
ಸ್ಯಾಂಡಲ್ವುಡ್ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeepa) ಅವರು ಮತ್ತೆ ಪರಪ್ಪನ ಅಗ್ರಹಾರ ಸೇರಿದ್ದು ಗೊತ್ತೇ ಇದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರಿಗೆ ಹೈಕೋರ್ಟ್ ಕೊಟ್ಟಿದ್ದ ಬೇಲ್ ರದ್ದು ಮಾಡಿ ಸುಪ್ರೀಂ ಕೋರ್ಟ್ ಮತ್ತೆ ಜೈಲಿಗೆ ಕಳಿಸಿದೆ. ಇದೀಗ, ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟೂ 7 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಈ ಸುದ್ದಿ ಈಗ ಬಹುತೇಕ ಎಲ್ಲರಿಗೆ ಗೊತ್ತಿದೆ. ಆದರೆ, ನಟ ದರ್ಶನ್ ಅವರು ಅರೆಸ್ಟ್ ಆಗುವ ಕೊನೆ ಕ್ಷಣದಲ್ಲಿ ಮಾಡಿದ್ದೇನು ಗೊತ್ತಾ?
ಹೌದು, ಸುಪ್ರೀಂ ಕೋರ್ಟಿನಿಂದ ಮತ್ತೆ ಬಂಧನದ ಆದೇಶದ ಕರೆ ಬಂದಾಗ ನಟ ದರ್ಶನ್ ಅವರು ಕೊಡಗಿನಲ್ಲಿ ಇದ್ದರು. ಜಾಮೀನು ರದ್ದು ಆದೇಶ ಹೊರಬಿದ್ದ ಕೂಡಲೇ ಪೊಲೀಸರು ನಟ ದರ್ಶನ್ ಅವರಿಗೆ ಕರೆ ಮಾಡಿ, ಬಂಧಿಸಬೇಕಾದ ವಿಚಾರ ತಿಳಿಸಿದ್ದಾರೆ. ತಕ್ಷಣ ಕೊಡಗಿನ ಮಡಿಕೇರಿಯಿಂದ ಹೊರಟ ನಟ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮೀ ಫ್ಲಾಟ್ಗೆ ತೆರಳಿದ್ದಾರೆ. ಅಲ್ಲಿ ತಮ್ಮ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಅವರನ್ನು ತಬ್ಬಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಈ ವೇಳೆ ನಟ ದರ್ಶನ್ ತೂಗುದೀಪ ಅವರನ್ನು ಕಾಮಾಕ್ಷಿ ಪಾಳ್ಯ ಠಾಣೆ ಇನ್ಸ್ ಪೆಕ್ಟರ್ ನಾಗೇಶ್ ನೇತೃತ್ವದ ತಂಡ ಬಂಧಿಸಿದೆ. ಬಳಿಕ ಅಲ್ಲಿಂದ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ನಟ ದರ್ಶನ್ ಅವರನ್ನು ಕರೆತಂದಿದ್ದಾರೆ. ಈ ವೇಳೆ ಹ್ಯಾಟ್ ಧರಿಸಿದ್ದ ನಟ ದರ್ಶನ್ ಅವರು ತಮ್ಮ ಭೇಟಿಗೆ ಅಲ್ಲಿ ಠಾಣೆಗೆ ಬಂದಿದ್ದ ಸಹೋದರ ದಿನಕರ್ ಕಡೆ ತಿರುಗಿ 'ಎಲ್ಲಾ ಮುಗಿಯಿತು' ಎಂಬ ಭಾವನೆಯನ್ನು ಸನ್ನೆಯಲ್ಲಿ ವ್ಯಕ್ತಪಡಿಸಿ. ಅಲ್ಲಿಂದ ತೆರಳಿದರು ಎನ್ನಲಾಗಿದೆ. ಬಳಿಕ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗಲಾಗಿದೆ.
ಇನ್ನು, ನಟ ದರ್ಶನ್ ಅರೆಸ್ಟ್ ಆಗಿ ಮತ್ತೆ ಜೈಲು ಸೇರಿರುವ ಈ ಬೆಳವಣಿಗೆ ಸಹಜವಾಗಿಯೇ 'ದಿ ಡೆವಿಲ್' ಚಿತ್ರಕ್ಕೆ ಶಾಪವಾಗಿ ಪರಿಣಮಿಸಿದೆ. ಯಾಕಂದ್ರೆ, ದರ್ಶನ್ ನಟನೆಯಲ್ಲಿ ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿ ಮೊಟ್ಟಮೊದಲ ಹಾಡನ್ನು ಬಿಡುಗಡೆ ಮಾಡುವ ಸಂಭ್ರಮದಲ್ಲಿ ಇತ್ತು 'ದಿ ಡೆವಿಲ್' ಚಿತ್ರತಂಡ. ಆಗಸ್ಟ್ 15ಕ್ಕೆ ಸಾಂಗ್ ಲಾಂಚ್ ಕೂಡ ಫಿಕ್ಸ್ ಆಗಿತ್ತು. ಆದರೆ, ನಟ ದರ್ಶನ್ ಬೇಲ್ ರದ್ದಾಗಿ ಮತ್ತೆ ಜೈಲು ಸೇರಿರುವ ಕಾರಣಕ್ಕೆ ಸಿನಿಮಾ ತಂಡ ಸಾಂಗ್ ಲಾಂಚ್ ಮುಂದಕ್ಕೆ ಹಾಕಿದೆ. ಅಷ್ಟೇ ಅಲ್ಲ, ಮತ್ತೊಂದು ಬೆಳವಣಿಗೆ ಕೂಡ ನಡೆದಿದೆ. ಅದು 'ದಿ ಡೆವಿಲ್' ನಿರ್ದೇಶಕ ಪ್ರಕಾಶ್ ವೀರ್ (ಮಿಲನಾ ಪ್ರಕಾಶ್) ನಾಟ್ ರೀಚೆಬಲ್ ಅಗುವಂತೆ ಮಾಡಿದೆಯಂತೆ!
ಹೌದು, ನಟ ದರ್ಶನ್ ತೂಗುದೀಪ ಅರೆಸ್ಟ್ ಆಗ್ತಾ ಇದ್ದ ಹಾಗೇನೇ 'ದಿ ಡೆವಿಲ್' ನಿರ್ಮಾಪಕ ಕಂ ನಿರ್ದೇಶಕ ಮಿಲನಾ ಪ್ರಕಾಶ್ ಅವರು ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಟ್ ರೀಚೆಬಲ್ ಆಗಿದ್ದಾರೆ ಎಂಬ ಮಾಹಿತಿ ಚಿತ್ರರಂಗದಿಂದಲೇ ಬಂದಿದೆ. ಈಗ ಅವರು ಹಾಡಿನ ಬಿಡುಗಡೆಯನ್ನ ಮುಂದೂಡಿ, ಮುಂದೇನು ಮಾಡೋದು ಅಂತ ಅಜ್ಞಾತ ಸ್ಥಳದಲ್ಲಿ ಕುಳಿತು ಯೋಚಿಸ್ತಾ ಇದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಕನ್ನಡದ ಖ್ಯಾತ ನಿರ್ಮಾಪಕರಾದ ಚಿನ್ನೇಗೌಡರು ಮಾಹಿತಿ ನೀಡಿದ್ದಾರೆ. ನಿರ್ದೇಶಕ ಪ್ರಕಾಶ್ ವೀರ್ ಅವರ ಸ್ಥಿತಿ ಸದ್ಯ ಯಾರಿಗೂ ಬೇಡ ಎಂಬಂತಾಗಿದೆ.
'ದಿ ಡೆವಿಲ್' ಸಿನಿಮಾಗೆ ಕೋಟಿ ಕೋಟಿ ಖರ್ಚು ಮಾಡಲಾಗಿದೆ. ದರ್ಶನ್ಗೆ ಈ ಹಿಂದೆಂದೂ ಕೊಡದಷ್ಟು ಸಂಭಾವನೆ ಕೊಟ್ಟಿದ್ದಾರೆ. 2024ರ ಡಿಸೆಂಬರ್ಗೆ ರಿಲೀಸ್ ಆಗಬೇಕಿದ್ದ ಈ ಸಿನಿಮಾ ಇಲ್ಲಿವರೆಗೂ ತಡವಾಗಿರೋದಕ್ಕೆ ನಟ ದರ್ಶನ್ ಸಿಕ್ಕಿಹಾಕಿಕೊಂಡಿರುವ ಕೊಲೆ ಆರೋಪದ ಕೇಸೇ ಕಾರಣ. ಇನ್ನೇನು ಚಿತ್ರ ಮುಗಿಸಿ ರಿಲೀಸ್ ಮಾಡೋಣ ಅನ್ನೋ ಟೈಂನಲ್ಲಿ ದರ್ಶನ್ ಮತ್ತೆ ಅಂದರ್ ಆಗಿರೋದು ದಿ ಡೆವಿಲ್ ಮೇಕರ್ಸ್ಗೆ ತಲೆನೋವು ತಂದಿದೆ. ಮುಂದೇನು ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.