ಚಿತ್ರ ವಿಮರ್ಶೆ: ಡಾಟರ್ ಆಫ್ ಪಾರ್ವತಮ್ಮ

Published : May 25, 2019, 10:25 AM IST
ಚಿತ್ರ ವಿಮರ್ಶೆ: ಡಾಟರ್ ಆಫ್ ಪಾರ್ವತಮ್ಮ

ಸಾರಾಂಶ

ಮುಂದೆ ಏನಾಗುತ್ತದೆ? ಯಾರನ್ನ ಹುಡುಕುತ್ತಿದ್ದಾರೆ? ಈ ಘಟನೆಗೆ ಕಾರಣವೇನು... ಇಂಥ ಕುತೂಹಲಗಳೇ ಒಂದು ಕ್ರೈಮ್‌ ಥ್ರಿಲ್ಲರ್‌ನ ಬಹು ಮುಖ್ಯ ಆಧಾರಸ್ತಂಭಗಳು. ‘ಡಾಟರ್‌ ಆಫ್‌ ಪಾರ್ವತಮ್ಮ’ ಚಿತ್ರ ನೋಡುಗನಲ್ಲಿ ಇಂಥ ಕುತೂಹಲಗಳನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದೆ. ಅದಕ್ಕೆ ಕಾರಣ ನಿರ್ದೇಶಕ ಶಂಕರ್‌ ಜೆ ತೆಗೆದುಕೊಂಡು ಹೋಗುವ ಕತೆ, ಆ ಕತೆಗೆ ಪೂರಕವಾಗಿ ಸಾಗುವ ಪಾತ್ರಗಳು. ಇಲ್ಲಿ ಪ್ರತಿ ಕ್ಯಾರೆಕ್ಟರ್‌ಗೂ ಮಹತ್ವ ಇದೆ. ಒಬ್ಬರನ್ನು ಆವಲಂಬಿಸಲ್ಲ ಎಂಬುದೇ ಚಿತ್ರದ ಮತ್ತೊಂದು ಶಕ್ತಿ.

ಚಿತ್ರದ ಹೆಸರಿನಷ್ಟೇ ಮೇಕಿಂಗ್‌ನಲ್ಲಿ ಖದರ್‌ ಉಳಿಸಿಕೊಂಡಿರುವ ಈ ಚಿತ್ರವು ಒಂದು ರಾತ್ರಿ, ಒಂದು ಕೊಲೆ, ಮೂರು ಜನ ಮತ್ತು ಒಬ್ಬ ತನಿಖಾಧಿಕಾರಿಯನ್ನು ಒಳಗೊಂಡು ನಿರೂಪಣೆಯಾಗುತ್ತದೆ. ಒಂದು ಹಂತದಲ್ಲಿ ಯಾಕೋ ಕೊಂಚ ದೀರ್ಘವಾಯಿತಲ್ಲ ಎನ್ನುವ ಹೊತ್ತಿಗೆ ವಿರಾಮಕ್ಕೆ ಸ್ವಾಗತ ಕೋರುವ ಮೂಲಕ ನಿರ್ದೇಶಕರು ಜಾಣ್ಮೆ ತೋರುತ್ತಾರೆ.

ಚಿತ್ರ ವಿಮರ್ಶೆ: ಕಾರ್ಮೋಡ ಸರಿದು

ಪಾರ್ವತಮ್ಮನ ಮಗಳು ವೈದೇಹಿ ಖಡಕ್‌ ಪೊಲೀಸ್‌ ಅಧಿಕಾರಿ. ಇವರ ಕೈಗೆ ಯಾವುದೇ ಪ್ರಕರಣ ಸಿಕ್ಕರೂ ಅದಕ್ಕೊಂದು ಅಂತ್ಯ ಕಾಣಿಸುವ ತಾಕತ್ತು ಉಂಟು. ಈ ವೈದೇಹಿ ಅಮ್ಮನಿಗೆ ತನ್ನ ಮಗಳು ಮದುವೆ ಆಗಿ ಗಂಡ, ಮಕ್ಕಳು, ಸಂಸಾರ ಅಂತ ಸುಖವಾಗಿರಲಿ ಎನ್ನುವ ಕನಸು. ಆದರೆ, ಹೆತ್ತವಳ ಕನಸಿಗೆ ಮಗಳು ತದ್ವಿರುದ್ದ. ಅದಕ್ಕೆ ಕಾರಣ ಕಾಲೇಜು ಓದುವಾಗಲೇ ಆಗಷ್ಟೆಪ್ರೀತಿಸಿದ ಹುಡುಗನನ್ನು ಕಳೆದುಕೊಂಡಿರುವುದು. ಇಂಥ ಅಧಿಕಾರಿ ಕೈಗೆ ಒಂದು ಕೊಲೆ ಪ್ರಕರಣ ಬರುತ್ತದೆ. ಕೊಲೆ ಹಾಗೂ ಆತ್ಮಹತ್ಯೆ ಈ ಎರಡೂ ರೀತಿಯ ವರದಿಗಳ ಫೈಲ್‌ಗಳನ್ನು ಕೈಯಲ್ಲಿ ಹಿಡಿದು ತನಿಖೆಗೆ ಮುಂದಾಗುವ ವೈದೇಹಿಗೆ ಯಾವೊಂದು ಕ್ಲೂ ಕೂಡ ಸಿಗಲ್ಲ. ಕೊಲೆಯಾದವಳು ಒಬ್ಬ ಡಾಕ್ಟರ್‌. ಹೀಗಾಗಿ ಅನುಮಾನಗಳ ಬೇಲಿ ದೊಡ್ಡದಾಗಿ ಆವರಿಸಿಕೊಳ್ಳುತ್ತದೆ. ಆದರೆ, ಅದ್ಯಾವುದೂ ಅಲ್ಲ. ಆ ಸಾವಿನ ಹಿಂದೆ ತೀರಾ ಒಂದು ಆಕಸ್ಮಿಕ ಘಟನೆ ಅಡಗಿದೆ. ಆ ಘಟನೆ ಏನು ಎನ್ನುವಲ್ಲಿಗೆ ‘ಡಾಟರ್‌ ಆಫ್‌ ಪಾರ್ವತಮ್ಮ’ನ ಕತೆ ಬಂದು ನಿಲ್ಲುತ್ತದೆ. ಆ ಕೊಲೆಗೆ ಕಾರಣ ಮತ್ತು ಆ ಘಟನೆ ಏನೆಂದು ತಿಳಿಯಬೇಕು ಅಂದರೆ ನೀವು ಸಿನಿಮಾ ನೋಡಬೇಕು.

ಚಿತ್ರ ವಿಮರ್ಶೆ: ರತ್ನಮಂಜರಿ

ಚಿತ್ರದ ಮೊದಲ ಭಾಗದಲ್ಲಿ ವೈದೇಹಿ ಪಾತ್ರಕ್ಕೆ ಎರಡು-ಮೂರು ಇಂಟ್ರಡ್ರಕ್ಷನ್‌ ಕೊಂಚ ಅತಿ. ಸೆಕೆಂಡ್‌ ಲವ್‌ ಸ್ಟೋರಿ ಎಪಿಸೋಡ್‌ ಆದಷ್ಟುಕಡಿಮೆ ಸಾಕಿತ್ತೇನೋ. ತನಿಖೆ ಚುರುಕಿದ್ದರೆ ವೇಗ ಹೆಚ್ಚುತ್ತಿತ್ತು. ವಿರಾಮದ ನಂತರ ಕತೆಯ ನಿರೂಪಣೆಯಲ್ಲಿ ಬಿಗಿತನ ಕಾಯ್ದುಕೊಂಡಿದ್ದರಿಂದ ಎಲ್ಲಾ ಕೊರತೆಗಳ ಹೊರತಾಗಿ ಪಾರ್ವತಮ್ಮ ಇಷ್ಟವಾಗುತ್ತಾಳೆ. ತಾಂತ್ರಿಕವಾಗಿ ರೀರೆಕಾರ್ಡಿಂಗ್‌ ಹಾಗೂ ಮೇಕಿಂಗ್‌ ಚೆನ್ನಾಗಿದೆ. ಧನಂಜಯ್‌ ಬರೆದಿರುವ ಹಾಡಿಗೆ ಕತೆ ಪೂರಕವಾಗಿ ತಣ್ಣನೆಯ ಕ್ರೌರ್ಯದ ಕಿಕ್‌ ಇದೆ. ನಟನೆ ವಿಚಾರಕ್ಕೆ ಬಂದರೆ ಹರಿಪ್ರಿಯಾ, ಸುಮಲತಾ ಅಂಬರೀಶ್‌, ಕೆ ಎಸ್‌ ಶ್ರೀಧರ್‌, ಸೂರಜ್‌, ತರಂಗ ವಿಶ್ವ, ಪ್ರಭು, ಅನನ್ಯ ಶೆಟ್ಟಿ, ಶಶಿಕುಮಾರ್‌ ಅವರ ಪಾತ್ರಗಳು ಕತೆಯ ಜತೆಗೆ ಬಂದು ಹೋಗುತ್ತವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪ್ರಿಯಾಂಕಾ ಉಪೇಂದ್ರ ದಾಂಪತ್ಯ ಜೀವನಕ್ಕೆ 25 ವರ್ಷ: ಸ್ಟಾರ್ ಜೋಡಿಗಳ Love Story ಸೂಪರ್
ಧುರಂಧರದಲ್ಲಿ ರಣವೀರ್ ಲುಕ್‌ ಬದಲಿಸಿದ ಮಾಜಿ ಮಹಿಳಾ ಟೆಕ್ಕಿ, ಯಾರೀಕೆ ಪ್ರೀತಿಶೀಲ್? ದಿನವೊಂದಕ್ಕೆ ಎಷ್ಟು ವೇತನ??