ಹೃದಯ ಕದಿಯೋಕೆ ಬರ್ತಿದ್ದಾಳೆ 'ರಂಗನಾಯಕಿ'!

By Web DeskFirst Published Apr 8, 2019, 9:16 AM IST
Highlights

ಕನ್ನಡಪ್ರಭ ಸಿನಿವಾರ್ತೆ ಆಕೆ ಕಳ್ಳಿ. ಸಣ್ಣ ವಯಸ್ಸಿನಲ್ಲೇ ಕಾರು ಅಪಘಾತವೊಂದರಲ್ಲಿ ತನ್ನ ತಂದೆ ತಾಯಿ ತೀರಿಕೊಂಡಾಗ ಅದೃಷ್ಟವಶಾತ್ ಬದುಕಿ ಉಳಿದವಳು. ಈಗ ಯಾರ ಕೈಗೋ ಸಿಕ್ಕಿ ಕಳ್ಳಿಯಾಗಿದ್ದಾಳೆ. ಇತ್ತ ಅಜ್ಜ ಆಕೆಯನ್ನು ಹುಡುಕುತ್ತಲೇ ಹದಿನೆಂಟು ವರ್ಷ ಕಳೆದಿದ್ದಾರೆ. ಈಗ ಆಕೆಗೆ ಇಪ್ಪತ್ತು ವರ್ಷ. ದೊಡ್ಡ ಕಳ್ಳಿಯಾಗಿದ್ದಾಳೆ. ತನಗೆ ಅರಿವಿಲ್ಲದಂತೆಯೇ ಅಜ್ಜನ ಮೊಮ್ಮಗಳಾಗಿ ನಟಿಸಲು ಅದೇ ಮನೆಗೆ ಬರುವ ಅವಕಾಶ ಅವಳಿಗೆ ದೊರೆಯುತ್ತದೆ. ಅಜ್ಜನಿಗೆ ಇವಳೇ ತನ್ನ ಮೊಮ್ಮಗಳೆಂದು ಗೊತ್ತಾಗುತ್ತಾ? ಮೊಮ್ಮಗಳಿಗೆ ಇದೇ ನನ್ನ ಮನೆ ಎಂದು ತಿಳಿಯುತ್ತಾ? ಎಲ್ಲರಿಗೂ ನಿಜ ವಿಷಯ ಗೊತ್ತಾದರೂ ಈ ಕಳ್ಳಿಯ ಬದುಕು ಏನಾಗುತ್ತದೆ?

ಇದು ಏಪ್ರಿಲ್  8ರಿಂದ ಕಲರ್ಸ್ ಕನ್ನಡದಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗಲಿರುವ ‘ರಂಗನಾಯಕಿ’ ಧಾರಾವಾಹಿಯ ಕತೆ. ಸೀರಿಯಲ್ ಎಂದರೆ ಕಲರ್ಸ್ ಕನ್ನಡದ ಸೀರಿಯಲ್‌ಗಳು ಎಂದು ಜನಜನಿತವಾಗಿರುವ ಸಮಯದಲ್ಲಿ ‘ರಂಗನಾಯಕಿ’ ಜನರ ಹೃದಯಕ್ಕೆ ಕನ್ನ ಹಾಕಲು ಬರುತ್ತಿದ್ದಾಳೆ. ಈ ಧಾರಾವಾಹಿಯನ್ನು ನಿರ್ಮಿಸಿ ನಿರ್ದೇಶಿಸುತ್ತಿರುವವರು ಕೆ.ಎಸ್. ರಾಮ್‌ಜಿ. ಗೋಕರ್ಣದ ಸುಂದರ ತಾಣಗಳಲ್ಲಿ ಚಿತ್ರೀಕರಣವಾಗಿರುವುದು ರಂಗನಾಯಕಿಯ ವಿಶೇಷಗಳಲ್ಲೊಂದು.

ಕನ್ನಡ ಕಿರುತೆರೆಯಲ್ಲಿ ಈ ರೀತಿಯ ದೃಶ್ಯಗಳು ಕಾಣಸಿಗುವುದು ಅಪರೂಪ. ರಂಗನಾಯಕಿ ಸಿರಿವಂತರ ಜೇಬಿಗೆ ಕತ್ತರಿ ಹಾಕುತ್ತಾ ಹೋಗುವ ರಂಗನಾಯಕಿಯ ಪ್ರೋಮೋಗಳು ಈಗಾಗಲೇ ಧಾರಾವಾಹಿ ವೀಕ್ಷಕರನ್ನು ಸೆಳೆದಿವೆ. ಇದರ ಶೀರ್ಷಿಕೆ ಗೀತೆ ಅಪ್ಪಟ ಜಾನಪದ ಶೈಲಿಯಲ್ಲಿ ರಚನೆಯಾಗಿದ್ದು ವೀಕ್ಷಕರಿಗೆ ಹೊಸ ಪುಳಕ ಹುಟ್ಟಿಸುವುದರಲ್ಲಿ ಅನುಮಾನವಿಲ್ಲ, ಕತೆಗೆ ಸರಿ ಹೊಂದುವ ಪಾತ್ರವರ್ಗ, ಸುಂದರವಾದ ಲೊಕೇಷನ್ಗಳು, ಅದ್ಭುತ ಅಭಿನಯದ ಮೂಲಕ ವಾರವಿಡೀ ಧಾರಾವಾಹಿ ನೋಡುಗರಿಗೆ ರಸದೌತಣ ನೀಡಲಿದೆ ರಂಗನಾಯಕಿ.

ಇದು ಪುಟ್ಟಣ್ಣ ಕಣಗಾಲ್ ಅವರ ಜನಪ್ರಿಯ ಸಿನಿಮಾದ ಟೈಟಲ್. ಇಂಥ ಟೈಟಲ್ ಆಯ್ಕೆ ಮಾಡುವಾಗ ಆ ಹೆಸರಿನ ಗೌರವವನ್ನು ಕಾಪಾಡುವ ಜವಾಬ್ದಾರಿಯೂ ನನ್ನ ಮೇಲಿದೆ. ಇದನ್ನು ಅರಿತೇ ಈ ಕೆಲಸಕ್ಕೆ ಕೈ ಹಾಕಿದ್ದೇನೆ. ಅದನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ನನಗಿದೆ. ರಂಗನಾಯಕಿ ಎಲ್ಲರಿಗೆ ಇಷ್ಟವಾಗಲಿದ್ದಾಳೆ - ರಾಮ್‌ಜಿ ನಿರ್ದೇಶಕ

ರಾಮ್‌ಜಿ ಒಂಥರಾ ಕನ್ನಡದ ‘ಸೀರಿಯಲ್ ಕಿಲ್ಲರ್’. ಅವರು ಮುಟ್ಟಿದ ಸೀರಿಯಲ್‌ಗಳೆಲ್ಲ ಹಿಟ್. ಕತೆ ಹೇಗೆ ಮಾಡಬೇಕು, ಪಾತ್ರಗಳಿಗೆ ನಟನಟಿಯರ ಆಯ್ಕೆ ಹೇಗೆ ಮಾಡಬೇಕು ಎಂಬುದೆಲ್ಲ ಅವರಿಗೆ ನೀರು ಕುಡಿದಷ್ಟೇ ಸುಲಭ. ‘ರಂಗನಾಯಕಿ’ಗಾಗಿ ರಾಮ್‌ಜಿ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ ಮಾತ್ರವಲ್ಲ ಒಂದು ಅತ್ಯುತ್ತಮ ಧಾರಾವಾಹಿಯನ್ನು ಸಿದ್ಧಪಡಿಸಿದ್ದಾರೆ. 

 

click me!