ಲೇಟಾದರೇನಂತೆ ಬಿಡಿ, ಒಂದೊಳ್ಳೆ ಸಿನಿಮಾ. ಅದರಲ್ಲಿ ನಾನು ನಾಯಕಿ ಎನ್ನುವುದೇ ನಂಗಿರುವ ಖುಷಿ. - ಗ್ಲಾಮರಸ್ ನಟಿ, ಬನಾರಸ್ ಬೆಡಗಿ ಶಾನ್ವಿ ಶ್ರೀವಾಸ್ತವ್ ಹೀಗೆ ಹೇಳಿದ್ದು ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಕುರಿತು.
ಗಣೇಶ್ ಅಭಿನಯದ ‘ಗೀತಾ’ ಚಿತ್ರದ ಚಿತ್ರೀಕರಣಕ್ಕೆ ಕೋಲ್ಕತ್ತಾ, ಮನಾಲಿ ಸುತ್ತು ಹಾಕಿ ಬಂದಿರುವ ಶಾನ್ವಿ ಶ್ರೀವಾಸ್ತವ್ ಈಗ ‘ಅವನೇ ಶ್ರೀಮನ್ನಾರಾಯಣ’ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನ ಹೊರವಲಯದಲ್ಲಿನ ಸೆಟ್ವೊಂದರಲ್ಲಿ ಹಾಡಿನ ಚಿತ್ರೀಕರಣ ಭರದಿಂದ ಸಾಗಿದೆ.
ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೆಚ್.ಕೆ. ಪ್ರಕಾಶ್ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಸಚಿನ್ ರವಿ. ಚಿತ್ರಕ್ಕೆ ಇನ್ನೂ 20 ದಿನಗಳ ಕಾಲದ ಚಿತ್ರೀಕರಣ ಬಾಕಿಯಿದೆ ಎನ್ನಲಾಗಿದೆ. ಹಾಡಿನ ಚಿತ್ರೀಕರಣಕ್ಕಾಗಿ ಆ ದಿನ ವಿಶೇಷವಾದ ಕೆಂಪು ಬಣ್ಣದ ಖಾದಿ ಸೀರೆ ತೊಟ್ಟು, ರಕ್ಷಿತ್ ಶೆಟ್ಟಿಅವರೊಂದಿಗೆ ಹೆಜ್ಜೆ ಹಾಕುತ್ತಿದ್ದ ನಾಯಕಿ ಶಾನ್ವಿ, ಚಿತ್ರೀಕರಣದ ನಡುವೆಯೇ ಮಾತಿಗೆ ಸಿಕ್ಕಾಗ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ಚಿತ್ರದ ವಿಶೇಷತೆ ಕುರಿತು ಮಾತನಾಡಿದರು.
ಸ್ಟಾರ್ ಜತೆಗೆ ಮಾತ್ರ ಸಿನಿಮಾ ಮಾಡೋದು ಅಂತ ನಾನೆಂದಿಗೂ ಗೆರೆ ಹಾಕಿಕೊಂಡಿಲ್ಲ. ಒಳ್ಳೆಯ ಪಾತ್ರವೇ ನನ್ನ ಆಯ್ಕೆ. ಪಾತ್ರದ ಜತೆಗೆ ಕತೆಯೂ ಚೆನ್ನಾಗಿದ್ದರೆ ಹೊಸಬರ ಜತೆಗೂ ಅಭಿನಯಿಸುತ್ತಿದ್ದೇನೆ. ಆದ್ರೆ, ಸ್ಟಾರ್ ರಕ್ಷಿತ್ ಶೆಟ್ಟಿಅವರ ಜತೆಗೆ ಅಭಿನಯಿಸುವ ಅವಕಾಶ ಇಷ್ಟುಬೇಗ ಸಿಗುತ್ತೆ ಅಂತಂದುಕೊಂಡಿರಲಿಲ್ಲ. ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ತುಂಬಾ ಖುಷಿಯಿದೆ. ಅವರೊಬ್ಬ ಒಳ್ಳೆಯ ನಟ. ನಟನೆ, ನಿರ್ದೇಶನ ಹಾಗೂ ಸಿನಿಮಾ ನಿರ್ಮಾಣದ ಮೇಲೆ ಪ್ಯಾಷನ್ ಇರುವಂತಹ ವ್ಯಕ್ತಿ. - ಶಾನ್ವಿ ಶ್ರೀವಾಸ್ತವ್