
ಬೆಂಗಳೂರು (ಜು. 17): ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರಕ್ಕೆ ಕಿರುತೆರೆಯ ಜನಪ್ರಿಯ ನಟಿ ಸಂಗೀತಾ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿನ ಸತಿ ಪಾತ್ರದಿಂದ ಮನೆ ಮಾತಾದ ಖ್ಯಾತಿ ಸಂಗೀತಾ ಅವರದ್ದು.
ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಜೊತೆಗೂಡಿ ನಿರ್ಮಿಸುತ್ತಿರುವ ಚಿತ್ರವಿದು. ರಿಷಬ್ ಶೆಟ್ಟಿ ನಿರ್ಮಾಣದ ‘ಕಥಾ ಸಂಗಮ’ ಚಿತ್ರದ ಒಂದು ಕತೆಯನ್ನು ನಿರ್ದೇಶಿಸುರುವ ಕೆ.ಕಿರಣ್ರಾಜ್ ಈ ಚಿತ್ರದ ನಿರ್ದೇಶಕ. ಎರಡನೇ ಹಂತದ ಚಿತ್ರೀಕರಣ ಶುರುವಾಗುತ್ತಿರುವ ಸಂದರ್ಭದಲ್ಲಿ ಚಿತ್ರಕ್ಕೆ ನಾಯಕಿ ಆಯ್ಕೆ ನಡೆದಿದೆ. ಆರಂಭದಲ್ಲಿ ಹೊಸ ಪ್ರತಿಭೆಗಳಿಗೆ ಹುಡುಕಾಟ ನಡೆಸಿದ ಚಿತ್ರತಂಡ ಇದೀಗ ಕಿರುತೆರೆ ನಟಿಗೆ ಮಣೆ ಹಾಕಿದೆ. ಈ ಕುರಿತು ಸಂಗೀತಾ,
‘ಈ ಅವಕಾಶ ಸಿಕ್ಕಿದ್ದು ಅದೃಷ್ಟವೇ ಹೌದು. ಅದರಲ್ಲೂ ರಕ್ಷಿತ್ ಶೆಟ್ಟಿ ಕಾಂಬಿನೇಷನಲ್ಲಿ ಅಭಿನಯಿಸುವ ಅವಕಾಶ. ಖುಷಿ ಆಗುತ್ತಿದೆ’ ಎನ್ನುತ್ತಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದ್ದು ‘ನಮ್ಮ ಚಿತ್ರತಂಡ ಚಿತ್ರದ ಪಾತ್ರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ಹೊಸ ಪ್ರತಿಭೆಯೇ ನಾಯಕಿ ಆಗಬೇಕು ಅಂತ ಡಿಸೈಡ್ ಮಾಡಿತ್ತು. ಆಗಲೇ ಆಸಕ್ತ ಪ್ರತಿಭೆಗಳಿಂದ ಪ್ರೊಫೈಲ್ ಆಹ್ವಾನಿಸಲಾಗಿತ್ತು. ಒಟ್ಟು 2700 ಕ್ಕೂ ಹೆಚ್ಚು ಪ್ರೊಫೈಲ್ ಬಂದಿದ್ದವು. ಅದರಲ್ಲಿ 100 ರಿಂದ 150 ಪ್ರೊಫೈಲ್ ಫೈನಲ್ ಆಗಿ ಉಳಿಸಿಕೊಂಡು ಸೂಕ್ತವಾದವರನ್ನು ಆಡಿಷನ್ ಮೂಲಕ ಹುಡುಕುತ್ತಾ ಹೋದೆವು. ಆಗ ಸಿಕ್ಕಿದ್ದು ಸಂಗೀತಾ. ಈಗಾಗಲೇ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದವರು. ನಟನೆಯ ಸೂಕ್ಷ್ಮತೆಗಳು ಅವರಿಗೆ ಗೊತ್ತಿದೆ. ಅದೇ ಅವರ ಆಯ್ಕೆಗೆ ಇದ್ದ ಮೊದಲ ಕಾರಣ’ ಎನ್ನುತ್ತಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ .
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.