
ತಮಿಳು ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಕ್ಯಾಮರಾ ವರ್ಕ್ ಮತ್ತು ರಿಯಲಿಸ್ಟಿಕ್ ದೃಶ್ಯಗಳಿಂದ ಚೆಳಿಯನ್ ತಮ್ಮದೇ ಆದ ಗುರುತು ಮೂಡಿಸಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾಟೋಗ್ರಾಫರ್ ಹಾಗೂ ನಿರ್ದೇಶಕರಾದ ಇವರ ಸಾವು ಚಿತ್ರರಂಗ ಮತ್ತು ಅಭಿಮಾನಿಗಳಿಗೆ ತೀವ್ರ ದುಃಖ ತಂದಿದೆ. 'ಪರದೇಶಿ', 'ಕಲ್ಲೂರಿ', 'ತೆನ್ಮೇರ್ಕು ಪರುವಕಾಟ್ರು', 'ಜೋಕರ್' ನಂತಹ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರಗಳಲ್ಲಿ ತಮ್ಮ ಛಾಯಾಗ್ರಹಣದ ಮೂಲಕ ಗಮನ ಸೆಳೆದಿದ್ದರು. ಅವರ ಕ್ಯಾಮರಾ ಕಥೆಯ ಭಾವನೆಗಳನ್ನು ಸಹಜವಾಗಿ ಪ್ರೇಕ್ಷಕರಿಗೆ ತಲುಪಿಸುತ್ತಿತ್ತು.
ಚೆಳಿಯನ್ ಕೇವಲ ಸಿನಿಮಾಟೋಗ್ರಾಫರ್ ಆಗಿ ಮಾತ್ರವಲ್ಲ, ನಿರ್ದೇಶಕರಾಗಿಯೂ ದೊಡ್ಡ ಸಾಧನೆ ಮಾಡಿದ್ದರು. ಅವರು ನಿರ್ದೇಶಿಸಿದ 'ಟು-ಲೆಟ್' ಸಿನಿಮಾ ರಾಷ್ಟ್ರ ಪ್ರಶಸ್ತಿ ಗೆದ್ದಿತ್ತು. ಅಷ್ಟೇ ಅಲ್ಲ, ವಿಶ್ವದ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿತ್ತು. ಈ ಚಿತ್ರದ ಮೂಲಕ ತಮಿಳು ಸಿನಿಮಾದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ನಿರ್ದೇಶಕರಲ್ಲಿ ಒಬ್ಬರಾಗಿದ್ದರು.
ಶಿವಗಂಗಾ ಜಿಲ್ಲೆಯವರಾದ ಚೆಳಿಯನ್, ಇಂಜಿನಿಯರಿಂಗ್ ಮುಗಿಸಿ ಸಿನಿಮಾಟೋಗ್ರಾಫರ್ ಆಗುವ ಆಸೆಯಿಂದ ಖ್ಯಾತ ಛಾಯಾಗ್ರಾಹಕ ಪಿ.ಸಿ. ಶ್ರೀರಾಮ್ ಅವರ ಬಳಿ ಸಹಾಯಕರಾಗಿ ಸೇರಿಕೊಂಡರು. ಬಾಲಾಜಿ ಶಕ್ತಿವೇಲ್ ನಿರ್ದೇಶನದ 'ಕಲ್ಲೂರಿ' ಚಿತ್ರದ ಮೂಲಕ ಸಿನಿಮಾಟೋಗ್ರಾಫರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಹಲವು ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಅವರು, 'ದಿ ಫಿಲ್ಮ್ ಸ್ಕೂಲ್' ಎಂಬ ಸಿನಿಮಾ ತರಬೇತಿ ಸಂಸ್ಥೆಯನ್ನು ನಡೆಸುತ್ತಿದ್ದರು.
ತಮ್ಮ ಕೃತಿಗಳ ಮೂಲಕ ತಮಿಳು ಚಿತ್ರರಂಗಕ್ಕೆ ಹೊಸ ದೃಶ್ಯಭಾಷೆಯನ್ನು ಪರಿಚಯಿಸಿದ ಚೆಳಿಯನ್ ಅವರ ನಿಧನ, ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಇತ್ತೀಚೆಗೆ ಭಾರತೀರಾಜ ಮತ್ತು ಭಾಗ್ಯರಾಜ್ ಅವರಂತಹ ಇಬ್ಬರು ದಿಗ್ಗಜರ ಸಾವಿನಿಂದ ಚೇತರಿಸಿಕೊಳ್ಳುತ್ತಿರುವ ತಮಿಳು ಸಿನಿಮಾ ಅಭಿಮಾನಿಗಳಿಗೆ ಚೆಳಿಯನ್ ಅವರ ಸಾವು ಮತ್ತೊಂದು ದೊಡ್ಡ ಆಘಾತವನ್ನು ನೀಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.