ಸಾಮಾನ್ಯವಾಗಿ ಸಿನಿಮಾ ಬಿಡುಗಡೆಗೆ ಹತ್ತಿರವಾಗುತ್ತಿದ್ದಂತೆಯೇ ಆ ಕುರಿತು ಪತ್ರಿಕಾಗೋಷ್ಟಿ ಮಾಡುತ್ತಾರೆ. ಇಲ್ಲವೇ ಒಂದು ದಿನ ಮೊದಲೇ ಸೆಲೆಬ್ರಿಟಿ ಶೋ ಆಯೋಜಿಸುತ್ತಾರೆ. ಆದರೆ, ಅನೀಶ್ ತೇಜೇಶ್ವರ್ ಮಾತ್ರ ತಮ್ಮ ನಟನೆಯ ಚಿತ್ರ ಬಿಡುಗಡೆಯಾಗುತ್ತಿರುವ ವಿಷಯವನ್ನು ಹೇಳುವುದಕ್ಕಾಗಿಯೇ ದೊಡ್ಡ ಮಟ್ಟದಲ್ಲಿ ಇನ್ ಡೋರ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಅನಿಶ್ ಈ ಸಾಹಸಕ್ಕೆ ಬೆನ್ನು ತಟ್ಟಿ ಬೆಂಬಲವಾಗಿ ನಿಂತಿರುವುದು ದರ್ಶನ್. ಈ ಮೂಲಕ ತೆರೆಗೆ ಬರಲು ಸಜ್ಜಾಗುತ್ತಿರುವ ಸಿನಿಮಾ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’. ಅನೀಶ್ ಅವರು ದರ್ಶನ್ ತಮ್ಮ ಚಿತ್ರದ ಪ್ರಚಾರಕ್ಕೆ ಬರುತ್ತಿರುವುದರಿಂದ ಅದಕ್ಕಾಗಿಯೇ ಒಂದು ಕಾರ್ಯಕ್ರಮ ಮಾಡುವುದಕ್ಕೆ ಮುಂದಾಗಿದ್ದಾರೆ.
ಜುಲೈ 21ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ರಂಗುರಂಗಿನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಪ್ರೀ ರಿಲೀಸ್ ಸಮಾರಂಭವನ್ನು ದರ್ಶನ್ ಉದ್ಘಾಟಿಸಲಿದ್ದಾರೆ.
‘ದರ್ಶನ್ ಅವರು ನಮ್ಮ ಚಿತ್ರದ ಪ್ರಚಾರಕ್ಕೆ ಬರುತ್ತಿದ್ದಾರೆ ಎಂದ ಮೇಲೆ ನಮಗೆ ಆನೆ ಬಲ ಬಂದಂತೆ. ಹೀಗಾಗಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಈ ವೇದಿಕೆಯಲ್ಲಿ ಚಿತ್ರದ ಬಿಡುಗಡೆಯ ದಿನಾಂಕ ಘೋಷಿಸಲಿದ್ದೇನೆ. ಅದ್ದೂರಿ ಸಮಾರಂಭದ ಮೂಲಕ ಮ್ಮ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂಬುದು ನನ್ನ ಕನಸು. ಅದು ದರ್ಶನ್ ಅವರಿಂದ ಈಡೇರುತ್ತಿದೆ. ದರ್ಶನ್ ಜತೆಗೆ ಚಿತ್ರರಂಗದ ಬೇರೆ ಬೇರೆ ನಟ ನಟಿಯರನ್ನು ಅಹ್ವಾನಿಸಲಾಗಿದೆ’ ಎನ್ನುತ್ತಾರೆ ಅನಿಶ್ ತೇಜೇಶ್ವರ್. ಅಜಿತ್ವಾಸನ್ ಉಗ್ಗಿನ ಈ ಚಿತ್ರದ ನಿರ್ದೇಶಕರು. ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆಯ ಸಿನಿಮಾ ಇದು.