ಸಿದ್ದಗಂಗಾ ಶ್ರೀಗಳ ಶಿಷ್ಯನಾದ 'ಲಕ್ಷ್ಮಿ ಬಾರಮ್ಮ' ಚಂದು!

By Web DeskFirst Published Oct 4, 2019, 9:21 AM IST
Highlights

ಕಿರುತೆರೆಯ ಜನಪ್ರಿಯ ನಟ, ‘ಲಕ್ಷ್ಮಿ ಬಾರಮ್ಮ’ ಸೀರಿಯಲ್ ಖ್ಯಾತಿಯ ಚಂದು ಗೌಡ ಇದೇ ಮೊದಲು ಹೀರೋ ಆಗಿ ಬೆಳ್ಳಿತೆರೆಗೆ ಜಿಗಿದಿದ್ದಾರೆ.

ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ಶಿಷ್ಯನಾಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಚಿತ್ರದಲ್ಲಿ ಅವರು ರಾಘವೇಂದ್ರ ರಾಜ್‌ಕುಮಾರ್ ಪುತ್ರನಾಗಿ ಅಭಿನಯಿಸುತ್ತಿದ್ದಾರೆ. ಚಂದುಗೌಡ ಪಾಲಿಗೆ ಹಾಗೊಂದು ವಿಶೇಷತೆ ಇರುವ ಸಿನಿಮಾ ‘ಶ್ರೀ’.

ಸ್ವಾದೀನ್ ಕುಮಾರ್ ನಿರ್ಮಾಣದಲ್ಲಿ ಪತ್ರಕರ್ತೆ ಉಷಾ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ಮಹಿಳಾ ನಿರ್ದೇಶಕಿ ಪರಿಚಯವಾಗುತ್ತಿದ್ದಾರೆ. ಎಂಟ್ಹತ್ತು ವರ್ಷಗಳ ಕಾಲ ಮುದ್ರಣ ಹಾಗೂ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡಿರುವ ಅನುಭವದಲ್ಲೇ ಈಗ ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ. ಅವರು ಕೂಡ ಎಂಟ್ರಿಯಲ್ಲೇ ವಿಶೇಷವಾದ ಕತೆಯೊಂದನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

'ಸಂತೂರ್ ಮಮ್ಮಿ' ಲಕ್ಷ್ಮೀ ಬಾರಮ್ಮ’ ಕಲ್ಪನಾ ಪೋಟೋಗಳಿವು!

ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಓದಿ, ಸರ್ಕಾರದ ಉನ್ನತ ಅಧಿಕಾರಿಯಾದ ಯುವಕನೊಬ್ಬ ಶ್ರೀಗಳ ಪ್ರಭಾವ ದೊಂದಿಗೆ ನಾಡಿನ ರೈತರ ಪರವಾಗಿ ಹೇಗೆ ಕೆಲಸ ಮಾಡಿ, ಸೈ ಎನಿಸಿಕೊಳ್ಳು ತ್ತಾರೆನ್ನುವುದು ಈ ಚಿತ್ರದ ಕತೆ. ಇದೊಂದು ಕಾಲ್ಪನಿಕ ಕತೆಯಾದರೂ, ಅದಕ್ಕೆ ಸಿದ್ಧಗಂಗಾ ಮಠದಲ್ಲಿ ಓದಿ, ಸಮಾಜದ ಉದ್ಧಾರಕ್ಕೆ ಒಳ್ಳೆಯ ಕೆಲಸ ಮಾಡುತ್ತಿರುವ ಕೆಲವು ಅಧಿಕಾರಿಗಳ ಸ್ಫೂರ್ತಿಯೂ ಇದೆ ಎನ್ನುತ್ತಾರೆ ನಿರ್ದೇಶಕಿ ಉಷಾ. ಚಿತ್ರದಲ್ಲಿನ ಈ ಅಧಿಕಾರಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ಚಂದು ಗೌಡಗೆ ಈ ಅವಕಾಶ ಸಿಕ್ಕಿದ್ದು ಜಾಹೀರಾತು ಮೂಲಕ. ಟ್ರ್ಯಾಕ್ಟರ್ ಜಾಹೀರಾತಿನಲ್ಲಿ ತಾವು ಕಾಣಿಸಿಕೊಂಡಿದ್ದನ್ನು ನೋಡಿ, ನಿರ್ದೇಶಕರು ಸಿನಿಮಾದ ಅವಕಾಶ ಕೊಟ್ಟಿದ್ದಾರೆ ಎನ್ನುತ್ತಾರೆ ಚಂದು ಗೌಡ.

 

click me!