ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ ಬಿಗ್‌ಬಾಸ್ ದಯಾಳ್

By Kannadaprabha NewsFirst Published Nov 9, 2018, 12:16 PM IST
Highlights

ಸಿನಿಮಾಗಳಿಗೆ ಕತೆಗಾರರು ಮುಖ್ಯವಾದರೂ ಸಿನಿಮಾ ಕ್ಷೇತ್ರಕ್ಕೂ, ಪುಸ್ತಕಗಳಿಗೂ ಅಷ್ಟಕ್ಕಷ್ಟೇ. ಅದೂ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಪುಸ್ತಕದ ವಿಷಯ ಬರುವುದು ಅಪರೂಪದಲ್ಲಿ ಅಪರೂಪ. 

ಅಂಥದ್ದರಲ್ಲಿ ತನ್ನ ‘ಪುಟ 109’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ತಾನೇ ಪ್ರಕಟಿಸುತ್ತಿರುವ ‘ಸುಪಾರಿ ಕೊಲೆ’ನಾಟಕ ಪುಸ್ತಕವನ್ನು ಬಿಡುಗಡೆ ಮಾಡುವ ಧೈರ್ಯ ತೋರಿಸಿದ್ದು ನಿರ್ದೇಶಕ ದಯಾಳ್ ಪದ್ಮನಾಭನ್. ಅವತ್ತು ಟೂ ಇನ್ ಒನ್ ಕಾರ್ಯಕ್ರಮ. ಒಂದು ದಯಾಳ್ ನಿರ್ದೇಶನದ ‘ಪುಟ 109’ ಚಿತ್ರ ನವೆಂಬರ್ 16ಕ್ಕೆ ಬಿಡುಗಡೆಯಾಗುತ್ತಿದೆ ಎಂದು ತಿಳಿಸಲು ಕರೆದಿದ್ದ ಪತ್ರಿಕಾಗೋಷ್ಠಿ.

ಇನ್ನೊಂದು ಕತೆಗಾರ ಶಿವಕುಮಾರ್ ಮಾವಲಿ ಬರೆದಿರುವ ‘ಸುಪಾರಿ ಕೊಲೆ’ಪುಸ್ತಕ ಬಿಡುಗಡೆ. ಪುಸ್ತಕ ಬಿಡುಗಡೆ ಮಾಡಿ, ಮಾತನಾಡಲು ಕತೆಗಾರ ಜೋಗಿ ಬಂದಿದ್ದರು. ‘ಶಿವಕುಮಾರ್ ಮಾವಲಿ ತೀವ್ರವಾಗಿ ಬರೆಯುವ ಕತೆಗಾರ, ಈಗ ಅದೇ ತೀವ್ರತೆಯಲ್ಲಿ ನಾಟಕ ಬರೆದಿದ್ದಾರೆ. ಇದು ಸಿನಿಮಾ ಆಗುವ ಲಕ್ಷಣ ಹೊಂದಿದೆ’ ಎಂದರು. 

ಪುಸ್ತಕ ಬಿಡುಗಡೆಗಾಗಿಯೇ ಬಂದಿದ್ದ ಸಂಚಾರಿ ವಿಜಯ್ ಕೂಡ ನಾಟಕವನ್ನು ಮೆಚ್ಚಿ ಮಾತನಾಡಿದರು. ಇಷ್ಟೆಲ್ಲಾ ಆಗುವ ಹೊತ್ತಲ್ಲಿ ಈ ಸುಪಾರಿ ಕೊಲೆ ನಾಟಕ ಸಿನಿಮಾ ಕೂಡ ಆಗುತ್ತದೆ ಎಂಬ ಸುದ್ದಿ ತಿಳಿಯಿತು. ಅದನ್ನು ಘೋಷಿಸಿದ್ದು ಸ್ವತಃ ದಯಾಳ್. ದಯಾಳ್ ಅವರು ಸಿನಿಮಾ ಮೇಕಿಂಗ್ ಅನ್ನು ಅರೆದು ಕುಡಿದಿದ್ದಾರೆ. ಅದಕ್ಕೆ ಸಾಕ್ಷಿ ‘ಪುಟ 109’ ಮತ್ತು ‘ಸುಪಾರಿ ಕೊಲೆ’ ಸಿನಿಮಾ ಆಗುತ್ತಿದೆ ಅನ್ನುವ ಸುದ್ದಿ.

ದಯಾಳ್ ಮತ್ತು ನವೀನ್ ಕೃಷ್ಣ ಅವರು ‘ಆ ಕರಾಳ ರಾತ್ರಿ’ ಚಿತ್ರಕ್ಕಾಗಿ ಲೋಕೇಷನ್ ನೋಡಲು ಹೋದಾಗ ಒಂದು ರೋಮಾಂಚಕ ಆರ್ಕಿಟೆಕ್ಚರ್ ಇರುವ ಬಂಗಲೆ ನೋಡಿದರು. ಅದನ್ನು ನೋಡಿದ ತಕ್ಷಣ ಒಂದು ಕಾನ್ಸೆಪ್ಟ್ ನೆನಪಾಗಿದೆ. ಕರಾಳ ರಾತ್ರಿಯ ಜೊತೆಗೆ ಇನ್ನೊಂದು ಸಿನಿಮಾ ಮಾಡೋದು ಅಂತ ತೀರ್ಮಾನವಾಗಿ ಹದಿನೈದು ದಿನದಲ್ಲಿ ಸ್ಕ್ರಿಪ್ಟ್ ಬರೆದು ಒಂದು ತಿಂಗಳಲ್ಲಿ ಎರಡು ಸಿನಿಮಾ ಶೂಟಿಂಗ್ ಮಾಡಿದ್ದಾರೆ. ‘ಆ ಕರಾಳ ರಾತ್ರಿ’ ಈಗಾಗಲೇ ಬಿಡುಗಡೆಯಾಗಿದೆ. ‘ಪುಟ 109’ ಮುಂದಿನ ವಾರ ಬಿಡುಗಡೆಯಾಗಲಿದೆ. ಅಂಥದ್ದರಲ್ಲಿ ದಯಾಳ್ ‘ಸುಪಾರಿ ಕೊಲೆ’ಯನ್ನೂ ಸಿನಿಮಾ ಮಾಡುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲೇ ಇದ್ದ ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು, ತಾನು ಆ ಚಿತ್ರವನ್ನು ನಿರ್ಮಿಸುವುದಾಗಿ ಭರವಸೆ ನೀಡಿದರು. ಅಲ್ಲಿಗೆ ಲೇಖಕ ಶಿವಕುಮಾರ್ ಮಾವಲಿ ಫುಲ್‌ಖುಷ್. ಬರೆದ ಮೊದಲ ನಾಟಕವೇ ಸಿನಿಮಾ ಆಗುತ್ತಿದೆ. ಅದೇ ಖುಷಿಯಿಂದ ಮಾತನಾಡಿದ ಶಿವಕುಮಾರ್, ನಿರ್ದೇಶಕ ದಯಾಳ್ ಅವರಿಗೆ ಆಭಾರಿ ಎಂದರು. ಕಾರ್ಯಕ್ರಮದಲ್ಲಿ ಜೆಕೆ, ಅನುಪಮಾ ಗೌಡ, ವೈಷ್ಣವಿ ಚಂದ್ರನ್, ಆರ್.ಜೆ ರೋಹಿತ್, ನವೀನ್ ಕೃಷ್ಣ, ಗಣೇಶ್, ನಾರಾಯಣ್, ಕ್ರೇಜಿ ಮೈಂಡ್ಸ್ ಇದ್ದರು.

 

 

click me!