
ನಂದ ಕಿಶೋರ್ (Nanda Kishore) ನಿರ್ದೇಶನ, ಮೋಹನ್ ಲಾಲ್ ನಟನೆಯ 'ವೃಷಭ' ಮುಂದಿನ ತಿಂಗಳು ಸಿನಿಮಾ ತೆರೆಗೆ ಬರಲಿದೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿ ಸಾಕಷ್ಟು ಗಮನ ಸೆಳೆದಿದೆ. ಚಿತ್ರದಲ್ಲಿ ಬಹಳಷ್ಟು ಕನ್ನಡ ಕಲಾವಿದರು, ತಂತ್ರಜ್ಞರು ಕೂಡ ಕೆಲಸ ಮಾಡಿದ್ದಾರೆ. ಇದೀಗ, ಆ ಚಿತ್ರದ ಕಲಾವಿದರೊಬ್ಬರು 'ನನಗೆ ಸಂಭಾವನೆ ಕೊಡದೇ ಮೋಸ ಮಾಡಿದ್ದಾರೆ, ಬಹಳ: ಬೇಸರವಾಗಿದೆ' ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟು ಹೇಳಿಕೊಂಡಿದ್ದಾರೆ. ಅವರು ನಟ ರಾಘವೇಂದ್ರ ಎಸ್. ಹೊಂಡದಕೇರಿ.
ಸೆಲೆಬ್ರೆಟಿ ಜಿಮ್ ಕೋಚ್ ಸಹ ಆಗಿರುವ ರಾಘವೇಂದ್ರ (Raghavendra S Hondadakeri) ಕನ್ನಡದಲ್ಲಿ 'ಕ್ರಾಂತಿ', 'ಕಾಟೇರ' ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಕಾಂತಾರ ಚಾಪ್ಟರ್ 1' ಚಿತ್ರದಲ್ಲೂ ನಟಿಸಿದ್ದಾರೆ ಎನ್ನಲಾಗ್ತಿದೆ. ಜೊತೆಗೆಮ ಕಲರ್ಸ್ ಕನ್ನಡದ ‘ಕ್ವಾಟ್ಲೆ ಕಿಚನ್’ ರಿಯಾಲಿಟಿ ಶೋದಲ್ಲಿ ನಟ ರಾಘವೇಂದ್ರ ಎಸ್ ಹೊಂಡದಕೇರಿ ಭಾಗಿಯಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ರಾಘವೇಂದ್ರ ವೀಡಿಯೋ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ. 'ನಾನು ಚಿತ್ರದಲ್ಲಿ ನಟಿಸೋಕೆ ಬಹಳ ಕಷ್ಟಪಟ್ಟೆ. ಐದಾರು ಗಂಟೆ ಮೇಕಪ್ ಹಾಕಿಕೊಳ್ಳಬೇಕಿತ್ತು. ಎಲ್ಲವನ್ನು ಮಾಡಿದೆ. ಆದರೆ ಕೊನೆಗೆ ಸಂಭಾವನೆ ಕೊಡದೇ ಮೋಸ ಮಾಡಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ನಾನು ತುಂಬಾ ಎಫರ್ಟ್ ಹಾಕಿ ಮೇಕಪ್ ಮಾಡಿ ನಟಿಸಿದ್ದೇನೆ. ಆದ್ರೆ ಈ ಸಿನಿಮಾದವರು ನನಗೆ ಸಂಭಾವನೆ ಕೊಟ್ಟಿಲ್ಲ. ನಮ್ಮವರೇ ನಮಗೆ ಸಪೋರ್ಟ್ ಮಾಡಿಲ್ಲ. ಮಲಯಾಂಳ ಹಾಗೂ ತೆಲುಗು ಟೀಮ್ಗೆ ಸಂಭಾವನೆ ಕ್ಲಿಯರ್ ಆಗಿದೆ, ಆದರೆ ಕನ್ನಡದ ಟೀಮ್ಗೆ ಮಾತ್ರ ಆಗಿಲ್ಲ. ನಮ್ಮನ್ನ ಹುಳ ತರ ಟ್ರೀಟ್ ಮಾಡಿದ್ದಾರೆ. ತುಂಬಾ ಬೇಜಾರ್ ಆಗಿದೆ. ಈ ಪಾತ್ರ ಮಾಡೋಕೆ ಮೇಕಪ್ ಮಾಡುವಾಗ ನಮ್ಮ ಫೇಸ್ ಬರ್ನ್ ಆಗ್ತಾ ಇತ್ತು. ರಾತ್ರಿಯಿಂದ ಬೆಳಗಿನ ಜಾವ 6 ಗಂಟೆವರೆಗೂ ಶೂಟಿಂಗ್ ಆಗುತ್ತಿತ್ತು.
ನನ್ನ ಕಣ್ಣುಗಳು ಹಾಳಾಯ್ತು, ಆಸ್ಪತ್ರೆಗೆ ಸೇರಿ ಸರಿ ಮಾಡಿಸಿಕೊಂಡೆ. 15 ದಿನ ಶೂಟಿಂಗ್ನಲ್ಲಿ ತುಂಬಾ ಅನುಭವಿಸಿದ್ದೇನೆ ಆದ್ರೆ ಇನ್ನೂ ಹಣ ಕೊಟ್ಟಿಲ್ಲ. ಒಂದುವರೆ ವರ್ಷ ಆದ್ರೂ ಇನ್ನೂ ಹಣ ಕೊಟ್ಟಿಲ್ಲ. ಹೊಸ ಪ್ರೊಡಕ್ಷನ್ ಟೀಂ ಬಂದಿದೆ, ಇನ್ನು ಮೂರು ದಿನ ಶೂಟಿಂಗ್ ಇದೆ ಅಂದ್ರು. ಆದ್ರೆ ಅವರು ಸ್ಟ್ರೈಟ್ಆಗಿ ಹೇಳಿದ್ರು ನಾವು ಕೊಡೋಕೆ ಆಗಲ್ಲ ಅಂತ.. ನನಗೆ 5 ಲಕ್ಷ ಸಿಗಬೇಕಿತ್ತು, ಆದ್ರೆ 2 ಲಕ್ಷ ಆದ್ರು ಕೊಡಿ ಅಂದ್ರೂ ಕೊಡಲಿಲ್ಲ. ಸಿನಿಮಾ ಸೆಟ್ನಲ್ಲಿ ಕೆಲಸ ಮಾಡೋರಿಗೂ ಇನ್ನೂ ಹಣ ಕೊಟ್ಟಿಲ್ಲ.
ಒಬ್ಬ ನಟನಾಗಿ ಪ್ರೋತ್ಸಾಹ, ಮೆಚ್ಚುಗೆ ಇಲ್ಲದಿದ್ದರೆ ಬೇಸರವಾಗುತ್ತದೆ. ಒಂದು ಹುಳದ ರೀತಿ ನಿಮ್ಮನ್ನು ನಡೆಸಿಕೊಂಡರೆ ಬೇಸರವಾಗುತ್ತದೆ. ಈ ಮೇಕಪ್ ನೋಡಿ. ಇದು ಅಷ್ಟು ಸುಲಭವಲ್ಲ. ಇದನ್ನು ಹಾಕಿಕೊಳ್ಳಲು 6 ಗಂಟೆ ಸಮಯ ಬೇಕು. ಅದನ್ನು ಬೆಳಗಿನ ಜಾವದವರೆಗೂ ಇಟ್ಟುಕೊಳ್ಳಬೇಕಿತ್ತು. ಆದರೆ ನಾನು ಡೆಡಿಕೇಶನ್ ಕೊಟ್ಟು ಮಾಡಿದ್ದೆ. ಕೊನೆಗೆ ನನಗೆ ಒಂದು ರೂಪಾಯಿ ಕೂಡ ಕೊಡಲಿಲ್ಲ. ಅದು ಬೇಸರ ತಂದಿದೆ" ಎಂದು ರಾಘವೇಂದ್ರ ಹೇಳಿದ್ದಾರೆ.
'ನಾನು ಬಹಳ ದಿನಗಳಿಂದ ಈ ರೀತಿ ವೀಡಿಯೋ ಮಾಡಿ ಮಾತನಾಡಬೇಕು ಎಂದುಕೊಂಡಿದ್ದೆ. ಆದರೆ ಮನಸ್ಸು ಬಂದಿರಲಿಲ್ಲ, ಈಗ ಮಾಡುತ್ತಿದ್ದೇನೆ' ಎಂದು ರಾಘವೇಂದ್ರ ಹೇಳಿದ್ದಾರೆ. "ನಾನು ಈ ವೀಡಿಯೋ ಮಾಡಿರುವುದು 'ವೃಷಭ' ಚಿತ್ರದ ಬಗ್ಗೆ. ಮೋಹನ್ ಲಾಲ್ ನಟನೆಯ ಚಿತ್ರಕ್ಕೆ ನಂದ ಕಿಶೋರ್ ಆಕ್ಷನ್ ಕಟ್ ಹೇಳಿದ್ದಾರೆ. 2 ವರ್ಷಗಳ ಹಿಂದೆ ಕರೆ ಮಾಡಿ 'ಈ ಚಿತ್ರದಲ್ಲಿ ಪ್ರಮುಖ ಪಾತ್ರ ಇದೆ, ವಿಲನ್ ಪಾತ್ರ ಎಂದರು. ಅದಕ್ಕೆ ನೀವು ಪ್ರಾಸ್ಥೆಟಿಕ್ ಮೇಕಪ್ ಹಾಕಿಕೊಳ್ಳಬೇಕು, ಇದೇ ಮೊದಲ ಬಾರಿಗೆ ಭಾರತದಲ್ಲಿ ಮಾಡ್ತಿರೋದು' ಅಂದ್ರು. ಎಲ್ಲದ್ದಕ್ಕೂ ಒಪ್ಪಿದೆ. ಮೇಕಪ್ ಟೆಸ್ಟ್ ಆಯ್ತು. ಬಳಿಕ 15 ದಿನಗಳ ಕಾಲ ಶೂಟಿಂಗ್ ಮಾಡಿದ್ರು. ಕಾರಣಾಂತರಗಳಿಂದ ಸಿನಿಮಾ ನಿಂತಿತ್ತು" ಎಂದಿದ್ದಾರೆ. '
'ವೃಷಭ' ಚಿತ್ರದ ಪ್ರೊಡಕ್ಷನ್ ಚೇಂಜ್ ಆಯ್ತು. ಮತ್ತೆ ಸಿನಿಮಾ ಶುರುವಾದಾಗ ಫೋನ್ ಮಾಡಿ 3 ದಿನಗಳ ಕಾಲ್ಶೀಟ್ ಕೇಳಿದ್ರು. "ನಾನು ನನ್ನ ಸಂಭಾವನೆ ಕೊಟ್ಟರೆ ಬರ್ತೀನಿ' ಅಂದೆ. ಅದಕ್ಕೆ ಅವ್ರು ಒಪ್ಪದೇ 'ಹಳೇ ಪ್ರೊಡಕ್ಷನ್ಗೂ ನಮಗೂ ಸಂಬಂಧ ಇಲ್ಲ. 30 ಸಾವಿರ ರೂ. ಕೊಡ್ತೀವಿ ಬಂದು ಮಾಡಿ' ಅಂದ್ರು. ನಾನು ಒಪ್ಪದೇ ಇದ್ದಾಗ 'ಇದು ಪ್ರಾಸ್ಥೆಟಿಕ್ ಮೇಕಪ್, ನೀವು ಇಲ್ಲದಿದ್ದರೆ ಬೇರೆಯವರಿಂದ ಮಾಡಿಸುತ್ತೇವೆ' ಅಂದ್ರು. 'ನನಗೆ ಸ್ವಾಭಿಮಾನ, ನಾನು ಮಾಡಲ್ಲ' ಎಂದುಬಿಟ್ಟೆ. ಆದರೆ ಇವತ್ತಿಗೂ ನನ್ನ ಹಣ ಬಂದಿಲ್ಲ. 5 ಲಕ್ಷ ರೂ. ಕೊಡಬೇಕಿತ್ತು, ಬೇರೆ ಯಾರೊಬ್ಬರು ಧೈರ್ಯ ಮಾಡಿ ಮಾತನಾಡಲಿಲ್ಲ' ಎಂದು ನಟ ರಾಘವೇಂದ್ರ ವಿವರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.