ವಿಲನ್‌ನನ್ನು ಹೀರೋ ಮಾಡಿದ್ರು ಸುನೀಲ್ ಕುಮಾರ್ ದೇಸಾಯಿ!

By Web DeskFirst Published Sep 28, 2018, 1:06 PM IST
Highlights

ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ಮೂಡಿ ಬರ್ತಾಯಿದೆ ಉದ್ಘರ್ಷ ಚಿತ್ರ | ವಿಭಿನ್ನವಾಗಿ ಮೂಡಿ ಬರಲಿದೆ ಉದ್ಘರ್ಷ | ಚಿತ್ರ ಪ್ರೇಮಿಗಳಿಗೆ ಖುಷಿ ನೀಡಲಿದ್ದಾರೆ ದೇಸಾಯಿ 

ಬೆಂಗಳೂರು (ಸೆ. 28): ಬಹಳ ವರ್ಷಗಳ ನಂತರ ಸುನೀಲ್ ಕುಮಾರ್ ದೇಸಾಯಿ ಪತ್ರಿಕಾಗೋಷ್ಟಿ ಕರೆದಿದ್ದರು. ಅದಕ್ಕೆ ಕಾರಣ ಅವರ ಹೊಸ ಚಿತ್ರ ‘ಉದ್ಘರ್ಷ’.

ಎಂದಿನಂತೆ ದೇಸಾಯಿ ಹಣೆ ಮೇಲೆ ಕುಂಕುಮ ಇಟ್ಟುಕೊಂಡು, ಅತೀವ ಆತ್ಮವಿಶ್ವಾಸ ಧರಿಸಿಕೊಂಡು ಕೂತಿದ್ದರು. ಅವರ ಪಕ್ಕ ಕನ್ನಡ ಚಿತ್ರರಂಗ ಹೀರೋ ಆಗಿ ಪರಿಚಯವಾಗುತ್ತಿರುವ ಠಾಕೂರ್ ಅನೂಪ್ ಸಿಂಗ್. ದೇಸಾಯಿ ನಿಂತರೆ ಅನೂಪ್ ಎತ್ತರಕ್ಕೆ ಬರುತ್ತಿದ್ದರು. ಹಾಗಾಗಿ ಅನೂಪ್ ಎದ್ದು ನಿಂತು ಮಾತನಾಡುವ ಸಾಹಸ ಮಾಡಲಿಲ್ಲ. ಠಾಕೂರ್ ಅನೂಪ್ ಸಿಂಗ್ ರಾಷ್ಟ್ರ ಮಟ್ಟದ ನಟ.

ಅದರಲ್ಲೂ ಸೂರ್ಯ, ವಿಜಯ್, ಅಲ್ಲು ಅರ್ಜುನ್ ಮುಂತಾದ ಸ್ಟಾರ್‌ಗಳ ಸರಿ ಸಮಾನವಾಗಿ ನಿಂತ ಖಳ ನಟ. ಇಂಥಾ ನಟನನ್ನು ಹೀರೋ ಮಾಡಬೇಕು ಅಂತ ಅನ್ನಿಸಿದ್ದು ಯಾಕೆ ಅಂತ ಹೇಳುವುದಕ್ಕೆ ನಿಂತಿದ್ದರು ದೇಸಾಯಿ.

ಆಗ ತಾನೇ ‘ಉದ್ಘರ್ಷ’ ಸಿನಿಮಾ ಮಾಡಬೇಕು ಅಂತ ನಿರ್ಧಾರವಾಗಿತ್ತು. ಒಂದು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ದೇಸಾಯಿ ಕಣ್ಣಿಗೆ ಒಬ್ಬ ಆರಡಿ ಹುಡುಗ ಕಾಣಿಸಿದ. ಅವರೇ ಅನೂಪ್ ಸಿಂಗ್. ನಟ ಅನ್ನುವುದು ಗೊತ್ತಾಯಿತು. ತನ್ನ ಚಿತ್ರದ ನಾಯಕನಾಗಲು ಇವನೇ ಸೂಕ್ತ ಎನ್ನಿಸಿ ಮಾತನಾಡಿದರು.

ಅನೂಪ್ ನಾನು ಹೈದರಾಬಾದಿಗೆ ಹೊರಟಿದ್ದೇನೆ, ಅಲ್ಲಿಗೆ ಬರಬಹುದಾ ಎಂದರು. ದೇಸಾಯಿ ರೆಡಿ. ಅವತ್ತೇ ಅನೂಪ್ ಬಗ್ಗೆ ಗೂಗಲ್ ಮಾಡಿ ನೋಡಿದಾಗಲೇ ಗೊತ್ತಾಗಿದ್ದು ಆತ ದೊಡ್ಡ ಖಳ ನಟ
ಅನ್ನೋದು. ಮರುದಿನ ಹೈದರಾಬಾದ್. ಪೂರ್ತಿ ಕತೆ ಹೇಳಿದರು. ಕತೆ ಕೇಳಿದ ಅನೂಪ್‌ಗೆ ಹೀರೋ ಯಾರು ಅನ್ನೋ ಕುತೂಹಲ. ಯಾಕೆಂದರೆ ದೇಸಾಯಿ ತನ್ನನ್ನು ವಿಲನ್ ಪಾತ್ರಕ್ಕೆ ನಟಿಸಲು ಕೇಳುತ್ತಾರೆ ಅನ್ನೋದು ಅವರ ಐಡಿಯಾ.

ತಡೆಯದೇ ಕೇಳಿದಾಗ ದೇಸಾಯಿ ನೀವೇ ಹೀರೋ ಎಂದಿದ್ದು ಕೇಳಿ ಅವರಿಗೆ ಶಾಕ್. ಆದರೂ ಯೋಚ್ನೆ ಮಾಡಿ ಸಾರ್, ನಾನು ವಿಲನ್ನು ಎಂದರು ಅವರು. ಆದರೆ ದೇಸಾಯಿ ಅವರಿಗೆ ತನ್ನ ಕತೆಗೆ ಹೀರೋ ಸಿಕ್ಕಾಗಿತ್ತು.

‘ಚಿತ್ರರಂಗಕ್ಕೆ ಹೊಸಬರು ಬರುತ್ತಾರೆ ಹೋಗುತ್ತಾರೆ. ಅವರಲ್ಲಿ ಬಹುತೇಕರಿಗೆ ಹೀರೋ ಆಗುವ ಚಾಕಚಕ್ಯತೆ ಇಲ್ಲ. ನನ್ನ ಕತೆಯ ನಾಯಕ ಫಾಸ್ಟ್ ಆ್ಯಂಡ್ ಫ್ಯೂರಿಯಸ್. ನನಗೆ ಈತನಲ್ಲಿ ನನ್ನ ಹೀರೋ ಕಂಡ’ ಎನ್ನುವ ದೇಸಾಯಿ ಅನೂಪ್ ಡೆಡಿಕೇಷನ್ ಬಗ್ಗೆ ಆಡುವ ಮಾತಿಗೆ ಒಂದು ಕೈ ತೂಕ ಜಾಸ್ತಿ.

‘ತಾನು ಹೀರೋ, ದೊಡ್ಡ ನಟ ಅನ್ನುವ ಯಾವ ಹಮ್ಮೂ ಇವರಲ್ಲಿಲ್ಲ. ಐವತ್ತು ಅಡಿ ಎತ್ತರದ ಬೆಟ್ಟದ ಮರದ ಕೊಂಬೆಯಲ್ಲಿ ನೇತಾಡುವ ದೃಶ್ಯ ಇತ್ತು. ಡ್ಯೂಪ್ ಬೇಡ ಎಂದು ಹೇಳಿ ತಾನೇ ಕಷ್ಟಪಟ್ಟು ನಟಿಸಿದ್ದು ನೋಡಿ ನನ್ನ ಕಣ್ಣಲ್ಲಿ ನೀರು ಬಂತು’ ಎಂದರು ದೇಸಾಯಿ. ಒಂದರೆ ಕ್ಷಣ ಮೌನ.

ಪಕ್ಕದಲ್ಲಿದ್ದ ನಿರ್ಮಾಪಕ ದೇವರಾಜ್ ಮುಖದಲ್ಲಿ ಮಂದಹಾಸ. ದೇಸಾಯಿ ಭರ್ಜರಿಯಾಗಿ ರೆಡಿಯಾಗಿದ್ದಾರೆ. ‘ಉದ್ಘರ್ಷ’ದಲ್ಲಿ ಮತ್ತೇ ಹಳೇ ದೇಸಾಯಿ ಕಾಣಿಸುವ ಭರವಸೆ ನೀಡುತ್ತಿದ್ದಾರೆ. ಹಾಗಾಗಿ ಚಿತ್ರ ಪ್ರೇಮಿಗಳು ದೇಸಾಯಿ ಸಿನಿಮಾ ಮೇಲೆ ಒಂದು ಕಣ್ಣಿಡಬೇಕಾಗಿದೆ. 

click me!