TV actress Sanchita Ugale news: ಕಿರುತೆರೆಯ ಪ್ರಸಿದ್ಧ ನಟಿ ಸಂಚಿತಾ ಉಗಾಲೆ ಅವರ ಸಾವು ಇಡೀ ಕಿರುತೆರೆ ಲೋಕ ಮತ್ತು ಅವರ ಅಭಿಮಾನಿಗಳನ್ನು ತೀವ್ರ ಆಘಾತಕ್ಕೀಡು ಮಾಡಿದೆ. ಕೇವಲ 22ನೇ ವಯಸ್ಸಿನಲ್ಲಿಯೇ ಸಂಚಿತಾ ಭಾನುವಾರ (ಜೂನ್ 14) ಆತ್ಮ*ಹ*ತ್ಯೆ ಮಾಡಿಕೊಳ್ಳುವ ಮೂಲಕ ಈ ಜಗತ್ತನ್ನೇ ತೊರೆದಿದ್ದಾರೆ. ಇಂತಹ ನೋವಿನ ಘಟನೆಯ ಬೆನ್ನಲ್ಲೇ ಅವರ ಕುಟುಂಬಸ್ಥರಿಂದ ಒಂದಾಂದ ಮೇಲೊಂದರಂತೆ ಪ್ರತಿಕ್ರಿಯೆಗಳು ಬರಲಾರಂಭಿಸಿದ್ದು, ಸಂಚಿತಾ ಅವರ ಸಹೋದರ ಆಕಾಶ್ ಸತೀಶ್ ಉಗಾಲೆ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಅವರು ತಮ್ಮ ತಂಗಿಯ ಸಾವಿನ ಪ್ರಕರಣವನ್ನು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಲಿಂಕ್ ಮಾಡಿದ್ದು, ಎರಡೂ ಪ್ರಕರಣಗಳ ನಡುವೆ ಹಲವು ಹೋಲಿಕೆಗಳಿವೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಆಕಾಶ್, ಸುಶಾಂತ್ ಸಿಂಗ್ ಮತ್ತು ಸಂಚಿತಾ ಇಬ್ಬರ ಮೇಲೂ ಚಿತ್ರರಂಗದಿಂದ ಅತಿಯಾದ ಒತ್ತಡವಿತ್ತು, ಈ ಕಾರಣಕ್ಕಾಗಿಯೇ ಇಬ್ಬರೂ ಇಂತಹ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೊಂದು ವಿಚಿತ್ರ ಕಾಕತಾಳೀಯ ಎಂದಿರುವ ಅವರು, "ಇಬ್ಬರ ಸಾವೂ ಜೂನ್ 14 ರಂದೇ ಸಂಭವಿಸಿದೆ, ಆದರೆ ಇಬ್ಬರ ನಡುವೆ ಆರು ವರ್ಷಗಳ ವ್ಯತ್ಯಾಸವಿದೆ" ಎಂದಿದ್ದಾರೆ. ಅಲ್ಲದೆ ಸಂಚಿತಾ ಆತ್ಮ*ಹ*ತ್ಯೆಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಕೊನೆಯ ಇನ್ಸ್ಟಾಗ್ರಾಮ್ ರೀಲ್ಸ್ನತ್ತ ಅವರು ಬೆರಳು ತೋರಿಸಿದ್ದಾರೆ. ಆ ರೀಲ್ಸ್ನಲ್ಲಿ ಸಂಚಿತಾ ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಪುಣ್ಯಸ್ಮರಣೆಯ ದಿನದಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ, 'ಇಂದು ಮತ್ತೆ ಜೂನ್ 14' ಎಂದು ಬರೆದುಕೊಂಡಿದ್ದರು.
ಇದನ್ನು ನೆನಪಿಸಿಕೊಂಡ ಆಕಾಶ್, "ಸುಶಾಂತ್ ಜೂನ್ 14, 2020 ರಂದು ಆತ್ಮ*ಹ*ತ್ಯೆ ಮಾಡಿಕೊಂಡರು. ಯಾಕೆ? ಏಕೆಂದರೆ ಬಾಲಿವುಡ್ ಚಿತ್ರರಂಗ ಅವರ ಮೇಲೆ ಅತಿಯಾದ ಒತ್ತಡ ಹೇರಿತು. ಅದೇ ರೀತಿ ನಿನ್ನೆ ನನ್ನ ತಂಗಿಯೂ ಇದೇ ಒತ್ತಡದ ಕಾರಣದಿಂದ ಆತ್ಮ*ಹ*ತ್ಯೆ ಮಾಡಿಕೊಂಡಿದ್ದಾಳೆ. ಅವಳು ಸಾಯುವ ಒಂದು ದಿನ ಮುಂಚೆ 'ಮತ್ತೆ ಜೂನ್ 14 ಬಂದಿದೆ' ಎಂದು ಪೋಸ್ಟ್ ಮಾಡಿದ್ದಳು, ಮರುದಿನವೇ ಅವಳು ಹೆಣವಾಗಿದ್ದಾಳೆ" ಎಂದು ಕಣ್ಣೀರಿಟ್ಟಿದ್ದಾರೆ. ಈ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಅವರು ದೇಶದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ವಿನಂತಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಜೂನ್ 14 ರಂದು ನಲಸೋಪಾರಾ ಈಸ್ಟ್ನ ಆಚೋಲೆ ಗ್ರಾಮದ ಸಾಯಿ ಸಂತೋಷಿ ಬಿಲ್ಡಿಂಗ್ನಲ್ಲಿರುವ ತನ್ನ ಮನೆಯ ಬೆಡ್ರೂಮ್ನಲ್ಲಿ ಸಂಚಿತಾ ಸಂಜೆ 7 ರಿಂದ 7:30 ರ ಅವಧಿಯಲ್ಲಿ ಸೀಲಿಂಗ್ ಫ್ಯಾನ್ಗೆ ಶಾಲಿನಿಂದ ನೇಣು ಬಿಗಿದುಕೊಂಡಿದ್ದಾರೆ. ಕುಟುಂಬಸ್ಥರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ತಂದೆ ಮಚ್ಚಿಂದ್ರ ಉಗಾಲೆ ನೀಡಿದ ದೂರಿನ ಮೇರೆಗೆ ಆಚೋಲೆ ಪೊಲೀಸರು ಅಕಸ್ಮಿಕ ಸಾವು (ADR) ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮ*ಹ*ತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾಗಿದ್ದು, ಆದರೆ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.