’ಕಾಸರಗೋಡು’ ಶಾಲೆಗೆ ಅರ್ಧ ದಶಕದ ಸಂಭ್ರಮ

By Web DeskFirst Published Oct 15, 2018, 4:12 PM IST
Highlights

ಸರ್ಕಾರಿ ಶಾಲೆ ಕಾಸರಗೋಡಿಗೆ 50 ದಿನದ ಸಂಭ್ರಮ | ಶತಕ ಬಾರಿಸುವತ್ತ ಮುನ್ನುಗ್ಗುತ್ತಿದೆ ಸರ್ಕಾರಿ ಶಾಲೆ | 

ಬೆಂಗಳೂರು (ಅ. 15): ಚಾಮರಾಪೇಟೆಯ ಕಲಾವಿದರ ಸಂಘದಲ್ಲಿ ಸಂಭ್ರಮ ಮನೆ ಮಾಡಿತ್ತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಇಡೀ ತಂಡ ಖುಷಿ ಖುಷಿಯಾಗಿ ಒಬ್ಬರ ಬೆನ್ನನ್ನು ಮತ್ತೊಬ್ಬರು ತಟ್ಟುತ್ತಾ, ದೊಡ್ಡ ಸ್ಮೈಲ್‌ನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾ ಸುತ್ತಾಡುತ್ತಿದ್ದರು.

ಮುಚ್ಚಿ ಹೋಗಲಿದ್ದ ಕನ್ನಡ ಶಾಲೆ ದತ್ತು ಪಡೆದ ರಿಷಬ್ ಶೆಟ್ಟಿ

ಚಿತ್ರದ ಸಾರಥಿ ರಿಷಬ್ ಶೆಟ್ಟಿ ಇಡೀ ಪತ್ರಿಕಾಗೋಷ್ಟಿಯ ಸಾರಥ್ಯವನ್ನೂ ವಹಿಸಿ ತಮ್ಮ ಚಿತ್ರಕ್ಕಾಗಿ ದುಡಿದ ಎಲ್ಲರನ್ನೂ ಮನಸಾರೆ ನೆನೆದರು. ಇದರ ಜೊತೆಗೆ ಚಿತ್ರ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿತು ಎನ್ನುವ ಸಂಭ್ರಮದ ಜೊತೆಗೆ ಕರ್ನಾಟಕದಲ್ಲಿ ಕನ್ನಡ ಚಿತ್ರವೊಂದು ತೆರೆಗೆ ಬರಲು ಏನೆಲ್ಲಾ ಅಡ್ಡಿಗಳಿವೆ, ಅವುಗಳಿಂದ ಇಂಡಸ್ಟ್ರಿಗೆ ಏನೆಲ್ಲಾ ಆಗುತ್ತಿದೆ ಎನ್ನುವ ತಮ್ಮ ಕಹಿ ಅನುಭವವನ್ನೂ ಹೊರ ಹಾಕಿದರು.

75  ಥಿಯೇಟರ್ ಸಿಕ್ಕಿದ್ದಷ್ಟೇ:

ಕನ್ನಡದ ಒಬ್ಬ ದೊಡ್ಡ ಸ್ಟಾರ್ ನಟರ ಚಿತ್ರಗಳು ನೂರಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಪ್ರದರ್ಶನವಾಗುವುದು ಸಾಮಾನ್ಯ ಮತ್ತು ಖುಷಿಯ ವಿಚಾರ. ಆದರೆ ತೆಲುಗು, ತಮಿಳು ಚಿತ್ರಗಳಿಗೆ ಇಲ್ಲಿ ೨೦೦ಕ್ಕೂ ಹೆಚ್ಚು ಸ್ಕ್ರೀನ್ಗಳು ಸಿಕ್ಕುತ್ತವೆ. ಆದರೆ ನಮ್ಮಂತೆ ಕನ್ನಡದ ಉಳಿವಿಗಾಗಿ ಚಿತ್ರ ಮಾಡಿದರೆ ಅದಕ್ಕೆ ಸಿಗುವುದು 75 ಸ್ಕ್ರೀನ್ ಮಾತ್ರ. ಇದು ಬೇಸರದ ವಿಚಾರ. ಆದರೂ ಕೂಡ ಕನ್ನಡದ ಪ್ರೇಕ್ಷಕರು ನಮ್ಮ ಕೈ ಬಿಟ್ಟಿಲ್ಲ.

ಸ್ಯಾಂಡಲ್‌ವುಡ್ ಸಿನಿಮಾಗಳು ಕೋಟಿ ಕ್ಲಬ್ ಸೇರಲು ಕಾರಣಗಳೇನು?

ಶೇ.15 ರಷ್ಟು ರೆಗ್ಯುಲರ್ ಆಡಿಯನ್ಸ್ ನಮ್ಮ ಚಿತ್ರ ನೋಡಿದ್ದರೆ, ಶೇ. 10 ರಷ್ಟು ಮಂದಿ ನನ್ನ ಕಿರಿಕ್ ಪಾರ್ಟಿ ಚಿತ್ರ ನೋಡಿದವರು ಇದನ್ನು ನೋಡಿದರು. ಉಳಿದವರೆಲ್ಲೂ ಹೊಸ ಪ್ರೇಕ್ಷಕರೇ ಆಗಿದ್ದಾರೆ. ಹಾಗಾಗಿ ನಾನು ಚಿತ್ರ ಮಾಡಿದ್ದು ಸಾರ್ಥಕ ಎನ್ನಿಸಿತು ಎಂದು ಹೇಳಿಕೊಂಡರು ರಿಷಬ್.

ಕನ್ನಡಕ್ಕಾಗಿ ಒಂದಾದ ಶೆಟ್ಟಿ ದ್ವಯರು:

‘ಒಂದು ಮೊಟ್ಟೆಯ ಕತೆ’ ಚಿತ್ರ ಕೊಟ್ಟ ರಾಜ್ ಬಿ. ಶೆಟ್ಟಿ ಸ.ಹಿ.ಪ್ರಾ. ಶಾಲೆಗೆ ಸೇರಿ ಸಂಭಾಷಣೆ ಬರೆದಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ರಾಜ್ ಬಿ. ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಒಂದಾಗಿರುವುದು. ಅದೂ ಕನ್ನಡದಲ್ಲಿ ಒಳ್ಳೆಯ ಚಿತ್ರ ಕೊಡಬೇಕು ಎನ್ನುವುದರ ಜೊತೆಗೆ ಭಿನ್ನ ಐಡಿಯಾ ಇರುವ ನಿರ್ದೇಶಕರು ಒಟ್ಟಾಗಿ ಸೇರಿಯೂ ಚಿತ್ರ ಮಾಡಬಹುದು ಎನ್ನುವ ಸಂದೇಶವನ್ನು ಚಿತ್ರರಂಗಕ್ಕೆ ಕೊಡಬೇಕು ಎಂದು. ಅಂದರೆ, ಇಂದು ಒಬ್ಬ ನಿರ್ದೇಶಕರ ಒಂದು ಚಿತ್ರ ಗೆದ್ದ ಕೂಡಲೇ ತನ್ನದೇ ತಂಡ ಕಟ್ಟಿಕೊಂಡು ಕೆಲಸ ಮಾಡಲು ಆರಂಭಿಸುತ್ತಾನೆ.

ಆದರೆ ಇದನ್ನು ಬ್ರೇಕ್ ಮಾಡಿ ಎರಡು ತಂಡಗಳು ಒಂದಾಗಬೇಕು. ಇದಾದಾಗ ಒಳ್ಳೆಯ ಚಿತ್ರಗಳು ಬರಲು ಸಾಧ್ಯ ಎಂದು ಸ್ವತಃ ರಾಜ್ ಬಿ. ಶೆಟ್ಟಿಯೇ ಹೇಳಿಕೊಂಡರು. ಪ್ರಮೋಷನ್ ನಿಲ್ಲಿಸಲ್ಲ: ೫೦ರ ಸಂಭ್ರಮ ಆಚರಿಸಿಕೊಳ್ಳುತ್ತಿರುವ
ಹಾಗೆ ಮುಂದೆ 100 ದಿನಗಳನ್ನೂ ಆಚರಿಸಿಕೊಳ್ಳಬೇಕು ಎನ್ನುವ ಆಸೆ ಇಡೀ ಚಿತ್ರತಂಡಕ್ಕಿದೆ.

ಹೀಗಂತ ಹೇಳಿಕೊಂಡ ರಿಷಬ್ ಒಂದು ಬಾರಿ ಪ್ರಮೋಷನ್ ನಿಲ್ಲಿಸಿದರೆ ಚಿತ್ರ ಅಲ್ಲಿಗೆ ನಿಂತು ಹೋಗುತ್ತೆ ಎನ್ನುವ ಭಯ ಇದೆ. ಇದು ನಮ್ಮ ಚಿತ್ರಕ್ಕೆ ಮಾತ್ರವಲ್ಲದೇ ಎಲ್ಲಾ ಕನ್ನಡ ಚಿತ್ರಗಳ ಸ್ಥಿತಿಯೂ ಹೀಗೇ ಇದೆ ಎಂದು ಹೇಳಿಕೊಳ್ಳುವುದರ ಜೊತೆಗೆ ಒಳ್ಳೆಯ ಚಿತ್ರ ಕೊಟ್ಟರೆ ಖಂಡಿತಾ ಪ್ರೇಕ್ಷಕರು ಥಿಯೇಟರ್ಗೆ ಬರುತ್ತಾರೆ.

ನಾನು ಒಂದು ಥಿಯೇಟರ್‌ಗೆ ಭೇಟಿ ನೀಡಿದಾಗ ಒಬ್ಬರು ವಯಸ್ಸಾದ ತಾತ ಸಿಕ್ಕಿ, ಕಳೆದ ಇಪ್ಪತ್ತು ವರ್ಷಗಳಲ್ಲಿ ನಾನು ಯಾವುದೇ ಸಿನಿಮಾ ನೋಡಿರಲಿಲ್ಲ. ಈಗ ಇದನ್ನು ನೋಡಬೇಕು ಎನ್ನಿಸಿ ಬಂದೆ, ನೋಡಿ ಖುಷಿಯಾಯಿತು ಎಂದು ಹರಸಿದರು. ನನಗೆ ಅಷ್ಟು ಸಾಕು ಎಂದು ಹೇಳಿಕೊಂಡರು ರಿಷಬ್. ಈ ಸಂಭ್ರಮದಲ್ಲಿ ಪ್ರಮೋದ್ ಶೆಟ್ಟಿ, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಿರ್ಮಾಪಕ ರವಿ ರೈ, ಛಾಯಾಗ್ರಾಹಕ ವೆಂಕಟೇಶ್ ಅಂಗುರಾಜ್, ಕೆ. ಕಲ್ಯಾಣ್ ಜತೆಗೆ ಇಡೀ ಚಿತ್ರತಂಡ ಪಾಲ್ಗೊಂಡಿತ್ತು.

click me!