
ಮುಂಬೈ(ಸೆ.30): ‘ಶತ್ರಂಜ್ ಕೇ ಖಿಲಾಡಿ’, ‘ಜುನೂನ್’ ಮತ್ತು ‘ಕ್ರಾಂತಿ’ ಮುಂತಾದ ಚಿತ್ರಗಳಲ್ಲಿ ತಮ್ಮ ಅದ್ಭುತ ನಟನೆಯಿಂದ ಸುಪ್ರಸಿದ್ಧರಾಗಿದ್ದ ಟೀವಿ ಮತ್ತು ಚಲನಚಿತ್ರ ನಟ ಟಾಮ್ ಆಲ್ಟರ್ (67) ನಿಧನರಾಗಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಟ ಆಲ್ಟರ್, ಚರ್ಮದ ಕ್ಯಾನ್ಸರ್ನ ಕೊನೆ ಹಂತದಲ್ಲಿದ್ದರು. ಕಳೆದ ವರ್ಷದಿಂದ ಚರ್ಮದ ಕ್ಯಾನ್ಸರ್ಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಈ ತಿಂಗಳ ಆರಂಭದಲ್ಲಿ, ಮುಂಬೈಯ ಸೈಫೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಅವರು ಕೊನೆಯುಸಿರೆಳೆದರು.
ವರ್ಲಿಯ ಸ್ಮಶಾನದಲ್ಲಿ ಶನಿವಾರ ಕುಟುಂಬ ಸದಸ್ಯರು, ಗಣ್ಯರ ಸಮ್ಮುಖದಲ್ಲಿ ಆಲ್ಟರ್ರ ಅಂತ್ಯ ಸಂಸ್ಕಾರ ನಡೆಯಿತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಹಿರಿಯ ನಟನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಕನ್ನಡದಲ್ಲಿ ನಟನೆ
ಟಾಮ್ ಆಲ್ಟರ್ 1977ರಲ್ಲಿ ಅನಂತ್ ನಾಗ್ ಅಭಿನಯಿಸಿದ್ದ 'ಕನ್ನೇಶ್ವರ ರಾಮ' ಚಿತ್ರದಲ್ಲಿ ಬ್ರಿಟಿಷ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಮರಿಕದ ಕ್ರಿಶ್ಚಿಯನ್ ಮಿಶಿನರಿಯ ಪುತ್ರರಾಗಿ 1950, ಜೂನ್ 22 ರಂದು ಭಾರತದ ಉತ್ತರಖಾಂಡದ ಮುಸ್ಸೂರಿಯಲ್ಲಿ ಜನಿಸಿದ ಟಾಮ್ ಬಾಲಿವುಡ್ ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.