ಕುವೆಂಪು ವಿವಿ ಘಟಿಕೋತ್ಸವ: ಸಮಸ್ಯೆ ಪರಿಹಾರಕ್ಕೆ ಬದ್ಧತೆಯ ವಿದ್ಯಾವಂತರು ಅವಶ್ಯ: ಡಾ.ಶ್ರೀದೇವಿ. ಸಿಂಗ್‌

By Kannadaprabha NewsFirst Published Jun 17, 2022, 5:20 AM IST
Highlights

*  ಹಸಿವು, ಬಡತನ, ಆಹಾರ ಸುರಕ್ಷತೆ, ಸುಸ್ಥಿರ ಕೈಗಾರಿಕೀಕರಣದತ್ತ ಯೋಚಿ​ಸು​ವುದು ಅಗತ್ಯ
*  ಪತ್ರಿಕೋದ್ಯಮ ವಿದ್ಯಾರ್ಥಿನಿಗೆ 3 ಚಿನ್ನದ ಪದಕ
*  ಪದವಿ ಇದ್ದರೂ ಕೃಷಿ ಕಾಯಕ ಮಾಡುತ್ತೇನೆ

ಶಿವಮೊಗ್ಗ(ಜೂ.17): ಜಗತ್ತು ಇಂದು ಅನೇಕ ಸಮಸ್ಯೆ- ಸವಾಲು ಎದುರಿಸುತ್ತಿದೆ. ಅವುಗಳಿಗೆ ವಸ್ತುನಿಷ್ಠ ಪರಿಹಾರ ಪಡೆಯಲು ಬದ್ಧತೆಯ ವಿದ್ಯಾವಂತರ ಅವಶ್ಯಕತೆ ಇದೆ. ಪದವಿ ಪಡೆಯುತ್ತಿರುವವರಲ್ಲಿ ಇಂತಹ ಬದ್ಧತೆ ಇದೆ ಎಂಬ ವಿಶ್ವಾಸವಿದೆ ಎಂದು ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ನಿರ್ದೇಶಕಿ ಡಾ.ಶ್ರೀದೇವಿ ಎ.ಸಿಂಗ್‌ ತಿಳಿಸಿದರು.

ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ ಗುರುವಾರ ನಡೆದ 31 ಹಾಗೂ 32ನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಒಬ್ಬರಿಗಿಂತ ಹೆಚ್ಚು ಜನರ ಅವಶ್ಯಕತೆ ಇದೆ. ಇತರರೊಡನೆ ಸಂಪರ್ಕ ಸಾಧಿಸುವುದು, ಹೊಸತನದಿಂದ ವಿಚಾರ ಮಾಡುವುದು, ಸ್ವಯಂ ನಂಬಿಕೆ ಮತ್ತು ಶ್ರಮ ಪಡುವುದು ಮುಖ್ಯ ಎಂದರು.

ಒಂದೇ ದಿನ ಕುವೆಂವು ವಿವಿ 2 ಘಟಿಕೋತ್ಸವ: ಇತಿಹಾಸದಲ್ಲೇ ಇದೇ ಮೊದಲು..!

ನಾವಿಂದು ಸವಾಲಿನ ಯುಗದಲ್ಲಿ ಜೀವಿಸುತ್ತಿದ್ದೇವೆ. ನಮ್ಮ ಜಗತ್ತು ಅಶಾಂತಿ ಮತ್ತು ಸಂಘರ್ಷಗಳಿಂದ ಕೂಡಿದೆ. ಹಸಿವು, ಬಡತನ, ಆಹಾರ ಸುರಕ್ಷತೆ, ಸುಸ್ಥಿರ ಕೈಗಾರಿಕೀಕರಣ ಮುಂತಾದ ವಿಷಯಗಳತ್ತ ನಾವು ಯೋಚಿಸಬೇಕಿದೆ. ಜೊತೆಗೆ ಸಮಾಜ ನಿರ್ಮಾಣ ಮತ್ತು ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಸರ್ವರನ್ನೊಳಗೊಂಡ ಸಮಾಜ ಸೃಷ್ಟಿಯಾಗಬೇಕಾಗಿದೆ. ಲಿಂಗ ಸಮಾನತೆ ಮತ್ತು ಸಮಾನ ಅವಕಾಶಗಳು ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ವಿಶೇಷವಾಗಿ ಯುವತಿಯರು ಎಂದೂ ಸೋಲನ್ನು ಒಪ್ಪಿಕೊಳ್ಳಬೇಡಿ. ನಿಮ್ಮ ನಿರ್ಧಾರ ಗಟ್ಟಿಯಾಗಿರಲಿ. ಸೋತರು ಕೂಡ ಮರು ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.

ದೇಶದ ಬೆನ್ನೆಲುಬಾದ ಕೃಷಿಯನ್ನೇ ಶೇ.60ರಷ್ಟುಜನ ಅವಲಂಬಿಸಿದ್ದಾರೆ. ಕೃಷಿಯೊಂದಿಗೆ ಉಪ ಉತ್ಪನ್ನಗಳ ಉತ್ಪಾದನೆ ಹೆಚ್ಚಾಗಬೇಕಿದೆ. ಕೃಷಿಯೊಂದಿಗೆ ಉಪಕಸುಬುಗಳನ್ನು ಅಳವಡಿಸಿಕೊಂಡಾಗ ಕೃಷಿಕರ ಜೀವನ ಮಟ್ಟದ ಜೊತೆಗೆ ದೇಶದ ಆರ್ಥಿಕತೆಯೂ ಅಭಿವೃದ್ಧಿ ಹೊಂದಲಿದೆ. ನಾವು ಪೌಷ್ಟಿಕ ಸುರಕ್ಷತೆ ಮತ್ತು ಜನರ ಆರೋಗ್ಯದ ಕಡೆ ಗಮನ ಹರಿಸಬೇಕಾಗಿದೆ. ಜಾಗತಿಕ ಆಹಾರಕ್ಕೆ ಸಂಬಂಧಪಟ್ಟಸವಾಲು ಅರಿತುಕೊಳ್ಳಬೇಕು. ವ್ಯವಸಾಯದ ಹೆಜ್ಜೆಗಳು ಪರಿಸರ ನಾಶಕ್ಕೆ ಕಾರಣವಾಗಬಾರದು ಎಂದರು.

ಕವಿವಿ 72ನೇ ಘಟಿಕೋತ್ಸವ: 9 ಚಿನ್ನದ ಪದಕಕ್ಕೆ ಮುತ್ತಿಟ್ಟ ಸುಜಾತಾ ಜೋಡಳ್ಳಿ

ಕೋವಿಡ್‌ ಸಾಂಕ್ರಾಮಿಕ ಸಂದರ್ಭದಲ್ಲೂ ನಿಮ್ಮ ಪರಿಶ್ರಮ, ಸಾಧನೆ ಗಣನೀಯವಾದದ್ದು. ಇದಕ್ಕೆ ಕಾರಣರಾದ ನಿಮ್ಮ ಪೋಷಕರು, ಅಧ್ಯಾಪಕರ ಬದ್ಧತೆ ಶ್ಲಾಘನೀಯ. ನಿಮ್ಮ ಕನಸುಗಳು ಸಾಕಾರವಾಗಲಿ. ಯುವ ಪದವೀಧರರಾಗಿ ವಾಸ್ತವ ಜಗತ್ತಿಗೆ ಕಾಲಿಟ್ಟಿದ್ದೀರಿ. ಜಗತ್ತಿನ ಸಮಸ್ಯೆಗಳಿಗೆ ನಿಮ್ಮಲ್ಲಿ ಹಲವರು ಪರಿಹಾರವನ್ನೂ ನೀಡಬಹುದು. ಆ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ಕುಲಸಚಿವ ಜಿ. ಅನುರಾಧ, ಪೊ›. ನವೀನ್‌ ಕುಮಾರ್‌, ಸಿಂಡಿಕೇಟ್‌ ಸದಸ್ಯರು ಇದ್ದರು.

ಸರ್ಕಾರದ ಯೋಜನೆಗಳಲ್ಲಿ ವಿದ್ಯಾರ್ಥಿಗಳ ಪಾತ್ರ ಇರಲಿ

ನೈತಿಕ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ. ಸರ್ಕಾರ ಜಾರಿಗೆ ತರುವ ಯೋಜನೆಗಳಲ್ಲಿ ಯುವ ವಿದ್ಯಾರ್ಥಿಗಳ ಪಾತ್ರ ಇರಬೇಕು ಎಂದು ರಾಜ್ಯಪಾಲ ಹಾಗೂ ಕುವೆಂಪು ವಿವಿ ಕುಲಾಧಿಪತಿ ಥಾವರ್‌ ಚಂದ್‌ ಗೆಹ್ಲೋಟ್‌ ಹೇಳಿದರು.
ಕುವೆಂಪು ವಿವಿ ಆವರಣದಲ್ಲಿ ಆಯೋಜಿಸಿದ್ದ 31, 32 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಪದವಿ ಮುಗಿದ ಮೇಲೆ ಕೇವಲ ಕೆಲಸಕ್ಕಾಗಿ ಹುಡುಕಾಟ ನಡೆಸದೇ ಅಧ್ಯಯನಶೀಲರಾಗಿ ಆ ಮೂಲಕ ದೇಶದ ಅಭಿವೃದ್ಧಿಯಲ್ಲಿ ತೊಡಗಬೇಕು. ಇದೆಲ್ಲಕ್ಕೂ ಗುಣಮಟ್ಟದ ನೈತಿಕ ಶಿಕ್ಷಣ ಬೇಕಾಗಿದೆ. ರಾಷ್ಟ್ರಕವಿ ಕುವೆಂಪು ಹೆಸರೇ ವಿಶ್ವವಿದ್ಯಾಲಯಕ್ಕೆ ಪ್ರೇರಣಾ ಶಕ್ತಿಯಾಗಿದೆ. ಕುವೆಂಪು ವಿವಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ನಾನು ಕುವೆಂಪು ವಿವಿ ವಿದ್ಯಾರ್ಥಿ ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ವಿಷಯ ಎಂದರು.

ಹೊಸ ಶಿಕ್ಷಣ ನೀತಿ ವಿದ್ಯಾರ್ಥಿಗಳಲ್ಲಿ ಮತ್ತಷ್ಟುಕ್ರಿಯಾಶೀಲತೆ, ಅಧ್ಯಯನ ಮನೋಭಾವಕ್ಕೆ ಹತ್ತಿರವಾಗುತ್ತದೆ. ಜೊತೆಗೆ ಭಾರತ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಇದು ಪ್ರೇರಕ ಮತ್ತು ಪೂರಕವಾಗುತ್ತದೆ ಎಂದರು.
ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿದರೆ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಸಾಧನೆ ಅಷ್ಟೊಂದು ತೃಪ್ತಿಕರವಾಗಿಲ್ಲ. ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಪದಕಗಳು ಕೂಡ ಸಿಗುತ್ತಿಲ್ಲ. ಆದರೆ, ದಿವ್ಯಾಂಗರ ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಪದಕಗಳು ಬರುತ್ತಿರುವುದು ಸ್ವಾಗತದ ವಿಷಯವಾಗಿದೆ. ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಗೌರವ ಡಾಕ್ಟರೇಟ್‌ ಪದವಿ ಪಡೆದವರು ಆಯಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಸಾಧನೆ ವ್ಯರ್ಥವಾಗಬಾರದು. ಮುಂದಿನ ದಿನಗಳಲ್ಲಿ ಅವರು ಮತ್ತಷ್ಟುಸಾಧನೆ ಮಾಡಬೇಕು. ಅವರ ತಿಳಿವಳಿಕೆ ಜ್ಞಾನ ಯುವ ಪೀಳಿಗೆಗೆ ಪ್ರೇರಣೆಯಾಗಿರಬೇಕು ಎಂದರು.

31ನೇ ಘಟಿಕೋತ್ಸವದ ರಾರ‍ಯಂಕ್‌, ಪದವಿ ಪಡೆದವರು

2019 -20 ಸಾಲಿನ ಘಟಿಕೋತ್ಸವದಲ್ಲಿ 61 ಪುರುಷರು ಹಾಗೂ 30 ಮಹಿಳೆಯರು ಸೇರಿ ಒಟ್ಟು 91 ಅಭ್ಯರ್ಥಿಗಳು ಪಿಎಚ್‌ಡಿ. ಪದವಿ ಪಡೆಯಲು ಅರ್ಹರಾಗಿರುತ್ತಾರೆ. 10,214 ಪುರುಷರು ಹಾಗೂ 15,221 ಮಹಿಳೆಯರು ಸೇರಿ ಒಟ್ಟು 25,435 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದೆ. ಘಟಿಕೋತ್ಸವದಲ್ಲಿ 127 ಸ್ವರ್ಣಪದಕಗಳು ಇದ್ದು, ಅವುಗಳನ್ನು 20 ಪುರುಷರು ಹಾಗೂ 51 ಮಹಿಳೆಯರು ಸೇರಿ ಒಟ್ಟು 71 ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ. 17 ನಗದು ಬಹುಮಾನಗಳು ಇದ್ದು, ಎಲ್ಲವುಗಳನ್ನು 13 ಮಹಿಳಾ ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.

32ನೇ ಘಟಿಕೋತ್ಸವದ ರಾರ‍ಯಂಕ್‌, ಪದವಿ ಪಡೆದವರು:

2020-21 ನೇ ಸಾಲಿನ ಘಟಿಕೋತ್ಸವದಲ್ಲಿ 82 ಪುರುಷರು ಹಾಗೂ 47 ಮಹಿಳೆಯರು ಸೇರಿ ಒಟ್ಟು 129 ಅಭ್ಯರ್ಥಿಗಳು ಪಿಎಚ್‌ಡಿ. ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಈ ಘಟಿಕೋತ್ಸವದಲ್ಲಿ 8324 ಪುರುಷರು ಹಾಗೂ 12,314 ಮಹಿಳೆಯರು ಸೇರಿ ಒಟ್ಟು 20638 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದೆ. ಒಟ್ಟು 132 ಸ್ವರ್ಣಪದಕಗಳಿದ್ದು, 14 ಪುರುಷರು ಹಾಗೂ 52 ಮಹಿಳೆಯರು ಸೇರಿ ಒಟ್ಟು 66 ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ. 17 ನಗದು ಬಹುಮಾನಗಳನ್ನು 13 ಮಹಿಳಾ ವಿದ್ಯಾರ್ಥಿಗಳು ಹಾಗೂ ಇಬ್ಬರು ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 15 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.

ಎರಡು ವರ್ಷಗಳ ಘಟಿಕೋತ್ಸವದಲ್ಲಿ ಕನ್ನಡ ಭಾರತಿ ವಿಭಾಗದ ದಿವ್ಯಾ ಹೆಚ್‌.ಎನ್‌.ಅತಿ ಹೆಚ್ಚು ಒಟ್ಟು 11 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದಿದ್ದಾರೆ.

31ನೇ ಘಟಿಕೋತ್ಸವದ ಭಾಗವಾಗಿ ಸಾರ್ವಜನಿಕ ಆಡಳಿತದಲ್ಲಿ ಅಪಾರ ಸೇವೆ ಸಲ್ಲಿಸಿರುವ ಸಾರ್ವಜನಿಕ ಆಡಳಿತದಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಾಗೂ ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ. ಎಚ್‌. ಶಂಕರಮೂರ್ತಿ, ಶಿಕ್ಷಣತಜ್ಞೆ ಗೀತಾ ನಾರಾಯಣನ್‌ ಹಾಗೂ ಯೋಗ ಗುರು ಭ. ಮ.ಶ್ರೀಕಂಠ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.

32ನೇ ಘಟಿಕೋತ್ಸವದ ಭಾಗವಾಗಿ ಶಿಕ್ಷಣತಜ್ಞ, ವಿಶ್ರಾಂತ ಕುಲಪತಿ ಪ್ರೊ.ಟಿ.ವಿ. ಕಟ್ಟಿಮನಿ, ಅಂಧ ಕ್ರಿಕೆಟಿಗ ಮಹಾಂತೇಶ್‌ ಜಿ. ಕಿವಡಸಣ್ಣವರ್‌, ಯೋಗಗುರು ಬಾ.ಸು.ಅರವಿಂದ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. 

ಚಿನ್ನದ ಪಡೆದವರ ಮಾತು: ಕನ್ನಡ ಬದುಕಿನ ಪ್ರೀತಿ ಕಲಿಸುತ್ತದೆ: ಪ್ರಣೀತಾ

ನಮ್ಮ ತಂದೆ ತಾಯಿ ಓದು ಎಂದು ಎಂದೂ ಹೇಳಲಿಲ್ಲ. ಒತ್ತಡವೂ ಇರಲಿಲ್ಲ. ಸುವರ್ಣ ಪದಕ ಸಿಗುತ್ತೆ ಎಂಬ ನಂಬಿಕೆಯೂ ಇರಲಿಲ್ಲ. ಆದರೆ, ಆಸಕ್ತಿ ಮತ್ತು ಆತ್ಮಸ್ಥೈರ್ಯದಿಂದ ಅಧ್ಯಯನ ನಡೆಸಿದ್ದೆ. ಅದು ಫಲ ಕೊಟ್ಟಿದೆ ಎಂಬುದು 31 ನೇ ಘಟಿಕೋತ್ಸವದಲ್ಲಿ ಕನ್ನಡ ವಿಭಾಗದಲ್ಲಿ 8 ಚಿನ್ನದ ಪದಕ ಪಡೆದ ಎನ್‌.ಪಿ.ಪ್ರಣೀತಾ ಅವರ ಅಭಿಪ್ರಾಯ.

ಜೈಲಲ್ಲಿ ಶಿಕ್ಷೆಯೊಂದಿಗೆ ಶಿಕ್ಷಣ ಮುಂದುವರಿಕೆ: ಐವರು ಕೈದಿಗಳಿಗೆ ಕುವೆಂಪು ವಿವಿ ಪದವಿ ಕಿರೀಟ..!

ರಾರ‍ಯಂಕ್‌ ಪಡೆದವರಿಗೆ ಉದ್ಯೋಗ ಸಿಕ್ಕೇ ಸಿಗುತ್ತೆ ಎಂಬ ನಂಬಿಕೆ ಬೇಡ. ಸರ್ಕಾರಿ ಉದ್ಯೋಗವಲ್ಲದೇ ಬೇರೆ ಬೇರೆ ಕಡೆ ವಿಪುವಾದ ಅವಕಾಶಗಳು ನನಗಿವೆ. ಅಂಕಗಳಿಗಿಂತ ನಮ್ಮ ಕ್ರಿಯಾಶೀಲತೆ ಮತ್ತು ತಿಳಿವಳಿಕೆ ಉದ್ಯೋಗ ದೊರಕಿಸಿಕೊಡುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿಯೇ ಯುವಕರು ಕೇವಲ ಅಂಕಗಳ ಹಿಂದೆ ಬೀಳದೆ, ಕ್ರೀಡೆ, ಕರಕುಶಲ, ಮಾತಿನ ಜಾಣ್ಮೆ, ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಖಂಡಿತ ಬೇಡ. ನಾನು ಕನ್ನಡ ಭಾಷೆಯನ್ನೇ ತೆಗೆದುಕೊಂಡು ಓದಿದ್ದೇನೆ. ಪದವಿಯಲ್ಲೂ ಕನ್ನಡವನ್ನೇ ಮುಖ್ಯ ಭಾಷೆಯನ್ನಾಗಿ ಓದಿದ್ದೇನೆ. ಕನ್ನಡ ನನಗೆ ಬದುಕನ್ನು ಪ್ರೀತಿಸಲು ಕಲಿಸುತ್ತದೆ. ಪ್ರೊಫೆಸರ್‌ ಆಗಬೇಕು ಎಂಬ ಆಸೆ ಹೊಂದಿದ್ದೇನೆ ಎಂದು ತಿಳಿಸಿದರು.

ಪದವಿ ಇದ್ದರೂ ಕೃಷಿ ಕಾಯಕ ಮಾಡುತ್ತೇನೆ

ನಾನು ಪದವಿ ಮುಗಿಸಿದ ನಂತರ ಹಲವು ಕಾಲೇಜಿನಿಂದ ಉಪನ್ಯಾಸ ಕೆಲಸಕ್ಕೆ ಅಹ್ವಾನ ಬಂದಿತ್ತು. ಆದರೆ, ನಮಗೆ 12 ಎಕರೆ ಜಮೀನು ಇದೆ. ತಂದೆಗೆ ಆರೋಗ್ಯ ಸರಿ ಇಲ್ಲದ ಕಾರಣ ನಾನು ಯಾವ ಕೆಲಸಕ್ಕೂ ಹೋಗದೆ ಕೃಷಿಕನಾಗಿ ಇರುವ ಜಮೀನನ್ನು ನೋಡಿಕೊಂಡು ಇರಬೇಕು ಬಯಸಿದ್ದೇನೆ ಎಂದು 31ನೇ ಘಟಿಕೋತ್ಸವದಲ್ಲಿ 5 ಚಿನ್ನದ ಪದಕ ಪಡೆದಿರುವ ಎಂಬಿಎ ವಿದ್ಯಾರ್ಥಿ ಕೆ.ಯು.ಯತೀಶ್‌ ತಿಳಿ​ಸಿ​ದರು.

ಉಪನ್ಯಾಸಕಿ ಆಗುವ ಬಯಕೆ

ತಂದೆ, ತಾಯಿ ಅಸೆಯಂತೆ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಪಿಎಚ್‌ಡಿ ಮಾಡಿ, ಉಪನ್ಯಾಸಕಿಯಾಗುವ ಆಸೆ ಇದೆ ಎನ್ನುತ್ತಾರೆ 31ನೇ ಘಟಿಕೋತ್ಸದಲ್ಲಿ 5 ಚಿನ್ನದ ಪದಕ ಪಡೆದ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿನಿ ಎಸ್‌.ಅನುಷಾ.

ಪತ್ರಿಕೋದ್ಯಮ ವಿದ್ಯಾರ್ಥಿನಿಗೆ 3 ಚಿನ್ನದ ಪದಕ

32ನೇ ಘಟಿಕೋತ್ಸವದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿನಿ ಅಂಜುಮ್‌ ಬಷೀರ್‌ಸಾಬ್‌ 3 ಚಿನ್ನದ ಪದಕ ಪಡೆದಿದ್ದಾರೆ. ನಾನು ಚೆನ್ನಾಗಿ ಓದಬೇಕು ಎಂಬುದು ಅಮ್ಮನ ಅಸೆ. ಅವರ ಆಸೆಯಂತೆ ಓದಿದ್ದೇನೆ. ಆದರೆ, ರಾರ‍ಯಂಕ್‌ ನಿರೀಕ್ಷೆ ಇರಲಿಲ್ಲ. ಮೂರು ಚಿನ್ನದ ಪದಕ ಬಂದಿರುವುದು ಹೆಚ್ಚು ಸಂತಸ ನೀಡಿದೆ ಎಂಬುದು ಅಂಜುಮ್‌ ಬಷೀರ್‌ಸಾಬ್‌ ಮಾತು.
 

click me!