
ಈಗಾಗಲೇ ಇಬ್ಬರು ಹೀರೋಗಳ ಕಾರಣಕ್ಕೆ ಸದ್ದು ಮಾಡುತ್ತಿದ್ದ ‘ರಣಂ’ ಈಗ ವರಲಕ್ಷ್ಮೀ ಶರತ್ ಕುಮಾರ್ ಎಂಟ್ರಿಯಿಂದ ಕುತೂಹಲ ಮೂಡಿಸಿದೆ.
‘ಕತೆಯಲ್ಲಿ ಪ್ರಮುಖವಾದ ಪಾತ್ರವದು. ಆ ಪಾತ್ರಕ್ಕೆ ಸೂಕ್ತವಾಗುವಂತಹ ನಟಿಯ ಹುಡುಕಾಟದಲ್ಲಿದ್ದೆವು. ಚಿತ್ರದ ಕನ್ನಡದ ಜತೆಗೆ ತೆಲುಗಿನಲ್ಲೂ ನಿರ್ಮಾಣ ವಾಗುತ್ತಿದೆ. ಅದಕ್ಕೆ ಪೂರಕವಾಗಿ ಎರಡು ಕಡೆಗೂ ಪರಿಚಯ ಇರುವಂತಹ, ಸ್ವಲ್ಪ ಫೇಮ್ ಇರುವಂತಹ ನಟಿಯಾದರೆ ಸೂಕ್ತ ಎನ್ನುವ ಲೆಕ್ಕಚಾರವೂ ನಮ್ಮದಾಗಿತ್ತು. ಆ ಪ್ರಕಾರ ನಮಗೆ ಸಿಕ್ಕವರು ವರಲಕ್ಷ್ಮೀ ಶರತ್ ಕುಮಾರ್. ಕನ್ನಡಕ್ಕೂ ಅವರು ಪರಿಚಯವಾಗಿದ್ದರಿಂದ ನಮ್ಮ ಲೆಕ್ಕಚಾರವೇ ಸೂಕ್ತ ಎನಿಸಿತು. ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆನ್ನುವ ನಂಬಿಕೆಯಿದೆ’ ಎನ್ನುತ್ತಾರೆ ನಿರ್ಮಾಪಕ ಕನಕಪುರ ಶ್ರೀನಿವಾಸ್.
ಮೂಲತಃ ತಮಿಳು ನಟಿಯಾಗಿರುವ ವರಲಕ್ಷ್ಮಿ ಅವರಿಗೆ ಸ್ಯಾಂಡಲ್ವುಡ್ ಹೊಸತೇನಲ್ಲ. ‘ಕಿಚ್ಚ’ ಸುದೀಪ್ ನಟಿಸಿ, ನಿರ್ದೇಶಿಸಿದ್ದ ‘ಮಾಣಿಕ್ಯ’ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಆನಂತರ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅಭಿನಯದ ದ್ವಿಭಾಷಾ ಚಿತ್ರ ‘ವಿಸ್ಮಯ’ದಲ್ಲೂ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ವರಲಕ್ಷ್ಮಿ. ಅಲ್ಲಿಂದೀಗ ‘ರಣಂ’ ಮೂಲಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ‘ಮಗಧೀರ’ ಖ್ಯಾತಿಯ ಖಳ ನಟ ದೇವ್ ಗಿಲ್ ಕೂಡ ‘ರಣಂ’ನಲ್ಲಿ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಆರೇಂಜ್’ ನಂತರ ಅವರಿಗಿದು ಮತ್ತೊಂದು ಕನ್ನಡ ಚಿತ್ರ. ಅವರಿಬ್ಬರ ಆಯ್ಕೆಯ ಬೆನ್ನಲೇ ಸಿಬಿಐ ಅಧಿಕಾರಿಯ ಪಾತ್ರದ ಚಿತ್ರೀಕರಣವೂ ನಡೆಯುತ್ತಿದೆ. ಸದ್ಯ ಬೆಂಗಳೂರಿನ ಮಿನರ್ವ ಮಿಲ್ನಲ್ಲಿ ಬೃಹತ್ ಸೆಟ್ ಹಾಕಲಾಗಿದ್ದು, ಚೇಸಿಂಗ್ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗಿದೆ. ಮತ್ತೊಂದು ವಿಶೇಷ ಅಂದ್ರೆ, ಚಿತ್ರದ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣಕ್ಕೆ ನಿರ್ಮಾಪಕ ಶ್ರೀನಿವಾಸ್ ದೊಡ್ಡ ಮೊತ್ತವನ್ನೇ ವ್ಯಯ ಮಾಡುತ್ತಿದ್ದಾರಂತೆ. ಚಿತ್ರೀಕರಣದ ದಿನವೊಂದರ ಖರ್ಚು ರೂ. 10 ಲಕ್ಷ. ಬರೋಬ್ಬರಿ 9 ದಿನಗಳ ಕಾಲ ಚಿತ್ರೀಕರಣ ನಡೆಯುತ್ತಿದ್ದು, ಅದಕ್ಕೆ 90 ಲಕ್ಷ ರೂ. ಖರ್ಚಾಗಲಿದೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.