ಶಾಲಾ ಶೌಚಾಲಯದಲ್ಲಿ ಹೆರಿಗೆ: ಪೆನ್ನಿಂದ ಹೊಕ್ಕುಳಬಳ್ಳಿ ಕತ್ತರಿಸಿಕೊಂಡ ವಿದ್ಯಾರ್ಥಿನಿ

By Suvarna NewsFirst Published Sep 6, 2022, 8:43 PM IST
Highlights

Student gives birth in school: ವಿದ್ಯಾರ್ಥಿಯೊಬ್ಬಳು ಶಾಲಾ  ಶೌಚಾಲಯದಲ್ಲೆಯೇ ಮಗುವಿಗೆ ಜನ್ಮ ನೀಡಿದ ಘಟನೆ  ತಮಿಳುನಾಡಿನ ಸರ್ಕಾರಿ ಶಾಲೆಯಲ್ಲಿ ನಡೆದಿದೆ

ತಮಿಳುನಾಡು (ಸೆ. 06): ವಿದ್ಯಾರ್ಥಿನಿಯೊಬ್ಬಳು ಶಾಲೆಯ  ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ  ತಮಿಳುನಾಡಿನ (Tamil Nadu) ಕಡಲೂರು ಜಿಲ್ಲೆಯ ಚಿದಂಬರಂ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶೌಚಾಲಯದ ಬಳಿ ಶಿಶುವಿನ ಶವ ಪತ್ತೆಯಾದ ನಾಲ್ಕು ದಿನಗಳ ಬಳಿಕ, ಶಾಲೆಯ 11 ನೇ ತರಗತಿಯ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಳು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. 16 ವರ್ಷದ ಬಾಲಕಿಯನ್ನು ಪೊಲೀಸರು ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಅಪ್ರಾಪ್ತ ಬಾಲಕಿಯನ್ನು ಗರ್ಭವತಿ ಮಾಡಿದ ವ್ಯಕ್ತಿಯ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಈ ಘಟನೆಯು ಗ್ರಾಮಸ್ಥರಲ್ಲಿ ಆಘಾತ ಉಂಟುಮಾಡಿದ್ದು ಜನರು ಆತಂಕಕ್ಕೊಳಗಾಗಿದ್ದಾರೆ. 

ಗುರುವಾರ ಸಂಜೆ ಶೌಚಾಲಯದ ಬಳಿ ನವಜಾತ ಶಿಶುವಿನ ಶವ ಪತ್ತೆಯಾಗಿರುವ ಬಗ್ಗೆ ಶಾಲಾ ಅಧಿಕಾರಿಗಳು ಭುವನಗರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖಾ ತಂಡ ಶುಕ್ರವಾರ ಬಾಲಕಿಯನ್ನು ಗುರುತಿಸಿದ್ದು, ತರಗತಿಗೆ ಹಾಜರಾಗುವಾಗ ಹೆರಿಗೆ ನೋವು ಅನುಭವಿಸಿ ಶೌಚಾಲಯಕ್ಕೆ ಬಂದಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ.

"ಅಲ್ಲಿ, ಅವಳು ಮಗುವಿಗೆ ಜನ್ಮ ನೀಡಿದಳು. ಮಗು ಗರ್ಭದಲ್ಲೇ ಸಾವನಪ್ಪಿತ್ತು ಎಂದು ಬಾಲಕಿ ಹೇಳಿದ್ದರೂ, ಹೆರಿಗೆಯ ಸಮಯದಲ್ಲಿ ಆಕೆಗೆ ಸಹಾಯ ಸಿಗದ ಕಾರಣ ಮಗು ಸಾವನ್ನಪ್ಪಿರಬಹುದು ಎಂದು ನಾವು ಅನುಮಾನಿಸುತ್ತೇವೆ. ಬಾಲಕಿಯು ಪೆನ್ನನ್ನು ಬಳಸಿ ಸ್ವತಃ ಹೊಕ್ಕುಳಬಳ್ಳಿಯನ್ನು ಕತ್ತರಿಸಿದ್ದಾಳೆ ಮತ್ತು ತನ್ನ ಆರಂಭಿಕ ಹೇಳಿಕೆಯಂತೆ ತರಗತಿಗೆ ಮರಳಿ ಬಂದಿದ್ದಾಳೆ" ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಜಾರ್ಖಂಡ್‌ ಬುಡಕಟ್ಟು ಬಾಲಕಿ ರೇಪ್‌, ಕೊಲೆ ಬಳಿಕ ಗರ್ಭಿಣಿ ಎಂಬ ವಿಚಾರ ಬೆಳಕಿಗೆ

ತಾನು ಗರ್ಭಿಣಿ ಎಂದು ಕುಟುಂಬದ ಯಾರಿಗೂ ತಿಳಿದಿರಲಿಲ್ಲ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಆಕೆಯ ಸಂಬಂಧಿಕರು ಸೇರಿದಂತೆ ಹಲವು ಶಂಕಿತರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

ಚೀಲದಲ್ಲಿ ಮರಕ್ಕೆ ಶಿಶು ನೇತು ಹಾಕಿದ ಪ್ರಕರಣ: ಓರ್ವ ವಶ, ಪೋಕ್ಸೋ ಕೇಸ್‌ ದಾಖಲು: ಬೆಳಗಾವಿ ಖಾನಾಪುರ ತಾಲೂಕಿನ ಅಶೋಕನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನೇರಸಾ ಗೌಳಿವಾಡಾ ಬಳಿಯ ಅಂಗನವಾಡಿ ಕೇಂದ್ರದ ಬಳಿ ಮರವೊಂದಕ್ಕೆ ನೇತುಹಾಕಿದ ಚೀಲದಲ್ಲಿ ಪತ್ತೆಯಾದ ನವಜಾತ ಶಿಶುವಿನ ಪೋಷಕರನ್ನು ಪೊಲೀಸರು ಗುರುವಾರ ಪತ್ತೆ ಹಚ್ಚಿದ್ದು, ಈ ಸಂಬಂಧ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

ನೇರಸಾ ಗೌಳಿವಾಡಾ ಗ್ರಾಮದ ಮಳು ಅಪ್ಪು ಪಿಂಗಳೆ (19) ವಶಕ್ಕೆ ಪಡೆದ ವ್ಯಕ್ತಿ. ಮಳು ಅಪ್ರಾಪ್ತ ಹುಡುಗಿಯೋರ್ವಳನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವೆ ದೈಹಿಕ ಸಂಬಂಧದಿಂದ ಹುಡುಗಿ ಗರ್ಭವತಿಯಾಗಿದ್ದಳು. ಈ ವಿಷಯ ಹುಡುಗಿಯ ಮನೆಯವರಿಗೆ ತಿಳಿದಾಗ ಮಳು ತನ್ನ ತಪ್ಪನ್ನು ಒಪ್ಪಿಕೊಂಡು ಹುಡುಗಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದರಿಂದ ಹುಡುಗಿಯ ಮನೆಯವರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ತಮ್ಮ ಮನೆಯಲ್ಲೇ ಕಳೆದ ಆ.24ರಂದು ರಾತ್ರಿ ಹುಡುಗಿಯ ಹೆರಿಗೆಯನ್ನು ಮಾಡಿಸಿದ ಹುಡುಗಿಯ ಮನೆಯವರು ಹೆರಿಗೆಯಾದ ವಿಷಯವನ್ನು ಮಳು ಬಳಿ ಹಂಚಿಕೊಂಡಿದ್ದರು.

ಒಂದೇ ಕುಟುಂಬದ ಮೂವರ ಸಾವು ಪ್ರಕರಣ, ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ

ಸಮಾಜ ಮತ್ತು ಕಾನೂನಿನ ಭಯದಿಂದಾಗಿ ಮಳು ನವಜಾತ ಶಿಶುವನ್ನು ಹುಡುಗಿನ ಮನೆಯಿಂದ ತಂದು ಒಂದು ಪ್ಲಾಸ್ಟಿಕ್‌ ಚೀಲದಲ್ಲಿರಿಸಿ ಅಂಗನವಾಡಿ ಕೇಂದ್ರದ ಬಳಿಯ ಮರದಲ್ಲಿ ನೇತುಹಾಕಿದ್ದ. ಬಳಿಕ ಮಗುವನ್ನು ಗಮನಿಸಿದ ಸ್ಥಳೀಯರು ಅದನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ಘಟನೆಯ ಕುರಿತು ಖಾನಾಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. 

ಈಗ ಮಗುವಿನ ಜನನಕ್ಕೆ ಕಾರಣನಾದ ಯುವಕನನ್ನು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿದ್ದ ಮಗುವನ್ನು ಪೋಷಕರ ವಶಕ್ಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

click me!