
ರಿಷಬ್ ಶೆಟ್ಟಿ ಚಾಮುಂಡಿ ಬೆಟ್ಟ ಭೇಟಿ, ಮೈಸೂರು ವಿಶೇಷ ಇಲ್ಲಿದೆ!
ಕಾಂತಾರ ಚಾಪ್ಟರ್ 1(Kantara Chapter 1) ರ ಯಶಸ್ಸಿನ ಬಳಿಕ, ನಿರ್ದೇಶಕ-ನಟ ರಿಷಬ್ ಶೆಟ್ಟಿ (Rishab Shetty) ಮೈಸೂರಿನ ಚಾಮುಂಡಿ ಬೆಟ್ಟಕ್ಕೆ (Mysore Chamundi Betta) ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ನಂತರ ಅಲ್ಲಿನ ಗಾಯತ್ರಿ ಚಿತ್ರಮಂದಿರದಲ್ಲಿ ಅಭಿಮಾನಿಗಳನ್ನು ಭೇಟಿಯಾಗಿ, ಚಿತ್ರದ ಯಶಸ್ಸಿಗೆ ಎಲ್ಲಾ ಕನ್ನಡಿಗರನ್ನು ಹೊಗಳಿ ಕೃತಜ್ಞತೆ ಅರ್ಪಿಸಿದ್ದಾರೆ. ದೈವ, ದೈವಾರಾಧನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ ರಿಷಬ್ ಶೆಟ್ಟಿಯವರು 'ನಮ್ಮನ್ನ ನೋಡಲಿಕ್ಕೆ ನೀವು ಬರಬಹುದು. ನಿಮ್ಮನ್ನ ನೋಡಲಿಕ್ಕೆ ನಾವು ಬರಬಾರದಾ?' ಎಂದು ಕಾಂತಾರ ಡೈಲಾಗ್ ಹೊಡೆದು ರಂಜಿಸಿದರು.
ರಿಷಬ್ ಶೆಟ್ಟಿಯವರು ಬಳಿಕ ಮಾತನಾಡಿ, 'ಇಡೀ ಚಿತ್ರತಂಡ ಮೂರು ವರ್ಷದ ಕಷ್ಟ, ಟೀ ಕಾಫಿ ಕೊಡುವ ಹುಡುಗರಿಂದ ಎಲ್ಲರ ಶ್ರಮ ಹಾಕಿದ್ದಾರೆ. ಕಲಾವಿದರಾಗಿ ನಾವು ಇದನ್ನ ತುಂಬಾ ಎಂಜಾಯ್ ಮಾಡಿದ್ದೇವೆ. ನಾವು ಈ ಕ್ಷಣಗಳನ್ನ ಹೆಚ್ಚು ಸಂಭ್ರಮಪಡುತ್ತೇವೆ. ಹತ್ತಾರು ಅಡೆತಡೆ, ಕಷ್ಟ ನಷ್ಟ ಮೀರಿ ಒಂದು ಹಂತ ತಲುಪಿದ್ದೇವೆ. ಒಂದು ದೈವದ ಚಿತ್ರ ಹೇಳುವಾಗ ಪರೀಕ್ಷೆ ಸಹಜ. ಅಣ್ಣಾವು ಹೇಳಿದ್ರು ಅಭಿಮಾನಿಗಳನ್ನ ತಲುಪುವುದು ಕಷ್ಟ ಅಂತ. ಅದರಂತೆ ನಾವು ಏಳು ಬೀಳು ದಾಟಿ ಅಭಿಮಾನಿಗಳ ಆಶೀರ್ವಾದ ನೋಡ್ತಿದ್ದೇವೆ' ಎಂದಿದ್ದಾರೆ.
ಅಲ್ಲಿ, ಮೈಸೂರಿನಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರು 'ರಾಡಿಸನ್ ಬ್ಲೂ ಪ್ಲಾಜಾ' ಹೊಟಲ್ನಲ್ಲಿ ಇದ್ದು, ಅಲ್ಲಿ ಅವರಿಗೆ ವಿಶೇಷ ಆದರಾತಿಥ್ಯ ನೀಡಲಾಗಿದೆ. ಜೊತೆಗೆ, ಅವರಿಗೆ ಕೃತಜ್ಞತೆ ಸಲ್ಲಿಸಲು 'ಥ್ಯಾಂಕ್ಸ್' ಕೋರಿ ಡಿಸೈನ್ ಮಾಡಿರುವ ವಿಶೇಷ ಬೆಡ್ ನೀಡಲಾಗಿದೆ. ಅದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಸೆಲ್ಪಿಗೆ ಮುಗಿಬಿದ್ದ ಪ್ಯಾನ್ಸ್!
ರಿಷಟ್ ಶೆಟ್ಟಿ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಅಲ್ಲಿ ಸೆಲ್ಪಿಗೆ ಮುಗಿಬಿದ್ದರು. ಬೇಸರಪಟ್ಟುಕೊಳ್ಳದೇ ಕೆಲವರೊಂದಿಗೆ ರಿಷಬ್ ಶೆಟ್ಟಿ ಸೆಲ್ಪಿ ತೆಗೆಸಿಕೊಂಡರು. ಬಳಿಕ, ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು, ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಟ ರಿಷಬ್ ಶೆಟ್ಟಿ, 'ಇದೀಗ ಚಾಮುಂಡೇಶ್ವರಿ ದರ್ಶನ ಪಡೆದಿದ್ದೇನೆ. ಕಾಂತಾರ ಚಾಪ್ಟರ್1 ಯಶಸ್ವಿಯಾಗಿದೆ. ನಮ್ಮ ತಂಡದ ಶ್ರಮವನ್ನ ಜನರು ಒಪ್ಪಿದ್ದಾರೆ. ನಮ್ಮ ಸಿನಿಮಾದ ಯಶಸ್ಸು ಮೊದಲು ಕನ್ನಡಿಗರಿಗೆ ಸಲ್ಲಬೇಕು, ಕಾಂತಾರ ಬಂದಾಗ ಜನರು ಇಷ್ಟ ಪಟ್ಟಿದ್ದರು. ಇದೀಗ ಕಾಂತಾರ ಚಾಪ್ಟರ್ 1 ಸಿನಿಮಾಗೂ ಹರಿಸಿದ್ದಾರೆ' ಎಂದಿದ್ದಾರೆ.
'ಈ ಸಿನಿಮಾದ ಗಳಿಕೆಯ ಬಗ್ಗೆ ನಾನು ಮಾತನಾಡುವುದಿಲ್ಲ, ಅದು ನನ್ನ ಕೆಲಸ ಅಲ್ಲ' ಎಂದರು. ಜೊತೆಗೆ, 'ನಾನು ದೈವವನ್ನ ನಂಬುವಂತವನು. ದೈವದ ಅನುಮತಿ ಪಡೆದು ಸಿನಿಮಾ ಮಾಡಿದ್ದೇನೆ. ನಾಡಿನ ಜನತೆ ತುಂಬಾ ಅದ್ಭುತವಾತ ಯಶಸ್ಸು ಕೊಟ್ಟಿದ್ದಾರೆ. ಕನ್ನಡಿಗರಿಗೆ ಧನ್ಯವಾದ ಅರ್ಪಿಸುತ್ತೇನೆ...' ಎಂದಿದ್ದಾರೆ.
'ಸಿನಿಮಾದ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿರಬಹುದು. ಆದರೆ ದೇವರ ವಿಚಾರಗಳನ್ನ ಸಿನಿಮಾದಲ್ಲಿ ಮಾತ್ರ ಮಾತನಾಡುತ್ತೇನೆ. ಯಾರು ಏನು ಬೇಕಾದರೂ ಮಾತನಾಡಲಿ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇಡೀ ತಂಡದ ಮೇಲೆ ದೈವದ ಆಶೀರ್ವಾದ ಇದೆ. ಎಲ್ಲಿಯೂ ತಪ್ಪುಗಳು ಆಗದಂತೆ ಹಿರಿಯರ ಮಾರ್ಗದರ್ಶನ ಪಡೆದು ಸಿನಿಮಾ ಮಾಡಿದ್ದೇನೆ. ನಾನು ಹೊಸಬನಲ್ಲ. ದೈವದ ಸಿನಿಮಾ ಮಾಡುವವರು ಸರಿಯಾದ ರೀತಿಯಲ್ಲಿ ಸಿನಿಮಾ ಮಾಡಬೇಕು. ಕುಂದಾಪುರದ ಕೆರಾಡಿ ಗ್ರಾಮದಿಂದ ಬಂದು ಜನರಿಗೆ ರೀಚ್ ಆಗುವ ರೀತಿ ಸಿನಿಮಾ ಮಾಡುತ್ತಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗೆ ಒಳ್ಳೆಯ ಹೆಸರು ಬಂದಿದೆ. ಇದಿರಂದ ತುಂಬಾ ಖುಷಿ ಆಗುತ್ತಿದೆ' ಎಂದಿದ್ದಾರೆ
ಬಳಿಕ, 'ಕಾಂತಾರ ಮುಂದಿನ ಚಾಪ್ಟರ್ ಬಗ್ಗೆ ನಾನೀಗ ಮಾತನಾಡುವುದಿಲ್ಲ. ನನ್ನ ಮುಂದಿನ ಚಿತ್ರ 'ಜೈ ಹನುಮಾನ'. ಈಗ ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ನಟ ಅಮಿತಾಬ್ ಬಚ್ಚನ್ ಭೇಟಿ ಮಾಡಿರುವೆ, ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅಂತಹ ಲೆಜೆಂಡ್ ಜೊತೆ ನಾನು ಕಾಲ ಕಳೆದದ್ದು ಖುಷಿ ಕೊಟ್ಟಿದೆ' ಎಂದಿದ್ದಾರೆ
ಬಳಿಕ, 'ಫ್ಯಾನ್ಸ್ ವಾರ್ಬಗ್ಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಎಲ್ಲರ ಸಿನಿಮಾ ನೋಡಿ ಕನ್ನಡ ಸಿನಿಮಾ ಗೆಲ್ಲಿಸಿ ಅಂತ ಕೇಳಿಕೊಳ್ಳುತ್ತೇವೆ. ಥಿಯೇಟರ್ನಲ್ಲಿ ದೈವ ಆರಾಧನೆ ನೆಪದಲ್ಲಿ ಹುಚ್ಚಾಟ ಮಾಡಬೇಡಿ. ಅದಕ್ಕೆ ಒಂದು ಕ್ರಮ ಇರತ್ತದೆ. ದೈವ ಆರಾಧನೆಗೆ ಒಂದು ಶಿಸ್ತುಬದ್ಧಕ್ರಮವಿದೆ. ಆ ರೀತಿ ಮಾಡಬೇಡಿ ಅಂತ ಎಲ್ಲರಿಗೂ ಕೇಳಿಕೊಳ್ಳುತ್ತೇನೆ' ಎಂದು ತಿಳಿಸಿದ್ದಾರೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.