Covid 19 Spike: ಇಂದಿನಿಂದ 1-8ನೇ ಭೌತಿಕ ತರಗತಿ ಬಂದ್‌

By Kannadaprabha NewsFirst Published Jan 13, 2022, 4:11 AM IST
Highlights

*  ಹು-ಧಾ ಮಹಾನಗರ, ಧಾರವಾಡ ಮತ್ತು ಹುಬ್ಬಳ್ಳಿ ಗ್ರಾಮೀಣದಲ್ಲಿ ಮಾತ್ರ ಶಾಲೆ ಬಂದ್‌
*  ಶಾಲೆ ಬಂದ್‌ ಇದ್ದರೂ ಶಿಕ್ಷಕರು ಶಾಲೆಗೆ ಬಂದು ಆನ್‌ಲೈನ್‌ ಪಾಠ ಮಾಡಲು ಸೂಚನೆ
*  ಧಾರವಾಡ ಜಿಲ್ಲೆಯಲ್ಲಿ ಇಲ್ಲಿಯ ವರೆಗೂ 50 ಮಕ್ಕಳಿಗೆ ಮೂವರು ಶಿಕ್ಷಕರಿಗೆ ಕೋವಿಡ್‌ ದೃಢ
 

ಧಾರವಾಡ(ಜ.13):  ಜಿಲ್ಲೆಯಾದ್ಯಂತ ಕೋವಿಡ್‌(Covid19) ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ-ಧಾರವಾಡ(Hubballi-Dharwad) ಮಹಾನಗರ, ಹುಬ್ಬಳ್ಳಿ ಮತ್ತು ಧಾರವಾಡ ಗ್ರಾಮೀಣ ತಾಲೂಕಿನಾದ್ಯಂತ ಭೌತಿಕ ತರಗತಿಗಳು9Offline Classes), ವಸತಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳನ್ನೊಳಗೊಂಡು ಎಲ್ಲ ಮಾಧ್ಯಮದ 1ರಿಂದ 8ನೇ ತರಗತಿ ವರೆಗಿನ ಶಾಲೆಗಳನ್ನು ಜ. 13ರಿಂದ ಮುಂದಿನ ಆದೇಶದ ವರೆಗೆ ತೆರೆಯದಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.

ಜ. 11ರಂದು ಧಾರವಾಡ ತಾಲೂಕಿನ ಪಾಸಿಟಿವಿಟಿ ದರ(Positivity Rate) ಶೇ. 5.38 ಹಾಗೂ ಹುಬ್ಬಳ್ಳಿ ತಾಲೂಕಿನಲ್ಲಿ ಪಾಸಿಟಿವಿಟಿ ದರ ಶೇ. 11.76ರಷ್ಟು ಇದೆ. ಶಾಲೆಗಳಲ್ಲಿ ಕೋವಿಡ್‌-19 ಕ್ಲಸ್ಟರ್‌ ಪ್ರಕರಣಗಳು ಕಂಡು ಬಂದಿವೆ. ಈ ಕುರಿತು ಜ. 11ರಂದು ಜರುಗಿದ ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ವಿವರವಾಗಿ ಚರ್ಚಿಸಿ ವೈರಾಣು ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ಮಕ್ಕಳ(Children) ಆರೋಗ್ಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶಿಸಿದ್ದಾರೆ.

School Holiday ಶಾಲೆ ಬಂದ್ ಬಗ್ಗೆ ಸಭೆ, ಜಿಲ್ಲಾಧಿಕಾರಿಗಳಿಗೆ ಮಹತ್ವದ ಸೂಚನೆ ಕೊಟ್ಟ ಶಿಕ್ಷಣ ಸಚಿವ

ಆನ್‌ಲೈನ್‌ ಕ್ಲಾಸ್‌ ತೆಗೆದುಕೊಳ್ಳಿ:

ಜಿಲ್ಲಾಧಿಕಾರಿ ಆದೇಶದ ಅನ್ವಯ ಡಿಡಿಪಿಐ ಎಸ್‌.ಎಸ್‌. ಕೆಳದಿಮಠ ಅವರು ಎಲ್ಲ ಶಾಲೆಗಳಿಗೂ ಸೂಚನೆ ನೀಡಿದ್ದು, ಈ ಎಲ್ಲ ತಾಲೂಕುಗಳ ಶಿಕ್ಷಕರು(Teachers) ದಿನನಿತ್ಯದಂತೆ ಶಾಲೆಗೆ ತೆರಳಿ ಆನ್‌ಲೈನ್‌ ಮೂಲಕ ಮಕ್ಕಳಿಗೆ ಪಠ್ಯ ಬೋಧನೆ ಮಾಡಬೇಕು. 9 ಹಾಗೂ 10ನೇ ವರ್ಗದ ತರಗತಿಗಳನ್ನು ಕೋವಿಡ್‌ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ದಿನನಿತ್ಯದಂತೆ ಭೌತಿಕ ಕ್ಲಾಸ್‌ಗಳನ್ನು ನಡೆಸಬೇಕು ಎಂದಿದ್ದಾರೆ.

ಹಾಗೆಯೇ, ಜಿಲ್ಲೆಯಲ್ಲಿ ಜ. 12ರ ವರೆಗೆ ಒಟ್ಟು 50 ಮಕ್ಕಳಲ್ಲಿ ಹಾಗೂ ಮೂವರು ಶಿಕ್ಷಕರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದೆ. ಧಾರವಾಡ ಗ್ರಾಮೀಣ ವಲಯದಲ್ಲಿ 9 ಬಾಲಕರಿಗೆ ಹಾಗೂ 3 ಬಾಲಕಿಯರಿಗೆ ಒಟ್ಟು 12 ಜನರಿಗೆ ಮತ್ತು ಧಾರವಾಡ ನಗರ ವಲಯದಲ್ಲಿ ಓರ್ವ ಬಾಲಕಿಗೆ ಹಾಗೂ ಹುಬ್ಬಳ್ಳಿ ನಗರ ವಲಯದಲ್ಲಿ 19 ಬಾಲಕರಿಗೆ 14 ಬಾಲಕಿಯರು ಸೇರಿ 33 ಜನರಲ್ಲಿ ಕೋವಿಡ್‌ ಸೋಂಕು ಕಂಡು ಬಂದಿದೆ. ಧಾರವಾಡ ಗ್ರಾಮೀಣ, ಧಾರವಾಡ ನಗರ ಮತ್ತು ಹುಬ್ಬಳ್ಳಿ ನಗರ ಸೇರಿ ಒಟ್ಟು 50 ವಿದ್ಯಾರ್ಥಿಗಳಲ್ಲಿ(Students) ಕೋವಿಡ್‌ ಸೋಂಕು ಪತ್ತೆಯಾಗಿದೆ. ಜತೆಗೆ ಓರ್ವ ಪುರುಷ ಹಾಗೂ ಇಬ್ಬರು ಮಹಿಳಾ ಶಿಕ್ಷಕಿಯರಲ್ಲಿಯೂ ಕೋವಿಡ್‌ ಸೋಂಕು ಪತ್ತೆಯಾಗಿದೆ. ಸೋಂಕು ಕಂಡು ಬಂದ ಶಾಲೆಗಳಲ್ಲಿ ಸಂಪೂರ್ಣ ಸ್ಯಾನಿಟೈಸ್‌ ಮಾಡಿ ಸ್ವಚ್ಛಗೊಳಿಸಲಾಗಿದೆ. ಸೋಂಕಿತ ಮಕ್ಕಳು ಹಾಗೂ ಶಿಕ್ಷಕರು ಆರೋಗ್ಯವಾಗಿದ್ದು, ಹೋಂ ಕ್ವಾಂರಟೈನ್‌(Home Quarantine) ಆಗಿ ಚಿಕಿತ್ಸೆ ಪಡೆದಿದ್ದಾರೆ.

Covid in Karnataka: ಕೊಂಚ ಸಮಾಧಾನಕರ ಸುದ್ದಿ: ಶೇ. 6 ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲು

ಅಳ್ನಾವರ, ಹುಬ್ಬಳ್ಳಿ, ಕುಂದಗೋಳ, ನವಲಗುಂದ ಅಣ್ಣಿಗೇರಿ ತಾಲೂಕುಗಳ ಶಾಲೆಗಳಲ್ಲಿ ಯಾವುದೇ ಕೋವಿಡ್‌ ಪ್ರಕರಣಗಳು ಇಲ್ಲಿಯವರೆಗೆ ಕಂಡು ಬಂದಿಲ್ಲ. ಶಾಲಾ ಮುಖ್ಯಸ್ಥರಿಗೆ ಮಕ್ಕಳ ಆರೋಗ್ಯ ಸುರಕ್ಷತೆ ಕುರಿತು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಈಗಾಗಲೇ ನಿರ್ದೇಶನ ನೀಡಲಾಗಿದೆ. ಪ್ರತಿ ಮಗು ತಪ್ಪದೇ ಮಾಸ್ಕ್‌ ಧರಿಸಿ ಶಾಲೆ ಒಳಬರುವಂತೆ ಮತ್ತು ಪರಸ್ಪರ ಸಾಮಾಜಿಕ ಅಂತರ ಕಾಪಾಡುವಂತೆ ಸೂಚಿಸಲಾಗಿದೆ. ಒಂದೇ ವರ್ಗದಲ್ಲಿ 100ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ಬ್ಯಾಚ್‌ ಮೂಲಕ ವರ್ಗಗಳನ್ನು ನಡೆಸುವಂತೆ ತಿಳಿಸಲಾಗಿದೆ. ಒಟ್ಟಾರೆಯಾಗಿ ಮಕ್ಕಳ ಹಾಗೂ ಶಿಕ್ಷಕರ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಎಲ್ಲ ಶಾಲೆಯ ಪ್ರಧಾನ ಗುರುಗಳಿಗೆ ಮತ್ತು ಮುಖ್ಯೋಪಾಧ್ಯಾಯರಿಗೆ ಉಪನಿರ್ದೇಶಕ ಎಸ್‌.ಎಸ್‌. ಕೆಳದಿಮಠ ಸೂಚನೆ ನೀಡಿದ್ದಾರೆ.

ಇಂದು ನಾಲ್ಕು ಪ್ರಕರಣ..

ಇಲ್ಲಿಯ ವರೆಗೆ ಧಾರವಾಡ ಜಿಲ್ಲೆಯಲ್ಲಿ ಒಟ್ಟು 50 ಮಕ್ಕಳಿಗೆ ಕೋವಿಡ್‌ ವೈರಾಣು ಪತ್ತೆಯಾಗಿದ್ದು, ಈ ಪೈಕಿ ಬುಧವಾರ ನಾಲ್ಕು ಮಕ್ಕಳಿಗೆ ಕೋವಿಡ್‌ ಪಾಸಿಟಿವ್‌ ದೃಢಗೊಂಡಿದೆ. ಹುಬ್ಬಳ್ಳಿಯ ವಿಶ್ವೇಶ್ವರ ನಗರ ಸರ್ಕಾರಿ ಶಾಲೆಯಲ್ಲಿ ಒಂದು ಹಾಗೂ ಸೇಂಟ್‌ ಆಂಥೋನಿ ಶಾಲೆಯ ಮೂವರು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಈ ಶಾಲೆಗಳನ್ನು ಸ್ಯಾನಿಟೈಜ್‌ ಮಾಡಲಾಗಿದ್ದು ಎಚ್ಚರಿಕ್ಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
 

click me!