ಚಿತ್ರರಂಗ ಎಂದರೆ ಬಣ್ಣದ ಲೋಕ ಎಂದೇ ಹಲವರ ಅನಿಸಿಕೆ. ಆದರೆ ಅಲ್ಲಿರುವ ಕಲಾವಿದರ ವೈಯಕ್ತಿಕ ಬದುಕು ಮತ್ತು ಮಾನಸಿಕ ಹೋರಾಟಗಳು ಅಷ್ಟು ಸುಲಭವಾಗಿರುವುದಿಲ್ಲ. ಇತ್ತೀಚಿನ ಅತ್ಯುತ್ತಮ ಉದಾಹರಣೆ ಎಂದರೆ ನಟಿ ಸಾತ್ವಿಕಾ. ಹೌದು. ಸಾತ್ವಿಕಾ
ತಮ್ಮ ಕೌಟುಂಬಿಕ ಏರುಪೇರುಗಳು, ತಂದೆಯೊಂದಿಗೆ ಕಲಹ, ತಾವೊಬ್ಬರೇ ಎದುರಿಸಿದ ಡಿಪ್ರೆಷನ್ (ಖಿನ್ನತೆ) ಜರ್ನಿಯನ್ನ ಅತ್ಯಂತ ಧೈರ್ಯದಿಂದ ಹಂಚಿಕೊಂಡಿದ್ದು, ಬಹುಶಃ ಅವರ ಬದುಕಿನ ಹೋರಾಟ ಇತರರಿಗೆ ಮಾದರಿಯಾಗಬಹುದು.
ಸಾತ್ವಿಕಾ ಅವರ ಬದುಕಿನಲ್ಲಿ ಅವರ ತಾಯಿ ರೇಖಾ ದಾಸ್ ಅವರದ್ದೇ ದೊಡ್ಡ ಪಾತ್ರ. "ನನ್ನ ಲೈಫ್ ಮುಗಿದುಹೋಯಿತು, ಆದರೆ ನನ್ನ ಮಗಳ ಕನಸುಗಳು ನನಸಾಗಬೇಕು, ಅವಳು ದೊಡ್ಡ ನಟರ ಜೊತೆ ನಟಿಸಬೇಕು" ಎಂಬುದು ಅವರ ತಾಯಿಯ ಆಸೆ. ಸಾತ್ವಿಕಾ ಸ್ವತಃ ಹೇಳುವಂತೆ, ಅವರು ನಟಿಯಾಗಿದ್ದೇ ಅವರ ತಾಯಿಗಾಗಿ. ಚಿತ್ರರಂಗಕ್ಕೆ ಬಂದು ತಾವೇನೋ ಸಾಧಿಸಬೇಕು ಎಂಬ ದೊಡ್ಡ ಆಸೆ ಅವರಿಗೆ ಮೊದಲಿನಿಂದ ಇರಲಿಲ್ಲ. ಆದರೆ, ತಾಯಿಯ ಆಸೆಯನ್ನು ಗೌರವಿಸುವುದಕ್ಕಾಗಿ 100% ಪರಿಶ್ರಮ ಹಾಕುತ್ತಿದ್ದಾರೆ.
ಸಾತ್ವಿಕಾ ನಟನೆಯ 'ಹುಚ್ಚಾಟು' ಸಿನಿಮಾ ತೆರೆಕಂಡಿದ್ದು 2018ರಲ್ಲಿ. ಆ ಸಮಯದಲ್ಲಿ ಅವರ ತಂದೆ ಓಂ ಪ್ರಕಾಶ್ ಅವರ ಡೈರೆಕ್ಷನ್ನಲ್ಲಿ ಕೆಲಸ ಮಾಡಿದ್ದರೂ, ಅಲ್ಲಿ ಅವರಿಗೆ ಮಗಳ ಸ್ಥಾನ ಸಿಗಲಿಲ್ಲ, ಕೇವಲ ಒಬ್ಬ ನಟಿಯ ತರಹಷ್ಟೇ ನಡೆಸಿಕೊಳ್ಳಲಾಯಿತು. ಆ ದಿನಗಳಲ್ಲಿ ಸಾತ್ವಿಕಾಗೆ ಎಮೋಷನಲ್ ಇಂಟೆಲಿಜೆನ್ಸ್ ಇರಲಿಲ್ಲ. ಅತಿಯಾದ ಭಾವನಾತ್ಮಕ ಜೀವಿ ಆಗಿದ್ದರಿಂದ ಬದುಕಿನ ಕಠಿಣ ಸತ್ಯಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
2018ರ ಕೊನೆಯ ವೇಳೆಗೆ ಅವರ ಮಾನಸಿಕ ಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ, ಬದುಕನ್ನು ಕೊನೆಗಾಣಿಸಬೇಕು ಎನ್ನುವಂತಹ ಆಲೋಚನೆಗಳು ತಲೆಯಲ್ಲಿ ಓಡುತ್ತಿದ್ದವು. ಇವರ ಈ ಬದಲಾವಣೆ ಮತ್ತು ರೋಗಲಕ್ಷಣಗಳನ್ನು ಗುರುತಿಸಿದ್ದು ಇವರ ಆತ್ಮೀಯ ಗೆಳತಿ. ಆಕೆಯ ಸಹಾಯದಿಂದ 2019ರಲ್ಲಿ ಸಾತ್ವಿಕಾಗೆ ತೀವ್ರವಾದ ಡಿಪ್ರೆಷನ್ (ಖಿನ್ನತೆ) ಇರುವುದು ಪತ್ತೆಯಾಯಿತು.
ಖಿನ್ನತೆ ಪತ್ತೆಯಾದ ನಂತರ ಸುಮಾರು 9 ತಿಂಗಳಿಂದ ಒಂದು ವರ್ಷದವರೆಗೆ ಸಾತ್ವಿಕಾ ವೈದ್ಯಕೀಯ ಚಿಕಿತ್ಸೆ ಮತ್ತು ಕೌನ್ಸಿಲಿಂಗ್ ಪಡೆದರು. ಇವರ ಕುಟುಂಬದ ವೈದ್ಯರು ಇವರ ಬೆನ್ನಿಗೆ ನಿಂತು, "ಇದು ಕೇವಲ ಒಂದು ಜ್ವರ ಬಂದ ಹಾಗೆ, ಸರಿಹೋಗುತ್ತದೆ" ಎಂದು ಧೈರ್ಯ ತುಂಬಿದರು.
ವೈದ್ಯರ ಚಿಕಿತ್ಸೆ ಮತ್ತು ಗೆಳೆಯರ ಬೆಂಬಲದಿಂದ 2020ರ ವೇಳೆಗೆ ಸಾತ್ವಿಕಾ ಸಂಪೂರ್ಣವಾಗಿ ಗುಣಮುಖರಾದರು. ಅಲ್ಲಿಯವರೆಗೆ ಕೇವಲ ಭಾವನೆಗಳಿಗೆ ಕರಗುತ್ತಿದ್ದ ಹೆಣ್ಣುಮಗಳು, 2020ರ ನಂತರ ಅತ್ಯಂತ ಪ್ರಾಯೋಗಿಕವಾಗಿ (Practical) ಮತ್ತು ಬುದ್ಧಿವಂತಿಕೆಯಿಂದ ಯೋಚಿಸಲು ಶುರುಮಾಡಿದರು. ಅವರ ಬದುಕಿನ ನಿಜವಾದ ಪಯಣ ಆರಂಭವಾಗಿದ್ದೇ ಅಲ್ಲಿಂದ.
ತಂದೆ ಓಂ ಪ್ರಕಾಶ್ ಅವರ ಜೊತೆಗಿನ ಸಂಬಂಧದ ಬಗ್ಗೆ ಸಾತ್ವಿಕಾ ಯಾವುದೇ ಮುಚ್ಚುಮರೆ ಇಲ್ಲದೆ ಮಾತನಾಡಿದ್ದಾರೆ. “ಕೇವಲ ಜನ್ಮ ನೀಡಿದ ತಕ್ಷಣ ಯಾರೂ ಅಪ್ಪ ಆಗಲು ಸಾಧ್ಯವಿಲ್ಲ. ಆ ಸ್ಥಾನವನ್ನು ತುಂಬುವ ಜವಾಬ್ದಾರಿ ಅವರ ಮೇಲಿರುತ್ತದೆ” ಎನ್ನುವ ಸಾತ್ವಿಕಾ, ಕಳೆದ ಹಲವು ವರ್ಷಗಳಿಂದ ತಂದೆಯ ಜೊತೆ ಯಾವುದೇ ಸಂಪರ್ಕದಲ್ಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಅವರಿಂದ ಯಾವುದೇ ಆರ್ಥಿಕ ಸಹಾಯವೂ ಸಿಕ್ಕಿಲ್ಲ ಮತ್ತು ಮುಂದಿನ ದಿನಗಳಲ್ಲಿ ಅವರ ಯಾವುದೇ ಸಾಫ್ಟ್ ಕಾರ್ನರ್ ತಮಗೆ ಅಗತ್ಯವಿಲ್ಲ ಎಂದಿದ್ದಾರೆ. ಮದುವೆಯ ಸಂದರ್ಭದಲ್ಲಿ ತಂದೆ ಬಂದು ಕನ್ಯಾದಾನ ಮಾಡಬೇಕು ಎನ್ನುವ ತಾಯಿಯ ಆಸೆಗೆ ಸಾತ್ವಿಕಾ ಒಪ್ಪುತ್ತಿಲ್ಲ. ತಮಗೆ ಕಷ್ಟವಿದ್ದಾಗ ಜೊತೆಗಿರದವರು, ಈಗ ಬೇಕಾಗಿಲ್ಲ ಎನ್ನುವುದು ಅವರ ಖಡಕ್ ನಿಲುವು.
ಇವತ್ತು ಸಾತ್ವಿಕಾ ಅವರ ಸುತ್ತ ಮುತ್ತ ಅವರನ್ನೇ ಜೀವ ಎನ್ನುವ ಅದ್ಭುತ ಗೆಳೆಯರ ಬಳಗವಿದೆ. ಸಿನಿಮಾ ಹಿಟ್ ಆಗಲಿ, ಫ್ಲಾಪ್ ಆಗಲಿ ಅವರ ಆಫ್-ಸ್ಕ್ರೀನ್ ಬದುಕನ್ನು ಪ್ರೀತಿಸುವ ಜನರಿದ್ದಾರೆ. ಡಿಪ್ರೆಷನ್ನಿಂದ ಹೊರಬಂದ ನಂತರ ಸಾತ್ವಿಕಾ ತಾವೊಬ್ಬ ಸಂಪೂರ್ಣ ಬದಲಾದ, ಬಲಿಷ್ಠ ವ್ಯಕ್ತಿಯಾಗಿದ್ದಾರೆ.
"ಬದುಕಿನಲ್ಲಿ ಕಷ್ಟಗಳು ಬಂದಾಗ ಯಾರೂ ಕೊರಗಿ ಕೊರಗಿ ಕೂರಬಾರದು. ಮಾನಸಿಕ ತೊಂದರೆಗಳಿದ್ದರೆ ವೈದ್ಯರ ಸಹಾಯ ಪಡೆದು ಧೈರ್ಯವಾಗಿ ಎದ್ದು ನಿಲ್ಲಬೇಕು" ಎನ್ನುತ್ತಾರೆ ಸಾತ್ವಿಕಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.