸಬೇಕು.



“ಸರ್ವೇಶ್ವರೇಶ್ವರಾಯ ಸರ್ವ ವಿಘ್ನ ವಿನಾಶಿನೇ ಮಧುಸೂದನಾಯ ಸ್ವಾಹಾ”.  

 “ಉಗ್ರ ವೀರ ಮಹಾವಿಷ್ಣು ಜ್ವಲಂತಂ ಸರ್ವತೋ  ಮುಖಮ್/ ನೃಸಿಂಹ ಭೀಷಣಂ ಭಂದ್ರಂ ಮೃತ್ಯುಂ ಮೃತ್ಯುಂ ನಮಾಮ್ಯಹಮ್//” 
 ಇದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದರ ಜೊತಗೆ ನರಸಿಂಹ ದೇವರ ಕೃಪೆಯು ಲಭಿಸಲಿದೆ.

ಇದನ್ನು ಓದಿ: ಈ ರಾಶಿಯವರು ಸ್ನೇಹಿತರಿಗೆ ಸಾಲ ಕೊಡುವುದಲ್ಲಿ ಎತ್ತಿದ ಕೈ; ನಿಮ್ಮ ರಾಶಿ ಇದ್ಯಾ? 

ಕ್ಲೇಶಗಳಿಂದ ಮುಕ್ತಿ ಪಡೆಯಲು
ಜೀವನದಲ್ಲಿ ಕಷ್ಟಗಳ ಜೊತೆ ಕಲಹ ಮತ್ತು ಕ್ಲೇಶವು ಮನಸ್ಸನ್ನು ಹೆಚ್ಚು ಹಾಳುಮಾಡುತ್ತವೆ. ಮನಸ್ಸಿನ ಒತ್ತಡವನ್ನು ಕಳೆದುಕೊಳ್ಳಲು, ನೆಮ್ಮದಿಯಿಂದ ಜೀವನವನ್ನು ನಡೆಸಲು ಈ ಮಂತ್ರವನ್ನು ಹೇಳಿಕೊಳ್ಳಬೇಕು. ಶ್ರೀಕೃಷ್ಣನಿಗೆ ಸಂಬಂಧಿಸಿದ ಈ ಮಂತ್ರವು ಕ್ಲೇಶ ಪರಿಹಾರಕ್ಕೆ ಸಿದ್ಧ ಮಂತ್ರವಾಗಿದೆ. 

“ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೆ/ ಪ್ರಣತ ಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ” ಅಷ್ಟೇ ಅಲ್ಲದೆ ಶ್ರೀ ಕೃಷ್ಣನ ಕೃಪೆ ಪಡೆಯಲು ಮತ್ತು ಜೀವನದಲ್ಲಿ ಕಲಹಗಳು ಎದುರಾಗದಿರಲು “ಶ್ರೀ ಕೃಷ್ಣಾಯ ನಮಃ” ಎಂಬ ಮಂತ್ರವನ್ನು ಜಪಿಸುತ್ತಿರಬೇಕು.

ನಕಾರಾತ್ಮಕ ಶಕ್ತಿಯಿಂದ ಮುಕ್ತಿ ಪಡೆಯಲು
ನಕಾರಾತ್ಮಕ ಶಕ್ತಿಯಿದ್ದಲ್ಲಿ ಉತ್ತಮ ಕಾರ್ಯಗಳು ನಡೆಯಲು ತೊಡಕುಂಟಾಗುತ್ತದೆ. ವ್ಯಕ್ತಿಯ ಶಕ್ತಿ ಕುಗ್ಗುವುದಲ್ಲದೆ, ಯಾವುದೇ ಕೆಲಸದಲ್ಲಿ ಆಸಕ್ತಿಯು ಇಲ್ಲದಂತಾಗುತ್ತದೆ. ನಕಾರಾತ್ಮಕ ಶಕ್ತಿಯು ನಾಶವಾಗಿ ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಈ ಮಂತ್ರವು ಉಪಯುಕ್ತವಾಗಿದೆ.

“ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ ಪ್ರಹೃದ್ಯ ತ್ಯನುರಜ್ಯತೆ ಚ/ ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ  ಸರ್ವೇ ನಮಸ್ಯಂತಿ  ಚ ಸಿದ್ಧ ಸಂಘಾಃ//” ಈ ಮಂತ್ರವನ್ನು ಮೂರು ಸಾವಿರ ಬಾರಿ ಜಪಿಸಬೇಕು.

ಇದನ್ನು ಓದಿ: ಈ 5 ರಾಶಿಯವರಿಗೆ ಅಡುಗೆ ಮಾಡೋದಂದ್ರೆ ತುಂಬಾ ಇಷ್ಟವಂತೆ ...! 

ಕೋರ್ಟ್ ಕಚೇರಿ ಸಮಸ್ಯೆ ನಿವಾರಣೆಗೆ
ಕೋರ್ಟ್ ಕಚೇರಿಯ ವ್ಯವಹಾರದ ಸಮಸ್ಯೆಯಿಂದ ಮುಕ್ತಿ ಪಡೆಯಲು ಹನುಮಂತನ ಈ ಮಂತ್ರವನ್ನು ಜಪಿಸಬೇಕು. 

“ಹಂ ಹನುಮತೆ ರುದ್ರಾತ್ಮಕಾಯ ಹುಂ ಫಟ್” ಮಂತ್ರವನ್ನು 1 ಲಕ್ಷ ಬಾರಿ ಜಪಿಸಬೇಕು. ಈ ಸಮಯದಲ್ಲಿ ಶ್ರೀರಾಮ ಮತ್ತು ಸೀತಾ ಮಾತೆಯ ಸ್ಮರಣೆಯನ್ನು ಮಾಡಬೇಕು. ಇದರಿಂದ ಕೋರ್ಟ್ ಕಚೇರಿಯ ಕೆಲಸಗಳಲ್ಲಿ ಎದುರಾಗಿರುವ ಸಮಸ್ಯೆ ದೂರವಾಗುವುದಲ್ಲದೆ, ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ.

ಈ ವಿಷಯದ ಬಗ್ಗೆ ಇರಲಿ ಗಮನ
ಜ್ಯೋತಿಷ್ಯ ಶಾಸ್ತ್ರದಲ್ಲಿ ಜಪ ಮತ್ತು ಮಂತ್ರಗಳನ್ನು ಹೇಳಿಕೊಳ್ಳುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸಿದ್ದಾರೆ. ಜಪ ಮಾಡುವ ಸ್ಥಳ ಮತ್ತು ಆಸನ ಸ್ವಚ್ಛವಾಗಿರಬೇಕು. ಪ್ರತಿದಿನ ಒಂದೇ ಜಾಗದಲ್ಲಿ ಮತ್ತು ಸಮಯದಲ್ಲಿ ಜಪ ಮಾಡುವುದರಿಂದ ಮನಸ್ಸಿನ ಒತ್ತಡ ಕಡಿಮೆಯಾಗುವುದಲ್ಲದೆ, ಜಪದ ಫಲ ದೊರಕುತ್ತದೆ. ಮಂತ್ರಗಳನ್ನು ಜಪಿಸುವಾಗ ಮನಸ್ಸಿನಲ್ಲಿ ಕೆಟ್ಟ ಭಾವನೆಗಳು ಬರದಂತೆ ನೋಡಿಕೊಳ್ಳಬೇಕು. ಪೂರ್ಣ ಶ್ರದ್ಧೆ ಮತ್ತು ಭಕ್ತಿಯಿಂದ ಮಂತ್ರಗಳನ್ನು ಪಠಿಸಿದರೆ, ಮನೋವಾಂಛಿತ ಫಳ ಸಿದ್ಧಿಸುತ್ತದೆ.

click me!