Mumbai Accident: ಮಹಿಳಾ ಸಿಇಒ ಬಲಿ; ಕಾರು ಡಿಕ್ಕಿ ಹೊಡೆದ ರಭಸಕ್ಕೆ ಹಲವು ಅಡಿ ದೂರ ಹಾರಿದ ಜಾಗರ್ ದೇಹ

By BK AshwinFirst Published Mar 19, 2023, 3:43 PM IST
Highlights

ರಾಜಲಕ್ಷ್ಮೀ ತಂತ್ರಜ್ಞಾನ ಕಂಪನಿಯೊಂದರ ಸಿಇಒ ಆಗಿದ್ದರು. ಅವರು ಫಿಟ್ನೆಸ್ ಫ್ರೀಕ್ ಮತ್ತು ಜಾಗರ್‌ ಆಗಿದ್ದರು. ಶಿವಾಜಿ ಪಾರ್ಕ್‌ನ ಜಾಗರ್ ಗ್ರೂಪ್‌ನಲ್ಲಿ ರಾಜಲಕ್ಷ್ಮೀ ಇದ್ದರು ಮತ್ತು ಈ ಗುಂಪು ನಿಯಮಿತವಾಗಿ ಭಾನುವಾರದಂದು ಜಾಗಿಂಗ್ ಮಾಡುತ್ತದೆ.

ಮುಂಬೈ (ಮಾರ್ಚ್‌ 19, 2023): ಮಹಾರಾಷ್ಟ್ರ ರಾಜಧಾನಿ ಮುಂಬೈನ ವರ್ಲಿ ಸೀ ಫೇಸ್‌ನಲ್ಲಿ ಭೀಕರ ಅಪಘಾತವಾಗಿದ್ದು, ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಜಾಗಿಂಗ್ ಮಾಡುತ್ತಿದ್ದ 42 ವರ್ಷದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಆಕೆ ಕಂಪನಿಯೊಂದರ ಸಿಇಒ ಎಂದು ತಿಳಿದುಬಂದಿದೆ. ಪೊಲೀಸರ ಪ್ರಕಾರ, ಭಾನುವಾರ ಬೆಳಗ್ಗೆ 6.30 ರ ಸುಮಾರಿಗೆ ವರ್ಲಿ ಮಿಲ್ಕ್ ಡೈರಿ ಬಳಿ ಅಪಘಾತ ಸಂಭವಿಸಿದೆ. ಮೃತ ಮಹಿಳೆಯನ್ನು ದಾದರ್ ಮಾಟುಂಗಾ ಪ್ರದೇಶದ ನಿವಾಸಿ ರಾಜಲಕ್ಷ್ಮಿ ರಾಮ್ ಕೃಷ್ಣನ್ ಎಂದು ಗುರುತಿಸಲಾಗಿದೆ.

ಅಪಘಾತದ ಪರಿಣಾಮವು ತುಂಬಾ ತೀವ್ರವಾಗಿತ್ತು, ಮಹಿಳೆ ಗಾಳಿಯಲ್ಲಿ ಹಲವಾರು ಅಡಿಗಳಷ್ಟು ದೂರ ಎಸೆಯಲ್ಪಟ್ಟು ತಲೆಗೆ ಗಂಭೀರವಾದ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಾಜಲಕ್ಷ್ಮೀ ತಂತ್ರಜ್ಞಾನ ಕಂಪನಿಯೊಂದರ ಸಿಇಒ ಆಗಿದ್ದರು. ಅವರು ಫಿಟ್ನೆಸ್ ಫ್ರೀಕ್ ಆಗಿದ್ದರು ಮತ್ತು ಜಾಗರ್‌ ಆಗಿದ್ದರು. ಶಿವಾಜಿ ಪಾರ್ಕ್‌ನ ಜಾಗರ್ ಗ್ರೂಪ್‌ನಲ್ಲಿ ರಾಜಲಕ್ಷ್ಮೀ ಇದ್ದರು ಮತ್ತು ಈ ಗುಂಪು ನಿಯಮಿತವಾಗಿ ಭಾನುವಾರದಂದು ಜಾಗಿಂಗ್ ಮಾಡುತ್ತದೆ.

ಇದನ್ನು ಓದಿ: ರಸ್ತೆ ಮಧ್ಯದಲ್ಲೇ ಮಹಿಳೆಗೆ ಥಳಿತ; ಬಲವಂತವಾಗಿ ಕ್ಯಾಬ್‌ನೊಳಗೆ ತಳ್ಳಿದ ಕಿರಾತಕ..! ವಿಡಿಯೋದಲ್ಲಿ ಸೆರೆ..

ಇನ್ನು, ಮಹಿಳೆಯ ಪತಿ ಸಹ ಜಾಗರ್‌ ಆಗಿದ್ದು, ಪೊಲೀಸರು ಮತ್ತು ಅವರ ಪತ್ನಿಯ ಸಹೋದ್ಯೋಗಿ ನಿಮ್ಮ ಪತ್ನಿ ಅಪಘಾತಕ್ಕೀಡಾಗಿದ್ದಾರೆ ಎಂದು ಕರೆ ಮಾಡಿ ವರ್ಲಿಗೆ ಬರುವಂತೆ ಕೇಳಿಕೊಂಡರು. ಮಹಿಳೆಯನ್ನು  ಸಮೀಪದ ಪೋದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. 

ಸ್ಥಳೀಯರು ಚಾಲಕನನ್ನು ಹಿಡಿದು ವರ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಪತ್ರಕರ್ತೆ ಪ್ರೀತಿ ಸೋಂಪುರ ಹೇಳಿದ್ದಾರೆ. ಎಲೆಕ್ಟ್ರಿಕ್ ಟಾಟಾ ನೆಕ್ಸಾನ್ ಕಾರು ಚಲಾಯಿಸುತ್ತಿದ್ದ ಅಪಘಾತ ಮಾಡಿದವನನ್ನು ಟಾರ್ಡಿಯೊ ನಿವಾಸಿ ಸುಮೇರ್ ಮರ್ಚೆಂಟ್ (23) ಎಂದು ಗುರುತಿಸಲಾಗಿದೆ. ಸುಮೇರ್ ತನ್ನ ಸ್ನೇಹಿತನೊಂದಿಗೆ ತನ್ನ ಮಹಿಳಾ ಸ್ನೇಹಿತೆಯನ್ನು ಡ್ರಾಪ್ ಮಾಡಲು ಶಿವಾಜಿ ಪಾರ್ಕ್ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ತನ್ನ ಕತ್ತು ತಾನೇ ಕೊಯ್ಕೊಂಡ: ಚಾಕು, ಪಿಸ್ತೂಲ್ ಹಿಡಿದು ಗಾಳೀಲಿ ಗುಂಡು ಹಾರಿಸುತ್ತಾ ಓಡಿದ ಭೂಪ..!

ವರ್ಲಿ ಪೊಲೀಸರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸುಮೇರ್ ಮರ್ಚೆಂಟ್‌ನನ್ನು ದಾದರ್‌ನಲ್ಲಿರುವ ರಜಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಕಾರು ಅತಿ ವೇಗದಲ್ಲಿ ಸಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಐಪಿಸಿ ಸೆಕ್ಷನ್‌ಗಳ ಕುರಿತು ಪೊಲೀಸರು ಇನ್ನೂ ನಿರ್ಧರಿಸಿಲ್ಲ ಮತ್ತು ಆತ ಮದ್ಯದ ಅಮಲಿನಲ್ಲಿದ್ದನೇ ಎಂದು ಪರಿಶೀಲಿಸಲು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿರುವುದಾಗಿಯೂ ಪೊಲೀಸರು ಹೇಳಿದ್ದಾರೆ.

ಮಹಿಳೆಗೆ ಡಿಕ್ಕಿ ಹೊಡೆಯುವ ಮೊದಲು ವಾಹನದ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿರುವುದಾಗಿ ಸುಮೇರ್ ಮರ್ಚೆಂಟ್‌ ಪೊಲೀಸರಿಗೆ ತಿಳಿಸಿದ್ದಾರೆ. "ನಾವು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಮತ್ತು ಸಿಸಿಟಿವಿ ದೃಶ್ಯಗಳನ್ನು ಹಾಗೂ ಅಪಘಾತ ಮಾಡಿದವನ ರಕ್ತದ ಮಾದರಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುತ್ತೇವೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ" ಎಂದು ಮುಂಬೈನ ವರ್ಲಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 


ಇದನ್ನೂ ಓದಿ; ಕೈದಿಗಳೊಂದಿಗೆ ಜೈಲಲ್ಲೇ ಮಹಿಳಾ ಗಾರ್ಡ್ಸ್‌ ಸೆಕ್ಸ್‌: 18 ಮಂದಿ ವಜಾ, ಮೂವರು ಕಂಬಿ ಹಿಂದೆ..!

click me!