ಸುದೀಪ್, ರವಿಚಂದ್ರನ್ ಕೈ ಸೇರಿತು 'ಸೈಬರ್ ಕ್ರೈಮ್'!

By Web DeskFirst Published Aug 12, 2019, 12:24 PM IST
Highlights

ಕಿಚ್ಚ ಹಾಗೂ ಕ್ರೇಜಿಸ್ಟಾರ್ ಮತ್ತೆ ಜತೆಯಾಗಿದ್ದಾರೆ. ‘ಮಾಣಿಕ್ಯ’ ಚಿತ್ರದಲ್ಲಿ ಇಬ್ಬರು ತಂದೆ ಮತ್ತು ಮಗನಾಗಿ ಕಾಣಿಸಿಕೊಂಡಿದ್ದರು. ಈಗ ರವಿಚಂದ್ರನ್ ನಿರ್ದೇಶನದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಅಂದಹಾಗೆ ಇವರಿಬ್ಬರನ್ನು ಜತೆಯಾಗಿಸಿರುವುದು ‘ರವಿ ಬೋಪಣ್ಣ’ ಚಿತ್ರ.

ಈ ಚಿತ್ರಕ್ಕೆ ಕ್ರೇಜಿಸ್ಟಾರ್ ಅವರೇ ನಾಯಕ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ. ರವಿಚಂದ್ರನ್ ಮತ್ತೊಮ್ಮೆ ವನ್‌ಮ್ಯಾನ್ ಶೋನಂತೆ ರೂಪಿಸುತ್ತಿರುವ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸೈಬರ್ ಕ್ರೈಮ್ ಕತೆ

ಸೈಬರ್ ಕ್ರೈಮ್ ಕತೆಯಿರುವ ಚಿತ್ರವಿದು. ಇದರಲ್ಲಿ ರವಿಚಂದ್ರನ್ ಅವರು ಸೈಬರ್ ಪೊಲೀಸ್ ಅಧಿಕಾರಿಯಾಗಿ ಬಿಳಿ ಗಡ್ಡ ಬಿಟ್ಟು ನಟಿಸುತ್ತಿದ್ದಾರೆ. ಅವರಿಲ್ಲಿ ಎಂಟು ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೈಕಿ 40ರ ನಂತರದ ವಯಸ್ಸಿನ ಗೆಟಪ್ ಸಾಕಷ್ಟು ಕುತೂಹಲದಿಂದ ಕೂಡಿರುತ್ತದಂತೆ.

ನೆರೆ ಸಂತ್ರಸ್ತರ ನೆರವಿಗೆ ನಿಂತ ಕಿಚ್ಚ ಸುದೀಪ್; ಅಭಿಮಾನಿಗಳಲ್ಲೂ ಮನವಿ

ಮಲ್ಲದಂತೆ ಹಣ ಮಾಡುತ್ತದೆ

ಕನ್ನಡ ಚಿತ್ರರಂಗದ ಮಾರುಕಟ್ಟೆ ಸೀಮಿತವಾಗಿದ್ದ ದಿನಗಳಲ್ಲೇ ರವಿಚಂದ್ರನ್ ಚಿತ್ರಗಳು ಕೋಟಿ ಕೋಟಿ ಹಣ ಮಾಡಿದವು.ರಣಧೀರ, ಪ್ರೇಮಲೋಕ ಚಿತ್ರಗಳೇ ಇದಕ್ಕೆ ಸಾಕ್ಷಿ. ಆ ನಂತರ ಬಂದ ಅವರ ಸ್ಟೈಲಿನ ‘ಮಲ್ಲ’ದಗಳಿಕೆ ಚಿತ್ರ ರವಿಚಂದ್ರನ್ ಅವರೇ ಹೇಳುವಂತೆ 10 ಕೋಟಿ ರು.ದಾಟಿತು. ‘ನಾನು ಯಾವತ್ತು ದುಡ್ಡು ಇಷ್ಟು ಬರುತ್ತದೆ ಅಂತ ಸಿನಿಮಾ ಮಾಡಲಿಲ್ಲ.ಆದರೆ, ‘ಮಲ್ಲ’ ಸಿನಿಮಾ ಮಾಡುವಾಗ ಇಂತಿಷ್ಟೆ ದುಡ್ಡು ಮಾಡುತ್ತದೆ ಅಂದುಕೊಂಡಿದ್ದೆ. ಹಾಗೇ ಆಯ್ತು. ಈಗ ಅದೇ ರೀತಿ ‘ರವಿ ಬೋಪಣ್ಣ’ ಸಿನಿಮಾ ದುಡ್ಡು ಮಾಡುವ ಸಿನಿಮಾ. ಇಂತಿಷ್ಟು ಕೋಟಿ ಅಂತ ಗುರಿ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಮಲ್ಲದಂತೆ ಈ ಚಿತ್ರವೂ ಹಣ ಮಾಡುತ್ತದೆ. ಮಾಡಿ ತೋರಿಸುತ್ತೇನೆ’ ಎಂಬುದು ರವಿಚಂದ್ರನ್ ಅವರ ಶಪಥ.

ಇಬ್ಬರು ನಾಯಕಿಯರು

ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ಕಾವ್ಯ ಶೆಟ್ಟಿ. ಮತ್ತೊಬ್ಬ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ. ಸರ್ಕಾರ್ ಅಜಿತ್ ಹಾಗೂ ಜಗದೀಶ್ ಈ ಚಿತ್ರದ ನಿರ್ಮಾಪಕರು. ನಿರ್ದೇಶಕ ಮೋಹನ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಶೇ.50 ಭಾಗದಷ್ಟು ಚಿತ್ರೀಕರಣ ನಡೆಯಲಿದೆ.

ರವಿಚಂದ್ರನ್‌ ಪುತ್ರ ವಿಕ್ರಮ್‌ ಚಿತ್ರದ ಫಸ್ಟ್‌ಲುಕ್‌!

ಕತೆ ಕೇಳದೆ ಸಿನಿಮಾ ಒಪ್ಪಿದ ಸುದೀಪ್

ಸುದೀಪ್ ಅವರಿಂದ ಅತಿಥಿ ಪಾತ್ರ ಮಾಡಿಸಬೇಕು ಎಂದಾಗ ಕಿಚ್ಚ ಅವರು ಹಿಂದೆ ಮುಂದೆ ನೋಡದೆ ಒಪ್ಪಿಕೊಂಡರಂತೆ. ‘ಈ ಚಿತ್ರದಲ್ಲಿ ಒಂದು ಪ್ರಮುಖವಾದ ಪಾತ್ರ ಇದೆ. ಅದನ್ನು ಸುದೀಪ್ ಅವರೇ ಮಾಡಬೇಕು ಎಂದುಕೊಂಡೆ. ಅವರೇ ಸೂಕ್ತ ಎಂಬುದು ನನ್ನ ಅಭಿಪ್ರಾಯ. ಹೋಗಿ ಕೇಳಿದಾಗ ಮರು ಮಾತನಾಡದೆ ನಿಮಗಾಗಿ ನಾನು ಮಾಡುತ್ತೇನೆ ಎಂದು ಹೇಳಿ ಒಪ್ಪಿದರು. ಅವರ ಪಾತ್ರದ ಬಗ್ಗೆ ಈಗಲೇ ಏನೂ ಹೇಳಲ್ಲ. ಫಸ್ಟ್ ಲುಕ್ ಬಿಡುಗಡೆ ಮಾಡಿದ ಮೇಲೆ ಗೊತ್ತಾಗುತ್ತದೆ. ತುಂಬಾ ಚೆನ್ನಾಗಿರುವ ಪಾತ್ರ ಅವರದು’ ಎನ್ನುತ್ತಾರೆ ರವಿಚಂದ್ರನ್ ಅವರು.

ಪ್ರವಾಹದ ಸಂಕಷ್ಟಕ್ಕೆ ಮಿಡಿದ ಕ್ರೇಜಿ ಫ್ಯಾನ್ಸ್

ಸದ್ಯ ರಾಜ್ಯದಲ್ಲಿ ಪ್ರವಾಹದ ಸಂಕಷ್ಟ ಎದುರಾಗಿದ್ದು, ಮಳೆ ನಿಂತ ಮೇಲೆ ‘ರವಿ ಬೋಪಣ್ಣ’ ಸಿನಿಮಾ ಶೂಟಿಂಗ್ ಶುರುವಾಗಲಿದೆ. ‘ರವಿ ಬೋಪಣ್ಣ’ ಚಿತ್ರತಂಡದಿಂದ ಸಂಗ್ರಹವಾಗಿರುವ ಪರಿಹಾರ ಸಾಮಾಗ್ರಿಗಳನ್ನು ವಿತರಿಸಲು ರವಿಚಂದ್ರನ್ ಅವರ ಅಭಿಮಾನಿಗಳು ಮೂರು ತಂಡಗಳನ್ನಾಗಿ ಮಾಡಿಕೊಂಡು ಹೊರಟಿದ್ದಾರೆ. ಬೆಳಗಾವಿ, ಕೂರ್ಗ್ ಹಾಗೂ ಮಲೆನಾಡು ಭಾಗಗಳಿಗೆ ಈ ತಂಡಗಳು ಹೊರಡಲಿವೆ. 

 

click me!