ಅನಿವಾಸಿ ಭಾರತೀಯ ಉದ್ಯಮಿ, ಕನ್ನಡಿಗ ಬಿ.ಆರ್.ಶೆಟ್ಟಿ1000 ಕೋಟಿ ರು. ವೆಚ್ಚದಲ್ಲಿ ‘ಮಹಾಭಾರತ’ ಚಿತ್ರ ನಿರ್ಮಾಣ ಮಾಡುವುದಾಗಿ ಕಳೆದ ವರ್ಷ ಘೋಷಿಸಿದ್ದರು. ವಿಶೇಷವೆಂದರೆ ಬಹುತೇಕ ಇಂಥದ್ದೇ ಕಥೆಯೊಂದನ್ನು ಹೆಚ್ಚುಕಡಿಮೆ ಇಷ್ಟೇ ವೆಚ್ಚದಲ್ಲಿ ತೆರೆಗೆ ತರಲು ಖ್ಯಾತ ನಟ ಅಮೀರ್ ಖಾನ್ ಮುಂದಾಗಿದ್ದಾರೆ.
ಮುಂಬೈ: ಅನಿವಾಸಿ ಭಾರತೀಯ ಉದ್ಯಮಿ, ಕನ್ನಡಿಗ ಬಿ.ಆರ್.ಶೆಟ್ಟಿ1000 ಕೋಟಿ ರು. ವೆಚ್ಚದಲ್ಲಿ ‘ಮಹಾಭಾರತ’ ಚಿತ್ರ ನಿರ್ಮಾಣ ಮಾಡುವುದಾಗಿ ಕಳೆದ ವರ್ಷ ಘೋಷಿಸಿದ್ದರು. ವಿಶೇಷವೆಂದರೆ ಬಹುತೇಕ ಇಂಥದ್ದೇ ಕಥೆಯೊಂದನ್ನು ಹೆಚ್ಚುಕಡಿಮೆ ಇಷ್ಟೇ ವೆಚ್ಚದಲ್ಲಿ ತೆರೆಗೆ ತರಲು ಖ್ಯಾತ ನಟ ಅಮೀರ್ ಖಾನ್ ಮುಂದಾಗಿದ್ದಾರೆ. ಅವರ ಈ ಆಲೋಚನೆಗೆ ಖ್ಯಾತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ನಿರ್ಮಾಪಕರಾಗುವ ಮೂಲಕ ನೆರವಾಗುತ್ತಿದ್ದಾರೆ.
ಬಹಳ ಹಿಂದಿನಿಂದಲೂ ಮಹಾಭಾರತವನ್ನು ತೆರೆಯ ಮೇಲೆ ತರುವುದು ತಮ್ಮ ಕನಸು ಎಂದು ಅಮೀರ್ ಹೇಳಿಕೊಂಡು ಬಂದಿದ್ದರು. ಇದೀಗ ಅವರು ಈ ಕನಸನ್ನು ನನಸಾಗಿಸಲು ಮುಂದಾಗಿದ್ದಾರೆ. ಅಮೀರ್ ಜೊತೆ, ಉದ್ಯಮಿ ಮುಕೇಶ್ ಅಂಬಾನಿ ಈ ಚಿತ್ರದ ನಿರ್ಮಾಪಕರಾಗಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಏತನ್ಮಧ್ಯೆ, ಮಹಾಭಾರತ ಕಥನವು ಅತ್ಯಂತ ದೀರ್ಘಕಾಲೀನವಾಗಿರುವುದರಿಂದ, ಒಂದೇ ಚಿತ್ರದಲ್ಲಿ ಮಹಾಭಾರತದ ಸಾರಾಂಶ ಹೇಳುವುದು ಅಸಾಧ್ಯದ ಮಾತು.
ಈ ಹಿನ್ನೆಲೆಯಲ್ಲಿ ಮಹಾಭಾರತ ಚಿತ್ರವನ್ನು 3ರಿಂದ 5 ಭಾಗಗಳನ್ನಾಗಿ ವಿಭಾಗಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಬಿ.ಆರ್.ಶೆಟ್ಟಿಅವರು 2020ರಲ್ಲಿ ಮಹಾಭಾರತದ ಮೊದಲ ಭಾಗವನ್ನು ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲಗು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಜೊತೆಗೆ ಮೊದಲ ಭಾಗ ಬಿಡುಗಡೆಯಾದ 90 ದಿನಗಳಲ್ಲಿ 2ನೇ ಭಾಗ ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಿಸಿದ್ದರು.