
ಹೈದರಾಬಾದ್: ಮದುವೆಯಾಗುವುದಾಗಿ ನಂಬಿಸಿ ಲಂಡನ್ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರಿಗೆ 9.35 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಟಾಲಿವುಡ್ ನಟಿ ತೆಲುಗಿನ ಬಿಗ್ಬಾಸ್ ಸ್ಪರ್ಧಿ ವಿರುದ್ಧ ಪ್ರಕರಣ ದಾಖಲಾಗಿದೆ. ಲಂಡನ್ ಮೂಲದ ವಿಚ್ಚೇದಿತರು ಆಗಿರುವ ಟೆಕ್ಕಿಯೊಬ್ಬರು ಈ ದೂರು ನೀಡಿದ್ದಾರೆ. ನಟಿ ಹಾಗೂ ಆಕೆಯ ಕುಟುಂಬದ ಮೂವರ ವಿರುದ್ಧ ಕೇಂದ್ರ ಅಪರಾಧ ದಳದ ಪೊಲೀಸರು ವಂಚನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318ರ ಅಡಿ ಕೇಸ್ ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ ಮೋಸಕ್ಕೊಳಗಾದ ಈ ಸಾಫ್ಟ್ವೇರ್ ಇಂಜಿನಿಯರ್ಗೆ 2018ರಲ್ಲಿ ಹೈದರಾಬಾದ್ನಲ್ಲಿ ಸಾಮಾನ್ಯ ಸ್ನೇಹಿತನಿಂದ ಈ ನಟಿಯ ಪರಿಚಯವಾಗಿತ್ತು. ಕುಟುಂಬದ ಕಾರ್ಯಕ್ರಮಕ್ಕೆ ಹೈದರಾಬಾದ್ಗೆ ಬಂದಿದ್ದ ವೇಳೆ ಈ ಪರಿಚಯ ಆಗಿತ್ತು. ತಾನು ಅಮೆರಿಕಾದಲ್ಲಿ ಶಿಕ್ಷಣ ಪಡೆಯುತ್ತಿರುವುದಾಗಿ ಆ ಸಮಯದಲ್ಲಿ ನಟಿ ಹೇಳಿಕೊಂಡಿದ್ದಳು. ಭೇಟಿಯ ಎರಡು ತಿಂಗಳಲ್ಲಿ ಇಬ್ಬರು ಸ್ನೇಹಿತರಾಗಿದ್ದು, ಇಬ್ಬರ ನಡುವೆ ಬಹಳ ಆತ್ಮೀಯತೆ ಬೆಳೆದಿದೆ. ಅಂತಿಮವಾಗಿ ನಟಿ ತಾನು ನಿಮ್ಮನ್ನು ಮದುವೆಯಾಗುವುದಾಗಿ ಆ ಸಾಫ್ಟ್ವೇರ್ ಇಂಜಿನಿಯರ್ಗೆ ಭರವಸೆ ನೀಡಿದ್ದಾಳೆ. ಈ ವೇಳೆ ಆತ ತಾನು ವಿಚ್ಚೇದಿತ ಎಂದು ಹೇಳಿದಾಗ ನನಗದೆಲ್ಲಾ ಸಮಸ್ಯೆಯಲ್ಲ ಎಂದು ಆಕೆ ಭರವಸೆ ನೀಡಿದ್ದಳು.
ಇದಾದ ನಂತರ ಆಕೆ ತನ್ನ ಒಂದೊಂದೇ ಕಷ್ಟ ಹೇಳಿಕೊಂಡು ಈ ಸಾಫ್ಟ್ವೇರ್ ಇಂಜಿನಿಯರ್ರಿಂದ ಹಣ ವಸೂಲಿಗೆ ಇಳಿದಿದ್ದಾಳೆ. ಮೊದಲಿಗೆ ಹೆಚ್-1ಬಿ ವೀಸಾದಲ್ಲಿ ಏನೋ ಸಮಸ್ಯೆ ಇದೆ ಎಂದ ಆಕೆ ನಂತರ ತಾನು ಅಮೆರಿಕಾದಲ್ಲಿ ಶಿಕ್ಷಣ ಸಾಲ ಮಾಡಿರುವ ಬಗ್ಗೆ ಹೇಳಿದ್ದಳು. ತನ್ನ ತಂದೆ ತನಗೆ ಆರ್ಥಿಕ ಬೆಂಬಲ ನೀಡುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಿದ ಆಕೆ ತಾನು ಸಿನಿಮಾದಲ್ಲಿ ತನ್ನ ವೃತ್ತಿ ಜೀವನ ನಡೆಸುವುದಕ್ಕೆ ಬಯಸಿರುವುದಾಗಿ ಹೇಳಿ, ಈಗ ಮೋಸಕ್ಕೊಳಗಾದ ಸಾಫ್ಟ್ವೇರ್ ಇಂಜಿನಿಯರ್ ಬಳಿ ಆರ್ಥಿಕ ಸಹಾಯ ಕೇಳಿದ್ದಳು.
ದೂರು ನೀಡಿರುವ ಟೆಕ್ಕಿ ಪ್ರಕಾರ, ಅವರು ಆಕೆಯ ಎಲ್ಲಾ ಆಸೆ ಹಾಗೂ ಮಹತ್ವಾಕಾಂಕ್ಷೆಗಳಿಗೆ ಹಣಕಾಸು ಒದಗಿಸಿದ್ದಲ್ಲದೆ, ಕಾಲಾನಂತರದಲ್ಲಿ, ಫ್ಲಾಟ್, ಚಿನ್ನ, ಕಾರು ಇತ್ಯಾದಿಗಳನ್ನು ಖರೀದಿಸುವುದು ಸೇರಿದಂತೆ ವಿವಿಧ ವೆಚ್ಚಗಳಿಗೆ ಹಣ ನೀಡುತ್ತಾ ಹೋಗಿದ್ದಾರೆ. ನಟಿಯಲ್ಲದೆ, ಆಕೆಯ ಕುಟುಂಬದವರು ಕೂಡ ಅವನಿಂದ ಹಣ ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆಕೆ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರಿಂದ ಹಾಗೆ ಮಾಡಿದೆ ಎಂದು ಆ ಟೆಕ್ಕಿ ಹೇಳಿದ್ದಾರೆ.
ಆದರೆ ನಟಿಯಲ್ಲಿ ಮದುವೆಯ ವಿಚಾರ ಹೇಳಿದಾಗಲೆಲ್ಲಾ ಆಕೆ ಮತ್ತಷ್ಟು ಸಮಯ ಬೇಕು ಎಂದು ಪ್ರತಿ ಬಾರಿ ನೆಪ ಹೇಳಿ ಮದುವೆಯ ವಿಚಾರವನ್ನು ಮುಂದೂಡುತ್ತಲೇ ಇದ್ದರು. ಕೊನೆಗೆ ಜುಲೈ 2020 ರಲ್ಲಿ ಎರಡು ಕುಟುಂಬಗಳ ನಡುವೆ ಮಾತುಕತೆ ನಡೆಸುವಂತೆ ಟೆಕ್ಕಿ ಒತ್ತಾಯಿಸಿದಾಗ ಆಕೆ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದಳು. ಆಕೆಯ ತಿರಸ್ಕಾರದಿಂದ ಆಘಾತಕ್ಕೊಳಗಾದ ಟೆಕ್ಕಿ ತಾನು ಇದುವರೆಗೆ ನೀಡಿದ ಹಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಆಕೆ ತಲೆತಪ್ಪಿಸಿಕೊಂಡು ಓಡಾಡುವುದಕ್ಕೆ ಶುರು ಮಾಡಿದಳು.
ಇದನ್ನೂ ಓದಿ: ನಾಲ್ವರು ಸಾಗುತ್ತಿದ್ದ ಬೈಕ್ಗೆ ಟಿಪ್ಪರ್ ಡಿಕ್ಕಿ: ಇಬ್ಬರು ಸಾವು, ಇಬ್ಬರ ಸ್ಥಿತಿ ಗಂಭೀರ
ನಂತರ ಇವರಿಬ್ಬರ ಸಂಬಂಧದ ಮಧ್ಯೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ ಪ್ರಮುಖ ಟಾಲಿವುಡ್ ಪಾತ್ರ ಕಲಾವಿದೆಯ ಒತ್ತಾಯದ ಮೇರೆಗೆ ಈ ಆರೋಪಿ ನಟಿ 70 ಲಕ್ಷ ರೂ. ಪಾವತಿಸಲು ಒಪ್ಪಿಕೊಂಡಳು. ಆದರೆ ಆಕೆ ಆ ಮಾತಿಗೆ ಬದ್ಧವಾಗಿರಲು ವಿಫಲಳಾದಳು. ನಂತರ ನವೆಂಬರ್ 2020 ರಲ್ಲಿ ನಟಿಯ ಕುಟುಂಬವು ತನ್ನನ್ನು ಸಂಪರ್ಕಿಸಿ ಸಂಬಂಧ ಮುರಿದುಬಿದ್ದ ನಂತರ ನಟಿ ಖಿನ್ನತೆಗೆ ಒಳಗಾಗಿದ್ದಾಳೆ. ಹೀಗಾಗಿ ನನ್ನನ್ನು ಭೇಟಿಯಾಗಿ ಆಕೆಯೊಂದಿಗೆ ಸಂಬಂಧವನ್ನು ಮುಂದುವರಿಸುವಂತೆ ಒತ್ತಾಯಿಸಿದರು ಎಂದು ಹೇಳಿದ್ದಾರೆ.
ನಟಿಯ ಕೋರಿಕೆಯ ಮೇರೆಗೆ ಈ ಟೆಕ್ಕಿ ಮತ್ತೆ ಆಕೆಯನ್ನು ಮದುವೆಯಾಗಲು ನಿರ್ಧರಿಸಿದರು. 2023ರಲ್ಲಿ ಈ ವಿಚಾರವಾಗಿ ಆಕೆಯ ತಂದೆಯನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿತ್ತು. ಆದರೆ ಜುಲೈ 2025ರಲ್ಲಿ ಆಕೆ ಮತ್ತೆ ಮದುವೆಯಾಗುವ ನಿರ್ಧಾರದಿಂದ ಹಿಂದೆ ಸರಿದಳು. ಡಿಸೆಂಬರ್ 2025ರಿಂದ ಆಕೆಯಿಂದ ಈ ವಿಚಾರವಾಗಿ ಯಾವುದೇ ಸಂವಹನ ನಡೆದಿಲ್ಲ. ಆದರೆ ಕೆಲ ಸಮಯದ ನಂತರ ಆ ನಟಿ ಬೇರೆಯವರ ಜೊತೆ ಸಂಬಂಧ ಹೊಂದಿರುವುದು ಹಾಗೂ ಅದಕ್ಕಾಗಿಯೇ ಕೇವಲ ಹಣ ಸುಲಿಗೆಗಾಗಿ ತನ್ನನ್ನು ಬಳಸುತ್ತಿರುವುದು ತಿಳಿದು ಬಂದಿದೆ ಎಂದು ಟೆಕ್ಕಿ ನೀಡಿದ ದೂರನ್ನು ಉಲ್ಲೇಖಿಸಿ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ವಿಷಕಾರಿ ಹಾವಿನಿಂದ 30 ಮಕ್ಕಳ ರಕ್ಷಿಸಿ ಪ್ರಾಣ ಬಿಟ್ಟ ಶ್ವಾನ: ಬೀದಿನಾಯಿ ಕಾಳಿಗೆ ಗ್ರಾಮಸ್ಥರ ಭಾವುಕ ವಿದಾಯ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.