ದರ್ಶನ್ ಇಲ್ಲದೇ ಕುರುಕ್ಷೇತ್ರವೇ ಇಲ್ಲ; ಮುನಿರತ್ನ ಮಾತುಗಳಿವು

By Web DeskFirst Published Aug 9, 2019, 10:52 AM IST
Highlights

ಕನ್ನಡದ ಬಹುನಿರೀಕ್ಷಿತ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಇಂದೇ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಐದು ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಅದ್ದೂರಿ ಸಿನಿಮಾ ಇದು. ಈ ಮಲ್ಟಿಸ್ಟಾರ್ ಸಿನಿಮಾ ೨ಡಿ ಜತೆಗೆ ೩ಡಿ ತಂತ್ರಜ್ಞಾನದಲ್ಲೂ ಬರುತ್ತಿದೆ. ಇಷ್ಟು ದೊಡ್ಡಮಟ್ಟದ ಬಿಡುಗಡೆಯ ಸಾಹಸದೊಂದಿಗೆ ಸುದ್ದಿಯಲ್ಲಿರುವ ನಿರ್ಮಾಪಕ ಮುನಿರತ್ನ, ಚಿತ್ರದ ವೈಶಿಷ್ಟ್ಯದ ಜೊತೆಗೆ ತಾರಾ ಬಳಗದ ಕುರಿತು ವಿಶೇಷವಾಗಿ ಮಾತನಾಡಿದ್ದಾರೆ. ಓವರ್ ಟು ಮುನಿರತ್ನ.

ಯಾವ ಜನ್ಮದ ಪುಣ್ಯವೋ ನನಗೆ ಇಂತಹ ಸಿನಿಮಾ ಮಾಡುವ ಸೌಭಾಗ್ಯ ಸಿಕ್ಕಿದೆ. ಒಬ್ಬ ನಿರ್ಮಾಪಕನಾಗಿ ಇಂತಹ ಸಿನಿಮಾ ಮಾಡಬಹುದೆನ್ನುವ ಕನಸು ಕೂಡ ಕಂಡಿರಲಿಲ್ಲ. ಇಷ್ಟು ದೊಡ್ಡ ಸಿನಿಮಾ ಮಾಡಲು ಶಕ್ತಿ ಕೊಟ್ಟವರು ಕನ್ನಡಿಗರೇ. ಇದು ಅವರದೇ ಸಿನಿಮಾ. ಭಾರತೀಯ ಚಿತ್ರರಂಗದಲ್ಲಿ ಇದು ಕನ್ನಡಿಗರ ಹೆಮ್ಮೆಯ ಸಿನಿಮಾ.

ದುರ್ಯೋಧನನ ಮೈಮೇಲಿತ್ತು ಕೆಜಿ ಭಾರದ ಕಾಸ್ಟ್ಯೂಮ್; ಇಲ್ಲಿದೆ ಫೋಟೋಗಳು

ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಆ ನಡುವಿನ ಜೀವನದಲ್ಲಿ ಏನೆಲ್ಲ ಗಳಿಸಿದೆವು ಎನ್ನುವುದಕ್ಕಿಂತ ಏನು ಬಿಟ್ಟು  ಹೋಗುತ್ತೇವೆ ಅನ್ನುವುದೇ ಮುಖ್ಯ. ಹಲವರ ಸಾಧನೆಯೇ ಅದಕ್ಕೆ ಸಾಕ್ಷಿ. ಅಂತಹದೇ ಸಾಹಸದೊಂದಿಗೆ ಈ
ಸಿನಿಮಾ ಮಾಡಿದ್ದೇನೆ. ಒಂದು ಕಾಲಕ್ಕೆ ನಾನಿಲ್ಲದಿದ್ದರೂ ‘ಮುನಿರತ್ನ ಕುರುಕ್ಷೇತ್ರ’ ಇರುತ್ತದೆ. ಇಂತಹ ಪ್ರಯತ್ನಗಳು ಕನ್ನಡದಲ್ಲಿ ಇನ್ನಷ್ಟು ಆಗಲು ಇದು ಪ್ರೇರಣೆ ಆಗಲಿ. ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ಬಂದರೆ ಚೆನ್ನಾಗಿರುತ್ತದೆ ಅಂತ
ಹಿರಿಯರು ಸಲಹೆ ಕೊಟ್ಟರು. ಅವರ ಮಾತಿಗೆ ಬೆಲೆಕೊಟ್ಟು ಆಗಸ್ಟ್ 9 ಕ್ಕೆ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಯಿತು.

ಕುರುಕ್ಷೇತ್ರಕ್ಕೆ ಭೀಮನನ್ನು ಆರಿಸಿದ್ದು ದುರ್ಯೋಧನ!

ನಿರೀಕ್ಷೆಯಂತೆ ಚಿತ್ರದ ಬಿಡುಗಡೆಗೆ ದೊಡ್ಡ ಬೆಂಬಲ ಸಿಕ್ಕಿದೆ. ರಾಕ್‌ಲೈನ್ ವೆಂಕಟೇಶ್ ಅದರ ಜವಾಬ್ದಾರಿ ಹೊತ್ತುಕೊಂಡಿದ್ದು ಆನೆ ಬಲ ಸಿಕ್ಕಂತಾಗಿದೆ. ನಿರ್ಮಾಣದ ಹಂತದಲ್ಲಿ ಸಾಕಷ್ಟು ದಿನ ತೆಗೆದುಕೊಂಡೆವು. ತಂತ್ರಜ್ಞರಾಗಲಿ, ಕಲಾವಿದರಾಗಲಿ ಯಾರೂ ಬೇಸರ ಮಾಡಿಕೊಂಡಿಲ್ಲ. ಹಿರಿಯ ನಟ ಅಂಬರೀಶ್ ಕುರುಕ್ಷೇತ್ರದಲ್ಲಿ ಭೀಷ್ಮ. ಆ ಪಾತ್ರದಲ್ಲಿ ನಟಿಸಿದರು ಎನ್ನುವುದಕ್ಕಿಂತ ಅದಕ್ಕೆ ಜೀವ ತುಂಬಿದ ಮಹಾನ್ ನಟ.

ಅನಾರೋಗ್ಯದ ನಡುವೆಯೂ ಚಿತ್ರೀಕರಣದುದ್ದಕ್ಕೂ ಉತ್ಸಾಹದಿಂದಲೇ ಪಾಲ್ಗೊಂಡು ನನ್ನ ಸಾಹಸಕ್ಕೆ ಸಾಥ್ ಕೊಟ್ಟರು. ಅವರಿದ್ದರೆ ನಿಜಕ್ಕೂ ಖುಷಿ ಪಟ್ಟು ನನ್ನ ಬೆನ್ನಿಗೆ ನಿಂತಿರುತ್ತಿದ್ದರು. ಅವರ ಜಾಗದಲ್ಲೀಗ ದರ್ಶನ್ ಇದ್ದಾರೆಂಬ ಖುಷಿಯಿದೆ. ದರ್ಶನ್ ಈ ಸಿನಿಮಾದ ಬಹುದೊಡ್ಡ ಶಕ್ತಿ. ದರ್ಶನ್ ಇಲ್ಲದೆ ಕುರುಕ್ಷೇತ್ರ ಇಲ್ಲ, ದರ್ಶನ್ ಇಲ್ಲದೆ ದುರ್ಯೋಧನ ಇಲ್ಲ. ಆ ಪಾತ್ರ ಮಾಡುವುದು ಅಷ್ಟು ಸುಲಭವಲ್ಲ. ಮಾಮೂಲಿ ಸಿನಿಮಾಗಳ ಪಾತ್ರಕ್ಕಿಂತ ಇದು ತುಂಬಾ ಭಿನ್ನ. ಉಡುಗೆ-ತೊಡುಗೆ, ಮಾತು-ನಡಿಗೆ ಎಲ್ಲವೂ ಚೇಂಜ್.

ದರ್ಶನ್ ಸಾಕಷ್ಟು ಶ್ರಮ ಹಾಕಿದ್ದಾರೆ. ಅವರೇ ಹೇಳುವ ಹಾಗೆ, ಎರಡು ಸಿನಿಮಾದ ಕೆಲಸ ಒಂದೇ ಸಿನಿಮಾದಲ್ಲಾಗಿದೆ. ಕುರುಕ್ಷೇತ್ರ ಚಿತ್ರದ ಸ್ಕ್ರಿಪ್ಟ್‌ವರ್ಕ್ ಮುಗಿದು ಅದಕ್ಕೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವಾಗ ಸಾಕಷ್ಟು ಬಾರಿ ಚರ್ಚಿಸಿದೆವು.

ಯಾವ ಪಾತ್ರಕ್ಕೆ ಯಾರಿದ್ದರೆ ಚೆಂದ, ಯಾರನ್ನು ಹೇಗೆ ಕರೆತರಬೇಕು ಅಂತೆಲ್ಲ ನೂರೆಂಟು ಸಲ ಯೋಚಿಸಿದೆವು. ಭೀಷ್ಮ, ದುರ್ಯೋಧನ ಪಾತ್ರಕ್ಕೆ ಅಂಬರೀಶ್, ದರ್ಶನ್ ಬಂದ ನಂತರ ಕೃಷ್ಣನ ಪಾತ್ರಕ್ಕೆ ಯಾರು ಎನ್ನುವ ಬಗ್ಗೆ ಆಲೋಚನೆ ಶುರುವಾಯಿತು. ಕೃಷ್ಣನ ಪಾತ್ರಕ್ಕೆ ರವಿಚಂದ್ರನ್ ಬಂದರೆ ಸೂಕ್ತ ಎಂದಾಗ ನನ್ನ ಸ್ನೇಹಿತರೆಲ್ಲ ನಕ್ಕರು. ಕೃಷ್ಣ ಅಂದ್ರೆ ಹಾಗೆಯೇ ಅಂತ ರವಿಚಂದ್ರನ್ ಅವರನ್ನು ಫೈನಲ್ ಮಾಡಿಕೊಂಡೆ.

ಕುರುಕ್ಷೇತ್ರ ಅಂದಾಗ ಅಭಿಮನ್ಯು ಬಹುಮುಖ್ಯ ವ್ಯಕ್ತಿ. ಆ ಪಾತ್ರಕ್ಕೆ ಯಾರು? ನಮ್ಮದೆ ನೆಲದ, ಯುವ ಪ್ರತಿಭೆಯೇ ಬೇಕು. ಹೊರಗಡೆಯಿಂದ ಯಾರನ್ನೇ ಆಯ್ಕೆ ಮಾಡಿದರೂ ಅಷ್ಟು ಸೂಕ್ತವಲ್ಲ ಎಂದಾಗ ನಿಖಿಲ್ ಕುಮಾರ್ ಹೆಸರು ಆಯ್ಕೆ ಮಾಡಿದೆವು. ಆ ಪಾತ್ರದಲ್ಲಿ ಅವರ ಅಭಿನಯ ಅತ್ಯದ್ಭುತವಾಗಿದೆ.  ಮಹಾಭಾರತದಲ್ಲಿ ಶಕುನಿ ಅಂದ್ರೆ ಕಮ್ಮಿನೇ? ಆ ಪಾತ್ರಕ್ಕೆ ಒಪ್ಪಿ ಬಂದವರು ನಟ ರವಿಶಂಕರ್. ಒಂದು ಸಿನಿಮಾದಲ್ಲಿ ಅವರ ಅಭಿನಯ ನೋಡಿದ್ದೆ. ಅಭಿನಯ ನೋಡುತ್ತಾ ಮೈ ಜುಮ್ಮೆಂದಿತ್ತು. ಅವರೇ ಸೂಕ್ತ ಅಂತೆನಿಸಿತು.

ಕುರುಕ್ಷೇತ್ರ ಒಪ್ಪದಿದ್ದರೆ ನನ್ನಂಥ ಮುಠ್ಠಾಳ ಮತ್ತೊಬ್ಬ ಇರುತ್ತಿರಲಿಲ್ಲ!

ಆಮೇಲೆ ಧರ್ಮರಾಯನ ಪಾತ್ರಕ್ಕೆ ನಮಗೆ ಸಿಕ್ಕವರು ಹಿರಿಯ ನಟ ಶಶಿಕುಮಾರ್. ಮಹಾಭಾರತದಲ್ಲಿ ಧರ್ಮರಾಯ ಹೇಗಿದ್ದನೋ ಅದೇ ರೀತಿಯಲ್ಲಿ ಶಶಿಕುಮಾರ್ ಚಿತ್ರೀಕರಣದ ಉದ್ದಕ್ಕೂ ನಡೆದುಕೊಂಡರು. ಪಂಚ ಪಾಂಡವರ ಪೈಕಿ ಭೀಮ ಅತೀ ಬಲಾಡ್ಯ. ಆ ಪಾತ್ರದಲ್ಲಿ ಅಭಿನಯಿಸಿದವರು ಡ್ಯಾನಿಶ್ ಅಖ್ತರ್. ದರ್ಶನ್ ಮೂಲಕ ಸಿಕ್ಕವರು ಡ್ಯಾನಿಶ್.

ಮಹಾಭಾರತ ಅಂದ್ರೆ ಕೌರವರು, ಪಾಂಡವರು. ಅವರು ಉತ್ತರ ಭಾರತ ಮತ್ತು ದಕ್ಷಿಣ ಭಾರತದವರು. ಆ ಪ್ರಕಾರ ಯೋಚಿಸುತ್ತಾ ಹೋದಾಗ ದಕ್ಷಿಣ ಭಾರತದ ಜತೆಗೆ ಉತ್ತರ ಭಾರತದ ಕಲಾವಿದರು ಇರಲಿ ಅಂತ, ಭೀಮನ ಪಾತ್ರಕ್ಕೆ ಡ್ಯಾನಿಶ್ ಅಖ್ತರ್, ಅರ್ಜುನನ ಪಾತ್ರಕ್ಕೆ ಸೋನು ಸೂದ್ ಅವರನ್ನು ಆಯ್ಕೆ ಮಾಡಿಕೊಂಡೆವು. ಜೊತೆಗೆ ಕುಂತಿ ಪಾತ್ರದಲ್ಲಿ ಭಾರತಿ, ದ್ರೋಣಾಚಾರ್ಯ ಪಾತ್ರದಲ್ಲಿ ಶ್ರೀನಿವಾಸ ಮೂರ್ತಿ, ಧೃತರಾಷ್ಟ್ರನಾಗಿ ಶ್ರೀನಾಥ್, ಶಲ್ಯನ ಪಾತ್ರದಲ್ಲಿ ರಾಕ್‌ಲೈನ್ ವೆಂಕಟೇಶ್, ಕರ್ಣನಾಗಿ ಅರ್ಜುನ್ ಸರ್ಜಾ, ಭಾನುಮತಿ ಪಾತ್ರದಲ್ಲಿ ಮೇಘನಾ ರಾಜ್, ದ್ರೌಪದಿಯಾಗಿ ಸ್ನೇಹಾ, ಉತ್ತರೆಯಾಗಿ ಅದಿತಿ ಆರ್ಯ, ಮಾಯೆಯಾಗಿ ಹರಿಪ್ರಿಯಾ ಸೇರಿ ದೊಡ್ಡ ತಾರಾಬಳಗವೇ ಇಲ್ಲಿದೆ.

ನನ್ನ ಮೂರು ಮೊಮ್ಮಕ್ಕಳು ಈ ಸಿನಿಮಾದಲ್ಲಿದ್ದಾರೆ. ಅಷ್ಟು ಕಲಾವಿದರನ್ನು ಹಾಕಿಕೊಂಡು ಒಂದು ಸಿನಿಮಾ ಮಾಡಿದ್ದೇವೆಂದರೆ, ಅದು ಸಾಹಸ. ಬಜೆಟ್ ಬಗ್ಗೆ ನಾನು ಯೋಚಿಸಿಲ್ಲ. ಒಂದೊಳ್ಳೆ ಚಿತ್ರ ಮಾಡಿದ ತೃಪ್ತಿಯಿದೆ. ಅತ್ಯಂತ ಹೈಟೆಕ್ ತಂತ್ರಜ್ಞಾನದಲ್ಲಿ ಬರುತ್ತಿದೆ. ಅದಕ್ಕೆ ತಕ್ಕಂತೆ ಐದು ಭಾಷೆಗಳಲ್ಲೂ ಬರುತ್ತಿದೆ. ಕನ್ನಡ ಸಿನಿಮಾ ಬೆಳೆಯಬೇಕು, ಕನ್ನಡ ಭಾಷೆ ಉಳಿಯಬೇಕು. ನನ್ನ ಉದ್ದೇಶ ಬರೀ ಹಣ ಮಾಡುವುದೇ ಅಲ್ಲ.

ಅದೇ ಆಗಿದ್ದರೆ ಇಷ್ಟೇ ಬಂಡವಾಳದಲ್ಲಿ ಐದಾರು ಕಮರ್ಷಿಯಲ್ ಸಿನಿಮಾ ಮಾಡಬಹುದಾಗಿತ್ತು. ಅದರಾಚೆ, ಒಂದೊಳ್ಳೆ ಪೌರಾಣಿಕ ಸಿನಿಮಾ ಕೊಡಬೇಕು, ಮಹಾಭಾರತದ ಮಹತ್ವ ಈಗಿನ ತಲೆಮಾರಿಗೆ ತಿಳಿಯ ಬೇಕೆನ್ನುವ ಆಸೆಯಿಂದ ಸಿನಿಮಾ ಮಾಡಿದ್ದೇನೆ. ಇದರ ಸೂತ್ರಧಾರಿ ನಾಗಣ್ಣ. ಅವರಿಗೆ ತಂತ್ರಜ್ಞರಾಗಿ ಹರಿಕೃಷ್ಣ, ನಾಗೇಂದ್ರ ಪ್ರಸಾದ್, ಭೈರವಿ, ಕೆ. ಕಲ್ಯಾಣ್ ಸೇರಿ ಸಾಕಷ್ಟು ಜನರ ಶ್ರಮವಿದೆ. ಇದನ್ನು ನೀವು ಪ್ರೋತ್ಸಾಹಿ ಸುತ್ತೀರಿ, ಬೆಳೆಸುತ್ತೀರಿ ಎನ್ನುವ ನಂಬಿಕೆ ನನ್ನದು.

click me!