ದುನಿಯಾ ವಿಜಯ್ ಅಭಿನಯದಲ್ಲಿ ‘ಸಲಗ’ ಸಿನಿಮಾ ಸೆಟ್ಟೇರುತ್ತಿದೆ. ಈಗ ನಡೆದಿರುವ ಕುತೂಹಲಕರ ಬೆಳವಣಿಗೆಯ ಪ್ರಕಾರ ಈ ಚಿತ್ರದ ನಿರ್ದೇಶನದ ಹೊಣೆಯನ್ನೂ ದುನಿಯಾ ವಿಜಯ್ ಹೊತ್ತುಕೊಂಡಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ನಂತರ ಮತ್ತೊಬ್ಬ ಸ್ಟಾರ್ ಹೀರೋ ನಿರ್ದೇಶಕನ ಪಟ್ಟಕ್ಕೆ ಏರಿದಂತಾಗಿದೆ.
ಚಿತ್ರದ ಪ್ರಮುಖ ಪಾತ್ರಗಳಲ್ಲಿ ಧನಂಜಯ್ (ಡಾಲಿ), ಸುಧೀರ್ (ಕಾಕ್ರೋಚ್), ಸಂಗೀತಕ್ಕೆ ಚರಣ್ ರಾಜ್, ಸಂಭಾಷಣೆಗೆ ಮಾಸ್ತಿ, ಛಾಯಾಗ್ರಾಹಕರಾಗಿ ಶಿವಸೇನಾ ಹಾಗೂ ಚಿತ್ರ ನಿರ್ಮಾಪಕರಾಗಿ ಕೆ ಪಿ ಶ್ರೀಕಾಂತ್ ಇದ್ದಾರೆ.
ರಾಘು ಶಿವಮೊಗ್ಗ ಸೇರಿದಂತೆ ಒಂದಿಷ್ಟುಹೆಸರುಗಳು ಈ ಚಿತ್ರದ ನಿರ್ದೇಶನದ ಅಖಾಡದಲ್ಲಿ ಕೇಳಿ ಬಂತು. ಆದರೆ, ಇವರಾರಯರೂ ನಿರ್ದೇಶಕರಲ್ಲ ಎಂಬುದು‘ಕನ್ನಡಪ್ರಭ’ದಲ್ಲೇ ಸುದ್ದಿ ಆಗಿತ್ತು. ಈಗ ಅದೇ ನಿಜವಾಗಿದೆ. ಹಾಗಾದರೆ ಈ ಚಿತ್ರದ ನಿರ್ದೇಶನದ ಹೊಣೆ ಯಾರದ್ದು ಎನ್ನುವ ಕುತೂಹಲಕ್ಕೆ ವಿಜಯ್ ಹೆಸರು ಕೇಳಿಬಂದಿದೆ. ಈ ಚಿತ್ರದ ಕತೆ ಬರೆದಿದ್ದು ಸ್ವತಃ ವಿಜಯ್. ಮೊದಲು ನಿರ್ಮಾಣ ಹೊಣೆ ಕೂಡ ಅವರ ದುನಿಯಾ ಟಾಕೀಸ್ನದ್ದಾಗಿತ್ತು. ಆದರೆ, ನಿರ್ಮಾಪಕರಾಗಿ ಕೆಪಿ ಶ್ರೀಕಾಂತ್ ತಂಡ ಸೇರಿದ್ದರು.
ಬಂಡೀಪುರ ಬೆಂಕಿನಂದಿಸಲು ಸ್ವಯಂ ಸೇವಕನಾದ ದುನಿಯಾ ವಿಜಯ್
ತಮ್ಮ ಮೊದಲ ನಿರ್ದೇಶನದ ಸಿನಿಮಾ ಆಗಿರುವ ಕಾರಣ ಶಿವರಾಜ್ಕುಮಾರ್ ಮನೆಗೆ ಭೇಟಿ ನೀಡಿ ಶಿವಣ್ಣ ಸಮ್ಮುಖದಲ್ಲಿ ಡಾ ರಾಜ್ಕುಮಾರ್ ಅವರ ಅಶೀರ್ವಾದ ಪಡೆದುಕೊಂಡಿದ್ದಾರೆ ದುನಿಯಾ ವಿಜಯ್. ಜೂನ್ 6 ರಂದು ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನಡೆದು, ಅಂದಿನಿಂದಲೇ ‘ಸಲಗ’ ಚಿತ್ರಕ್ಕೆ ಶೂಟಿಂಗ್ ಶುರುವಾಗಲಿದೆ.
ನಿರ್ದೇಶನದ ಅಂದಾಗ ಭಯ ಇದೆ. ಜತೆಗೆ ಜವಾಬ್ದಾರಿ ಹೆಚ್ಚಿದೆ. ಕತೆ ಬರೆಯುವ ನಾನೇ ನಿರ್ದೇಶಕ ಆಗಬೇಕು ಅಂತೇನು ಇರಲಿಲ್ಲ. ಆದರೆ, ಕತೆ ಬರೆದು ಮುಗಿಸಿ ಯಾರು ಇದಕ್ಕೆ ನಿರ್ದೇಶಕರು ಅಂದುಕೊಂಡಾಗ ನಮ್ಮ ಚಿತ್ರದ ಸಂಭಾಷಣೆಗಾರ, ಗೆಳೆಯ ಮಾಸ್ತಿ ಅವರು ‘ನೀವೇ ನಿರ್ದೇಶಕರಾಗಿ’ ಎಂದರು. ಆಗಿನಿಂದಲೂ ನನ್ನ ಸರಿ, ತಪ್ಪುಗಳನ್ನು ಹೇಳುತ್ತ, ತಿದ್ದುವ ನಿಜವಾದ ಗೆಳೆಯ ಮಾಸ್ತಿ. ಹಾಗಾಗಿ ನಿರ್ದೇಶನ ಒಪ್ಪಿಕೊಂಡೆ. ಇದು ಒಬ್ಬ ಸಾಮಾನ್ಯನ ಕತೆ. ‘ದುನಿಯಾ’ ಚಿತ್ರದಂತೆ ಆಪ್ತವಾಗಿ ಸಾಗುವ ಚಿತ್ರ.- ದುನಿಯಾ ವಿಜಯ್
‘ದೊಡ್ಡ ಮಟ್ಟದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ‘ಟಗರು’ ತಂಡ ‘ಸಲಗ’ ಚಿತ್ರದ ಬೆನ್ನಿಗೆ ನಿಂತಿದೆ. ಜೂನ್ 6 ರಂದು ಮಹೂರ್ತ ಮಾಡುವ ಜತೆಗೆ ಚಿತ್ರೀಕರಣ ಪ್ರಾರಂಭವಾಗಲಿದೆ. ಟಗರು ತಂಡ ಸಲಗ ತಂಡದ ಜತೆಯಾಗುವುದಕ್ಕೆ ಕಾರಣ ದುನಿಯಾ ವಿಜಯ್ ಬರೆದುಕೊಂಡಿದ್ದ ಕತೆ. ಪೊಲೀಸ್ ವ್ಯವಸ್ಥೆ ಹಾಗೂ ರೌಡಿಸಂ ಮಧ್ಯೆ ನಡೆಯುವ ಒಂದು ತಾಕಲಾಟ ಇಲ್ಲಿದೆ. ಅದೇ ಚಿತ್ರದ ದೊಡ್ಡ ಶಕ್ತಿ’ ಎನ್ನುತ್ತಾರೆ ನಿರ್ಮಾಪಕ ಕೆಪಿ ಶ್ರೀಕಾಂತ್.