
ಮದುವೆ ಇಷ್ಟವಿಲ್ಲವೆಂದು ಲವರ್ ಜೊತೆಗೂಡಿ ಭಾವಿ ಪತಿಯನ್ನೇ ಕೊಲೆ ಮಾಡಿರುವ ಆರೋಪ ಹೊತ್ತಿರುವ ಸಿಯಾ ಗೋಯಲ್ ಇದೀಗ ವಕೀಲರ ಕುರಿತಾದ ವಿವಾದದಲ್ಲಿ ಸಿಲುಕಿದ್ದಾಳೆ. ತನ್ನ ಮಗಳು ತಪ್ಪಿತಸ್ಥಳಾಗಿದ್ದರೆ ಅದೇ ಸ್ಥಳದಿಂದ ತಳ್ಳಿ ಸಾಯಿಸಿ ಎಂದಿದ್ದರು ತಂದೆ, ಆಕೆ ಕೊಲೆಗಾತಿ ಎಂದು ಸಾಬೀತಾದರೆ ಗಲ್ಲು ಶಿಕ್ಷೆ ನೀಡಿ ಎಂದಿದ್ದರು ತಾಯಿ. ಇದರ ನಡುವೆಯೇ, ತಮ್ಮ ಮಗಳು ತಪ್ಪಿತಸ್ಥಳಲ್ಲ ಎಂದು ಸಾಬೀತು ಮಾಡಲು ವಕೀಲರೊಬ್ಬರನ್ನು ನೇಮಕ ಮಾಡಿದ್ದಾರೆ. ಆದರೆ ಅಸಲಿಗೆ ಇಲ್ಲೇ ಒಂದು ಎಡವಟ್ಟಾಗಿದೆ.
ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಸಿಯಾ ಗೋಯಲ್ ಅವರನ್ನು ತಾವು ಪ್ರತಿನಿಧಿಸುತ್ತಿರುವಾಗಿ ಇದಾಗಲೇ ಹ್ಯಾಂಡ್ಸಮ್ ವಕೀಲ ಅಶುತೋಷ್ ಶ್ರೀವಾಸ್ತವ ಹೇಳಿದ್ದಾರೆ. ಮಾಧ್ಯಮಗಳ ಎದುರಿಗೂ ಇದಾಗಲೇ ಕೇಸ್ಗೆ ಸಂಬಂಧಿಸಿದ ಅಪ್ಡೇಟ್ ಕೊಡುತ್ತಲೇ ಇದ್ದಾರೆ. ಆದರೆ, ಈ ವಕೀಲನನ್ನು ನಾವು ಮಗಳ ಕೇಸ್ನಲ್ಲಿ ಹೈಯರ್ ಮಾಡಿಲ್ಲ, ಬದಲಿಗೆ ನಾವು ಮಾಡಿದ್ದು, ವಿಪುಲ್ ದುಶಿಂಗ್ ಎನ್ನುವ ವಕೀಲರನ್ನು ಎನ್ನುತ್ತಿದ್ದಾರೆ ಸಿಯಾ ಕುಟುಂಬದವರು. ಇದೇ ಮಾತನ್ನು ಹೇಳಿದ ಸಿಯಾ ಸಹೋದರನ ಮೇಲೆ ವಕೀಲ ಅಶುತೋಷ್ ಶ್ರೀವಾಸ್ತವ ಈಗ ಹತ್ತು ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ!
ಜೂನ್ 18 ರಂದು ಪುಣೆಯ ಲೋಹಗಡ್ ಕೋಟೆಯಲ್ಲಿ ತನ್ನ ನಿಶ್ಚಿತಾರ್ಥ ಮಾಡಿಕೊಂಡ ಕೇತನ್ ಅವರನ್ನು ಬಂಡೆಯಿಂದ ತಳ್ಳಿ ಕೊಲೆ ಮಾಡಲು ಸಿಯಾ ಗೋಯಲ್ ತನ್ನ ಪ್ರೇಮಿ ಚೇತನ್ ಚೌಧರಿಯೊಂದಿಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿರುವ ಕೇಸ್ ಇದು. ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಿಯಾ ಅವರನ್ನು ತಮ್ಮ ವಕೀಲರನ್ನಾಗಿ ನೇಮಿಸಿದ್ದರು ಎಂದು ಪುಣೆ ಮೂಲದ ವಕೀಲ ಶ್ರೀವಾಸ್ತವ ಹೇಳಿಕೊಂಡಿದ್ದಾರೆ. ವಕಾಲತ್ಗೆ ಸಹಿ ಹಾಕುವ ಮೂಲಕ ಸಿಯಾ, ಅವರನ್ನು ಪ್ರತಿನಿಧಿಸಲು ಅಧಿಕಾರ ನೀಡಿದ್ದಾರೆ ಎಂದಿದ್ದಾರೆ. ಆದರೆ ನಾವು ಇವರನ್ನು ಕೇಳಿಕೊಳ್ಳಲೇ ಇಲ್ಲ. ಸಿಯಾಳ ಪರವಾಗಿ ವಾದಿಸಲು ವಕೀಲ ವಿಪುಲ್ ದುಶಿಂಗ್ ಅವರನ್ನು ನೇಮಿಸಿಕೊಳ್ಳಲಾಗಿದೆ ಎಂದು ಸಿಯಾ ಸಹೋದರ ಹೇಳಿದ್ದಾರೆ.
ವಡ್ಗಾಂವ್ ಮಾವಲ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಪ್ರಮುಖ ಆರೋಪಿ ಸಿಯಾ, "ಅಶುತೋಷ್ ಶ್ರೀವಾಸ್ತವ ನನ್ನ ವಕೀಲರಲ್ಲ. ವಿಪುಲ್ ದುಶಿಂಗ್ ನನ್ನನ್ನು ಪ್ರತಿನಿಧಿಸುತ್ತಿದ್ದಾರೆ" ಎಂದು ಹೇಳಿದಾಗ ವಿವಾದ ಮತ್ತಷ್ಟು ಹೆಚ್ಚಾಯಿತು. ದಿಢೀರ್ ನಡೆದಿರುವ ಈ ಬೆಳವಣಿಗೆಯಿಂದ ವಕೀಲ ಅಶುತೋಷ್ ಶ್ರೀವಾಸ್ತವ ಅವಮಾನಕ್ಕೆ ಒಳಗಾಗಿದ್ದು, ಸಿಯಾ ಸಹೋದರ ಸಾಹಿಲ್ ಗೋಯಲ್ ಅವರಿಗೆ ₹10 ಕೋಟಿ ಪರಿಹಾರ ನೀಡುವಂತೆ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ. "ಸುಳ್ಳು, ಆಧಾರರಹಿತ, ಅವಮಾನಕರ, ಖಂಡನೀಯ, ವಿಕೃತ, ಖಂಡನೀಯ, ದುರುದ್ದೇಶಪೂರಿತ ಮತ್ತು ಮಾನನಷ್ಟಕರ ಮಾಧ್ಯಮ ಹೇಳಿಕೆಗಳನ್ನು" ತಕ್ಷಣವೇ ಹಿಂತೆಗೆದುಕೊಳ್ಳಬೇಕು ಮತ್ತು ಸಾರ್ವಜನಿಕ ಕ್ಷಮೆಯಾಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
10 ಪುಟಗಳ ಕಾನೂನು ನೋಟಿಸ್ನಲ್ಲಿ, ಶ್ರೀವಾಸ್ತವ ಅವರು ಅಧಿಕಾರ ಅಥವಾ ನೇಮಕಾತಿ ಇಲ್ಲದೆ ವರ್ತಿಸಿದ್ದಾರೆ ಎಂದು ಸುಳ್ಳು ಸೂಚಿಸುವ ಯಾವುದೇ ಸಾರ್ವಜನಿಕ ಹೇಳಿಕೆ "ಸ್ವತಃ ಮಾನನಷ್ಟಕರ ಮತ್ತು ನೇರವಾಗಿ ವೃತ್ತಿಪರ ಹಾನಿಯನ್ನುಂಟುಮಾಡುತ್ತದೆ" ಎಂದು ಹೇಳಿದ್ದಾರೆ. ವಯಸ್ಕಳಾಗಿ, ಸಿಯಾ ಗೋಯಲ್ ತನ್ನ ಕಾನೂನು ರಕ್ಷಣೆಗಾಗಿ ವಕೀಲರನ್ನು ನೇಮಕ ಮಾಡಿಕೊಳ್ಳಲು ಶಕ್ಯರಾಗಿದ್ದಾರೆ. ಈ ನೇಮಕಾತಿಯು ಮೌಖಿಕ ಹಕ್ಕು ಅಲ್ಲ, ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾದ ವಿಷಯವೂ ಅಲ್ಲ, ಅನಧಿಕೃತ ಪ್ರತಿಪಾದನೆಯೂ ಅಲ್ಲ; ಬದಲಾಗಿ, ಇದು ವಯಸ್ಕ ಆರೋಪಿ/ಕ್ಲೈಂಟ್ ಸ್ವಯಂಪ್ರೇರಣೆಯಿಂದ ನೀಡಲಾದ ಕಾನೂನು ಅಧಿಕಾರವಾಗಿತ್ತು ಎಂದಿದ್ದಾರೆ. ಆದರೆ ಸಾಹಿಲ್ ಅವರು ಸಾರ್ವಜನಿಕವಾಗಿ, ಇವರನ್ನು ನಮ್ಮ ಕುಟುಂಬ ಸದಸ್ಯರು ನೇಮಿಸಿಲ್ಲ ಎಂದು ಹೇಳಿದ್ದು, ನನಗೆ ಅವಮಾನವಾಗಿದೆ ಎಂದಿದ್ದಾರೆ.
ಶ್ರೀವಾಸ್ತವ ಅವರು ಸಾಹಿಲ್ಗೆ ಏಳು ದಿನಗಳಲ್ಲಿ ₹10 ಕೋಟಿ ಪರಿಹಾರವನ್ನು ಪಾವತಿಸಲು ಮತ್ತು ಬೇಷರತ್ತಾಗಿ ಲಿಖಿತ ಕ್ಷಮೆಯಾಚಿಸಲು ಮತ್ತು 48 ಗಂಟೆಗಳ ಒಳಗೆ ಸಾರ್ವಜನಿಕವಾಗಿ ತಮ್ಮ ಹೇಳಿಕೆಯನ್ನು ಹಿಂಪಡೆಯಲು ನಿರ್ದೇಶಿಸಿದ್ದಾರೆ. ಕಾನೂನು ನೋಟಿಸ್ನಲ್ಲಿ, ಭವಿಷ್ಯದಲ್ಲಿ ಅಂತಹ ಹಕ್ಕುಗಳನ್ನು ನೀಡುವುದಿಲ್ಲ ಎಂದು ಸಾಹಿಲ್ ಭರವಸೆ ನೀಡುವ ಲಿಖಿತ ಒಪ್ಪಂದವನ್ನು ಕೋರಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ