ನಾನು, ರವಿಚಂದ್ರನ್‌ ಒಂದೇ ಶಾಲೆಯಲ್ಲಿ ಕಲಿತವರು: ಡಿ.ಕೆ.ಶಿವಕುಮಾರ್‌

By Govindaraj SFirst Published Nov 23, 2022, 6:37 AM IST
Highlights

ನಾನು ಮತ್ತು ರವಿಚಂದ್ರನ್‌ ಅವರು ಒಂದೇ ಶಾಲೆಯಲ್ಲಿ ಓದಿದವರು. ನಾವಿಬ್ಬರು ಸ್ನೇಹಿತರು. ನಾನೂ ಕೂಡ ಚಿತ್ರರಂಗದಿಂದ ಬಂದವನೇ. ಸಿನಿಮಾ ವಿತರಣೆ, ಪ್ರದರ್ಶನ ವಲಯದಲ್ಲಿ ಗುರುತಿಸಿಕೊಂಡಿದ್ದವನು. 

ಇಶಾನ್‌ ಹಾಗೂ ಆಶಿಕಾ ರಂಗನಾಥ್‌ ಜೋಡಿಯಾಗಿ ನಟಿಸಿರುವ ‘ರೇಮೊ’ ಚಿತ್ರ ನ.25ಕ್ಕೆ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡದಿಂದ ಅದ್ದೂರಿಯಾಗಿ ಪ್ರೀ ರಿಲೀಸ್‌ ಈವೆಂಟ್‌ ನಡೆಯಿತು. ಕಾಂಗ್ರೆಸ್‌ ಮುಖಂಡ ಡಿ ಕೆ ಶಿವಕುಮಾರ್‌, ಚೆಲುವರಾಯಸ್ವಾಮಿ, ಧ್ರುವ ನಾರಾಯಣ್‌, ಕ್ರೇಜಿಸ್ಟಾರ್‌ ರವಿಚಂದ್ರನ್‌, ನಟ ಸಚಿನ್‌ ಭಾಗವಹಿಸಿದ್ದರು. ಟೀಸರ್‌, ಟ್ರೇಲರ್‌ ಹಾಗೂ ಹಾಡುಗಳನ್ನು ಪ್ರದರ್ಶಿಸಲಾಯಿತು.

ನಂತರ ಮಾತನಾಡಿದ ಡಿ ಕೆ ಶಿವಕುಮಾರ್‌, ‘ನಾನು ಮತ್ತು ರವಿಚಂದ್ರನ್‌ ಅವರು ಒಂದೇ ಶಾಲೆಯಲ್ಲಿ ಓದಿದವರು. ನಾವಿಬ್ಬರು ಸ್ನೇಹಿತರು. ನಾನೂ ಕೂಡ ಚಿತ್ರರಂಗದಿಂದ ಬಂದವನೇ. ಸಿನಿಮಾ ವಿತರಣೆ, ಪ್ರದರ್ಶನ ವಲಯದಲ್ಲಿ ಗುರುತಿಸಿಕೊಂಡಿದ್ದವನು. ಮುಂದಿನ ದಿನಗಳು ಲೂಲೂ ಮಾಲ್‌ನಲ್ಲಿ 11 ಸ್ಕ್ರೀನ್‌, ನಾಯಂಡಹಳ್ಳಿ ಬಳಿ ಇರುವ ಹೊಸ ಮಾಲ್‌ನಲ್ಲಿ 7 ಸ್ಕ್ರೀನ್‌, ಮೈಸೂರು ರಸ್ತೆಯಲ್ಲಿ 6 ಸ್ಕ್ರೀನ್‌ಗಳನ್ನು ಆರಂಭಿಸುತ್ತಿದ್ದೇವೆ. ಆ ಮೂಲಕ ಚಿತ್ರರಂಗಕ್ಕೆ ಹೊಸ ಚಿತ್ರಮಂದಿರಗಳನ್ನು ಮುಂದಿನ ತಿಂಗಳಿನಿಂದ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಈಗ ಕನ್ನಡ ಚಿತ್ರರಂಗ ಹೊಸ ರೀತಿಯಲ್ಲಿ ಮುನ್ನಡೆಯುತ್ತಿದೆ. ಇಡೀ ಚಿತ್ರರಂಗಕ್ಕೆ ಒಳ್ಳೆಯದಾಗಬೇಕು. ರೇಮೊ ಸಿನಿಮಾ ಗೆಲ್ಲಲಿ’ ಎಂದು ಹಾರೈಸಿದರು.

ರಿಲೀಸ್‌ಗೂ ಮೊದಲೇ ಸ್ಯಾಂಡಲ್‌ವುಡ್‌ನಲ್ಲಿ ಇಶಾನ್ ಕಮಾಲ್, ಸ್ಟಾರ್ ನಿರ್ದೇಶಕರಿಂದ ಭರ್ಜರಿ ಆಫರ್

ಕ್ರೇಜಿಸ್ಟಾರ್‌ ರವಿಚಂದ್ರನ್‌ ಮಾತನಾಡಿ, ‘ಇಶಾನ್‌ ತೆರೆ ಮೇಲೆ ತುಂಬಾ ಚೆನ್ನಾಗಿ ಕಾಣುತ್ತಾನೆ. ರೇಮೊ ಚಿತ್ರವನ್ನು ಪ್ರೇಮಲೋಕ, ಕ್ರೇಜಿಸ್ಟಾರ್‌ ಅಂತಿದ್ದಾರೆ. ಕನ್ನಡಕ್ಕೆ ಒಬ್ಬರೇ ಕ್ರೇಜಿಸ್ಟಾರ್‌, ಒಂದೇ ಪ್ರೇಮಲೋಕ. ಆದರೆ, ಇಶಾನ್‌ ಕ್ರೇಜಿಸ್ಟಾರ್‌ಗೂ ಹೆಚ್ಚು. ನನ್ನ ಜತೆಗೆ ಸಿನಿಮಾ ಮಾಡಬೇಕು ಅಂತ 20 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದವರು ಸಿ ಆರ್‌ ಮನೋಹರ್‌. ನನ್ನ ಜತೆ ಅವರು ಸಿನಿಮಾ ಮಾಡಲು ಆಗಲಿಲ್ಲ. ಆದರೆ, ನಮ್ಮ ಸ್ನೇಹ ಹಾಗೆ ಇದೆ. ಸಿ ಆರ್‌ ಮನೋಹರ್‌ ಅವರ ತಮ್ಮ ಇಶಾನ್‌ಗೆ ಒಳ್ಳೆಯದಾಬೇಕು. ಅವರ ಅಣ್ಣನ ಒಳ್ಳೆಯತನದಿಂದ ಈ ಸಿನಿಮಾ ಗೆಲ್ಲುತ್ತದೆ. ಹಾಡುಗಳು, ಟ್ರೇಲರ್‌ ನೋಡಿದೆ. ಅದ್ಭುತವಾಗಿದೆ’ ಎಂದರು.

ಇಶಾನ್-ಆಶಿಕಾ ರಂಗನಾಥ್‌ ಜೋಡಿಗೆ ಆಕ್ಷನ್ ಕಟ್ ಹೇಳಿದ ಪವನ್ ಒಡೆಯರ್

‘ಮನೋಹರ್‌ ಹೆಸರಿನಲ್ಲಿ ಕೋಟಿ ಇದೆ. ಸಿ ಆರ್‌ ಅಂದ್ರೆ ಕ್ರೋರ್‌ ಮನೋಹರ್‌. ರೇಮೊ ಚಿತ್ರ ಅದ್ದೂರಿಯಾಗಿ ಮೂಡಿ ಬರಲು ಅವರೇ ಕಾರಣ’ ಎಂದಿದ್ದು ಪವನ್‌ ಒಡೆಯರ್‌. ‘ಇದು ನನ್ನ ಎರಡನೇ ಸಿನಿಮಾ. ತುಂಬಾ ಪ್ರೀತಿಯಿಂದ ಇಷ್ಟಪಟ್ಟು ರೂಪಿಸಿರುವ ಚಿತ್ರ. ನೀವು ನೋಡಿ ಬೆಂಬಲಿಸಿ’ ಎಂದರು ಇಶಾನ್‌. ನಾಯಕಿ ಆಶಿಕಾ ರಂಗನಾಥ್‌, ನೃತ್ಯ ನಿರ್ದೇಶಕ ಇಮ್ರಾನ್‌ ಸರ್ದಾರಿಯಾ, ಛಾಯಾಗ್ರಾಹಕ ವೈದಿ, ಕಾಸ್ಟ್ಯೂಮ್‌ ಡಿಸೈನ್‌ ಮಾಡಿರುವ ಪವನ್‌ ಒಡೆಯರ್‌ ಪತ್ನಿ ಅಪೇಕ್ಷಾ ಚಿತ್ರದ ಕುರಿತು ಮಾತನಾಡಿದರು.

click me!