
ರಿಯಾಲಿಟಿ ಷೋಗಳ ಅಬ್ಬರ ಈಗ ಎಲ್ಲಾ ಭಾಷೆಗಳ ಚಾನೆಲ್ಗಳಲ್ಲಿಯೂ ಇವೆ. ಅದರ ರಿಯಾಲಿಟಿಯ ಬಗ್ಗೆ ಮಾತ್ರ ವೀಕ್ಷಕರಿಗೆ ಇನ್ನೂ ಸಂದೇಹ ಇದ್ದೇ ಇದೆ. ಅದರಲ್ಲಿಯೂ ಬಿಗ್ಬಾಸ್ನಂಥ ಷೋಗಳು ಪೂರ್ವನಿಯೋಜಿತ ಎನ್ನುವ ಗಂಭೀರ ಆರೋಪವೇ ಇದೆ. ಇನ್ನು ಸಂಗೀತ, ಡಾನ್ಸ್ ಷೋಗಳಂತೂ ಕೇಳುವುದೇ ಬೇಡ ಬಿಡಿ. ಇಲ್ಲಿ ಸ್ಪರ್ಧಿಗಳ ಟ್ಯಾಲೆಂಟ್ಗಿಂತಲೂ ಹೆಚ್ಚಾಗಿ ಅವರ ವೈಯಕ್ತಿಯ ಜೀವನವೇ ಹೈಲೈಟ್ ಆಗುತ್ತದೆ. ಮನೆಯಲ್ಲಿ ಬಡತನ, ಅಪ್ಪ-ಅಮ್ಮ ಇಲ್ಲದ ಸ್ಪರ್ಧಿಗಳು, ಊಟ ಮಾಡಲೂ ಕಷ್ಟಪಡುವ ಸ್ಥಿತಿ ಇದ್ದವರು... ಇಂಥ ಟ್ಯಾಲೆಂಟ್ಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವುದು ಖುಷಿಯ ವಿಚಾರವಾದರೂ, ಅವರ ಬಗ್ಗೆ ಕೆದಕಿ ಕೆದಕಿ ಕೇಳಿ ಕಣ್ಣೀರು ಹಾಕಿಸುವುದು, ಅಲ್ಲೊಂದಿಷ್ಟು ಡ್ರಾಮಾ ಕ್ರಿಯೇಟ್ ಮಾಡುವುದು, ತೀರ್ಪುಗಾರರೂ ಕಣ್ಣೀರು ಹಾಕಿದಂತೆ ಮಾಡುವುದು, ಇದರ ನಡುವೆ ಸ್ಪರ್ಧಿಗಳಿಗಿಂತಲೂ ಹೆಚ್ಚಾಗಿ ಅಲ್ಲಿ ಇರುವವರ ಕೇಕೇ, ಅಬ್ಬರ, ಕೂಗಾಟ, ಕಿರುಚಾಟ... ಇವೆಲ್ಲಾ ಇದ್ದರಷ್ಟೇ ಅದು ರಿಯಾಲಿಟಿ ಷೋ ಎನ್ನಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಟ್ಯಾಲೆಂಟ್ಗಿಂತಲೂ ಇಲ್ಲಿ ಹೆಚ್ಚಾಗಿ ಕಣ್ಣೀರಿನ ಸ್ಟೋರಿಯೇ ಟಿಆರ್ಪಿ ಗಿಟ್ಟಿಸಿಕೊಳ್ಳುವ ಕಾರಣ, ಅದನ್ನೇ ಹೈಲೈಟ್ ಮಾಡುವ ಸ್ಥಿತಿಯೂ ಇದೆ.
ಅದೇನೇ ಇರಲಿ. ಇದೀಗ ಜೀ ಕನ್ನಡದ ಸಂಗೀತ ಕಾರ್ಯಕ್ರಮ ಸರಿಗಮಪ ಈ ಸಲದ ಸೀಸನ್ ಮುಗಿದಿದೆ. ಇದರಲ್ಲಿ ಸುಂದರವಾಗಿ ಹಾಡಿ ಗಮನ ಸೆಳೆದವರಲ್ಲಿ ಒಬ್ಬರು ದ್ಯಾಮೇಶ್. ದ್ಯಾಮೇಶ ಯಾವುದೇ ಸಂಗೀತ ಶಾಲೆಯಲ್ಲಿ ಅಭ್ಯಾಸ ಮಾಡಿಲ್ಲ. ಆದರೆ ಅವರ ತಮ್ಮ ಕಂಠಸಿರಿಯಿಂದ ಎಲ್ಲರನ್ನೂ ಮರುಳು ಮಾಡಿದ್ದರು. ಅಪ್ಪ-ಅಮ್ಮನಿಲ್ಲದ ದ್ಯಾಮೇಶ ಹೂವು ಕಟ್ಟಿ, ಮಾರಾಟ ಮಾಡಿ, ಬದುಕು ಸಾಗಿಸುತ್ತಾರೆ. ಅವರ ಸಂಗೀತದ ಆಸಕ್ತಿ ಅವರನ್ನು ಸರಿಗಮಪ ವೇದಿಕೆಯವರೆಗೆ ಕರೆ ತಂದಿತ್ತು.
ಇದೀಗ ದ್ಯಾಮೇಶ್ ಅವರು ಜೀ ಕನ್ನಡದ ರಿಯಾಲಿಟಿ ಷೋ ಸರಿಗಮಪದ ಕುರಿತು ಅವನಿಯಾನ್ ನ್ಯೂಸ್ ಜೊತೆ ಮಾತನಾಡಿದ್ದಾರೆ. ಸ್ಪರ್ಧಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ರಿವೀಲ್ ಮಾಡಿದ್ದಾರೆ. ನಮಗೆ ಸರಿಯಾಗಿ ಪೇಮೆಂಟ್ ಕೊಟ್ಟಿದ್ದಾರೆ. ಷೋ ಮುಗಿದ ಮೇಲೆ ಪೇಮೆಂಟ್ ಕೊಡುತ್ತಾರೆ. ಆ ವಿಚಾರದಲ್ಲಿ ಯಾವುದೇ ಕೊರತೆಯಿಲ್ಲ ಎಂದಿದ್ದಾರೆ. ಜೀ ಕನ್ನಡದವರು ತಂದೆ- ತಾಯಿ ಪ್ರೀತಿಯನ್ನು ತೋರಿಸುತ್ತಾರೆ. ಕೆಲವು ಜನರು ಹೊರಗಡೆ ಏನೇನೋ ಕೆಟ್ಟದ್ದಾಗಿ ಹೇಳುತ್ತಾರೆ. ಆದರೆ ಇಲ್ಲಿ ಹಾಗೆ ನಡೆಯುವುದಿಲ್ಲ. ನಿಮಗೆ ಏನು ಇಷ್ಟನೋ ಆ ಊಟ ಕೊಡುತ್ತಾರೆ. ಉತ್ತರ ಕರ್ನಾಟಕದಿಂದ ಹಿಡಿದು ಚಿಕನ್ ವರೆಗೂ ಮಾಡಿ ಹಾಕುತ್ತಾರೆ. ಎಲ್ಲವೂ ಫ್ರೀ ಕೊಡುತ್ತಾರೆ. ಮಲಗಲು ಒಳ್ಳೆಯ ವ್ಯವಸ್ಥೆ ಮಾಡುತ್ತಾರೆ. ಇಂಥ ಷೋಗಳು ಸ್ಕ್ರಿಪ್ಟೆಡ್ ಎನ್ನುತ್ತಾರೆ, ಆದರೆ ಅದೆಲ್ಲಾ ನಿಜವಲ್ಲ. ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಾವು ಅಂದುಕೊಂಡಿದ್ದೇ ಬೇರೆ, ಅಲ್ಲಿ ನಡೆಯುವುದೇ ಬೇರೆ. ತುಂಬಾ ಚೆನ್ನಾಗಿ ಇದೆ. ಅಲ್ಲಿ ಬೆರೆತಾಗಲೇ ಗೊತ್ತಾಗುವುದು ಎಂದಿದ್ದಾರೆ ದ್ಯಾಮೇಶ್.
ಇನ್ನು ಈ ಕಾರ್ಯಕ್ರಮದಲ್ಲಿ ದ್ಯಾಮೇಶ್ ಅವರಿಗೆ ಅಮ್ಮ ಇಲ್ಲ ಎನ್ನುವ ಕೊರಗನ್ನು ಸರಿಗಮಪ ಷೋ ನೀಗಿಸಿತ್ತು. ಬಾಗಲಕೋಟೆಯಿಂದ ಒಂದಷ್ಟು ಮಹಿಳೆಯರು ತಮ್ಮ ಮನೆಯಲ್ಲಿ ಮಾಡಿಕೊಂಡು ಬಂದಿದ್ದ ವಿಶೇಷ ತಿನಿಸಗಳ ಜೊತೆಗೆ ವೇದಿಕೆಗೆ ಬಂದು ದ್ಯಾಮೇಶಗೆ ಕೈತುತ್ತು ನೀಡುವ ಮೂಲಕ ಅವರನ್ನು ಪುಳಕಿತರನ್ನಾಗಿಸಿದ್ದರು. ಜೀ ಕನ್ನಡಕ್ಕೆ ಬಂದಮೇಲೆ ಇಷ್ಟೆಲ್ಲಾ ನನಗೆ ಸಿಕ್ಕಿದೆ. ನಾನು ಸಾಯುವವರೆಗೂ ಚಿರಋಣಿಯಗಿರುತ್ತೇನೆ. ತಾಯಿ ಪ್ರೀತಿ ಸಿಗುವುದು ಅಷ್ಟು ಸುಲಭವಲ್ಲ, ನನಗೆ ಸಿಕ್ಕಿದೆ. ನಾನು ಪುಣ್ಯವಂತ" ಎಂದು ದ್ಯಾಮೇಶ್ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.