
ಬೆಂಗಳೂರು: ರಾಜ್ ಬಿ. ಶೆಟ್ಟಿ ನಿರ್ಮಾಣ, ಜೆ.ಪಿ. ತುಮಿನಾಡ್ ನಿರ್ದೇಶನದ Su From So ಸಿನಿಮಾ ಎರಡನೇ ವಾರವೂ ಥಿಯೇಟರ್ ಫುಲ್ ಆಗುತ್ತಿದೆ. ಜುಲೈ 25ರಂದು ಬಿಡುಗಡೆಯಾದ Su From So ಎಂಬ ಹೊಸಬರ ಸಿನಿಮಾ ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡುವತ್ತ ಮುನ್ನುಗ್ಗುತ್ತಿದೆ. ವಾರಂತ್ಯ ಮಾತ್ರವಲ್ಲ ವೀಕ್ ಡೇಸ್ಗಳಲ್ಲಿಯೂ ಜನರು ಸೋಮೇಶ್ವರದ ಸುಲೇಚನಾಳನ್ನು ಹುಡುಕಿಕೊಂಡು ಚಿತ್ರಮಂದಿರಕ್ಕೆ ಬರುತ್ತಿದೆ. ಸಿನಿಮಾ ನೋಡಿ ಬಂದ ನಂತರ ವೀಕ್ಷಕರು ಸಿನಿಮಾದ ಒಂದೊಂದೇ ಪಾತ್ರಗಳನ್ನು ನೆನಪು ಮಾಡಿಕೊಂಡು ನಗುತ್ತಿದ್ದಾರೆ. ಈ ಫೋಟೋದಲ್ಲಿರುವ ಯುವ ಕಲಾವಿದೆ ಪ್ರಕೃತಿ ಅಮಿನ್, Su From So ಸಿನಿಮಾದಲ್ಲಿ ಹೀಗೆ ಬಂದು ಹಾಗೆ ಹೋಗುತ್ತಾರೆ.
Su From So ಸಿನಿಮಾದಲ್ಲಿ ಮೂರರಿಂದ ನಾಲ್ಕು ಡೈಲಾಗ್ ಹೇಳುವ ಯುವ ಕಲಾವಿದೆ ಪ್ರಕೃತಿ ಅಮಿನ್ ನಿಮ್ಮ ಸ್ಮೃತಿಪಟಲದಲ್ಲಿ ಅಚ್ಚಳಿಯದಂತೆ ಉಳಿಯುತ್ತಾರೆ. ಚಿತ್ರದಲ್ಲಿ ಪ್ರಕೃತಿ ಸಾದಾ ಸೀದಾ ಸರಳವಾದ ಹುಡುಗಿ. Su From So ಸಿನಿಮಾದ ರಮೇಶಣ್ಣ-ಬೇಬಿಕ್ಕನ ಮಗಳಾಗಿ ಪ್ರಕೃತಿ ಅಮಿನ್ ನಟಿಸಿದ್ದಾರೆ. ಅಂದ್ರೆ ಅಶೋಕ್ನ ತಂಗಿಯಾಗಿ ಕಾಣಿಸಿಕೊಂಡಿರುವ ಪ್ರಕೃತಿ ಅಮಿನ್ ಸರಳ ನಟನೆ ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ.
Su From So ಸಿನಿಮಾದ ಟ್ರೈಲರ್ನಲ್ಲಿಯೂ ನೀವು ಪ್ರಕೃತಿ ಅಮಿನ್ ಅವರನ್ನು ಕಾಣಬಹುದಾಗಿದೆ. ತಂದೆ-ತಾಯಿ ಜೊತೆ ಮಲಗಿದ್ದ ಮಗಳು ಕೆಟ್ಟ ಕನಸು ಕಾಣುತ್ತಾಳೆ. ಕೂಡಲೇ ನಿದ್ದೆಯಿಂದ ಎದ್ದು ಗೋ ಗೋ ಗೋ ಎಂದು ಹೇಳುತ್ತಾಳೆ. ಈ ಒಂದು ಡೈಲಾಗ್ ನಿಮಗೆ ಪ್ರಕೃತಿ ಅವರನ್ನು ನೆನಪು ಮಾಡಿಕೊಳ್ಳಲು ಸಾಕು. ಟ್ರೈಲರ್ನಲ್ಲಿಯೂ ಈ ಡೈಲಾಗ್ ತೋರಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Su From So ಸಿನಿಮಾದಲ್ಲಿ ಅಶೋಕ್ನ ದೇಹದಲ್ಲಿ ಪ್ರೇತ ಆವರಿಸಿಕೊಂಡಿರುತ್ತವೆ ಎಂದು ಎಲ್ಲರೂ ನಂಬಿರುತ್ತಾರೆ. ಮರುದಿನ ಊರಿನ ಜನರೆಲ್ಲಾ ತಮ್ಮ ಮನೆ ಮುಂದೆ ಸೇರಿದ್ದಾಗ, ಅಶೋಕ್ನ ತಂಗಿ ತನ್ನ ಸ್ನೇಹಿತೆಯರ ಮುಂದೆ, ರಾತ್ರಿ ಅಣ್ಣನ ಕಣ್ಣುಗಳು ಕೆಂಪು ಆಗಿತ್ತು ಎಂದು ಆಶ್ಚರ್ಯದಿಂದ ಹೇಳುತ್ತಿರುತ್ತಾಳೆ. ನಂತರ ಅಣ್ಣನ ದೇಹದಲ್ಲಿ ಪ್ರೇತವಿರೋ ವಿಷಯದಿಂದ ಮನೆಯವರೆಲ್ಲಾ ಭಯಗೊಂಡಿರುತ್ತಾರೆ. ಆದ್ರೂ ಅನಿವಾರ್ಯವಾಗಿ ಕುಟುಂಬಸ್ಥರು ಮನೆಯಲ್ಲಿರುವಂತಾಗಿರುತ್ತದೆ.
ಇದನ್ನೂ ಓದಿ: ನಗಿಸುತ್ತಲೇ ಜೇಬು ತುಂಬಿಸಿಕೊಳ್ತಿದೆ Su From So; 6 ದಿನದಲ್ಲಿ ಹೊಸಬರ ಸಿನಿಮಾಗೆ ಸಿಕ್ಕಿದ್ದೆಷ್ಟು ಕೋಟಿ?
ರಮೇಶ್, ಬೇಬಿಕ್ಕ ಮತ್ತು ಮಗಳು ಮೂವರದ್ದು ಚಿಕ್ಕ ಪಾತ್ರಗಳಾಗಿದ್ದರೂ, ಬಂದಾಗೆಲ್ಲಾ ನಿಮ್ಮನ್ನು ನಕ್ಕು ನಲಿಸುತ್ತವೆ. ಈ ಕಾರಣದಿಂದ ಚಿತ್ರದ ಯಾವುದೇ ಪಾತ್ರವೂ ನಿಮಗೆ ಬೇಸರವನ್ನುಂಟು ಮಾಡಲ್ಲ. ಸಿನಿಮಾದ ಬಾವನ ಪಾತ್ರವಂತೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Su From So ಸಿನಿಮಾ ಸಕ್ಸಸ್ ಖುಷಿಯಲ್ಲಿ ರಾಜ್ ಬಿ. ಶೆಟ್ಟಿ, ಜೆ.ಪಿ.ತುಮಿನಾಡ್ (ಅಶೋಕ್) ಮತ್ತು ಶನೀಲ್ ಗೌತಮ್ (ರವಿ ಅಣ್ಣಾ) ಮೂವರು ಪಂಚೆ ಕಟ್ಕೊಂಡು ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕರ್ನಾಟಕ ನಮಗೆ ಕನಸಿನ ಆರಂಭವನ್ನು ನೀಡಿದೆ. ಈಗ ಕೇರಳದಲ್ಲಿಯೂ ಆರಂಭ ಪಡೆದುಕೊಂಡಿದೆ. ನಿಜವಾಗಿಯೂ ನಾವು ಧನ್ಯರು. ನಿಮ್ಮ ಪ್ರೀತಿ ನಮ್ಮ ಮೇಲೆ ಹೀಗೆಯೇ ಇರಲಿದೆ ಎಂದು ರಾಜ್ ಬಿ ಶೆಟ್ಟಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.