ತೆಲುಗು ನಿರ್ದೇಶನಕ್ಕೆ ಹಾರಿದ ರಿಯಲ್ ಸ್ಟಾರ್!

By Web DeskFirst Published Jun 10, 2019, 9:42 AM IST
Highlights

ಶನಿವಾರ ರಾತ್ರಿ ಆಂಧ್ರಪ್ರದೇಶ ವಿಶಾಖಪಟ್ಟಣಂ ವರುಣ್ ಬೀಚ್‌ನಲ್ಲಿ ‘ಐ ಲವ್ ಯೂ’ ಚಿತ್ರದ ಟ್ರೇಲರ್ ಲಾಂಚ್ ಮಾಡಿ ಮಾತನಾಡಿದ ಉಪೇಂದ್ರ, ತೆಲುಗು ಅಭಿಮಾನಿಗಳ ಉತ್ಸಾಹ, ಪ್ರೋತ್ಸಾಹಕ್ಕೆ ಬೆಂಬಲಿಸಿ ತಾವು ಕನ್ನಡ ಹಾಗೂ ತೆಲುಗಿನಲ್ಲಿ ಚಿತ್ರವೊಂದನ್ನು ನಿರ್ದೇಶಿಸುವ ವಿಷಯ ಬಹಿರಂಗ ಪಡಿಸಿದರು.

‘ಸಿನಿಮಾ ನಿರ್ದೇಶನ ಮಾಡುವುದು ನನಗೆ ಹೆಚ್ಚು ಖುಷಿ. ಮತ್ತೆ ನಾನು ಆ್ಯಕ್ಷನ್ ಕಟ್ ಹೇಳುತ್ತೇನೆ. ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ನಿರ್ದೇಶನ ಮಾಡುವುದು ಖಚಿತ’ ಎಂದರು  ಆದರೆ ಆ ಸಿನಿಮಾ ಯಾವಾಗ ಸೆಟ್ಟೇರಲಿದೆ ಎನ್ನುವುದನ್ನು ರಹಸ್ಯವಾಗಿಟ್ಟರು. ಮಾತಿನ ಮಧ್ಯೆ ಸಿಕ್ಕಾಪಟ್ಟೆ ಕೂಗಾಡುತ್ತಿದ್ದ ಅಭಿಮಾನಿಗಳ ಸಿಳ್ಳೆ ಕೇಕೆಗೆ ಪ್ರತಿಕ್ರಿಯಿಸಿ,‘ಇಲ್ಲಿನ ಅಭಿಮಾನಿಗಳಿಗೆ ನಾನು ನಟ ಎನ್ನುವುದಕ್ಕಿಂತ ನಿರ್ದೇಶಕನಾಗಿ ಹೆಚ್ಚು ಇಷ್ಟವಿದೆ. ನನ್ನ ಸಾಕಷ್ಟು ಸಿನಿಮಾಗಳು ಕನ್ನಡದಿಂದ ತೆಲುಗಿಗೆ ಬಂದಿದ್ದು ಅದಕ್ಕೆ ಕಾರಣ. ಇಷ್ಟರಲ್ಲೇ ಎರಡು ಭಾಷೆಯ ಅಭಿಮಾನಿಗಳ ಕುತೂಹಲ ತಣಿಸಲು ಕನ್ನಡ ಮತ್ತು ತೆಲುಗಿನಲ್ಲಿ ಹೊಸದೊಂದು ಸಿನಿಮಾ ನಿರ್ದೇಶನ ಮಾಡುತ್ತೇನೆ. ಅದರ ಸಿದ್ದತೆ ನಡೆದಿದೆ’ ಎಂದು ಹೇಳಿದರು.

‘ಲೈಫ್‌ನಲ್ಲಿ ಇನ್ಯಾವತ್ತೂ ಇಂಥ ಪಾತ್ರ ಮಾಡೋಲ್ಲ!’

‘ಐ ಲವ್ ಯೂ ಸಿನಿಮಾ ಎರಡು ಭಾಷೆಯಲ್ಲಿ ಬರುತ್ತಿದೆ. ಚಂದ್ರು ಜತೆಗೆ ಇದು ಎರಡನೇ ಸಿನಿಮಾ. ಇದು ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ಸಿನಿಮಾ. ನಟಿ ರಚಿತಾರಾಮ್ ಈ ಚಿತ್ರದಲ್ಲಿ ಎರಾಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಶ್ಲೀಲತೆ ಅಲ್ಲ. ಪಾತ್ರಕ್ಕೆ ತಕ್ಕಂತೆ ಅವರು ನಟಿಸಿದ್ದಾರೆ. ಅವರೂ ಕೂಡ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಬೇಡ’ ಎಂದರು.

ರಚಿತಾ ಎರ್ರಾಟಿಕ್‌ ಉಪ್ಪಿ ಪೊಯೆಟಿಕ್‌!

'ಚಂದ್ರು ನನಗೆ ಕಥೆಯ ಒಂದು ಎಳೆ ಹೇಳಿದ ತಕ್ಷಣವೇ ನಟಿಸಲು ಒಪ್ಪಿಕೊಂಡೆ. ಭಾವುಕ ಸನ್ನಿವೇಶಗಳೇ ಈ ಚಿತ್ರದ ಜೀವಾಳ. ನಿರ್ದೇಶಕರು ಅದನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾದಲ್ಲಿ ಕಮರ್ಷಿಯಲ್ ಅಂಶವೂ ಇದೆ. ಚಿತ್ರದ ಮೊದಲ ಭಾಗ ಯುವಜನರಿಗೆ ಮೀಸಲು. ದ್ವಿತೀಯಾರ್ಧವನ್ನು ಕೌಟುಂಬಿಕ ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಕ್ಲೈಮ್ಯಾಕ್ಸ್ ಎಲ್ಲರಿಗೂ ಇಷ್ಟವಾಗಲಿದೆ’ ಎಂದರು.

ನಿರ್ದೇಶಕ ಆರ್. ಚಂದ್ರು ಮಾತನಾಡಿ, ‘ಉಪೇಂದ್ರ ಅವರು ನಿರ್ದೇಶಿಸಿದ ‘ಓಂ’ ಸಿನಿಮಾದಂತೆ ನಾನು ಚಿತ್ರ ಮಾಡಲಾರೆ. ಅದನ್ನು ಮರುಸೃಷ್ಟಿಸುವುದು ಕಷ್ಟಸಾಧ್ಯ. ಆದರೆ, ‘ಓಂ’ ಚಿತ್ರದ ಕ್ಯಾರೆಕ್ಟರ್ ಇದರಲ್ಲಿದೆ. ನಾನು ಈ ಹಿಂದೆ ನಿರ್ದೇಶಿಸಿದ ‘ಚಾರ್ ಮಿನಾರ್’ ಚಿತ್ರದ ಕಥೆಯೂ ಇದೆ. ಎಲ್ಲರಲ್ಲೂ ಪ್ರೀತಿ ಇರುತ್ತದೆ. ಅದು ಹೇಗೆ ಅರಳುತ್ತದೆ ಎನ್ನುವುದು ಮುಖ್ಯ. ಚಿತ್ರದಲ್ಲಿ ನಿಜವಾದ ಪ್ರೀತಿಯ ಬಗ್ಗೆ ಹೇಳಿದ್ದೇವೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೃಹಿಣಿ ಪಾತ್ರ ಮೆಚ್ಚಿದ ಸುದೀಪ್?

ಸೋನು ಗೌಡ ತಮ್ಮ ಪಾತ್ರದ ಬಗ್ಗೆ ವಿವರಿಸಿದರು. ಸಂಗೀತ ನಿರ್ದೇಶಕ ಕಿರಣ್ ಹಾಜರಿದ್ದರು. ಗ್ಲೋಬಲ್ ಗ್ರೂಪ್ ಮನರಂಜನೆ ನೀಡಿತು. ಕನ್ನಡ ಹಾಗೂ ತೆಲುಗಿನಲ್ಲಿ ಒಂದೇ ದಿನ ಈ ಚಿತ್ರ ತೆರೆಕಾಣುತ್ತಿದೆ. ನೂರಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಕನ್ನಡ ತೆಲುಗಿನ ‘ರಂಗಸ್ಥಳಂ’ ಮತ್ತು ‘ಸರೈನೋಡು’ ಚಿತ್ರದ ಬಳಿಕ ವಿಶಾಖಪಟ್ಟಣಂನ ವರುಣ್ ಕಡಲತೀರದಲ್ಲಿ ಟ್ರೇಲರ್ ಲಾಂಚ್ ಮಾಡಿದ್ದು ‘ಐ ಲವ್ ಯು’ ಚಿತ್ರ ಮಾತ್ರ. ಹಲವು ನಿರ್ಬಂಧಗಳ ನಡುವೆಯೂ ಚಿತ್ರತಂಡ ಅನುಮತಿ ಪಡೆದುಕೊಂಡಿತ್ತು. ತೀವ್ರ ಜನ ಸಂದಣಿಯ ವರುಣ್ ಬೀಚ್ ‘ಐ ಲವ್ ಯೂ’ ಅದ್ದೂರಿ ಟ್ರೇಲರ್ ಲಾಂಚ್ ಗೆ ಸಾಕ್ಷಿಯಾಯಿತು.

 

 

click me!