ನಟನೆಯತ್ತ ಮುಖ ಮಾಡಿದ ಗಾಯಕಿ ಅನನ್ಯ ಭಟ್

By Web DeskFirst Published Oct 9, 2018, 5:14 PM IST
Highlights

ಗಾಯಕಿ ಅನನ್ಯಾ ಭಟ್ ನಟನೆಯತ್ತ ಮುಖ ಮಾಡಿದ್ದಾರೆ. ಗಾಯನದಲ್ಲಿ ತಮ್ಮದೇ ಛಾಪು ಮೂಡಿಸಿರುವ ಈ ನಟಿ ಈಗ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಉರ್ವಿ ಚಿತ್ರದಲ್ಲಿ ನಟನೆ ಪ್ರತಿಭೆ ತೋರಿಸಿದ ನಂತರ ಈಗ ಸಚಿನ್ ಬಾಡಾ ನಿರ್ದೇಶನದ ‘ಭೂತಃಕಾಲ’ ಹೆಸರಿನ ಚಿತ್ರದೊಂದಿಗೆ ನಾಯಕಿ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ. 

ಬೆಂಗಳೂರು (ಅ. 09): ಹೊಸ ತಲೆಮಾರಿನ ಕನ್ನಡದ ಬೇಡಿಕೆಯ ಗಾಯಕಿಯರಲ್ಲಿ ಅನನ್ಯ ಭಟ್ ಒಬ್ಬರು. ಅವರೀಗ ಗಾಯನದಿಂದ ನಟನೆಯತ್ತಲೂ ಮುಖ ಮಾಡಿದ್ದಾರೆ. ಉರ್ವಿ ಚಿತ್ರದಲ್ಲಿ ನಟನೆ ಪ್ರತಿಭೆ ತೋರಿಸಿದ ನಂತರ ಈಗ ಸಚಿನ್ ಬಾಡಾ ನಿರ್ದೇಶನದ ‘ಭೂತಃಕಾಲ’ ಹೆಸರಿನ ಚಿತ್ರದೊಂದಿಗೆ ನಾಯಕಿ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ.

ವಿಶೇಷ ಅಂದ್ರೆ ಅವರ ಎಂಟ್ರಿ ಕಾರಣಕ್ಕಾಗಿಯೇ ಒಂದಷ್ಟು ಸುದ್ದಿ ಮಾಡುತ್ತಿರುವ ‘ಭೂತಃ ಕಾಲ’ ಚಿತ್ರತಂಡ ಚಿತ್ರೀಕರಣ ಮುಗಿಸಿಕೊಂಡು ಬಂದಿದೆ. ಹಂಸ ಶ್ರೀಕಾಂತ್ ನಿರ್ಮಾಣದ ಚಿತ್ರವಿದು. ಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾಗ ಚಿತ್ರತಂಡವೇ ಬಿಚ್ಚಿ ಬೀಳುವಂತಹ ಘಟನೆ ನಡೆದಿದೆ.

‘ಸಾಮಾನ್ಯವಾಗಿ ಹಾರರ್ ಸಿನಿಮಾ ಅಂದಾಗ ಪ್ರೇಕ್ಷಕರಲ್ಲಿ ಒಂದಷ್ಟು ಭಯ, ಥ್ರಿಲ್ ಹುಟ್ಟಿಸುವಂತಹ ದೃಶ್ಯಗಳು ಬೇಕೆನಿಸುವುದು ಸಹಜ. ಈ ಸಂದರ್ಭದಲ್ಲಿ ನಮ್ಮನ್ನೇ ಭಯ ಬೀಳಿಸುವ ನೈಜ ಘಟನೆಯೊಂದು ಅಲ್ಲಿ ನಡೆದು ಹೋಯಿತು. ಏನಾಯಿತು ಎನ್ನುವಷ್ಟರಲ್ಲಿ ನಮ್ಮಲ್ಲೇ ಒಂದು ಕ್ಷಣ ಭಯ ಶುರುವಾಯಿತು. ಹಾಗೊಂದು ಅನುಭವ ನಮಗಾಗುವ ಹೊತ್ತಿಗೆ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿತ್ತು.ಆ ಜಾಗದ ಸಹವಾಸ ಸಾಕು ಅಂತ ಶೂಟಿಂಗ್ ಪ್ಯಾಕಪ್ ಮಾಡಿಕೊಂಡು ಅಲ್ಲಿಂದ ಹೊರಟು ಬಂದು ಬೆಂಗಳೂರು ಸೇರಿಕೊಂಡೆವು ’ ಎನ್ನುತ್ತಾರೆ ನಿರ್ದೇಶಕ ಸಚಿನ್ ಬಾಡಾ. 

click me!