ಲಾಡ್ಜ್‌ನಲ್ಲಿ BCA ವಿದ್ಯಾರ್ಥಿನಿಗೂಢ ಸಾವು ಕೇಸ್: ಸ್ನೇಹ ಬೆಳೆಸಿದ್ದಕ್ಕೆ ಕೊಲೆ

By Suvarna NewsFirst Published Sep 3, 2022, 11:20 AM IST
Highlights

ಎರಡು ದಿನದ ಹಿಂದೆ ಮೈಸೂರಿನ ಹೊಟೇಲ್‌ವೊಂದರಲ್ಲಿ ಸಿಕ್ಕ ಯುವತಿ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಮೈಸೂರು, (ಸೆಪ್ಟೆಂಬರ್.03): ಮೈಸೂರಿನ ಹೊಟೇಲ್‌ವೊಂದರಲ್ಲಿ ಅಪೂರ್ವ ಶೆಟ್ಟಿ ಸಾವನ್ನಪ್ಪಿರುವ ಪ್ರಕರಣಕ್ಕೆ ನಿಖರ ಕಾರಣ ತಿಳಿದುಬಂದಿದೆ. ಯುವತಿ ಬೇರೊಬ್ಬನೊಂದಿಗೆ ಸ್ನೇಹ ಬೆಳೆಸಿದ್ದೇ ಕೊಲೆಗೆ ಕಾರಣ ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.

ಮೈಸೂರು ಹುಣಸೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಆ.29ರಂದು ವಾಸ್ತವ್ಯ ಹೂಡಿದ್ದ ಯುವತಿ ಅಪೂರ್ವ ಶೆಟ್ಟಿಯನ್ನು ಆಕೆಯ ಸ್ನೇಹಿತ ಆಶಿಕ್ ಕೊಂದಿರುವುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.

ವಿವಾಹಿತ ಯುವಕ ಆಶಿಕ್, ಒಂದೂವರೆ ವರ್ಷದ ಹಿಂದೆ ಅಪೂರ್ವ ಶೆಟ್ಟಿ ಪರಿಚಯ ಬೆಳೆಸಿಕೊಂಡಿದ್ದ. ಆಕೆಯೊಂದಿಗೆ ಸ್ನೇಹ ಸಲುಗೆ ಅಂತಾ ಸುತ್ತಾಡುತ್ತಿದ್ದನು. ಆದರೆ ಕೆಲವು ದಿನಗಳ ಹಿಂದೆ ಅಪೂರ್ವ ಬೇರೆಯವರ ಜೊತೆ ಸ್ನೇಹ ಬೆಳೆಸಿದ್ದಳು. ಇದರಿಂದ ಆಕ್ರೋಶಗೊಂಡಿದ್ದ ಆಶಿಕ್, ಆಕೆಯೊಂದಿಗೆ ಜಗಳವಾಡಿದ್ದಾನೆ. ಅಲ್ಲದೆ ಕೊಲೆ ಮಾಡಲು ನಿರ್ಧರಿಸಿದ್ದನು.

ಸ್ನೇಹಿತನೊಂದಿಗೆ ಲಾಡ್ಜ್‌ಗೆ ಹೋಗಿದ್ದ ಮೈಸೂರಿನ ಬಿಸಿಎ ವಿದ್ಯಾರ್ಥಿನಿ ದುರಂತ ಅಂತ್ಯ

ಅದರಂತೆ ಆ.29ರಂದು ಮೈಸೂರು ಹುಣಸೂರು ರಸ್ತೆಯಲ್ಲಿರುವ ಹೊಟೇಲ್‌ನಲ್ಲಿ ಆಶಿಕ್ ಮತ್ತು ಅಪೂರ್ವ ರೂಮ್ ಮಾಡಿಕೊಂಡಿದ್ದರು. ಈ ವೇಳೆ ಅವರ ನಡುವೆ ಮತ್ತೆ ಜಗಳ ನಡೆದಿದ್ದು, ಈ ವೇಳೆ ಕೋಪದಿಂದ ಆಶಿಕ್ ಯುವತಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಬಗ್ಗೆ ಆರೋಪಿ ಆಶಿಕ್ ಪೊಲೀಸರ ಮುಂದೆ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಸದ್ಯ ಪ್ರಕರಣ ಸಂಬಂಧ ದೇವರಾಜ ಠಾಣಾ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿ ರವಿ ಎಂಬುವವರ ಪುತ್ರಿ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಾಂಗ ಮಾಡುತ್ತಿದ್ದಳು. ಸೆಪ್ಟೆಂಬರ್ 01ರ ಬೆಳಗ್ಗೆ ಹೋಟೆಲ್ ನಿಂದ ಹೊರಟ ಆಶಿಕ್ ಮತ್ತೆ ವಾಪಸ್ ಹೋಟೆಲ್ ಗೆ ಬಂದಿರುವುದಿಲ್ಲ. ಆಕೆಯೂ ಸಹ ಬೆಳಗ್ಗೆಯಿಂದ ಸಂಜೆಯವರೆಗೂ ಹೋಟೆಲ್ ನಿಂದ ಹೊರ ಬರದ ಕಾರಣ ಅನುಮಾನಗೊಂಡು ಹೋಟೆಲ್ ಸಿಬ್ಬಂದಿ  ರೂಂನಲ್ಲಿದ್ದ ಇಂಟರ್ ಕಾಂಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ್ದಾಗ ಅನುಮಾನಗೊಂಡ ಸಿಬ್ಬಂದಿ ದೇವರಾಜ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇವರಾಜ ಪೊಲೀಸರು ಬಂದು ರೂಂ ತೆರೆದು ನೋಡಿದಾಗ ಅಪೂರ್ವ ಶೆಟ್ಟಿ ರೂಂನಲ್ಲಿ ಹೆಣವಾಗಿ ಬಿದ್ದಿದ್ದಳು.

ಇನ್ನೂ ಅಪೂರ್ವ ಶೆಟ್ಟಿ ಸ್ನೇಹಿತರ ಮಾಹಿತಿ ಪ್ರಕಾರ ಆಶಿಕ್ ಮತ್ತು ಅಪೂರ್ವಶೆಟ್ಟಿ ಕಳೆದ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಕಳೆದ ಒಂದುವರೆ ವರ್ಷದ ಹಿಂದೆ ಮನೆಯವರಿಗೆ ವಿಚಾರ ತಿಳಿದು ಜಗಳ ಸಹ ಆಗಿದೆ. ಇಬ್ಬರಿಗೂ ಬುದ್ಧಿ ಮಾತು ಹೇಳಿ ದೂರ ಆಗುವಂತೆ ಹೇಳಿದ್ದಾರೆ. ಇದಾದ ಬಳಿಕವೂ ಆಕೆ ಆ ಹುಡುಗನ ಜೊತೆ ಸ್ನೇಹವನ್ನ ಮುಂದುವರೆಸಿದ್ದಾಳೆ. ಆಗಾಗ ಆತನ ಜೊತೆ ಸುತ್ತಾಡುತ್ತಿದ್ದಳು. 

ಹೋಟೆಲ್ ನಲ್ಲಿ ಒಟ್ಟಿಗೆ ಇದ್ದ ವೇಳೆ ಜಗಳ ನಡೆದು ಮಗಳು ಕೊಲೆಯಾಗಿರಬಹುದೆಂದು ಅಪೂರ್ವ ಶೆಟ್ಟಿ ತಂದೆ ದೇವರಾಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು  ಆಶಿಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಪೂರ್ವ ಶೆಟ್ಟಿ ಸಾವಿನ ಸತ್ಯಾಂಶ ಹೊರಬಂದಿದೆ.

click me!